ಕೇಂದ್ರದ ವೈಫಲ್ಯಗಳ ಕುರಿತ ‘ವರ್ಷ ಎಂಟು ಅವಾಂತರ ನೂರೆಂಟು’ ಪುಸ್ತಕ ಬಿಡುಗಡೆ

ಬೆಂಗಳೂರು: ಕೇಂದ್ರ ಸರ್ಕಾರದ ಎಂಟು ವರ್ಷಗಳ ಸಂಭ್ರಮಾಚರಣೆ ಸುಳ್ಳಿನ ಆಚರಣೆ, ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದೆ, ಜನದ್ರೋಹದ ಕೆಲಸ ಮಾಡಿದ್ದಾರೆ. ಇವುಗಳ ಬಗ್ಗೆ ಮಾಹಿತಿ ಸಹಿತವಾದ ಒಂದು ಕಿರು ಹೊತ್ತಿಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಎಂಟು ವರ್ಷಗಳ ಆಡಳಿತ ವೈಫಲ್ಯಗಳ ಕುರಿತು ಇರುವ “ವರುಷ ಎಂಟು, ಅವಾಂತರಗಳು ನೂರೆಂಟು” ಎಂಬ ಕಿರುಹೊತ್ತಿಗೆಯನ್ನು ಶಾಸಕಾಂಗ ಪಕ್ಷದ ಕಚೇರಿಯಿಂದ ಹೊರತರುತ್ತಿದ್ದೇವೆ ಎಂದು ವಿಧಾನಸೌಧದ  ತಮ್ಮ ಕಛೇರಿಯಲ್ಲಿ ಬಿಡುಗಡೆಗೊಳಿಸಿ ಹೇಳಿದರು.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರು 2014 ಮೇ 28 ರಂದು ಪ್ರಧಾನಿಯಾದರು. ಈ ವರ್ಷದ ಮೇ 28ಕ್ಕೆ ಪ್ರಧಾನಿಯಾಗಿ 8 ವರ್ಷಗಳು ತುಂಬಿದೆ. ಎಂಟು ವರ್ಷಗಳನ್ನು  ಪೂರೈಸಿರುವ ಬಗ್ಗೆ ಸಂಭ್ರಮಾಚರಣೆಯನ್ನೂ ಹಮ್ಮಿಕೊಂಡಿದ್ದರು. ಸಮಾರಂಭಗಳಲ್ಲದೇ, ದೇಶದಲ್ಲಿ ಸುಭಿಕ್ಷೆ ತಂದಿದ್ದೇವೆ, ಸೌಹಾರ್ದ ವಾತಾವರಣ ನಿರ್ಮಾಣ ಮಾಡಿದ್ದೇವೆ ಎಂದು ದೊಡ್ಡ ದೊಡ್ಡ ಜಾಹಿರಾತುಗಳನ್ನು ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲೂ ನಿರಂತರವಾಗಿ ಎರಡು ದಿನ ಜಾಹಿರಾತುಗಳನ್ನು ಪ್ರಕಟಿಸಿದರು.

ಮೋದಿ ಪ್ರಧಾನಿಯಾಗುವ ಮುನ್ನ ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ. ಪ್ರಧಾನಿಯಾದ ನಂತರ ಯಾವುದೇ ಭರವಸೆ ಈಡೇರಿಸಲಿಲ್ಲ. 2014ರ ಲೋಕಸಭಾ ಚುನಾವಣೆ ವೇಳೆ 83.4 ಕೋಟಿ ಮತದಾರರಿದ್ದರು. 17 ಕೋಟಿ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ದೇಶದ ಜನರ ಗಮನ ಬೇರೆಡೆ ಸೆಳೆಯುವಲ್ಲಿ ಯಶಸ್ವಿಯಾದರು. ಕಪ್ಪು ಹಣ, ನಿರುದ್ಯೋಗ, ಬೆಲೆ ಏರಿಕೆಗಳ ವಿಷಯಾಂತರ ಮಾಡಿದರು. ಪುಲ್ವಾಮಾ, ಬಾಲಾಕೋಟ್​ ದಾಳಿ ವಿಚಾರಗಳನ್ನು ಮುಂದಿಟ್ಟು 2019ರಲ್ಲಿ ಲೋಕಸಭಾ ಚುನಾವಣೆ ಗೆದ್ದರು. ಆ ವೇಳೆ ದೇಶದಲ್ಲಿ 94 ಕೋಟಿ ಮತದಾರರಿದ್ದರು. 22.09 ಕೋಟಿ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ಮತ್ತೆ ಅಧಿಕಾರಕ್ಕೆ ಬಂದಾಗಲೂ ಜನಸಾಮಾನ್ಯರ ಕೆಲಸ ಮಾಡಲಿಲ್ಲ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

2014ರ ಸಂಸತ್‌ ಚುನಾವಣೆಯಲ್ಲಿ ಈ ದೇಶದ ಜನರಿಗೆ ಏನು ಹೇಳಿದ್ದರು? ಪ್ರಧಾನಿಯಾಗಿ ಏನು ಮಾಡಿದರು? ಇದರಿಂದ ಬಡವರು, ಮಹಿಳೆಯರು, ಸಾಮಾನ್ಯ ಜನರು, ರೈತರು, ಅಲ್ಪಸಂಖ್ಯಾತರು, ಹಿಂದುಳಿದ ಜನರು ಎಷ್ಟು ಕರ್ಷ ಕಾರ್ಪಣ್ಯಗಳನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ? ಮೋದಿ ಅವರ ಭರವಸೆಗಳು ಹೇಗೆ ಹುಸಿಯಾಗಿದೆ? ಬಡವರ, ಸಾಮಾನ್ಯ ಜನರ ಜೀವನ ಹೇಗೆ ದುಸ್ಥರವಾಗಿದೆ? ಎಂಬುದನ್ನು ಈ ಪುಸ್ತಕದ ಮೂಲಕ ವಿವರವಾಗಿ ಈ ಪುಸ್ತಕದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇವೆ ಎಂದರು.

ಹೈದರಾಬಾದಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ನಡೆಯುತ್ತಿದೆ. ಈ ಪುಸ್ತಕದಲ್ಲಿರುವ ವಿಷಯಗಳಿಗೆ ಬಿಜೆಪಿಯವರು ಉತ್ತರಿಸಬೇಕು. ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ ನಡ್ಡಾ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರಾ ನೋಡೋಣ ಎಂದು ಹೇಳಿದರು.

ಮೋದಿ ಸರ್ಕಾರದ 8 ವರ್ಷಗಳ 8 ಅನಾಹುತಗಳು

ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಬೆಲೆಯೇರಿಕೆ ಹಿಂದೆಂದು ಇಲ್ಲದ ಮಟ್ಟಕ್ಕೆ ಮುಟ್ಟಿದೆ. ಹಣದುಬ್ಬರ ಕಳೆದ 17 ವರ್ಷಗಳಲ್ಲಿ ತೀವ್ರಗತಿಗೆ ಮುಟ್ಟಿದೆ. ನಿರುದ್ಯೋಗ ತಾರಕಕ್ಕೇರಿದೆ. ರಾಜ್ಯಗಳ ಆರ್ಥಿಕತೆ ಕುಸಿದುಹೋಗುತ್ತಿದೆ. ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆ ಇದರ ಜೊತೆಯಲ್ಲಿ ದೇಶದ ಪ್ರಜಾಪ್ರಭುತ್ವ ಭಯಬೀತವಾಗಿದೆ. ಜಿಎಸ್‌ಟಿ, ನೋಟು ಅಮಾನ್ಯೀಕರಣ, ಕೊರೊನಾ ನಿರ್ವಹಣೆಯ ಎಡಬಿಡಂಗಿ ನಿಲುವುಗಳು ದೇಶದ ಬೆನ್ನುಮೂಳೆಯನ್ನು ಟೊಳ್ಳು ಮಾಡಿದೆ. ದೇಶದ ಜನರು ಕಷ್ಟಪಟ್ಟು ಕಟ್ಟಿದ್ದ ಲಾಭದಾಯಕ ಸಂಸ್ಥೆ, ಕಾರ್ಖಾನೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ರೈತರು, ಕಾರ್ಮಿಕ, ಮಹಿಳೆ, ಯುವ ಜನರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಅದರ ಮೂಲಕ ಜನರನ್ನು ಶತ್ರುಗಳಂತೆ ಭಾವಿಸಿ, ಧಮನಿಸಲಾಗುತ್ತಿದೆ. ಜನರನ್ನು ಬಡತನಕ್ಕೆ ತಳ್ಳಲಾಗುತ್ತಿದೆ, ಅಂಬಾನಿ, ಅದಾನಿಗಳಂತಹಾ ಕಾರ್ಪೋರೇಟ್‌ ಬಂಡವಾಳಿಗರನ್ನು ಕೊಬ್ಬಿಸಿ ಮೆರೆಸಲಾಗುತ್ತಿದೆ.

ಬಿಜೆಪಿಯವರಿಗೆ ಹೊಟ್ಟೆಕಿಚ್ಚು

ಬಿ ಎಸ್‌ ಯಡಿಯೂರಪ್ಪ ನವರು 77ನೇ ವರ್ಷದ ಹುಟುಹಬ್ಬ ಆಚರಣೆ ಮಾಡಿಕೊಂಡಿದ್ರಲ್ವ, ಅದಕ್ಕೆ ಬಿಜೆಪಿ ಏನು ಮಾತಾಡೇ ಇಲ್ಲ. ಯಡಿಯೂರಪ್ಪ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಈಗ ನನ್ನದು 75ನೇ ಹುಟುಹಬ್ಬ, ಇದೊಂದು ಮಹತ್ವದ ದಿನ ಎಂದು ಆತ್ಮೀಯರು, ಹಿತೈಷಿಗಳು ತೀರ್ಮಾನ ಮಾಡಿದ್ದಾರೆ, ಅದಕ್ಕೆ ನಾನು ಕೂಡ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದರು.

ಇದು ಯಾವ ಉತ್ಸವವೂ ಅಲ್ಲ, ಶಕ್ತಿ ಪ್ರದರ್ಶನದ ವೇದಿಕೆಯೂ ಅಲ್ಲ. ಯಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ? ಬಿಜೆಪಿಯವರಿಂದ ಟೀಕೆಗಳು, ಸುಳ್ಳು ಆರೋಪಗಳ ಹೊರತಾಗಿ ಇನ್ನೇನು ನಿರೀಕ್ಷೆ ಮಾಡೋಕಾಗುತ್ತದೆ? ಎಂದು ಪ್ರಶ್ನಿಸಿದರು.

ನಿನ್ನೆ ಅಶೋಕ್‌ ಅವರ ಜಾಹಿರಾತು ಬಂದಿತ್ತು, ಅದಕ್ಕವರು ಏನಂತ ಕರೆದಿದ್ದಾರೆ? ಅವರು ಜನ್ಮದಿನ ಆಚರಣೆ ಮಾಡಿಕೊಳ್ಳಲ್ವ? ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ, ಇದಕ್ಕೆ ಮೂರು ಕಾಸಿನ ಬೆಲೆಯಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯ ಕಾಂಗ್ರೆಸ್‌ ಪಕ್ಷದ ಎಲ್ಲಾ ನಾಯಕರು, ನಮ್ಮ ನಾಯಕರಾದ ರಾಹುಲ್‌ ಗಾಂಧಿ ಅವರು ಭಾಗವಹಿಸುತ್ತಾರೆ. ಸುರ್ಜೇವಾಲಾ, ವೇಣುಗೋಪಾಲ್‌ ಅವರನ್ನು ಕರೆದಿದ್ದೇನೆ. ಬಿಜೆಪಿಯನ್ನೂ ಸೇರಿಸಿ ರಾಜ್ಯದ ಜನಕ್ಕೆ ಮಾಧ್ಯಮದ ಮೂಲಕ ಆಹ್ವಾನ ನೀಡುತ್ತೇವೆ. ರಾಜಣ್ಣ ಅವರೇ ದೇವೇಗೌಡರ ಬಗ್ಗೆ ನೀಡಿರುವ ಹೇಳಿಕೆ ಸಂಬಂಧ ಕ್ಷಮೆ ಕೇಳಿದ್ದಾರೆ, ಇನ್ನು ಅದರ ಬಗ್ಗೆ ನಾನು ಮಾತನಾಡೋಕೆ ಏನಿದೆ? ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರಲ್ವ? ಎಂದರು.

Donate Janashakthi Media

Leave a Reply

Your email address will not be published. Required fields are marked *