ಭಿವಂಡಿಯಲ್ಲಿ ಕಟ್ಟಡ ಕುಸಿತ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ

ಮಹಾರಾಷ್ಟ್ರ: ಭಿವಂಡಿಯಲ್ಲಿ ಜುಲೈ 30ರ ರಾತ್ರಿ ನಡೆದ ನಾಲ್ಕು ಅಂತಸ್ತಿನ ಕಟ್ಟಡ ಕುಸಿತದ ಅವಶೇಷಗಳಿಂದ ಜುಲೈ 31ರ ಬೆಳಿಗ್ಗೆವರೆಗೆ ನಡೆದ ತೀವ್ರ ರಕ್ಷಣಾ ಕಾರ್ಯಾಚರಣೆಯ ನಡುವೆ ಒಂಬತ್ತು ಜನರ ಶವಗಳನ್ನು ರಕ್ಷಕರು ಹೊರತೆಗೆದಿದ್ದಾರೆ.

ಈ ದುರಂತದಲ್ಲಿ ನಾಲ್ವರು ಗಾಯಗೊಂಡಿದ್ದು, ಇನ್ನೂ ಇಬ್ಬರಿಂದ ಮೂವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಭಿವಂಡಿ ಉಪವಿಭಾಗಾಧಿಕಾರಿ ಅಮಿತ್ ಸನಾಪ್ ತಿಳಿಸಿದ್ದಾರೆ.

ಈ ಘಟನೆ ಗುರುವಾರ ರಾತ್ರಿ ಸುಮಾರು 11.30ರ ಹೊತ್ತಿಗೆ ಥಾಣೆ ಜಿಲ್ಲೆಯ ಕೋಹಿನೂರ್ ಕಟ್ಟಡದ ಒಂದು ಭಾಗ ಕುಸಿದಾಗ ಸಂಭವಿಸಿತು. ಈ ಕಟ್ಟಡವನ್ನು ನಾಗರಿಕ ಆಡಳಿತವು ಈಗಾಗಲೇ “ಅಪಾಯಕರ” ಎಂದು ಘೋಷಿಸಿತ್ತು ಮತ್ತು ಘಟನೆ ಸಂಭವಿಸುವ ಸಮಯದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಥಾಣೆಯಲ್ಲಿ ನಾಲ್ಕು ಮಹಡಿ ಕಟ್ಟಡ ಕುಸಿತ: 8 ಮಂದಿ ಸಾವು

“ಭಿವಂಡಿಯಲ್ಲಿ ನಡೆದ ಕಟ್ಟಡ ಕುಸಿತದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ,” ಎಂದು ಮಹಾರಾಷ್ಟ್ರ ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ಥಾಣೆ ವಿಪತ್ತು ಪ್ರತಿಕ್ರಿಯೆ ಪಡೆ, ಅಗ್ನಿಶಾಮಕ ದಳ ಮತ್ತು ಇತರೆ ಸಂಸ್ಥೆಗಳ ತಂಡಗಳು ಬೆಳಗ್ಗೆಯವರೆಗೂ ರಕ್ಷಣಾ ಕಾರ್ಯ ಮುಂದುವರಿಸಿ, ಭಾರೀ ಯಂತ್ರೋಪಕರಣಗಳು, ಸ್ನಿಫರ್ ನಾಯಿಗಳು ಮತ್ತು ವಿಶೇಷ ಸಾಧನಗಳ ಸಹಾಯದಿಂದ ಕಾಂಕ್ರೀಟ್ ಅವಶೇಷಗಳಡಿ ಸಿಲುಕಿರುವವರನ್ನು ಹುಡುಕುತ್ತಿವೆ.

ಘಟನಾ ಸ್ಥಳದಲ್ಲಿ ಬದುಕುಳಿದವರು ಕಟ್ಟಡ ಕುಸಿತದ ಮೊದಲು ಮತ್ತು ನಂತರದ ಭಯಾನಕ ಕ್ಷಣಗಳನ್ನು ವಿವರಿಸಿದರು. ಒಬ್ಬ ಮಹಿಳಾ ಬದುಕುಳಿದವರು ತಾನು ಮಣ್ಣು ಮತ್ತು ಕೆಸರಿನಡಿಯಲ್ಲಿ ಸಿಲುಕಿಕೊಂಡಿದ್ದು, ತನ್ನ ಹೆಸರನ್ನು ಕೂಗಿ ಕರೆಯುತ್ತಿದ್ದ ತಂದೆ-ತಾಯಿಯ ಧ್ವನಿಯನ್ನು ಕೇಳುತ್ತಿದ್ದೆ ಎಂದು ಹೇಳಿದರು.

“ನಾನೂ ಕೂಡ ಗಟ್ಟಿಯಾಗಿ ಕೂಗುತ್ತಿದ್ದೆ, ಆದರೆ ಅವಶೇಷಗಳು ನನ್ನ ಧ್ವನಿಯನ್ನು ನುಂಗಿಬಿಟ್ಟವು. ನನ್ನ ಶಬ್ದ ಅವರಿಗೆ ತಲುಪಲಿಲ್ಲ. ಹಲವು ಗಂಟೆಗಳ ಕಾಲ ಆ ತಣ್ಣನೆಯ ಕೆಸರಿನಡಿಯಲ್ಲಿ ಸಿಲುಕಿದ್ದ ನಂತರ ರಕ್ಷಣಾ ತಂಡ ನನ್ನನ್ನು ಜೀವಂತವಾಗಿ ಹೊರತೆಗೆದಿತು,” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ಅವರು, ದುರಸ್ತಿ ಕಾಮಗಾರಿ ನಡೆಸಿದ ರೀತಿಯ ಬಗ್ಗೆ ನಿವಾಸಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದೇವೆ ಎಂದು ಆರೋಪಿಸಿದರು.

“ನಾವು ಈ ರೀತಿಯಲ್ಲಿ ದುರಸ್ತಿ ಮಾಡಬೇಡಿ ಎಂದು ಎಚ್ಚರಿಸಿದ್ದರೂ ಅವರು ಮುಂದುವರಿಸಿದರು, ಇದರಿಂದಲೇ ಈ ದುರಂತ ಸಂಭವಿಸಿದೆ,” ಎಂದು ಅವರು ಹೇಳಿದರು.

ಅಧಿಕಾರಿಗಳು ಮೃತರಲ್ಲಿನ ಐವರನ್ನು ಶಮೀಮ್ ಶೇಖ್ (32), ರಂಜೀತ್ ಸಿಂಗ್ (45), ಮಿರಾಜ್ ರಸೂಲ್ ಶೇಖ್ (34), ಸಂತೋಷ್ ಕುಮಾರ್ ಪಾಂಡೆ (42) ಮತ್ತು ಶಮೀಮ್ ಅಂಸಾರಿ (30) ಎಂದು ಗುರುತಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಗುರುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಕಟ್ಟಡದಿಂದ ಜೋರಾಗಿ ಬಿರುಕು ಬರುವ ಶಬ್ದಗಳು ಕೇಳಿಬಂದವು.

ಈ ಶಬ್ದದಿಂದ ಎಚ್ಚರಗೊಂಡ ಸ್ಥಳೀಯರು ಕುಟುಂಬಗಳನ್ನು ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಆರಂಭಿಸಿದರು. ಆದರೆ ಕೆಲವರು ಇನ್ನೂ ಹೊರಬರುತ್ತಿರುವಾಗಲೇ ಕಟ್ಟಡದ ‘ಬಿ’ ವಿಭಾಗ ಕುಸಿದುಬಿತ್ತು.

ರಕ್ಷಣಾ ಕಾರ್ಯಾಚರಣೆಯಲ್ಲಿ NDRF ಸಿಬ್ಬಂದಿ, ಥಾಣೆ ವಿಪತ್ತು ಪ್ರತಿಕ್ರಿಯೆ ಪಡೆ, ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ, ನಾಲ್ಕು ಅಗ್ನಿಶಾಮಕ ವಾಹನಗಳು, ಎರಡು ಆಂಬುಲೆನ್ಸ್‌ಗಳು, ನಾಯಿಗಳ ದಳ ಮತ್ತು ಭಾರೀ ಭೂ ತೋಡುವ ಯಂತ್ರೋಪಕರಣಗಳು ಭಾಗವಹಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಿವಂಡಿ ಮೇಯರ್ ನರಾಯಣ ಚೌಧರಿ ಅಪಾಯಕರ ಕಟ್ಟಡಗಳಲ್ಲಿ ವಾಸಿಸುವ ನಿವಾಸಿಗಳಿಗೆ ತಕ್ಷಣ ಖಾಲಿ ಮಾಡಲು ಮನವಿ ಮಾಡಿದ್ದಾರೆ.

“ಈಗ ಭಿವಂಡಿಯಲ್ಲಿ ಕನಿಷ್ಠ 130 ರಿಂದ 140 ‘ಅತ್ಯಂತ ಅಪಾಯಕರ’ ಕಟ್ಟಡಗಳಿವೆ, ಅವುಗಳನ್ನು ತಕ್ಷಣ ಖಾಲಿ ಮಾಡಬೇಕು. ಜನರು ತಮ್ಮ ಜೀವ ರಕ್ಷಣೆಗಾಗಿ ದಯವಿಟ್ಟು ಹೊರಬರಬೇಕು,” ಎಂದು ಅವರು ಹೇಳಿದ್ದಾರೆ. ಜೊತೆಗೆ ಪೀಡಿತ ಕುಟುಂಬಗಳಿಗೆ ಶಾಲೆಗಳು ಮತ್ತು ಸಮುದಾಯ ಭವನಗಳನ್ನು ತಾತ್ಕಾಲಿಕ ಆಶ್ರಯವಾಗಿ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

ಅವರು, ಗುರುವಾರ ರಾತ್ರಿ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡ ನಂತರ ಸುಮಾರು 150 ಮಂದಿಯನ್ನು ತೆರವುಗೊಳಿಸಲು ನಾಗರಿಕ ಆಡಳಿತ ಯಶಸ್ವಿಯಾಗಿದೆ ಎಂದು ಹೇಳಿದರು. ಆದರೆ ಕಟ್ಟಡ ಕುಸಿದಾಗ ಇನ್ನೂ 10ರಿಂದ 12 ಮಂದಿ ಒಳಗಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ: SIR ಕರ್ನಾಟಕ: ಈಗಲೇ 80 ಲಕ್ಷ ಹೊರಗೆ?! ಮುಂದೆಷ್ಟು? | ವಿಶ್ಲೇಷಣೆ – ಕೆ.ಎಸ್. ವಿಮಲಾ Janashakthi Media

Donate Janashakthi Media

Leave a Reply

Your email address will not be published. Required fields are marked *