ಬಿಎಂಟಿಸಿ ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಸಿದ ಬಸ್‌ ಚಾಲಕ

ಬೆಂಗಳೂರು: ಕೆಂಗೇರಿ ಘಟಕದ ಬಿಎಂಟಿಸಿ ಅಧಿಕಾರಿಗಳ ಕಿರುಕುಳ ತಾಳಲಾರದೆ ಬಸ್ಸಿನ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ನಡೆದಿದೆ.

ಬಿಎಂಟಿಸಿ ಘಟಕ-37 ಕೆಂಗೇರಿ ಡಿಪೋದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿರುವ ಚಾಲಕ ಶ್ರೀನಿವಾಸ್ ಅಧಿಖಾರಿಗಳ ಕಿರುಕುಳದ ಬಗ್ಗೆ ಉಲ್ಲೇಖಿಸಿ, ಘಟಕದ ಎಟಿಎಸ್‌ ಕೋಮಲ, ಡಿಎಂ ದಯಾನಂದ ಹಾಗೂ ಎಟಿಐ ಮಹಾಲಿಂಗಪ್ಪ ಅವರು ತೀವ್ರವಾಗಿ ಕಿರುಕುಳ ನೀಡುತ್ತಿದ್ದಾರೆ. ಇವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ವಿಷ ಸೇವನೆ ಮಾಡಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಅಧಿಕಾರಿಗಳ ಕಿರುಕುಳ ಮಿತಿ ಮೀರುತ್ತಿದೆ. ಇದರಿಂದ ಬಸ್ಸಿನ ಚಾಲಕರು ಮತ್ತು ನಿರ್ವಾಹರು ತೀವ್ರ ತೊಂದರೆ ಒಳಗಾಗಿದ್ದಾರೆ. ಸಿಬ್ಬಂದಿಗಳು ಜೀವನ ನಿರ್ವಹಣೆಗಾಗಿ ಹಗಲು, ರಾತ್ರಿ ಎನ್ನದೇ ಕುಟುಂಬ ಸದಸ್ಯರನ್ನು ಬಿಟ್ಟು ಓವರ್‌ ಡ್ಯೂಟಿ ಮಾಡಿದರೂ ಕಿರುಕುಳ ನೀಡುವುದು ತಪ್ಪುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇನ್ನು ಕೆಲವೊಂದು ಡಿಪೋಗಳಲ್ಲಿ ಮಹೀಳಾ ನೌಕರರು ಮತ್ತು ಅಧಿಕಾರಿಗಳ ಕಿರುಕುಳ ಹೆಚ್ಚಾಗಿದ್ದು, ಇದನ್ನು ತಡೆಯುವಂತೆ ಅಗ್ರಹಿಸಿ ಕಳೆದ ಮೂರು ದಿನಗಳ ಹಿಂದೆ ಒಬ್ಬ ಕಂಡಕ್ಟರ್ (ನಿರ್ವಾಹಕ) ಆತ್ಮಹತ್ಯೆಗೆ ಯತ್ನಿಸಿದ್ದರು.

ಎರಡು ಪುಟದ ಪತ್ರ ಬರೆದ ಶ್ರೀನಿವಾಸ್‌ ?

ಕಳೆದ ನಾಲ್ಕು ವರ್ಷಗಳಿಂದ ನಾನು ಕೆಲಸಕ್ಕೆ ಯಾವತ್ತೂ ಗೈರು ಹಾಜರಾಗದೇ ಬಿಎಂಟಿಸಿ ಘಟಕ -37 ಕೆಂಗೇರಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ನಿಷಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಆದರೆ, ಸರಿಯಾದ ಸಮಯಕ್ಕೆ ಪ್ರತಿದಿನ ಕೆಲಸಕ್ಕೆ ಬಂದರೂ ಎಟಿಎಸ್‌ ಕೋಮಲ ಅವರು ನನಗೆ ಕರ್ತವ್ಯಕ್ಕೆ ಹೋಗಲು ಬಿಡುತ್ತಿಲ್ಲ. ಮನೆಗೆ ಹೋಗುವಂತೆ ಮಾಡುತ್ತಿದ್ದಾರೆ. ನನಗೆ ಬೇಕಾಬಿಟ್ಟಿಯಾಗಿ ಕರ್ತವ್ಯಕ್ಕೆ ಹಾಕುತ್ತಿದ್ದರು. ಇದರಿಂದ ನಾನು ಜಿಗುಪ್ಸೆಗೊಂಡಿದ್ದೇನೆ. ಒಂದೊಂದು ಬಾರಿ ನಮ್ಮ ಘಟಕದಲ್ಲಿ ಕೆಲಸ ನಿಯುಕ್ತಿಯಾಗದಿದ್ದಾಗ ಬೇರೊಂದು ಘಟಕದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೆನು. ಆದರೂ ಕೂಡ ಬೇರೆ ಘಟಕದ ಹಾಜರಾತಿಯನ್ನು ನಿನಗೆ ನಾನು ನೀಡುವುದಿಲ್ಲ ಎಂದು ಬೆದರಿಕೆ ಹಾಕಿ ತಿಂಗಳ ಕೊನೆಯಲ್ಲಿ ಸತಾಯಿಸಿ ಅವರ ಮನಸ್ಸಿಗೆ ತೋಚಿದಂತೆ ಹಾಜರಾತಿ ಕೊಡುತ್ತಿದ್ದರು.

ಈ ಬಗ್ಗೆ ನಾನು ಪ್ರಶ್ನೆ ಮಾಡಿದಾಗ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ನೀನು ಇನ್ನುಮುಂದೆ ಕರ್ತವ್ಯಕ್ಕೆ ಬರಬೇಡ ಎಂದು ಹೇಳಿದ್ದರು. ಪುನಃ ನಿನ್ನೆ (ಜನವರಿ 30) ಬೆಳಗ್ಗೆ 10.20ಕ್ಕೆ ನಾನು ಕೆಲಸಕ್ಕೆ ಬಂದರೂ ನಿನಗೆ ಯಾವುದೇ ಕರ್ತವ್ಯ ಇಲ್ಲವೆಂದು ನಿರ್ಲಕ್ಷ್ಯದಿಂದ ಮಾತನಾಡಿ ನಮ್ಮ ಸಹ ಕಾರ್ಮಿಕರ ಎದುರು ಅವಮಾನ ಮಾಡಿದ್ದಾರೆ. ಇನ್ನು ನಾನು ಘಟಕದ ವ್ಯವಸ್ಥಾಪಕರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ನಾನು ಕರ್ತವ್ಯ ಮಾಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ನೊಂದು ಶಾಂತಿನಗರದ ಬಿಎಂಟಿಸಿ ವ್ಯವಸ್ಥಾಪಕರಿಗೆ ಸಲ್ಲಿಕೆ ಆಗುವಂತೆ ಪತ್ರ ಬರೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *