ಮಾನವಹಕ್ಕು ಹೋರಾಟಗಾರ ಪ್ರೊ. ಜಿ.ಎನ್. ಸಾಯಿಬಾಬಾ ನಿಧನ

ಹೈದ್ರಾಬಾದ್ :ಮಾವೋವಾದಿಗಳೊಂದಿಗೆ ನಂಟಿನ ಆರೋಪದ ಪ್ರಕರಣದಲ್ಲಿ ಖುಲಾಸೆಗೊಂಡ ಕೇವಲ 7 ತಿಂಗಳುಗಳ ಬಳಿಕ ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಡಾ. ಗೋಕರಕೊಂಡ ನಾಗಾ ಸಾಯಿಬಾಬಾ (58) ಅವರು ಶನಿವಾರ ನಿಧನರಾದರು.

ಸರಕಾರದ ದಮನಕ್ಕೆ ಸಂಕೇತವಾದ ಸಾಯಿಬಾಬಾ ಅವರು ಹೃದಯಾಘಾತದ ಬಳಿಕ ಹೈದರಾಬಾದ್‌ನ ನಿಝಾಮ್ಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಎನ್‌ಐಎಂಎಸ್)ನಲ್ಲಿ ಕೊನೆಯುಸಿರೆಳೆದರು.

10 ವರ್ಷಗಳ ಕಾರಾಗೃಹ ಶಿಕ್ಷೆ ಸಂದರ್ಭ ಸಾಯಿಬಾಬಾ ಅವರು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿರುವ ಹಾಗೂ ಚಿತ್ರಹಿಂಸೆ ನೀಡಿರುವ ಬಗ್ಗೆ ದೂರಿದ್ದರು. ಅವರು ಪೊಲೀಯೊದಿಂದ ಶಾಶ್ವತ ಪಕ್ಷವಾತ ಪೀಡಿತರಾಗಿದ್ದರೂ ಕಾರಾಗೃಹದ ಆಡಳಿತ ಅವರಿಗೆ ಔಷಧಗಳನ್ನು ಹಸ್ತಾಂತರಿಸಲು ನಿರಾಕರಿಸಿತ್ತು. ಖುಲಾಸೆಗೊಂಡ ಬಳಿಗೆ ಅವರು ಈ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದರು.

ಇತರ ಐದು ಮಂದಿಯೊಂದಿಗೆ ಸಾಯಿಬಾಬಾ ಅವರನ್ನು ಬಾಂಬೆ ಉಚ್ಚ ನ್ಯಾಯಾಲಯ ಮಾರ್ಚ್ ಆರಂಭದಲ್ಲಿ ಖುಲಾಸೆಗೊಳಿಸಿತ್ತು.

ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಸಾಯಿಬಾಬಾ ಅವರನ್ನು ಬಂಧಿಸಲಾಗಿತ್ತು ಹಾಗೂ ಅವರ ವಿರುದ್ಧ ಕ್ರೂರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ರಾಜ್ಯ ಅವರ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿತ್ತು.

ಸಾಯಿಬಾಬಾ ಅವರಿಗೆ ಐದು ವರ್ಷ ಇರುವಾಗಲೇ ಪೋಲಿಯೊ ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೂ ಅವರು ವೀಲ್‌ಚೇರ್‌ನಲ್ಲಿಯೇ ಇದ್ದರು. ರಕ್ತನಾಳದ ಊತ, ಹೃದಯ ಸಂಬಂಧಿ ಖಾಯಿಲೆ, ತೀವ್ರ ರಕ್ತದೊತ್ತಡ ಸೇರಿದಂತೆ ಹಲವು ವಿಧದ ರೋಗಗಳಿಂದ ಬಳಲುತ್ತಿದ್ದರು. ನರಮಂಡಲ ಸಂಬಂಧಿತ ‌ಕಾಯಿಲೆಯೂ ಅವರಿಗಿತ್ತು. ಇದೇ ಕಾರಣಕ್ಕೆ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಈ ಎಲ್ಲ ಕಾರಣದಿಂದ ದೇಹದ ಶೇ 90ರಷ್ಟು ಭಾಗ ಅಂಗವೈಕಲ್ಯಕ್ಕೆ ಒಳಗಾಗಿತ್ತು.

Donate Janashakthi Media

Leave a Reply

Your email address will not be published. Required fields are marked *