ಬೆಂಗಳೂರು: ನಗರದಲ್ಲಿ ಪಟಾಕಿ ಸಿಡಿತದ ವೇಳೆ ಮೂರು ವರ್ಷದ ಮಗು ಸೇರಿದಂತೆ ಒಟ್ಟು 12 ಮಕ್ಕಳು ಮತ್ತು ಇಬ್ಬರು ಯುವಕರು ಕಣ್ಣಿನ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೊತೆಗೆ, ಪಟಾಕಿ ಸಿಡಿಯುವುದನ್ನು ನೋಡುತ್ತಿದ್ದವರಿಗೆ ಹೆಚ್ಚು ಗಾಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಸಿಡಿತ
ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಾದ ಮಿಂಟೋ, ನಾರಾಯಣ ನೇತ್ರಾಲಯ ಮತ್ತು ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಮನೆಯಲ್ಲಿ ಪಟಾಕಿ ಹಚ್ಚುತ್ತಿದ್ದಾಗ, ಮೂರು ವರ್ಷದ ಮಗುವಿನ ಎರಡೂ ಕಣ್ಣುಗಳಿಗೆ ಹೊಗೆ ಮತ್ತು ಕಿಡಿ ತಾಗಿ ಗಂಭೀರವಲ್ಲದ ಗಾಯವಾಗಿದೆ. ಮಗುವನ್ನು ನಾರಾಯಣ ನೇತ್ರಾಲಯಕ್ಕೆ ದಾಖಲಿಸಲಾಗಿದ್ದು, ವೈದ್ಯರು ಕಣ್ಣುಗಳನ್ನು ಸ್ವಚ್ಛಗೊಳಿಸಿ, ಔಷಧಿ ನೀಡಿ ಹೆಚ್ಚಿನ ಆರೈಕೆ ಮಾಡುತ್ತಿದ್ದಾರೆ. ಸಿಡಿತ
ಇದನ್ನೂ ಓದಿ: ಬೆಳಗಾವಿ | ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚಿಸಬೇಕು ಉತ್ತರ ಕರ್ನಾಟಕ ವಿಕಾಸ ವೇದಿಕೆ ನಾಯಕರು ಎಚ್ಚರಿಕೆ
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ನಾರಾಯಣ ನೇತ್ರಾಲಯದಲ್ಲಿ ಒಟ್ಟು ಐವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರಲ್ಲಿ ನಾಲ್ಕು ಮಕ್ಕಳು ಮತ್ತು ಒಬ್ಬ ಯುವಕ ಸೇರಿದ್ದಾರೆ.
ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಕಿಡಿ ತಗುಲಿ ಗಾಯಗೊಂಡ 12 ವರ್ಷದ ಬಾಲಕ ಮತ್ತು ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದಾಗ ಗಾಯಗೊಂಡ 14 ವರ್ಷದ ಇನ್ನೊಬ್ಬ ಬಾಲಕ ಸೇರಿದಂತೆ ಮೂವರು ಮಕ್ಕಳು ಮತ್ತು ಒಬ್ಬ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ. ಇಬ್ಬರನ್ನೂ ಹೊರರೋಗಿ ವಿಭಾಗದಲ್ಲಿ ದಾಖಲಿಸಲಾಗಿದ್ದು, ಯಾರಿಗೂ ಗಂಭೀರ ಹಾನಿಯಾಗಿಲ್ಲ ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿ ಇಲ್ಲಿ ಚಿಕಿತ್ಸೆ ಪಡೆದ ಐದೂ ಮಕ್ಕಳು 8 ರಿಂದ 12 ವರ್ಷದೊಳಗಿನವರಾಗಿದ್ದಾರೆ. 12 ವರ್ಷದ ಬಾಲಕಿಯೊಬ್ಬಳ ಕಣ್ಣಿನ ಕಾರ್ನಿಯಾ ಮೇಲೆ ಬಿದ್ದಿದ್ದ ಕಿಡಿಗಳನ್ನು ವೈದ್ಯರು ಯಶಸ್ವಿಯಾಗಿ ತೆಗೆದು, ಆಯಂಟಿಬಯಾಟಿಕ್ ಮತ್ತು ಲೂಬ್ರಿಕೆಂಟ್ ಹನಿಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಇಲ್ಲಿ ದಾಖಲಾದ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.
ಪೋಷಕರಿಗೆ ವೈದ್ಯರ ಸಲಹೆ ಏನು?
ಗಾಯಗೊಂಡ ಹೆಚ್ಚಿನ ಮಕ್ಕಳು ಪಟಾಕಿ ಸಿಡಿಸುತ್ತಿರಲಿಲ್ಲ, ಬದಲಾಗಿ ಅದನ್ನು ನೋಡಲು ಹೋಗಿ ಅನಾಹುತಕ್ಕೆ ತುತ್ತಾಗಿದ್ದಾರೆ. ಮಕ್ಕಳು ಪಟಾಕಿ ಹೊಡೆಯುವಾಗ ಪೋಷಕರು ಅಥವಾ ಹಿರಿಯರು ಕಡ್ಡಾಯವಾಗಿ ಹತ್ತಿರವಿದ್ದು ಮೇಲ್ವಿಚಾರಣೆ ನಡೆಸಬೇಕು. ಯಾವುದೇ ರೀತಿಯ ಕಣ್ಣಿನ ಗಾಯವಾದರೆ, ಸಮಯ ವ್ಯರ್ಥ ಮಾಡದೆ ತಕ್ಷಣವೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ನೋಡಿ: ಗುಜರಾತ್ | ವರ್ಚಸ್ಸಿನ ಭೀತಿ ಬಿಜೆಪಿ – ಸಚಿವ ಸಂಪುಟಕ್ಕೆ ಫುಲ್ ಸರ್ಜರಿ Janashakthi Media
