ಮುಂಬೈ: 2006ರ ಮಾಲೆಗಾಂವ್ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳನ್ನು ಏಪ್ರಿಲ್ 22ರಂದು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ಆದೇಶಿಸಿದ್ದೂ, ಅಲ್ಲದೇ ಅವರ ವಿರುದ್ಧ ವಿಶೇಷ ನ್ಯಾಯಾಲಯ ಹೊರಿಸಿದ್ದ ಆರೋಪಗಳನ್ನೂ ನ್ಯಾಯಾಲಯ ರದ್ದುಗೊಳಿಸಿದೆ.
ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ನಾಲ್ವರು ಆರೋಪಿಗಳಾದ ರಾಜೇಂದ್ರ ಚೌಧರಿ, ಧನ್ ಸಿಂಗ್, ಮನೋಹರ್ ರಾಮ್ ಸಿಂಗ್ ನರ್ವಾರಿಯಾ ಮತ್ತು ಲೋಕೇಶ್ ಶರ್ಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಚಂದಕ್ ಅವರಿದ್ದ ಪೀಠ ಪುರಸ್ಕರಿಸಿದೆ.
ಇದನ್ನೂ ಓದಿ: ‘ಡ್ರೋನ್-ಸಂತೆ’ ಯಲ್ಲೊಂದು ದಿನ….. ನಮ್ಮ ಸಮಾಜದ ಮೇಲೆ ಡ್ರೋನ್ ತಂತ್ರಜ್ಞಾನ ಮೂಡಿಸಲಿರುವ ಪರಿಣಾಮಗಳ ವಿರಾಟ್ ದರ್ಶನ
ಪ್ರಕರಣದ ಹಿನ್ನೆಲೆ:
2006 ಸೆಪ್ಟೆಂಬರ್ 8ರಂದು, ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಟ್ಟಣದಲ್ಲಿ ಶುಕ್ರವಾರದ ಪ್ರಾರ್ಥನೆಯ ಬಳಿಕ ನಾಲ್ಕು ಬಾಂಬ್ಗಳನ್ನು ಸ್ಫೋಟಿಸಲಾಗಿತ್ತು. ಹಮೀದಿಯಾ ಮಸೀದಿ ಮತ್ತು ಬಡಾ ಕಬ್ರಸ್ತಾನ್ ಆವರಣದ ಒಳಗೆ ಮೂರು ಬಾಂಬ್ಗಳು ಮತ್ತು ಮುಶಾವರತ್ ಚೌಕ್ನಲ್ಲಿ ನಾಲ್ಕನೆಯ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ 31 ಜನ ಮೃತಪಟ್ಟು, 312 ಮಂದಿ ಗಾಯಗೊಂಡಿದ್ದರು.
ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ್ದ ರಾಜ್ಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿ ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿತ್ತು.
ನಂತರ ಪ್ರಕರಣವನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಸ್ಫೋಟಗಳ ಹಿಂದೆ ಬಲಪಂಥೀಯ ಉಗ್ರಗಾಮಿಗಳ ಕೈವಾಡ ಎಂದು ಪ್ರತಿಪಾದಿಸಿ ಈ ನಾಲ್ವರು ಆರೋಪಿಗಳನ್ನು (ರಾಜೇಂದ್ರ ಚೌಧರಿ, ಧನ್ ಸಿಂಗ್, ಮನೋಹರ್ ರಾಮ್ ಸಿಂಗ್ ನರ್ವಾರಿಯಾ ಮತ್ತು ಲೋಕೇಶ್ ಶರ್ಮಾ) ಬಂಧಿಸಿತ್ತು.
ಅಲ್ಲದೇ ಎಟಿಎಸ್ ಬಂಧಿಸಿದ್ದ ಒಂಬತ್ತು ಮಂದಿಯನ್ನು ವಿಶೇಷ ನ್ಯಾಯಾಲಯ ಪ್ರಕರಣದಿಂದ ಮುಕ್ತಗೊಳಿಸಿತ್ತು.
ಎನ್ಐಎ ಬಂಧಿಸಿದ್ದ ಈ ನಾಲ್ವರ (ಖುಲಾಸೆಗೊಂಡವರು) ವಿರುದ್ಧ ವಿಶೇಷ ನ್ಯಾಯಾಲಯ ಕಳೆದ ವರ್ಷ ಆರೋಪ ಪಟ್ಟಿ ಸಿದ್ಧಪಡಿಸಿತ್ತು. ಇದರ ವಿರುದ್ಧ ಈ ನಾಲ್ವರು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯಲ್ಲಿ, ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಉಲ್ಲೇಖಿಸಿದ್ದರು.
ಮೇಲ್ನೋಟಕ್ಕೆ ಈ ನಾಲ್ವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂಬುವುದನ್ನು ಪರಿಗಣಿಸಿ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಇದನ್ನೂ ನೋಡಿ: ಬಸವ ಜಯಂತಿ ವಿಶೇಷ | ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ Janashakthi Media
