ಮೇ ತಿಂಗಳಲ್ಲಿಯೂ ತಾಪಮಾನ ಏರಿಕೆಯ ಸಾದ್ಯತೆ: ಹವಾಮಾನ ಇಲಾಖೆ ತಜ್ಞ

ಬೆಂಗಳೂರು: ‘ರಾಜ್ಯದಲ್ಲಿ ಈ ಬಾರಿ ಮೇ ತಿಂಗಳಲ್ಲಿಯೂ ತಾಪಮಾನ ಏರಿಕೆಯ ಹಾದಿಯಲ್ಲಿಯೇ ಸಾಗುವ ಸಾಧ್ಯತೆಯಿದೆ. ಮೇ 15ರ ನಂತರ ದಕ್ಷಿಣ ಒಳನಾಡಿನಲ್ಲಿ ಉಷ್ಣಾಂಶ ಕಡಿಮೆಯಾಗುವ ಸಂಭವವಿದೆ’ ಎಂದು ರಾಜ್ಯದಲ್ಲಿ ತಾಪಮಾನ ಏರಿಕೆಯ ಬಗ್ಗೆ ವಿವರಿಸಿದ ಹವಾಮಾನ ಇಲಾಖೆ ತಜ್ಞ ಸಿ.ಎಸ್. ಪಾಟೀಲ ತಿಳಿಸಿದರು.

‘ಮೇ 15ರ ಬಳಿಕ ನೈರುತ್ಯದಿಂದ ಗಾಳಿ ಬೀಸಲಿದೆ. ಆ ಗಾಳಿ ತೇವಾಂಶ ತರುವುದರಿಂದ ದಕ್ಷಿಣ ಒಳನಾಡಿನಲ್ಲಿ ಉಷ್ಣಾಂಶ ಇಳಿಕೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲು ಜಾಸ್ತಿಯೇ ಇರಲಿದ್ದು, ಆ ಭಾಗದ ಜಿಲ್ಲೆಗಳ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಹೇಳಿದರು.

ಇದನ್ನೂ ಓದಿ: ಟೀ ಅಂಗಡಿ ಕೆಲಸಗಾರನ ಮೇಲೆ ಪೊಲೀಸ್ ಹಲ್ಲೆ: ಸಾರ್ವಜನಿಕರ ಆಕ್ರೋಶ

‘ಕಳೆದೊಂದು ವಾರದಿಂದ ಗರಿಷ್ಠ ಉಷ್ಣಾಂಶವು ಉತ್ತರ ಒಳನಾಡು ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ವರದಿಯಾಗಿದೆ. ದಕ್ಷಿಣ ಒಳನಾಡಿನಲ್ಲಿ 2ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕವಿದೆ. ಕನಿಷ್ಠ ಉಷ್ಣಾಂಶವೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 26ರಿಂದ 28 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 24ರಿಂದ 26 ಡಿಗ್ರಿ ಸೆಲ್ಸಿಯಸ್‌ ವರದಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ 23ರಿಂದ 25 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಹಗಲು ಮತ್ತು ರಾತ್ರಿಯಲ್ಲಿ ಉಷ್ಣಾಂಶ ವಾಡಿಕೆಗಿಂತ ಹೆಚ್ಚಿದೆ’ ಎಂದು ಮಾಹಿತಿ ನೀಡಿದರು.

‘ಉಷ್ಣಾಂಶ ಏರಿಕೆ ಮತ್ತು ಇಳಿಕೆ ನಿರಂತರ ಪ್ರಕ್ರಿಯೆಯಾಗಿದೆ. ಜಗತ್ತಿನಾದ್ಯಂತ ಉಷ್ಣಾಂಶ ಏರಿಕೆಯಾಗುತ್ತಿದೆ. ಗರಿಷ್ಠ ಉಷ್ಣಾಂಶ ವಾಡಿಕೆಗಿಂತ 4ರಿಂದ 5 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ವರದಿಯಾದರೆ ಉಷ್ಣ ಅಲೆಗಳೆಂದು ಪರಿಗಣಿಸುತ್ತೇವೆ’ ಎಂದು ಹೇಳಿದರು.

‘ಜಾಗತಿಕ ತಾಪಮಾನ ಏರಿಕೆ ಕೈಗಾರಿಕಾ ಕ್ರಾಂತಿಯಿಂದ ಪ್ರಾರಂಭವಾಯಿತು. ಯಂತ್ರಗಳು ಹಾಗೂ ವಾಹನಗಳ ಅವಲಂಬನೆ ಹೆಚ್ಚಳವಾಗಿದೆ. ಹಸಿರುಮನೆ ಪರಿಣಾಮದಿಂದ ತಾಪಮಾನ ಏರಿಕೆಯಾಗುತ್ತಿದೆ’ ಎಂದು ವಿವರಿಸಿದರು.

‘ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯಿದೆ. ಜುಲೈ–ಆಗಸ್ಟ್‌ ನಂತರ ಮಳೆ ಪ್ರಬಲವಾಗಬಹುದು’ ಎಂದರು.

ಇದನ್ನೂ ನೋಡಿ: ಅಂಬೇಡ್ಕರ್–ಮಾರ್ಕ್ಸವಾದ: ಚಿಂತನೆ ಮತ್ತು ಹೋರಾಟ | ಕೆ.ಎನ್.ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *