ಎನ್‌ಕೌಂಟರ್ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

ನವದೆಹಲಿ: ಜೂನ್ 17, 2026ರಂದು ಬಿಹಾರದ ಭೋಜಪುರ ಜಿಲ್ಲೆಯಲ್ಲಿ 28 ವರ್ಷದ ಭಾರತ್ ಭೂಷಣ್ ತಿವಾರಿ ಎಂಬ ಯುವಕನ ಮೇಲೆ ನಡೆದಂತೆ ಆರೋಪಿಸಿರುವ ಪೊಲೀಸ್ ಎನ್‌ಕೌಂಟರ್ ಪ್ರಕರಣಕ್ಕೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂ ಕೋರ್ಟ್ ಜೂನ್‌ 30ರಂದು ಪರಿಗಣಿಸಲು ನಿರಾಕರಿಸಿದೆ. ಸಿಬಿಐ

ವಕೀಲ ವಿಷಾಲ್ ತಿವಾರಿ ಸಲ್ಲಿಸಿದ್ದ ಈ ಅರ್ಜಿಯ ಮೇಲೆ ಯಾವುದೇ ಆದೇಶ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ನೇತೃತ್ವದಲ್ಲಿ ಹಾಗೂ ನ್ಯಾಯಮೂರ್ತಿ ಶೀಲ್ ನಾಗು ಅವರನ್ನೊಳಗೊಂಡಿತ್ತು. ಆದರೆ ಅರ್ಜಿದಾರರಿಗೆ ಹೈಕೋರ್ಟ್‌ಗೆ ಹೋಗುವ ಸ್ವಾತಂತ್ರ್ಯ ನೀಡಲಾಗಿದೆ.

“ಕ್ಷಮಿಸಿ, ಇದನ್ನು ನಾವು ಪರಿಗಣಿಸುವುದಿಲ್ಲ. ಹೈಕೋರ್ಟ್‌ಗೆ ಹೋಗಬಹುದು,” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ‘ಒನ್ ನೇಷನ್, ಒನ್ ಎಲೆಕ್ಷನ್’ ವರದಿ ಮುಂಗಾರು ಅಧಿವೇಶನದಲ್ಲಿ ವಿಳಂಬ ಸಾಧ್ಯತೆ

ವಿಚಾರಣೆ ವೇಳೆ ನ್ಯಾಯಪೀಠವು ಅರ್ಜಿದಾರರ ‘ಲೋಕಸ್ ಸ್ಟ್ಯಾಂಡಿ’ ಬಗ್ಗೆ ಪ್ರಶ್ನಿಸಿದೆ. “ಈ ಪ್ರಕರಣದಲ್ಲಿ ನಿಮ್ಮ ಪಾತ್ರ ಏನು? ನೀವು ಯಾರು (ಈ ಅರ್ಜಿ ಸಲ್ಲಿಸಲು)?” ಎಂದು ನ್ಯಾಯಪೀಠ ಪ್ರಶ್ನಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ವಿಷಾಲ್ ತಿವಾರಿ, ತಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ಎಂದು ತಿಳಿಸಿದರೂ, ಕೋರ್ಟ್ ಅದರಿಂದ ತೃಪ್ತಿಗೊಳ್ಳದೆ ಅರ್ಜಿಯನ್ನು ನೇರವಾಗಿ ತಿರಸ್ಕರಿಸಿದೆ.

ಅರ್ಜಿಯಲ್ಲಿ, ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿಯ ವಿರುದ್ಧ FIR ದಾಖಲಿಸುವಂತೆ ಹಾಗೂ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸ್ವತಂತ್ರ ತಜ್ಞ ಸಮಿತಿಯನ್ನು ರಚಿಸಿ ಪ್ರಕರಣವನ್ನು ತನಿಖೆ ನಡೆಸುವಂತೆ ಕೋರಲಾಗಿದೆ.

ಘಟನೆ ಗಂಭೀರವಾಗಿದ್ದು, ಇಂತಹ ಎನ್‌ಕೌಂಟರ್ ಪ್ರಕರಣಗಳು ಸಾಮಾನ್ಯವಾಗುತ್ತಿವೆ. ಜೀವಿಸುವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಜೊತೆಗೆ ತ್ವರಿತ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ ಎಂದು ಸಿಬಿಐ ತನಿಖೆಯನ್ನೂ ಕೇಳಲಾಗಿದೆ.

ಭೋಜಪುರ ಜಿಲ್ಲೆಯ ಬಿಲೌಟಿ ಗ್ರಾಮದ ನಿವಾಸಿಯಾದ ಭಾರತ್ ಭೂಷಣ್ ತಿವಾರಿ ಅವರನ್ನು ಜೂನ್ 17ರಂದು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ. ಕುಟುಂಬದವರು, ಅವರು ಶರಣಾಗಿದ್ದು, ತಮ್ಮ ಆಯುಧವನ್ನು ಬಿಟ್ಟ ನಂತರವೂ ಪೊಲೀಸರಿಂದ ಗುಂಡೇಟಿಗೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಘಟನೆಯ ಕುರಿತು ಈಗಾಗಲೇ ಬಿಹಾರ ಸರ್ಕಾರ ನ್ಯಾಯಾಂಗ ತನಿಖೆ ಘೋಷಿಸಿದೆ.

ಇದನ್ನೂ ನೋಡಿ: ದುಡಿಯುವ ಭೂಮಿ ಕಿತ್ತುಕೊಂಡ ಸರಕಾರ – ಯು.‌ಬಸವರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *