ಕರ್ನಾಟಕ ವೈದ್ಯಕೀಯ ಪರಿಷತ್ತು ನ್ಯಾಯಯುತವಾಗಿರಬೇಕು – ವೈದ್ಯರ ಆಗ್ರಹ

ಬೆಂಗಳೂರು: ವೈದ್ಯರಿಗಷ್ಟೇ ಅಲ್ಲ, ಜನರಿಗೂ ನ್ಯಾಯ ಒದಗಿಸಬೇಕಾದ ಗುರುತರವಾದ ಜವಾಬ್ದಾರಿ ಹೊಂದಿರುವ ಕರ್ನಾಟಕ ವೈದ್ಯಕೀಯ ಪರಿಷತ್ತು ನ್ಯಾಯಬದ್ಧವಾಗಿ, ಪ್ರಾಮಾಣಿಕ ಸದಸ್ಯರನ್ನು ಹೊಂದಿರುವುದು ಅತ್ಯಗತ್ಯ. ಆದುದರಿಂದ ಇನ್ನಾದರೂ ಇಂಥ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಸರಕಾರವು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಸೇರಿದಂತೆ 117 ವೈದ್ಯರು, ಸಾಹಿತಿಗಳು, ಚಿಂತಕರು, ಹೋರಾಟಗಾರರು ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಇವರುಗಳ ಆಗ್ರಹ ಈ ಕೆಳಗಿನಂತಿದೆ

ಕರ್ನಾಟಕ ವೈದ್ಯಕೀಯ ಪರಿಷತ್ತು ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳಿಗೆ ಕಾಲಬದ್ಧವಾಗಿ ನ್ಯಾಯಯುತ ಚುನಾವಣೆಗಳು ಮತ್ತು ನಾಮನಿರ್ದೇಶನಗಳಾಗಬೇಕು, ಅಧಿಕಾರದಲ್ಲಿರುವ ಸದಸ್ಯರು ಪಟ್ಟಭದ್ರರಾಗಿ ಕಾನೂನನ್ನು ದುರ್ಬಳಕೆ ಮಾಡಿ ಮುಂದುವರಿಯಲು ಅವಕಾಶವಿರಕೂಡದು.

ಕರ್ನಾಟಕ ವೈದ್ಯಕೀಯ ಪರಿಷತ್ತು ಮತ್ತು ಇತರ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡುವಾಗ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳವರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುವುದನ್ನು ಕಾನೂನಿನ ತಿದ್ದುಪಡಿಗಳ ಮೂಲಕ ಕಡ್ಡಾಯಗೊಳಿಸಬೇಕು; ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳವರನ್ನಷ್ಟೇ ಇಂಥ ಸಂಸ್ಥೆಗಳಲ್ಲೂ ತುಂಬಿಸುವುದು ಅಪೇಕ್ಷಣೀಯವಲ್ಲ, ನ್ಯಾಯಯುತವಲ್ಲ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಗೆ ಎಂದಿಗೂ ದ್ರೋಹ ಆಗುವುದಿಲ್ಲ- ಗೃಹ ಸಚಿವ ಡಾ. ಜಿ. ಪರಮೇಶ್ವರ್

ಕರ್ನಾಟಕ ವೈದ್ಯಕೀಯ ಪರಿಷತ್ತಿನಲ್ಲಿ ದೂರುಗಳ ವಿಚಾರಣೆಯಾಗುವಾಗ ಜನಸಾಮಾನ್ಯರ ಪ್ರತಿನಿಧಿಯಾಗಿ ನಿವೃತ್ತ ನ್ಯಾಯಾಧೀಶರು, ವಿಶ್ರಾಂತ ಕುಲಪತಿಗಳು ಅಥವಾ ತತ್ಸಮಾನರಾದವರು ವೀಕ್ಷಕರಾಗುವಂತೆ ಕಾಯಿದೆಯಲ್ಲಿ ಅವಕಾಶ ಕಲ್ಪಿಸಬೇಕು.

ರಾಜ್ಯದ ಎಲ್ಲಾ ಆಧುನಿಕ ವೈದ್ಯರನ್ನು ನೋಂದಾಯಿಸಿಕೊಂಡು, ವೃತ್ತಿ ಸಂಹಿತೆಯ ಉಲ್ಲಂಘನೆ ಹಾಗೂ ಚಿಕಿತ್ಸೆಯ ಲೋಪಗಳ ಬಗ್ಗೆ ಜನಸಾಮಾನ್ಯರ ದೂರುಗಳನ್ನು ವಿಚಾರಣೆಗೊಳಪಡಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿರುವ ಸ್ವಾಯತ್ತ, ಅರೆ-ನ್ಯಾಯಿಕ, ಸಾಂವಿಧಾನಿಕ ಸಂಸ್ಥೆಯಾಗಿರುವ ಕರ್ನಾಟಕ ವೈದ್ಯಕೀಯ ಪರಿಷತ್ತು (ಕೆಎಂಸಿ) 13 ವರ್ಷಗಳ ಬಳಿಕ ಈಗ ತಾನೇ ಹೊಸ ಸದಸ್ಯರು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರನ್ನು ಪಡೆದಿದೆ.

ರಾಜ್ಯದ ವೈದ್ಯರಿಂದಲೇ ಚುನಾಯಿಸಲ್ಪಡುವ 12 ವೈದ್ಯರು ಹಾಗೂ ಸರಕಾರದಿಂದ ನಾಮ ನಿರ್ದೇಶನಗೊಳ್ಳುವ ಐದು ಸದಸ್ಯರನ್ನು ಹೊಂದಿರುವ ಕೆಎಂಸಿಯ ಚುನಾವಣೆಗಳು ಒಂದು ದಶಕದಷ್ಟು ತಡವಾದದ್ದು, ನಾಮನಿರ್ದೇಶನಗಳನ್ನು ಮಾಡುವಾಗ ಕಾಯಿದೆಯನ್ನು ಪಾಲಿಸದೇ ಇದ್ದದ್ದು, ಇವೆಲ್ಲಕ್ಕೂ ರಾಜ್ಯದ ಕೆಲವು ವೈದ್ಯರು ಎರಡೆರಡು ಉಚ್ಚ ನ್ಯಾಯಾಲಯಗಳಲ್ಲಿ ಸುದೀರ್ಘವಾದ ಕಾನೂನು ಹೋರಾಟಗಳನ್ನು ನಡೆಸಬೇಕಾಗಿ ಬಂದದ್ದು ಎಲ್ಲಾ ಪ್ರಜ್ಞಾವಂತರನ್ನೂ ಕಾಡಬೇಕಾದ ಸಂಗತಿಯಾಗಿದೆ.

ಇದೇ ಕೆಎಂಸಿಯೆದುರು ವೈದ್ಯಕೀಯ ನಿರ್ಲಕ್ಷ್ಯದ ಮುನ್ನೂರಕ್ಕೂ ಹೆಚ್ಚು ಪ್ರಕರಣಗಳು ವರ್ಷಗಟ್ಟಲೆಯಿಂದ ವಿಚಾರಣೆಗೆ ಬಾಕಿಯಿದ್ದು, ಈ ಹಿಂದಿನ ಸದಸ್ಯರು ವಿಚಾರಣೆಯನ್ನು ಮುಂದೂಡುತ್ತಲೇ ಹೋದುದರಿಂದ ಸಂತೃಸ್ತರಿಗೆ ಇದುವರೆಗೂ ನ್ಯಾಯ ದೊರೆತಿಲ್ಲ ಎನ್ನುವುದು ಇಂದಿನ ಪತ್ರಿಕೆಯಲ್ಲೇ ವರದಿಯಾಗಿರುವುದು ಈ ಸಾಂವಿಧಾನಿಕ ಸಂಸ್ಥೆಯು ನ್ಯಾಯಬದ್ಧವಾಗಿರಬೇಕಾದ ಮಹತ್ವವನ್ನು ತೋರಿಸುತ್ತದೆ. ಹೀಗೆ ವೈದ್ಯರಿಗಷ್ಟೇ ಅಲ್ಲ, ಜನರಿಗೂ ನ್ಯಾಯವೊದಗಿಸಬೇಕಾದ ಗುರುತರವಾದ ಜವಾಬ್ದಾರಿಯನ್ನು ಹೊಂದಿರುವ ವೈದ್ಯಕೀಯ ಪರಿಷತ್ತು ನ್ಯಾಯಬದ್ಧವಾಗಿ, ಪ್ರಾಮಾಣಿಕ ಸದಸ್ಯರನ್ನು ಹೊಂದಿರುವುದು ಅತ್ಯಗತ್ಯವಾಗಿರುವುದರಿಂದ ಇನ್ನಾದರೂ ಇಂಥ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಸರಕಾರವು ಹೆಚ್ಚು ಮುತುವರ್ಜಿಯನ್ನು ವಹಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ.

ಕೆಎಂಸಿಯಲ್ಲಿ 2011ರಲ್ಲಿ ಚುನಾಯಿತರಾಗಿ ಅಧಿಕಾರದಲ್ಲಿದ್ದವರು ಕಾಲಕ್ಕೆ ಸರಿಯಾಗಿ ಚುನಾವಣೆ ನಡೆಸದಿದ್ದುದರಿಂದ, ರಾಜ್ಯ ಸರಕಾರವೂ ನಿರಾಸಕ್ತವಾಗಿದ್ದುದರಿಂದ, ಕೆಲವು ವೈದ್ಯರು ಚುನಾವಣೆಗಾಗಿ ಆಗ್ರಹಿಸಿ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಅದನ್ನು ಮನ್ನಿಸಿ ಚುನಾವಣೆ ನಡೆಸುವಂತೆ ನ್ಯಾಯಾಲಯವು ಆದೇಶಿಸಿದರೂ ಕೆಎಂಸಿಯ ಪದಾಧಿಕಾರಿಗಳು, ರಿಜಿಸ್ಟ್ರಾರ್ ಮತ್ತು ಸರಕಾರ ಎಲ್ಲರೂ ಅದನ್ನು ಕಡೆಗಣಿಸಿ ಚುನಾವಣೆ ನಡೆಸಲಿಲ್ಲ, ಆಗ ಆ ವೈದ್ಯರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕಾಯಿತು.

ಕೊನೆಗೆ ಉಚ್ಚ ನ್ಯಾಯಾಲಯದ ಕಟ್ಟಪ್ಪಣೆಯ ಮೇರೆಗೆ ಜನವರಿ 2020ರಲ್ಲಿ ಚುನಾವಣೆಗಳು ನಡೆದವು. ಆದರೆ ಪಟ್ಟಭದ್ರರಾಗಿ ಕುಳಿತಿದ್ದವರು ಹೊಸ ಸದಸ್ಯರು ಅಧಿಕಾರ ವಹಿಸದಂತೆ ಕಲ್ಬುರ್ಗಿ ಪೀಠದಿಂದ ತಡೆಯಾಜ್ಞೆ ತಂದರು. ಅದನ್ನು ವಿರೋಧಿಸಿ ಮತ್ತೆ ಹೋರಾಡಬೇಕಾಯಿತು. ಆಗಲೂ ಸರಕಾರವು ವಿಶೇಷ ಆಸಕ್ತಿಯನ್ನೇನೂ ತೋರಿಸಲಿಲ್ಲ. ಅಂತೂ ಕೊನೆಗೆ ನವೆಂಬರ್ 2023ರಲ್ಲಿ, ಚುನಾವಣೆಗಳಾಗಿ ಸುಮಾರು ನಾಲ್ಕು ವರ್ಷಗಳ ಬಳಿಕ, ಮಾನ್ಯ ನ್ಯಾಯಾಲಯವು ತಡೆಯಾಜ್ಞೆ ತೆರವುಗೊಳಿಸಿ ಚುನಾಯಿತ ಸದಸ್ಯರು ಅಧಿಕಾರ ವಹಿಸಿಕೊಳ್ಳುವಂತಾಯಿತು.

ಹೊಸ ಸದಸ್ಯರು ಬರುವವರೆಗೆ ಹಳಬರು ಮುಂದುವರಿಯುತ್ತಾರೆ ಎಂದು ಕೆಎಂಸಿಯ ಕಾಯಿದೆಯ ಐದನೇ ಕಂಡಿಕೆಯಲ್ಲಿ ನೀಡಿರುವ ತಾತ್ಕಾಲಿಕ ಅವಕಾಶವನ್ನೇ ದುರುಪಯೋಗಿಸಿಕೊಂಡು, ಹೊಸ ಸದಸ್ಯರೇ ಬಾರದಂತೆ ತಡೆದು ಹಳಬರೇ ಹದಿಮೂರು ವರ್ಷಗಳ ಕಾಲ ಮುಂದುವರಿಯಲು ಸಾಧ್ಯವಾದುದು ಸಾಂವಿಧಾನಿಕ ಸಂಸ್ಥೆಯಲ್ಲಿ ಕಾನೂನಿಗೆ ಆಗಿರುವ ಅಪಚಾರವಾಗಿದ್ದು, ಇನ್ನೆಂದಿಗೂ ಇಂಥವು ಪುನರಾವರ್ತನೆಯಾಗದಂತೆ ತಡೆಯಬೇಕು, ಅದಕ್ಕಾಗಿ ಕಾನೂನಿನಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಲೇಬೇಕು.

ವೈದ್ಯಕೀಯ ಪರಿಷತ್ತಿಗೆ ಐವರು ಸದಸ್ಯರನ್ನು ರಾಜ್ಯ ಸರಕಾರವು ನಾಮನಿರ್ದೇಶನ ಮಾಡುವಾಗ ಚುನಾಯಿತ ಸದಸ್ಯರಲ್ಲಿ ಮಹಿಳೆಯರು ಹಾಗೂ ಇತರ ವರ್ಗಗಳವರು ಸ್ಥಾನವನ್ನು ಪಡೆದಿರದಿದ್ದಲ್ಲಿ ಆ ವರ್ಗಗಳವರಿಗೆ ಪ್ರಾತಿನಿಧ್ಯ ನೀಡುವುದನ್ನು ಪರಿಗಣಿಸಬೇಕು ಎಂದು ವೈದ್ಯಕೀಯ ನೋಂದಣಿ ಕಾಯಿದೆಯ ಕಂಡಿಕೆ 3(2)(ಡಿ)ಯಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೆ ಜನವರಿ 2020ರಲ್ಲಿ ನಡೆದ ಚುನಾವಣೆಗಳಿಗೆ ಮೂರು ದಿನ ಮೊದಲೇ ರಾಜ್ಯ ಸರಕಾರವು ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿತ್ತು, ಅವರೆಲ್ಲರೂ ಗಂಡಸರೇ ಆಗಿದ್ದು, ನಾಲ್ವರು ಮೇಲ್ಜಾತಿಗಳವರಾಗಿದ್ದರು.

ಈ ನಾಮನಿರ್ದೇಶನಗಳನ್ನು ಮಾಡುವಾಗ ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳವರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಕಾನೂನಿನ ಆಶಯವನ್ನು ಕಡೆಗಣಿಸಲಾಗಿದೆ ಎಂದು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಉಚ್ಚ ನ್ಯಾಯಾಲಯದ ಸೂಚನೆಯ ಮೇರೆಗೆ ಆ ಐದು ನಾಮಕರಣಗಳು ಅದೇ ವರ್ಷ ರದ್ದಾಗಿದ್ದವು. ಹೀಗೆ ರದ್ದಾದುದನ್ನು ಕೂಡ ಕಲ್ಬುರ್ಗಿ ಪೀಠದೆದುರು ಪ್ರಶ್ನಿಸಲಾಗಿತ್ತು, ಆದರೆ ನ್ಯಾಯಾಲಯವು ಆ ಅರ್ಜಿಯನ್ನು ವಜಾ ಮಾಡಿತ್ತು.

ಹೀಗೆ ರದ್ದಾದ ಐದು ಸ್ಥಾನಗಳ ನಾಮನಿರ್ದೇಶನವನ್ನು ಕೂಡಲೇ ಮಾಡಬೇಕು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳವರಿಗೆ ಪರಿಷತ್ತಿನಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ನಿರಂತರವಾಗಿ ಸರಕಾರವನ್ನು ಒತ್ತಾಯಿಸಲಾಗಿತ್ತು. ನವೆಂಬರ್ 2023ರಲ್ಲಿ ಚುನಾವಣೆಗಳು ಊರ್ಜಿತಗೊಂಡ ಬಳಿಕವೂ ಸರಕಾರವು ಈ ನಾಮನಿರ್ದೇಶನಗಳನ್ನು ಮಾಡಲು ತಡಮಾಡಿದಾಗ ಮತ್ತೆ ಇದೇ ಮಾರ್ಚ್‌ನಲ್ಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ಅಂತೂ ಜೂನ್ ಮೊದಲ ವಾರದಲ್ಲಿ ಸರಕಾರವು ನಾಲ್ವರು ವೈದ್ಯರನ್ನು ನಾಮಕರಣ ಮಾಡಿತು, ಓರ್ವ ಮಹಿಳಾ ವೈದ್ಯರಿಗಷ್ಟೇ ಅವಕಾಶ ದೊರೆತುದು ಬಿಟ್ಟರೆ ಅಲ್ಪ ಸಂಖ್ಯಾತ ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳವರನ್ನು ಮತ್ತೆ ಕಡೆಗಣಿಸಲಾಯಿತು. ಇಂದು ರಾಜಕೀಯವಾಗಿ ಉನ್ನತ ಅಧಿಕಾರವನ್ನು ಪಡೆದು ಪ್ರಬಲರಾಗಿರುವ ಸಮುದಾಯಗಳವರು ಎಲ್ಲಾ ಪ್ರಮುಖ ಅಧಿಕಾರಯುಕ್ತ ಸ್ಥಾನಗಳಲ್ಲಿ ತಮ್ಮ ಸಮುದಾಯಗಳವರನ್ನೇ ನಿಯುಕ್ತಿಗೊಳಿಸುತ್ತಿರುವುದು, ಮತ್ತು ರಾಜಕೀಯ ಅಧಿಕಾರವನ್ನು ಪಡೆಯುವ ಅವಕಾಶಗಳಿಂದ ಮೊದಲೇ ವಂಚಿತರಾಗಿರುವ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳವರನ್ನು ಪ್ರಮುಖ ನೇಮಕಾತಿಗಳಿಂದ ಹೊರಗಿಡುತ್ತಿರುವುದು ಸಂವಿಧಾನದ ಹಾಗೂ ಕಾನೂನುಗಳ ಆಶಯಗಳಿಗೆ ಮಾಡುತ್ತಿರುವ ಅಪಚಾರವಾಗಿದೆ, ಅನ್ಯಾಯವಾಗಿದೆ.

ಆದ್ದರಿಂದ ಕಾಯಿದೆಯ ಕಂಡಿಕೆ 3(2)(ಡಿ)ಯಲ್ಲಿ  ಮಹಿಳೆಯರು ಮತ್ತು ಇತರ ವರ್ಗಗಳವರು ಎಂದಿರುವಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳವರ ಪ್ರಾತಿನಿಧ್ಯ ಎಂದು ಸ್ಪಷ್ಟವಾದ ತಿದ್ದುಪಡಿಯನ್ನು ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ. ಹಾಗೆಯೇ, ಇತರ ಎಲ್ಲಾ ನಿಗಮಗಳು, ಮಂಡಳಿಗಳು, ಅಕಾಡೆಮಿಗಳು, ವಿಶ್ವವಿದ್ಯಾನಿಲಯದ ಹುದ್ದೆಗಳು ಮುಂತಾದವುಗಳ ನೇಮಕಾತಿಗಳಲ್ಲೂ ಮಹಿಳೆಯರು, ಅಲ್ಪ ಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗಗಳವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸ್ಪಷ್ಟವಾದ ಕಾನೂನುಗಳನ್ನು ಮಾಡಬೇಕು ಮತ್ತು ಅವನ್ನು ತಪ್ಪದೇ ಪಾಲಿಸಬೇಕು ಎಂದು ಆಗ್ರಹಿಸುತ್ತೇವೆ.

ವೈದ್ಯಕೀಯ ಪರಿಷತ್ತು ವೃತ್ತಿ ಸಂಹಿತೆ ಉಲ್ಲಂಘನೆ ಹಾಗೂ ಚಿಕಿತ್ಸೆಗಳ ಲೋಪಗಳ ಬಗ್ಗೆ ವಿಚಾರಣೆ ನಡೆಸುವ ಸಂಸ್ಥೆಯಾಗಿರುವುದರಿಂದ ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದಕ್ಕಾಗಿ ಜನಸಾಮಾನ್ಯರ ಪ್ರತಿನಿಧಿಯಾಗಿ ನಿವೃತ್ತ ನ್ಯಾಯಾಧೀಶರು, ವಿಶ್ರಾಂತ ಕುಲಪತಿಗಳು ಅಥವಾ ತತ್ಸಮಾನರಾದವರನ್ನು, ಅವರಲ್ಲೂ ಮಹಿಳೆಯರನ್ನು, ಈ ವಿಚಾರಣೆಗಳಲ್ಲಿ ವೀಕ್ಷಕರಾಗುವಂತಹ ಅವಕಾಶವನ್ನು ಕೂಡ ಕಾಯಿದೆಯಲ್ಲಿ ಕಲ್ಪಿಸಬೇಕೆಂದು ನಾವು ಆಗ್ರಹಿಸುತ್ತೇವೆ.

ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಎಚ್ ಎಸ್ ಅನುಪಮಾ, ಡಾ. ಪಿ.ವಿ. ಭಂಡಾರಿ, ಡಾ. ಸಂಜೀವ ಕುಲಕರ್ಣಿ, ಡಾ. ಟಿ. ಶ್ರೀನಿವಾಸ ರೆಡ್ಢಿ, ಡಾ. ಅರವಿಂದ ಪಟೇಲ್, ಡಾ. ಜಿ. ರಾಮಕೃಷ್ಣ, ಮೋಹನ ಕಾತರಕಿ, ಹಿರಿಯ ನ್ಯಾಯವಾದಿಗಳು, ಡಾ. ಮರುಳಸಿದ್ದಪ್ಪ, ಡಾ. ಎಸ್ ಜಿ ಸಿದ್ದರಾಮಯ್ಯ, ಪ್ರೊ. ಮಾವಳ್ಳಿ ಶಂಕರ್, ಡಾ. ಸಿದ್ದನಗೌಡ ಪಾಟೀಲ್, ಡಾ. ನಿರಂಜನಾರಾಧ್ಯ ವಿಪಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ. ವಸುಂಧರಾ ಭೂಪತಿ, ಡಾ. ಎನ್. ಗಾಯತ್ರಿ, ಡಾ. ಇಂದಿರಾ ಹೆಗ್ಗಡೆ, ಡಾ. ಬಿ. ಆರ್. ಮಂಜುನಾಥ, ಡಿ. ಉಮಾಪತಿ, ಬಸವಪ್ರಭು ಹೊಸಕೇರಿ, ಅಲ್ಲಮಪ್ರಭು ಬೆಟ್ಟದೂರು, ಬಿ ಸುರೇಶ, ವಿ. ಎಲ್. ನರಸಿಂಹಮೂರ್ತಿ, ಸನತಕುಮಾರ ಬೆಳಗಲಿ, ಕೇಸರಿ ಹರವು, ಬಸವರಾಜ ಸೂಳಿಭಾವಿ, ನಾಗೇಂದ್ರ ಬಡಗಲಪುರ, ಡಾ. ಸದಾಶಿವ ಮರ್ಜಿ, ನಾ ದಿವಾಕರ, ಶರಣಪ್ಪ ಬಾಚಲಾಪುರ, ಡಿಎಂ ಬಡಿಗೇರ, ಮೆಹಬೂಬ ಮಠದ, ವಿ ಎನ್ ಲಕ್ಷ್ಮೀನಾರಾಯಣ, ಶಂಕರಪುರ ಸುರೇಶ್, ಕೆ. ಫಣಿರಾಜ, ಜಿ. ವಿ. ಆನಂದಮೂರ್ತಿ, ಸಂಜ್ಯೋತಿ ವಿ ಕೆ, ಮಂಸೋರೆ, ಚಂದ್ರಕಾಂತ ವಡ್ಡು, ಯೋಗಾನಂದ ಬಿಎನ್, ನಗರಗೆರೆ ರಮೇಶ, ಡಾ. ನರಸಿಂಹಪ್ಪ ಜಿಎಂ, ಈರಪ್ಪ ಎಂ ಕಂಬಳಿ, ಗಿರಿಧರ ಕಾರ್ಕಳ, ಶ್ರೀಧರ ನಾಯಕ, ಮುತ್ತು ಬಿಳಿಯಲಿ, ಮಲ್ಲಯ್ಯ ಕಮತಗಿ, ಅನಿಲ ಹೊಸಮನಿ, ಯಡೂರ ಮಹಾಬಲ, ವಿಶಾಲಮತಿ, ವಿಜಯಕಾಂತ ಪಾಟೀಲ, ಅಶೋಕ ಬರಗುಂಡಿ, ಬಿ. ಶ್ರೀನಿವಾಸ, ತೇಜಸ್ವಿ ಬಿ. ನಾಯಕ, ಡಾ. ಪ್ರದೀಪ್ ಮಾಲ್ಗುಡಿ, ಗಂಗಾಧರ ಟಿಕೆ, ವೆಂಕಟೇಶಯ್ಯ ಅಪ್ಪಗೆರೆ, ಶಾಮರಾವ್ ಮಾದರ, ಶಾಮಣ್ಣ ನಾರನಾಳ, ಮೈಲಾರಪ್ಪ ಬೂದಿಹಾಳ, ಡಾ. ವೈ. ಬಿ ಹಿಮ್ಮಡಿ, ಲಕ್ಷ್ಮಣ ಪಿರಗಾರ, ಪ್ರಿಯಾಂಕ ಮಾವಿನಕರ, ಶರಣು ಶೆಟ್ಟರ, ನಿಶಾ ಗೂಳೂರ, ನಾಗರಾಜ ಹರಪನಹಳ್ಳಿ, ಶಂಕರಗೌಡ ಸಾತ್ಮಾರ, ದೇವರಾಜ ಹುಣಸಿಕಟ್ಟಿ, ಕೆ. ಸಿ ನಟೇಕಲ್, ಎಂ. ಕೆ. ಸಾಹೇಬ, ಮಂಜುನಾಥ ಜೆ, ರುದ್ರಪ್ಪ ಭಂಡಾರಿ, ಕೆ. ಮಹಾಂತೇಶ, ನೂರಜಹಾನ್, ಈರಪ್ಪ ಸುತಾರ, ಬಸವರಾಜ ಜಲವಾದಿ, ಅಡಿವೆಪ್ಪ ಹುಗ್ಗಿನವರ, ನವೀನ ತಳಗೇರಿ, ಕಾರ್ತಿಕ್ ದಬಾನಿ, ಆಕಾಶ್ ಕಾಂಬಳೆ, ಆಕಾಶ ಡಪಳಪುರ, ಬಿ. ಪಿ ಮಹೇಂದ್ರಕುಮಾರ, ನೂರ್‌ಅಹ್ಮದ ನಾಗನೂರ, ವರಹಳ್ಳಿ ಆನಂದ, ಎಸ್.ಎನ್ ಮಮತಾರಾಣಿ, ಹೇಮಚಂದ್ರ ಎನ್, ಎಸ್ ಎ ಗಫಾರ, ಬಸವರಾಜ ಬ್ಯಾಗವಾಟ, ಬಸವರಾಜ ಪೂಜಾರ, ಸೈಯ್ಯದ್ ಅಹಮ್ಮದ ಖಾನ್, ಶಿವಕುಮಾರ ಬಂಡೋಳಿ, ಡಾ. ಬಸವರಾಜ ಟಿ, ಕೆ. ನಾರಾಯಣಸ್ವಾಮಿ, ಎಸ್. ಜಿ. ಚಿಕ್ಕನರಗುಂದ, ಸಿ ಎಚ್ ಭಾಗ್ಯ, ಚಂದ್ರಪ್ರಭ ಬಾಗಲಕೋಟ, ಸವಿರಾಜ್ ಆನಂದೂರ, ಸಿ. ಗುಂಡಣ್ಣ, ಅಶೋಕ್ ಮರಿದಾಸ್, ಉಮೇಶ್ ಜಿ ಗಂಗವಾಡಿ, ಸುರೇಶ ಅರಳಕುಪ್ಪೆ, ಬಿ ಎನ್ ಜ್ವಾಲನಪ್ಪ, ಪಾರ್ವತಿ ಜಿಎಸ್, ಜಯರಾಜ್ ವಿ ಧಾಬಶೆಟ್ಟಿ, ಕಿಶೋರ್ ಅತ್ತಾವರ್, ಹನುಮೇಶ ಕಲ್ಮಂಗಿ, ಕೆ ರಾಮರಡ್ಡಿ, ರಶ್ಮಿ ಹೆಗಡೆ, ಡಾ. ಎಚ್ ಬಿ ಪೂಜಾರ, ಎನ್ ಕೆ ಶೇಷಾದ್ರಿ, ಚೆನ್ನು ಕಟ್ಟೀಮನಿ, ಸಿಎಮ್ ಚೆನ್ನಬಸಪ್ಪ, ಕಲ್ಲಯ್ಯ, ದೇವಗಳ್ಳಿ ಸೋಮಶೇಖರ, ಸರಸ್ವತಿ, ಡಾ. ಚೆನ್ನಬಸಪ್ಪ ಐನಳ್ಳಿ, ಶರೀಫ್ ಬಿಳೇಯಲಿ.

ಇದನ್ನೂ ನೋಡಿ: KRS ಆಣೆಕಟ್ಟೆಯ ಸುತ್ತಮುತ್ತಲ ಗಣಿಗಾರಿಕೆ ನಿಲ್ಲಿಸಿ – ರೈತ, ಕಾರ್ಮಿಕರ ಆಗ್ರಹJanashakthi Media

Donate Janashakthi Media

Leave a Reply

Your email address will not be published. Required fields are marked *