ಮಹಾರಾಷ್ಟ್ರ: ರಾಜ್ಯದ ನಾಸಿಕ್ ನಲ್ಲಿ ಜ್ಯೋತಿಷಿ ಅಶೋಕ್ ಖಾರಟ್ ರನ್ನು ಆಧ್ಯಾತ್ಮ ಹಾಗೂ ಧಾರ್ಮಿಕ ವಿಧಿವಿಧಾನಗಳ ನೆಪದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿರುವ ಖಾರಟ್ ತನ್ನನ್ನು ‘ಕ್ಯಾಪ್ಟನ್’ ಎಂದು ಪರಿಚಯಿಸಿಕೊಂಡು, ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಮಹಿಳೆಯರ ವಿಶ್ವಾಸ ಗಳಿಸುತ್ತಿದ್ದನು. ಬಳಿಕ ತನ್ನ ಕಚೇರಿಗೆ ಕರೆಸಿ ಮಾದಕ ವಸ್ತು ನೀಡಿ ಅವರ ಮೇಲೆ ದೌರ್ಜನ್ಯ ನಡೆಸುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ಎಸ್. ಐ.ಆರ್: ‘ಭಾರತ’ ಎಂಬ ಭಾವಕ್ಕೆ ಅತ್ಯಂತ ಗಂಭೀರವಾದ ಬೆದರಿಕೆ
ಮಹಿಳೆಯರ ಗಂಡಂದಿರನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸುವುದು, ಮಾಟಮಂತ್ರದ ಭಯ ಹುಟ್ಟಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಅವರನ್ನು ಮೌನವಾಗಿರಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಖಾರಟ್ ನಾಸಿಕ್ನ ಕೆನಡಾ ಕಾರ್ನರ್ ಪ್ರದೇಶದಲ್ಲಿ ಓಕಸ್ ಪ್ರಾಪರ್ಟಿ ಡೀಲರ್ಸ್ ಅಂಡ್ ಡೆವಲಪರ್ಸ್ ಹೆಸರಿನಲ್ಲಿ ಕಚೇರಿ ನಡೆಸುತ್ತಿದ್ದ. ಆದರೆ ಅಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಬದಲು ಮಹಿಳೆಯರನ್ನು ಗುರಿಯಾಗಿಸಿಕೊಂಡ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಆರೋಪ ಕೇಳಿಬಂದಿದೆ.
ಪ್ರಕರಣದ ಗಂಭೀರತೆಯನ್ನು ಮನಗಂಡು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಹೆಚ್ಚಿನ ಮಹಿಳೆಯರು ಬಲಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ತನಿಖೆ ವಿಸ್ತರಿಸಲಾಗಿದೆ.
ಬಂಧನದ ಮಾಹಿತಿ ಸೋರಿಕೆಯಾಗದಂತೆ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ, ನಾಸಿಕ್ ಹೊರವಲಯದ ತೋಟದ ಮನೆಯಲ್ಲಿ ಆರೋಪಿಯನ್ನು ಸೆರೆಹಿಡಿದರು.
ಕತ್ತಲಿನಲ್ಲಿ ಮನೆಯ ಹೊರಗೆ “ಕಳ್ಳ, ಕಳ್ಳ” ಎಂದು ಕೂಗಿ ಗದ್ದಲ ಸೃಷ್ಟಿಸಿದ ತಂಡ, ಅದೇ ಸಂದರ್ಭ ಬಳಸಿಕೊಂಡು ಮನೆಯೊಳಗೆ ನೇರ ಪ್ರವೇಶಿಸಿತು. ಪರಿಸ್ಥಿತಿ ಅರ್ಥವಾಗುವ ಮೊದಲೇ ಆರೋಪಿಯನ್ನು ಬಂಧಿಸಲಾಯಿತು.
ಕಾರ್ಯಾಚರಣೆಯ ವೇಳೆ ಫಾರ್ಮ್ಹೌಸ್ನಿಂದ ಒಂದು ಪಿಸ್ತೂಲ್, ಲೈವ್ ಕಾರ್ಟ್ರಿಡ್ಜ್ಗಳು ಹಾಗೂ ಖಾಲಿ ಕಾರ್ಟ್ರಿಡ್ಜ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ನೋಡಿ: “ಯುದ್ಧದಿಂದ ಅಡುಗೆಮನೆಗೆ: ಹೊರೆ ಯಾರಿಗೆ?” Janashakthi Media
