ಸಿಂದಗಿ: ಮೂರನೇ ಹೆರಿಗೆಗಾಗಿ ಬಂದಿದ್ದ ತಾಯಿ-ಮಗು ಸಾವನ್ನಪ್ಪಿರುವ ಘಟನೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಫೆಬ್ರವರಿ 18ರಂದು ನಡೆದಿದೆ. ಸಿಂದಗಿಯ ವಿದ್ಯಾನಗರದ ನಿವಾಸಿ ಮೈತ್ರಾ ರವಿಚಂದ್ರ ಸುಂಗಠಾಣ (26) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಸಿಬ್ಬಂದಿ
ಅವರಿಗೆ ಬುಧವಾರ ನಸುಕಿನ 4 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬದವರು ತಕ್ಷಣವೇ ಯಂಕಂಚಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಕೆಲಹೊತ್ತು ಉಪಚಾರ ಮಾಡಿದ ಅಲ್ಲಿನ ಆರೋಗ್ಯ ಸಿಬ್ಬಂದಿ, ಹೆರಿಗೆ ಕಷ್ಟವಾಗುತ್ತಿದ್ದು, ತಾಲೂಕು ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.
ಗರ್ಭಿಣಿಯನ್ನು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆರಿಗೆಗೆ ದಾಖಲು ಮಾಡಿದಾಗಲೂ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಇರಲಿಲ್ಲ ಎಂದು ಕುಟುಂಬದವರು ಹೇಳಿದ್ದು, ಆಸ್ಪತ್ರೆಯಲ್ಲಿನ ನರ್ಸ್ಗಳು ಸಂಜೆ 6.52ಕ್ಕೆ ಹೆರಿಗೆ ಮಾಡಿಸಿ, ಹೆರಿಗೆ ವೇಳೆ ಜನಿಸಿದ ಗಂಡು ಮಗು ಸತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ನಂತರ ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವ ಅಧಿಕವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಟ್ಟೂರು | ರೈತರ ಹಿತಕ್ಕೆ ವಿರುದ್ಧ ಸ್ಮಾರ್ಟ್ ಮೀಟರ್ ಯೋಜನೆ : ಜೆ.ಎಂ. ವೀರಸಂಗಯ್ಯ ಆರೋಪ
ಇದರಿಂದ ದಿಕ್ಕುತೋಚದೆ ಕುಟುಂಬದವರು ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದಾರೆ. ಅಲ್ಲಿಯ ವೈದ್ಯರೂ ಬಾಣಂತಿ ಸ್ಥಿತಿ ಗಮನಿಸಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆಸ್ಪತ್ರೆಯ ಆಂಬುಲೆನ್ಸ್ನಲ್ಲಿಯೇ ರಾತ್ರಿ 8-45ರ ಸುಮಾರಿಗೆ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ.
ಆದರೆ ದುರಾದೃಷ್ಟವಶಾತ್ ಬಾಣಂತಿ ಮೃತಪಟ್ಟಿದ್ದಾರೆಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಹೆರಿಗೆ ವೇಳೆ ಸೂಕ್ತ ಮಾಹಿತಿ ನೀಡದ, ತುರ್ತು ಸಂದರ್ಭದಲ್ಲೂ, ಆರೋಗ್ಯ ತಪಾಸಿಸದ ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಮೈತ್ರಾ ಸಾವನ್ನಪ್ಪಿದ್ದಾರೆ ಎಂದು ಮೃತಳ ಕುಟುಂಬದ ಸೀತಮ್ಮ ಭೀಮಣ್ಣ ಅಲ್ಲಾಪೂರ ಎಂಬುವವರು ದೂರು ನೀಡಿದ್ದಾರೆ.
ಸಿಂದಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದವರನ್ನು ಅಲ್ಲಿನ ನರ್ಸ್ಗಳು ದಾಖಲು ಮಾಡಿಕೊಂಡು, ಅಗತ್ಯವಿದ್ದರೆ, ವೈದ್ಯರನ್ನು ಕೇಳಿ ಹೆರಿಗೆ ಮಾಡಿಕೊಳ್ಳುತ್ತಾರೆ. ತೀವ್ರ ರಕ್ತಸ್ರಾವದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಹೋಗಲು ತಿಳಿಸಲಾಗಿದೆ. ಆದರೆ ಕುಟುಂಬದವರು ಖಾಸಗಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ವಿಜಯಪುರಕ್ಕೆ ಹೋಗಿದ್ದಾರೆ. ಘಟನೆಯಲ್ಲಿ ತಾಯಿ ಮತ್ತು ಮಗುವಿನ ಮರಣದ ಸಂದರ್ಭದಲ್ಲಿದ್ದ ಸಿಬ್ಬಂದಿಯಿಂದ ಮಾಹಿತಿಪಡೆದು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಪರಶುರಾಮ ಹಿಟ್ನಾಳಜಿಲ್ಲಾ ತಿಳಿಸಿದ್ದಾರೆ.
ಇದನ್ನೂ ನೋಡಿ: ಕೆಂಪು ಪುಸ್ತಕ ದಿನ | ದುಡಿಯುವ ಜನತೆಯ ಕೈಪಿಡಿಹಾಡಿದವರು Janashakthi Media
