ನಕಲಿ ಅಂಕಪಟ್ಟಿ ದಂಧೆ ಬಯಲು: ಸಿಸಿಬಿ ದಾಳಿ, ಪ್ರಮುಖ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರಿನ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಬೃಹತ್ ದಂದೆಯೊಂದನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜಾಲದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ಕೋರಮಂಗಲದಲ್ಲಿ ಕಚೇರಿ ತೆರೆದು ರಾಜಾರೋಷವಾಗಿ ಈ ದಂದೆ ನಡೆಸುತ್ತಿದ್ದ ಮುಖ್ಯ ಆರೋಪಿ ರಾಜಾ ರೆಡ್ಡಿಯನ್ನು ಸಿಸಿಬಿ ಪೊಲೀಸರು ಇದೀಗ ಕಂಬಿ ಎಣಿಸುವಂತೆ ಮಾಡಿದ್ದಾರೆ. ಆದರೆ, ಈ ಜಾಲದಲ್ಲಿ ಭಾಗಿಯಾಗಿ ಕಂಪ್ಯೂಟರ್ ಹಾಗೂ ತಂತ್ರಜ್ಞಾನ ಬಳಸಿ ನಕಲಿ ಅಂಕಪಟ್ಟಿಗಳನ್ನು ಖುದ್ದಾಗಿ ಸಿದ್ಧಪಡಿಸುತ್ತಿದ್ದ ಮತ್ತೊಬ್ಬ ಆರೋಪಿ ಕಾರ್ತಿಕ್ ಎಂಬಾತ ಸದ್ಯ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.

‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್’ ಹೆಸರಿನಲ್ಲಿ ವಂಚನೆ

ಆರೋಪಿಗಳು ಸಾರ್ವಜನಿಕರನ್ನು ಮತ್ತು ವಿದ್ಯಾರ್ಥಿಗಳನ್ನು ನಂಬಿಸಲು ಕೋರಮಂಗಲದಲ್ಲಿ ‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್’ ಹೆಸರಿನಲ್ಲಿ ಕಚೇರಿಯೊಂದನ್ನು ತೆರೆದಿದ್ದರು.

ಇದನ್ನೂ ಓದಿ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ದೇಶವ್ಯಾಪಿ ಪ್ರತಿಭಟನೆ: ಯುವಕರ ಎಚ್ಚರಿಕೆ

ಕಚೇರಿಯ ಬೋರ್ಡ್ ನೋಡಿ ಇದು ನಿಜವಾದ ಶೈಕ್ಷಣಿಕ ಸಂಸ್ಥೆ ಎಂದು ನಂಬಿ ಬರುತ್ತಿದ್ದ ಜನರನ್ನು ಇವರು ತಮ್ಮ ಜಾಲಕ್ಕೆ ಸೆಳೆದುಕೊಳ್ಳುತ್ತಿದ್ದರು. ಇದರ ಮರೆಯಲ್ಲಿಯೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ವಿವಿಧ ಪದವಿಗಳ ನಕಲಿ ಮಾರ್ಕ್ಸ್ ಕಾರ್ಡ್‌ಗಳನ್ನು ಸಿದ್ಧಪಡಿಸುವ ಕಪ್ಪು ದಂದೆ ಅವಿರತವಾಗಿ ನಡೆಯುತ್ತಿತ್ತು.

ಮುಖ್ಯ ಆರೋಪಿ ರಾಜಾ ರೆಡ್ಡಿ ಸಾರ್ವಜನಿಕರಿಗೆ ಹಾಗೂ ಪೋಷಕರಿಗೆ ಕರೆ ಮಾಡಿ, ತಾವು ಪ್ರಮುಖ ಮತ್ತು ಪ್ರತಿಷ್ಠಿತ ಕಾಲೇಜುಗಳಲ್ಲಿ ಅಡ್ಮಿಷನ್ ಕೊಡಿಸುವುದಾಗಿ ನಂಬಿಸುತ್ತಿದ್ದ. ನಗರದ ಫ್ಲಾರೆನ್ಸ್ ಕಲಾನಿಕೇತನ, ಎಂವಿಜೆ, ಟಿಪ್ಪು ಸುಲ್ತಾನ್ ಕಾಲೇಜು ಸೇರಿದಂತೆ ಹಲವು ನಾಮಾಂಕಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಕೊಡಿಸುವ ಆಮಿಷ ಒಡ್ಡುತ್ತಿದ್ದ. “ನೀವು ಕಾಲೇಜಿಗೆ ಹೋಗಿ ಓದದೇ ಇದ್ದರೂ ಪರವಾಗಿಲ್ಲ, ನೇರವಾಗಿ ಪದವಿ ಪರೀಕ್ಷೆ ಬರೆಯಲು ನಾವು ಅವಕಾಶ ಮಾಡಿಕೊಡುತ್ತೇವೆ” ಎಂದು ಸುಳ್ಳು ಭರವಸೆ ನೀಡಿ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದ.

ಒಂದೊಂದು ಅಂಕಪಟ್ಟಿಗೆ 30 ರಿಂದ 50 ಸಾವಿರ ರೂ. ವಸೂಲಿ!

ಪರೀಕ್ಷೆ ಬರೆಯದೇ ಅಥವಾ ಅನುತ್ತೀರ್ಣರಾದ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದ ಈ ಜಾಲ, ನಂತರ ಅವರಿಗೆ ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ನೀಡುತ್ತಿತ್ತು. ಒಂದೊಂದು ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಡಿಗ್ರಿ ನಕಲಿ ಮಾರ್ಕ್ಸ್ ಕಾರ್ಡ್‌ಗೆ 30,000 ರೂ. ನಿಂದ ಹಿಡಿದು 50,000 ರೂ. ವರೆಗೆ ಬೇಡಿಕೆಯಿಟ್ಟು ಹಣ ವಸೂಲಿ ಮಾಡುತ್ತಿದ್ದರು. ಹಣ ಕೈ ಸೇರಿದ ಮೇಲೆ ನಕಲಿ ಅಂಕಪಟ್ಟಿಗಳನ್ನು ಯಾರಿಗೂ ಅನುಮಾನ ಬಾರದಂತೆ ನೇರವಾಗಿ ಗ್ರಾಹಕರ ಮನೆಗಳಿಗೆ ಕೊರಿಯರ್ ಮೂಲಕ ತಲುಪಿಸುವ ವ್ಯವಸ್ಥಿತ ನೆಟ್‌ವರ್ಕ್ ಹೊಂದಿದ್ದರು.

ಈ ನಕಲಿ ಅಂಕಪಟ್ಟಿ ತಯಾರಿಕಾ ದಂದೆಯ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಗಟ್ಟಿ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಕೋರಮಂಗಲದ ಕಚೇರಿಯ ಮೇಲೆ ದಿಢೀರ್ ದಾಳಿ ನಡೆಸಿದೆ. ದಾಳಿಯ ವೇಳೆ ಕಚೇರಿಯಲ್ಲಿದ್ದ ನಕಲಿ ಅಂಕಪಟ್ಟಿಗಳು, ಕಂಪ್ಯೂಟರ್ ಹಾಗೂ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ರಾಜಾ ರೆಡ್ಡಿಯನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಕಾರ್ತಿಕ್ ಪತ್ತೆಗಾಗಿ ಸಿಸಿಬಿ ಪೊಲೀಸರು ಜಾಲ ಬೀಸಿದ್ದು, ಈ ಜಾಲದ ಹಿಂದೆ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಕುರಿತು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ನೋಡಿ: ಪಿಟಿಸಿಎಲ್ ಕಾಯ್ದೆ ಜಾರಿಯಲ್ಲಿ ವೈಫಲ್ಯ? ದಲಿತ ಭೂಹಕ್ಕುಗಳ ಬಗ್ಗೆ ಹೆಚ್ಚಿದ ಆತಂಕ | ಜಸ್ಟೀಸ್‌ ವಿ.ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *