ಹೆಸರು ಬಿಟ್ಟುಹೋದರೂ ಆತಂಕ ಬೇಡ: ಚುನಾವಣಾಧಿಕಾರಿ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಸುಮಾರು 86.64 ಲಕ್ಷ (ಶೇ.15.63) ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗುವ ಭೀತಿ ಎದುರಾಗಿದೆ. ಅಂತಿಮ
ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ನಡೆಸಿದ ಮನೆ-ಮನೆ ಸಮೀಕ್ಷೆಯಲ್ಲಿ ಈ ಪ್ರಮಾಣದ ‘ಎಎಸ್ಡಿಡಿಒ’ (ಅನುಮಾನಾಸ್ಪದ/ಸ್ಥಳಾಂತರಗೊಂಡ/ಮೃತ/ದ್ವಿಪ್ರತಿ) ಮತದಾರರನ್ನು ಗುರುತಿಸಲಾಗಿದೆ. ಜೂನ್ 30ರಿಂದ ಆರಂಭವಾದ ಈ ಪ್ರಕ್ರಿಯೆ ಆಗಸ್ಟ್ 8ಕ್ಕೆ ಮುಕ್ತಾಯವಾಗಲಿದ್ದು, ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ.
ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 59,050 ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆದ ಪರಿಶೀಲನೆಯಲ್ಲಿ 86,64,501 ಮಂದಿಯನ್ನು ‘ಎಎಸ್ಡಿಡಿಒ’ ವರ್ಗಕ್ಕೆ ಸೇರಿಸಲಾಗಿದೆ. ಈ ಪೈಕಿ ಮೃತಪಟ್ಟವರು ಹಾಗೂ ದ್ವಿಪ್ರತಿ ನೋಂದಣಿ ಹೊಂದಿರುವ ಸುಮಾರು 20 ಲಕ್ಷ ಮತದಾರರ ಹೆಸರು ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ. ಉಳಿದ ಸುಮಾರು 66 ಲಕ್ಷ ಮಂದಿ ತಮ್ಮ ಹೆಸರನ್ನು ಮರುಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳ ಖಾಲಿ ವಿವರ ಮುಚ್ಚಿಡಲಾಗುತ್ತಿದೆಯೇ? – ಸಂಸದ ವಿ. ಸಿವದಾಸನ್ ಆರೋಪ
‘ಎಎಸ್ಡಿಡಿಒ’ ವಿಭಾಗೀಕರಣ:
– ಸ್ಥಳಾಂತರಗೊಂಡವರು – 53.39 ಲಕ್ಷ (9.63%)
– ಮೃತಪಟ್ಟವರು – 15.14 ಲಕ್ಷ (2.73%)
– ಪತ್ತೆಯಾಗದವರು – 11.92 ಲಕ್ಷ (2.15%)
– ದ್ವಿಪ್ರತಿ ಮತದಾರರು – 5.74 ಲಕ್ಷ (1.04%)
– ಸಹಿ ನಿರಾಕರಿಸಿದವರು – 42,725 (0.08%)
ರಾಜಧಾನಿ ಬೆಂಗಳೂರಿನಲ್ಲಿ ಅತ್ಯಧಿಕ ಪರಿಣಾಮ ಕಂಡುಬರುವ ಸಾಧ್ಯತೆ ಇದೆ. ಜಿಬಿಎ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ 40.39 ಲಕ್ಷ ‘ಎಎಸ್ಡಿಡಿಒ’ ಮತದಾರರನ್ನು ಗುರುತಿಸಲಾಗಿದೆ. ಇಲ್ಲಿ ಒಟ್ಟು 1.03 ಕೋಟಿ ಮತದಾರರಿದ್ದು, ಇದುವರೆಗೆ 48.67 ಲಕ್ಷ ಮಂದಿಯ ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ.
ಇತರೆ ಜಿಲ್ಲೆಗಳಲ್ಲಿಯೂ ಮಹತ್ವದ ಸಂಖ್ಯೆಯಲ್ಲಿ ‘ಎಎಸ್ಡಿಡಿಒ’ ಮತದಾರರು ಪತ್ತೆಯಾಗಿದ್ದು, ಮೈಸೂರು (4.31 ಲಕ್ಷ), ಕಲಬುರಗಿ (3.86 ಲಕ್ಷ), ಬೆಳಗಾವಿ (3.65 ಲಕ್ಷ), ವಿಜಯಪುರ (2.27 ಲಕ್ಷ), ಧಾರವಾಡ (2.18 ಲಕ್ಷ) ಹಾಗೂ ರಾಯಚೂರು (2.16 ಲಕ್ಷ) ಜಿಲ್ಲೆಗಳು ಪ್ರಮುಖವಾಗಿವೆ.
ನಮೂನೆ ಸಲ್ಲಿಕೆ ವಿವರ:
– ಫಾರ್ಮ್-6 (ಹೊಸ ಸೇರ್ಪಡೆ) – 3,32,874
– ಫಾರ್ಮ್-6ಎ (ಎನ್ಆರ್ಐ) – 2,783
– ಫಾರ್ಮ್-7 (ಹೆಸರು ಅಳಿಕೆ) – 30,696
– ಫಾರ್ಮ್-8 (ತಿದ್ದುಪಡಿ) – 7,74,126
ಇದರ ನಡುವೆ, “ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಅಗತ್ಯ ಎಚ್ಚರ ವಹಿಸಲಾಗಿದೆ. ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಅಂತಿಮ ಪಟ್ಟಿಯಲ್ಲಿ ಸೇರಿಸಲು ಅವಕಾಶವಿದೆ” ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ಜೊತೆಗೆ, 2002ರ ಪಟ್ಟಿಯಲ್ಲಿ ವಿವರ ನೀಡದ ಸುಮಾರು 29 ಲಕ್ಷ ಮಂದಿಯ ಹೆಸರನ್ನೂ ಸೇರ್ಪಡೆಗೊಳಿಸಲಾಗುತ್ತಿದೆ ಎಂದರು.
ಇದನ್ನೂ ನೋಡಿ: ಆರ್ಚರ್ ಮೀನು: ನೀರಿನ ಬಾಣ ಬಿಟ್ಟು ಬೇಟೆಯಾಡುವ ಗುರಿಕಾರ Janashakthi Media
