ಸಿಬಿಎಸ್‌ಇ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ: ‘ತಪ್ಪು ಅವರದು, ದಂಡ ವಿದ್ಯಾರ್ಥಿಗಳದು’

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಿಬಿಎಸ್‌ಇ (CBSE) ಮಂಡಳಿಯ ಫಲಿತಾಂಶ ನಂತರದ ಶುಲ್ಕ ವ್ಯವಸ್ಥೆಯನ್ನು ಕುರಿತು ಮತ್ತೆ ತೀವ್ರ ಟೀಕೆ ನಡೆಸಿದ್ದಾರೆ. ಮೌಲ್ಯಮಾಪನದಲ್ಲಿ ಉಂಟಾಗುವ ತಪ್ಪುಗಳಿಗೂ ವಿದ್ಯಾರ್ಥಿಗಳಿಂದಲೇ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಅವರು, ಉತ್ತರಪತ್ರಿಕೆಯ ಡಿಜಿಟಲ್ ಪ್ರತಿಗೆ ₹100 ಪ್ರತಿ ವಿಷಯಕ್ಕೆ, ಮರುಮೊತ್ತ ಗಣನೆಗೆ ₹100 ಪ್ರತಿ ಪೇಪರ್‌ಗೆ ಮತ್ತು ಮರುಮೌಲ್ಯಮಾಪನಕ್ಕೆ ಪ್ರತಿ ಪ್ರಶ್ನೆಗೆ ₹25 ವರೆಗೆ ಶುಲ್ಕ ವಸೂಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಸಿಬಿಎಸ್‌ಇ ತಪ್ಪಿನಿಂದ ಅಂಕಗಳು ತಪ್ಪಾಗಿ ಬಂದರೆ ವಿದ್ಯಾರ್ಥಿಗಳಿಗೆ ಸಿಗುವುದು ಏನು? ಬಿಲ್ ಮಾತ್ರ. ತಮ್ಮದೇ ಉತ್ತರಪತ್ರಿಕೆ ಸರಿಯಾಗಿ ಪರಿಶೀಲಿಸಿಕೊಳ್ಳಲು ಒಬ್ಬ ವಿದ್ಯಾರ್ಥಿ ₹2000 ವರೆಗೆ ಖರ್ಚು ಮಾಡಬೇಕಾಗುತ್ತದೆ,” ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ತೀವ್ರ: ಅಭಿಷೇಕ್ ಬಳಿಕ ಕಲ್ಯಾಣ್ ಬ್ಯಾನರ್ಜಿ ಮೇಲೂ ದಾಳಿ!

ಸುಮಾರು 4 ಲಕ್ಷ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಮಂಡಳಿ ಇದರಿಂದ ಎಷ್ಟು ಆದಾಯ ಗಳಿಸುತ್ತಿದೆ ಎಂಬುದನ್ನೂ ಪ್ರಶ್ನಿಸಿದ್ದಾರೆ. “ಮೊಬೈಲ್ ಮೂಲಕ ಸ್ಕ್ಯಾನಿಂಗ್ ನಡೆದಿದ್ದರೆ ತಪ್ಪುಗಳು ಸಹಜ. ಆದರೆ ಅದನ್ನು ಸರಿಪಡಿಸಲು ವಿದ್ಯಾರ್ಥಿಗಳೇ ಹಣ ಕಟ್ಟಬೇಕು,” ಎಂದು ಹೇಳಿದ್ದಾರೆ.

‘ತಪ್ಪು ಮಂಡಳಿಯದು, ದಂಡ ವಿದ್ಯಾರ್ಥಿಗಳದು’

ಮೌಲ್ಯಮಾಪನದ ದೋಷಗಳು ವ್ಯಾಪಕವಾಗಿದ್ದು, ತಿದ್ದುಪಡಿ ಕೇಳುವ ವಿದ್ಯಾರ್ಥಿಗಳೇ ದಂಡ ಅನುಭವಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

“ತಪ್ಪು ಸಿಬಿಎಸ್‌ಇಯದು, ದಂಡ ಮಕ್ಕಳದು, ಲಾಭ ಸರ್ಕಾರದದು,” ಎಂದು ಅವರು ಟೀಕಿಸಿದ್ದಾರೆ.

ಶಿಕ್ಷಣವನ್ನು ಸೇವೆಯಿಂದ ವ್ಯಾಪಾರವಾಗಿ ಪರಿವರ್ತಿಸಿದಾಗ ತಪ್ಪುಗಳನ್ನು ಸರಿಪಡಿಸುವುದಿಲ್ಲ, ಅವು ಹೆಚ್ಚಾಗುತ್ತವೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಸಮಯ, ಆತ್ಮವಿಶ್ವಾಸ ಮತ್ತು ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೋದಿ ವಿರುದ್ಧವೂ ವಾಗ್ದಾಳಿ

ಭಾನುವಾರವೂ ಈ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ ಮುಂದುವರಿಸಿದ್ದರು. ‘ಮನ ಕಿ ಬಾತ್’ನಲ್ಲಿ ಮಾವಿನ ಹಣ್ಣುಗಳ ಬಗ್ಗೆ ಮಾತನಾಡಲು ಸಮಯ ಇರುವ ಪ್ರಧಾನಿಗೆ, 18.5 ಲಕ್ಷ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಮಾತನಾಡಲು ಸಮಯ ಇಲ್ಲ ಎಂದು ಅವರು ಹೇಳಿದರು.

ಸಿಬಿಎಸ್‌ಇ ಒಎಸ್‌ಎಂ (OSM) ಟೆಂಡರ್ ವಿವಾದ ಹಾಗೂ NEET UG 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ನಡುವೆಯೂ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಕೂಡ ಅವರು ಆರೋಪಿಸಿದ್ದಾರೆ.

ಇದನ್ನೂ ನೋಡಿ: ಯುವಜನರಿಗೆ ಮೌಲ್ಯ ಬೇಕಿದೆ, ಅದಕ್ಕಾಗಿ ದೊರೆಸ್ವಾಮಿಯರನ್ನು ಓದಬೇಕು – ಸಿದ್ದನಗೌಡ ಪಾಟೀಲ್‌ Janashakthi Media

Donate Janashakthi Media

Leave a Reply

Your email address will not be published. Required fields are marked *