ವಾರ್ತೂರು–ಗುಂಜೂರು ರಸ್ತೆಯಲ್ಲಿ ಭಾರಿ ವಾಹನ ದಟ್ಟಣೆ; ಪರೀಕ್ಷೆ ಬರೆಯಲು ತಡವಾಗಿ ತಲುಪಿದ ವಿದ್ಯಾರ್ಥಿಗಳು
ಬೆಂಗಳೂರು: ನಗರದ ವಾರ್ತೂರು–ಗುಂಜೂರು ಮಾರ್ಗದಲ್ಲಿ ಸಂಚಾರ ದಟ್ಟಣೆ ತೀವ್ರಗೊಂಡ ಪರಿಣಾಮ ಶಾಲಾ ವಿದ್ಯಾರ್ಥಿಗಳು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 4 ಕಿಲೋಮೀಟರ್ ದೂರವನ್ನು ಕ್ರಮಿಸಲು ವಿದ್ಯಾರ್ಥಿಗಳು ಮತ್ತು ಶಾಲಾ ವಾಹನಗಳಿಗೆ ಬರೋಬ್ಬರಿ ಎರಡೂವರೆ ಗಂಟೆ ಸಮಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳಲ್ಲಿ ಮಧ್ಯಂತರ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಸಂಚಾರ ಸಮಸ್ಯೆ ಎದುರಾಗಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆತಂಕದಿಂದ ತಲುಪುವಂತಾಗಿದೆ. ಬೆಂಗಳೂರಿನಲ್ಲಿ
SH-35ರ ವಾರ್ತೂರು–ಗುಂಜೂರು ರಸ್ತೆಯ ವ್ಯಾಪ್ತಿಯಲ್ಲಿ ಸುಮಾರು 18ರಿಂದ 20 ಪ್ರಮುಖ ಶಾಲೆಗಳಿವೆ. ಗುರುವಾರ ಬೆಳಗ್ಗೆ ಶಾಲಾ ಬಸ್ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರಿಂದ ಕೆಲವು ಮಾರ್ಗಗಳಲ್ಲಿ 40 ನಿಮಿಷದವರೆಗೆ ವಿಳಂಬವಾಯಿತು. ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ತಲುಪಿದ್ದು, ಪರಿಸ್ಥಿತಿಯನ್ನು ಗಮನಿಸಿದ ಕೆಲವು ಶಾಲೆಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ಣಗೊಳಿಸಲು ಹೆಚ್ಚುವರಿ ಸಮಯ ನೀಡಿದವು.
ಬೆಳಗಿನ ಸಂಚಾರಕ್ಕಿಂತ ಸಂಜೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎಂದು ವರದಿ ತಿಳಿಸಿದೆ. ಮನೆಗೆ ವಾಪಸ್ ತೆರಳುತ್ತಿದ್ದ ವಿದ್ಯಾರ್ಥಿಗಳು ಸಾಮಾನ್ಯ ಪ್ರಯಾಣಕ್ಕಿಂತ ಸುಮಾರು ಒಂದೂವರೆ ಗಂಟೆ ಹೆಚ್ಚುವರಿ ಸಮಯ ರಸ್ತೆಯಲ್ಲೇ ಕಳೆಯಬೇಕಾಯಿತು. ನಾಲ್ಕು ಕಿಲೋಮೀಟರ್ ಪ್ರಯಾಣಕ್ಕೆ ಎರಡೂವರೆ ಗಂಟೆ ಹಿಡಿದಿರುವುದು ಈ ರಸ್ತೆಯ ಸಂಚಾರ ವ್ಯವಸ್ಥೆಯ ಗಂಭೀರ ಸ್ಥಿತಿಯನ್ನು ತೋರಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬೆಂಗಳೂರಿನಲ್ಲಿ
ಇದನ್ನೂ ಓದಿ : ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳಿಗೆ ಈಶ್ವರ ಖಂಡ್ರೆ ಸಕಾರಾತ್ಮಕ ಸ್ಪಂದನೆ
ವಾರ್ತೂರು–ಗುಂಜೂರು ರಸ್ತೆಯಲ್ಲಿ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳು ಕೈಗೊಳ್ಳಲಾಗಿವೆ. ಆದರೆ ರಸ್ತೆ ಕಿರಿದಾಗಿರುವುದು, ಹಾನಿಗೊಳಗಾದ ಮೇಲ್ಮೈ, ದೊಡ್ಡ ಗುಂಡಿಗಳು, ಸಂಚಾರ ನಿರ್ವಹಣೆಯ ಕೊರತೆ ಮತ್ತು ಭಾರಿ ವಾಹನಗಳ ಓಡಾಟದಿಂದ ಸಮಸ್ಯೆ ಮುಂದುವರಿದಿದೆ ಎಂದು ಸ್ಥಳೀಯರು ದೂರಿದ್ದಾರೆ.
“ಮಕ್ಕಳು ತರಗತಿಯಲ್ಲಿ ಕಳೆಯುವುದಕ್ಕಿಂತ ಹೆಚ್ಚಿನ ಸಮಯವನ್ನು ಟ್ರಾಫಿಕ್ನಲ್ಲಿ ಕಳೆಯುವಂತಾಗಿದೆ” ಎಂದು ಸ್ಥಳೀಯ ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ಸಮಯದಲ್ಲಿಯೇ ಇಂತಹ ಸಂಚಾರ ಅವ್ಯವಸ್ಥೆ ಉಂಟಾಗಿರುವುದು ಪೋಷಕರಲ್ಲೂ ಕಳವಳಕ್ಕೆ ಕಾರಣವಾಗಿದೆ. ರಸ್ತೆ ಕಾಮಗಾರಿಗಳ ಜೊತೆಗೆ ಸಂಚಾರ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಬೆಂಗಳೂರಿನಲ್ಲಿ
ಇದನ್ನೂ ನೋಡಿ : “20 ವರ್ಷದಿಂದ ಓಟ್ ಹಾಕೀನಿ… ಈಗ ನೋಟೀಸ್ ಯಾಕೆ?” | SIR ಸಂತ್ರಸ್ತರ ಸಂಕಟಗಳು Janashakthi Media
