ನವದೆಹಲಿ : ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ವರ್ತಿಸಿ, ನಂತರ ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಾಗಿ ವ್ಯವಸ್ಥೆಯ ಮೇಲೆ ದಾಳಿ ನಡೆಸುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ನಿರುದ್ಯೋಗಿ
ಸುಪ್ರೀಂ ಕೋರ್ಟ್ನಲ್ಲಿ ಹಿರಿಯ ವಕೀಲರ ಹುದ್ದೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರ ವಕೀಲರ ವೃತ್ತಿಪರ ನಡೆ ಮತ್ತು ಸಾಮಾಜಿಕ ಜಾಲತಾಣದ ಭಾಷೆಯನ್ನು ಪ್ರಶ್ನಿಸಿದ ನ್ಯಾಯಪೀಠ, “ವ್ಯವಸ್ಥೆಯನ್ನು ಟೀಕಿಸುವ ಪರೋಪಜೀವಿಗಳು ಈಗಾಗಲೇ ಸಮಾಜದಲ್ಲಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಅದಾನಿಗಾಗಿ ಪ್ರಧಾನಿ ರಾಜಿ ಮಾಡಿಕೊಂಡರು : ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ, “ಕೆಲವರು ಉದ್ಯೋಗವಿಲ್ಲದೆ ತಿರುಗಾಡುತ್ತಾ ನಂತರ ಮಾಧ್ಯಮ, ಸಾಮಾಜಿಕ ಜಾಲತಾಣ ಅಥವಾ ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಎಲ್ಲರ ಮೇಲೂ ದಾಳಿ ನಡೆಸುತ್ತಾರೆ” ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಅರ್ಜಿದಾರ ವಕೀಲರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಹಿರಿಯ ವಕೀಲರ ಹುದ್ದೆ ಗೌರವದ ಸ್ಥಾನವಾಗಿದ್ದು, ಅದನ್ನು ಹಿಂಬಾಲಿಸುವ ರೀತಿಯ ವರ್ತನೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಬಳಿಕ ಅರ್ಜಿದಾರ ವಕೀಲರು ಕ್ಷಮೆಯಾಚಿಸಿ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದ್ದಾರೆ. ನ್ಯಾಯಪೀಠ ಅದಕ್ಕೆ ಅವಕಾಶ ನೀಡಿದೆ.
ಇದನ್ನೂ ನೋಡಿ : “ತಮಿಳುನಾಡು | ವಿಜಯ್ ಗೆದ್ದದ್ದು ಹೇಗೆ? : ಟಿವಿಕೆ ಉದಯದ ಒಳನೋಟ” | ಗುರುರಾಜ ದೇಸಾಯಿ Janashakthi Media
