ಗದಗ: ಹಲವಡೆ ವಿದ್ಯಾರ್ಥಿಗಳು ಬಡತನದ ಕಾರಣದಿಂದ ಶಾಲಾ ಕಾಲೇಜುಗಳನ್ನು ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಓದಿ, ಪರೀಕ್ಷೆ ಬರೆದು ವಿದ್ಯಾವಂತರಾಗಬೇಕಾದ ಸಮಯದಲ್ಲಿ ಕುಟುಂಬಕ್ಕೆ ನೆರವಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ.
ಇದೇ ರೀತಿಯ ಘಟನೆಯೊಂದು ಗದಗ ಜಿಲ್ಲೆಯಲ್ಲಿ ನಡೆದಿದ್ದೂ, ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದಲ್ಲಿ ಬಡತನದ ಕಾರಣ ಎಸ್ಎಸ್ಎಲ್ಸಿ ಪರೀಕ್ಷೆ ತ್ಯಜಿಸಿ ಕೂಲಿ ಕೆಲಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಹುಡುಕಿ ಕರೆತಂದು ಪರೀಕ್ಷೆ ಬರೆಸಿದ್ದಾರೆ ಎಂದು ತಿಳಿದುಬಂದಿದೆ.
ವಿಜ್ಞಾನ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದ ವಿದ್ಯಾರ್ಥಿನಿ
ಪಲ್ಲವಿ ಹಳ್ಳಿಕೇರಿ ಎಂಬ ವಿದ್ಯಾರ್ಥಿನಿ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದಳು. ಮುಂಡರಗಿ ಪಟ್ಟಣದ ವಿಜಿ ಲಿಂಬಿಕಾಯಿ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿತ್ತು. ಆದರೆ ಮನೆಯ ಆರ್ಥಿಕ ಸಂಕಷ್ಟದಿಂದ ಪಲ್ಲವಿ ದ್ರಾಕ್ಷಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದಳು.
ಈ ವಿಚಾರ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರು ತಕ್ಷಣ ಕ್ರಮ ಕೈಗೊಂಡು, ವಿದ್ಯಾರ್ಥಿನಿಯನ್ನು ಮನವೊಲಿಸಿ ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ನಂತರ ಆಕೆ ವಿಜ್ಞಾನ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದಿದ್ದಾಳೆ. ಅಧಿಕಾರಿಗಳ ಈ ಮಾನವೀಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ನೋಡಿ: “ಯುದ್ಧದಿಂದ ಅಡುಗೆಮನೆಗೆ: ಹೊರೆ ಯಾರಿಗೆ?” Janashakthi Media
