ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಮತ್ತಿಬ್ಬರನ್ನು ಬಂಧಿಸಿದ್ದು, ಒಟ್ಟು ಆರೋಪಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಅಧಿಕಾರಿಗಳ ಪ್ರಕಾರ, ಲಾತೂರ್ನ ವೈದ್ಯ ಮನೋಜ್ ಶಿರುರೆ ಅವರನ್ನು ಸಿಬಿಐ ಬಂಧಿಸಿದೆ. ಅವರು ನೀಟ್ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದ ಪಿ.ವಿ. ಕುಲಕರ್ಣಿ ಮೂಲಕ, ರಸಾಯನಶಾಸ್ತ್ರ ಪ್ರಶ್ನೆಗಳನ್ನು ಮೂವರು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ನೆರವಾದ ಆರೋಪ ಎದುರಿಸುತ್ತಿದ್ದಾರೆ. ಇವರಲ್ಲಿ ರೇಣುಕಾಯಿ ಕರಿಯರ್ ಸೆಂಟರ್ (RCC) ಸಂಸ್ಥಾಪಕ ಶಿವರಾಜ್ ಮೊಟೆಗಾಂವ್ಕರ್ ಅವರ ಪುತ್ರನೂ ಸೇರಿದ್ದಾರೆ.
ಲಾತೂರ್ನಲ್ಲಿ RCC ತರಬೇತಿ ಕೇಂದ್ರವನ್ನು ನಡೆಸುತ್ತಿದ್ದ ಶಿವರಾಜ್ ಮೊಟೆಗಾಂವ್ಕರ್ ಅವರನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು.
ಇದನ್ನೂ ಓದಿ: ಐಪಿಎಲ್ ವೇಳೆ ಅಕ್ರಮ ಬೆಟ್ಟಿಂಗ್ ದಂಧೆ: ಬೆಂಗಳೂರಿನಲ್ಲಿ 23 ಮಂದಿ ಬಂಧನ, ₹13.39 ಕೋಟಿ ಮೌಲ್ಯದ ವಸ್ತು ವಶ
ಇದೇ ಪ್ರಕರಣದಲ್ಲಿ, ಪುಣೆಯ ಡಾ. ಅಭಂಗ ಪ್ರಭು ಮೆಡಿಕಲ್ ಅಕಾಡೆಮಿ (APMA)ಯಲ್ಲಿ ಭೌತಶಾಸ್ತ್ರ ಬೋಧಕರಾಗಿರುವ ತೇಜಸ್ ಹರ್ಷದ್ ಕುಮಾರ್ ಶಾ ಅವರನ್ನು ಸಹ ಸಿಬಿಐ ಬಂಧಿಸಿದೆ. ಸಹ ಆರೋಪಿಯಾಗಿರುವ ಮನೀಷಾ ಹವಾಲ್ದಾರ್ ಮೂಲಕ ನೀಟ್-ಯುಜಿ 2026ರ ಭೌತಶಾಸ್ತ್ರ ಪ್ರಶ್ನೆಗಳನ್ನು ಪಡೆದಿದ್ದಾನೆ ಎಂಬ ಆರೋಪ ಅವರ ವಿರುದ್ಧ ಇದೆ.
ಇತ್ತೀಚಿನ ಬಂಧನಗಳೊಂದಿಗೆ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
“ಈ ಪ್ರಕರಣದ ಸಂಪೂರ್ಣ ಜಾಲ ಮತ್ತು ಸಂಚು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಇದುವರೆಗೆ ಸಿಬಿಐ 49 ಸ್ಥಳಗಳಲ್ಲಿ ಶೋಧ ನಡೆಸಿ, ಮಹತ್ವದ ದಾಖಲೆಗಳು, ಲ್ಯಾಪ್ಟಾಪ್ಗಳು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದೆ,” ಎಂದು ಸಿಬಿಐ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 3ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆ ರದ್ದುಗೊಂಡಿದ್ದು, ಮರುಪರೀಕ್ಷೆ ಜೂನ್ 21ರಂದು ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ತಿಳಿಸಿದೆ.
ಇದನ್ನೂ ನೋಡಿ: ನನ್ನ ಮತ ಕಸಿಯುವ ಎಸ್ಐಆರ್ ರದ್ದುಪಡಿಸಿ – ದುಂಡುಮೇಜಿನ ಸಭೆಯಲ್ಲಿ ಆಕ್ರೋಶ Janashakthi Media
