ಫುಟ್‌ಪಾತ್ ಖಾಲಿ ಮಾಡಲು ಬುಲ್ಡೋಜರ್‌: ಬೀದಿ ವ್ಯಾಪಾರಿಗಳ ಬದುಕಿನ ಗತಿ ಏನು?

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳಲ್ಲಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿರುವ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗೊಂಡಿದ್ದು, ವ್ಯಾಪಾರಿಗಳ ಜೀವನೋಪಾಯದ ಹಕ್ಕು ಮತ್ತು ಸಾರ್ವಜನಿಕ ಸ್ಥಳಗಳನ್ನು ಮುಕ್ತವಾಗಿ ಬಳಸುವ ನಾಗರಿಕರ ಹಕ್ಕುಗಳ ನಡುವಿನ ಸಮತೋಲನದ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಫುಟ್‌ಪಾತ್

ರಾಜ್ಯ ನಗರಾಭಿವೃದ್ಧಿ ಸಚಿವೆ ಅಗ್ನಿಮಿತ್ರಾ ಪಾಲ್ ನೇತೃತ್ವದಲ್ಲಿ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿನ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ತೆರವುಗೊಳಿಸುವ ಮೊದಲು ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮತ್ತು ಪುನರ್ವಸತಿ ಕಲ್ಪಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ. 

ಮಾಜಿ ಕೋಲ್ಕತ್ತಾ ಮೇಯರ್ ವಿಕಾಶ್ ರಂಜನ್ ಭಟ್ಟಾಚಾರ್ಯ ಅವರು ವ್ಯಾಪಾರಿಗಳ ಬಗ್ಗೆ ಮಾನವೀಯ ದೃಷ್ಟಿಕೋನ ಹೊಂದಬೇಕು ಎಂದು ಹೇಳಿದ್ದಾರೆ. ಬೀದಿ ವ್ಯಾಪಾರಿಗಳು ನಗರದ ದುರ್ಬಲ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸುವ ಪರ್ಯಾಯ ಆರ್ಥಿಕ ವ್ಯವಸ್ಥೆಯ ಭಾಗವಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಫುಟ್‌ಪಾತ್

ಈ ನಡುವೆ, ಹೌರಾ ಜಿಲ್ಲೆಯ ದಶಕಗಳಷ್ಟು ಹಳೆಯ ಮಂಗಳಾ ಹಾಟ್ ಸೇರಿದಂತೆ ಹಲವು ಪ್ರದೇಶಗಳ ವ್ಯಾಪಾರಿಗಳ ತೆರವು ವಿರೋಧಿಸಿ ಪಶ್ಚಿಮ ಬಂಗಾಳ ಬೀದಿ ವ್ಯಾಪಾರಿಗಳ ಒಕ್ಕೂಟವೂ ಧ್ವನಿ ಎತ್ತಿದೆ. ಸಿಐಟಿಯುಗೆ ಸಂಯೋಜಿತವಾಗಿರುವ ಈ ಸಂಘಟನೆ, ತೆರವುಗೊಳಿಸುವ ಮೊದಲು ಪರ್ಯಾಯ ಸ್ಥಳ ಒದಗಿಸಬೇಕು ಮತ್ತು 2014ರ ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗೂ ಬೀದಿ ವ್ಯಾಪಾರ ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.

ಕಲ್ಕತ್ತಾ ಹೈಕೋರ್ಟ್‌ನಲ್ಲಿಯೂ ಈ ವಿಚಾರ ತಲುಪಿದೆ. ಮಂಗಳಾ ಹಾಟ್ ವ್ಯಾಪಾರಿಗಳ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ, ವ್ಯಾಪಾರಿಗಳ ಜೀವನೋಪಾಯದ ಹಕ್ಕು ಮತ್ತು ಸಾರ್ವಜನಿಕರು ಯಾವುದೇ ಅಡೆತಡೆಯಿಲ್ಲದೆ ರಸ್ತೆ ಹಾಗೂ ಪಾದಚಾರಿ ಮಾರ್ಗ ಬಳಸುವ ಹಕ್ಕಿನ ನಡುವೆ ಸಮತೋಲನ ಹೇಗೆ ಸಾಧಿಸಬೇಕು ಎಂಬ ಪ್ರಶ್ನೆ ಎದುರಾಗಿದೆ. ಮಧ್ಯಂತರ ರಕ್ಷಣೆ ನೀಡಲು ನ್ಯಾಯಾಲಯ ನಿರಾಕರಿಸಿದೆ.  ಫುಟ್‌ಪಾತ್

ಇದನ್ನೂ ಓದಿ : ಧಾರವಾಡ : ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ; ಮುತ್ತಿಗೆಗೆ ಯತ್ನಿಸಿದ ಯುವಕರು ಪೊಲೀಸ್ ವಶಕ್ಕೆ

ಬೀದಿ ವ್ಯಾಪಾರಿಗಳ ಸಂಘಟನೆಗಳ ಪ್ರಕಾರ, 2014ರ ಕಾಯ್ದೆಯಡಿ ಟೌನ್ ವೆಂಡಿಂಗ್ ಕಮಿಟಿಗಳನ್ನು ರಚಿಸಿ, ವ್ಯಾಪಾರ ಪ್ರದೇಶ ಮತ್ತು ವ್ಯಾಪಾರ ನಿಷೇಧಿತ ಪ್ರದೇಶಗಳನ್ನು ಗುರುತಿಸುವುದು ಹಾಗೂ ವ್ಯಾಪಾರಿಗಳಿಗೆ ಪರವಾನಗಿ ನೀಡುವುದು ಅಗತ್ಯ. ಸಾರ್ವಜನಿಕ ಹಿತಾಸಕ್ತಿಗಾಗಿ ಸ್ಥಳಾಂತರ ಅಗತ್ಯವಿದ್ದರೆ ಅದನ್ನು ಮಾಡಬಹುದು; ಆದರೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕವೇ ತೆರವುಗೊಳಿಸಬೇಕು ಎಂಬುದು ಅವರ ವಾದ.

ತೆರವು ಕಾರ್ಯಾಚರಣೆಯ ಪರಿಣಾಮ ವ್ಯಾಪಾರಿಗಳ ಆದಾಯಕ್ಕೂ ಹೊಡೆತ ಬಿದ್ದಿದೆ. ಸಾಲ್ಟ್ ಲೇಕ್‌ನ ಸೆಕ್ಟರ್–5ರಲ್ಲಿ ಸಣ್ಣ ಅಂಗಡಿ ನಡೆಸುತ್ತಿರುವ ದೀಪಂಕರ್ ದಾಸ್, ನಾಲ್ವರ ಕುಟುಂಬದ ಜೀವನ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣದ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ದುರ್ಗಾ ಪೂಜೆ ಸಮೀಪಿಸುತ್ತಿರುವುದರಿಂದ ವ್ಯಾಪಾರಿಗಳು ಹೆಚ್ಚಿನ ಸರಕು ಖರೀದಿಸಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಫುಟ್‌ಪಾತ್

ಬೀದಿ ವ್ಯಾಪಾರಿಗಳ ತೆರವಿನಿಂದ ದೊಡ್ಡ ವ್ಯಾಪಾರ ಸಂಸ್ಥೆಗಳಿಗೆ ಲಾಭವಾಗಬಹುದು ಎಂಬ ಆರೋಪವೂ ಕೇಳಿಬಂದಿದೆ. ಸಣ್ಣ ವ್ಯಾಪಾರಿಗಳು ದೊಡ್ಡ ಮಳಿಗೆಗಳೊಂದಿಗೆ ಸ್ಪರ್ಧಿಸುವುದರಿಂದ ಅವರನ್ನು ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಭಟ್ಟಾಚಾರ್ಯ ಆರೋಪಿಸಿದ್ದಾರೆ. ಮತ್ತೊಂದೆಡೆ, ರಸ್ತೆ ಮತ್ತು ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿರಬೇಕು ಎಂಬ ವಾದವೂ ಬಲವಾಗಿ ಕೇಳಿಬರುತ್ತಿದೆ.

ಹೀಗಾಗಿ ಪಶ್ಚಿಮ ಬಂಗಾಳದ ಹಾಲಿ ತೆರವು ಕಾರ್ಯಾಚರಣೆ ಕೇವಲ ಅತಿಕ್ರಮಣ ತೆರವು ಪ್ರಶ್ನೆಯಾಗಿ ಉಳಿದಿಲ್ಲ. ನಗರಗಳ ಸಾರ್ವಜನಿಕ ಸ್ಥಳ ಯಾರಿಗಾಗಿ? ಬಡವರ ಜೀವನೋಪಾಯಕ್ಕೆ ಎಷ್ಟು ಜಾಗ? ಮತ್ತು ನಗರ ಸೌಂದರ್ಯೀಕರಣದ ಹೆಸರಿನಲ್ಲಿ ಜೀವನೋಪಾಯ ಕಳೆದುಕೊಳ್ಳುವವರಿಗೆ ಸರ್ಕಾರದ ಹೊಣೆ ಏನು? ಎಂಬ ದೊಡ್ಡ ಸಾಮಾಜಿಕ-ಆರ್ಥಿಕ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಫುಟ್‌ಪಾತ್

ಇದೇ ಪ್ರಶ್ನೆ ಕರ್ನಾಟಕಕ್ಕೂ ಅನ್ವಯಿಸುತ್ತದೆ. ರಾಜ್ಯದ ವಿವಿಧ ನಗರಗಳಲ್ಲಿ ಬೀದಿಬದಿ ವ್ಯಾಪಾರಿಗಳ ಮೇಲೂ ತೆರವು ಕಾರ್ಯಾಚರಣೆ, ದಬ್ಬಾಳಿಕೆ ಮತ್ತು ಎತ್ತಂಗಡಿ ಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸಾರ್ವಜನಿಕ ಸ್ಥಳಗಳನ್ನು ಸುಗಮವಾಗಿ ಬಳಸುವ ಹಕ್ಕಿನ ಜೊತೆಗೆ, ಅದೇ ಸಾರ್ವಜನಿಕ ಸ್ಥಳವನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಬೀದಿಬದಿ ವ್ಯಾಪಾರಿಗಳ ಜೀವನೋಪಾಯದ ಹಕ್ಕನ್ನೂ ಸರ್ಕಾರ ಪರಿಗಣಿಸಬೇಕಿದೆ.

ನಗರವನ್ನು ಸುಂದರಗೊಳಿಸುವ ಹೆಸರಿನಲ್ಲಿ ಬಡವರ ಬದುಕನ್ನೇ ಅಸಹ್ಯಗೊಳಿಸುವಂತಾಗಬಾರದು. ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವುದೇ ಪರಿಹಾರವಲ್ಲ. ಪರ್ಯಾಯ ಸ್ಥಳ, ಸೂಕ್ತ ವ್ಯವಸ್ಥೆ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಖಾತ್ರಿಪಡಿಸಿದ ಬಳಿಕವೇ ಯಾವುದೇ ತೆರವು ಕ್ರಮ ಕೈಗೊಳ್ಳಬೇಕು. ಸರ್ಕಾರಗಳು ಸಾರ್ವಜನಿಕ ಸ್ಥಳಗಳನ್ನು ರಕ್ಷಿಸಲಿ; ಆದರೆ ಆ ಸ್ಥಳವನ್ನೇ ನಂಬಿ ಬದುಕುತ್ತಿರುವ ಬೀದಿಬದಿ ವ್ಯಾಪಾರಿಗಳ ಬದುಕಿನ ಮೇಲೆ ಹೊಡೆತ ನೀಡಬಾರದು. ಫುಟ್‌ಪಾತ್

ಇದನ್ನೂ ನೋಡಿ : ಬೀದಿ ವ್ಯಾಪಾರಿಗಳ ಬದುಕು ಕಟ್ಟಿಕೊಡುವವರು ಯಾರು? ಸುಪ್ರೀಂ ಕೋರ್ಟ್‌ ಹೇಳಿರುವುದು ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *