ರಾಜಕೀಯ ಮೇಲಾಟದ ಕೇಂದ್ರವಾದ ಡಾ. ಬಿ.ಆರ್‌. ಅಂಬೇಡ್ಕರ್ ಸ್ಕೂಲ್‌ ಆಫ್ ಎಕನಾಮಿಕ್ಸ್ ವಿದ್ಯಾಲಯ

ಕಾರ್ಯನಿರ್ವಹಿಸುತ್ತಿರುವ ಒಂದು ಶೈಕ್ಷಣಿಕ ಸಂಸ್ಥೆಯ ಮರು ಉದ್ಘಾಟನೆ ಇತಿಹಾಸದ ವ್ಯಂಗ್ಯ

ನಾ ದಿವಾಕರ

ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಹಲವು ಹೊಸ ಯೋಜನೆಗಳಿಗೆ ಚಾಲನೆ ನೀಡಿದ್ದು, ರಾಜ್ಯಕ್ಕೆ 33 ಸಾವಿರ ಕೋಟಿ ರೂಗಳ ಬಂಡವಾಳ ಹೂಡಿಕೆಗೆ ಬಾಗಿಲು ತೆರೆದುಹೋಗಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ 22900 ಕೋಟಿ ರೂಗಳ ಸೆಮಿ ಕಂಡಕ್ಟರ್‌ ಘಟಕ ಸ್ಥಾಪಿಸುವ ಪ್ರಸ್ತಾಪವನ್ನು ಹೊರತುಪಡಿಸಿದರೆ, ಕಳೆದ ಹಲವು ವರ್ಷಗಳಿಂದ ಯಾವುದೇ ಬೃಹತ್‌ ಉದ್ಯಮದ ಬಂಡವಾಳ ಹೂಡಿಕೆಯನ್ನೇ ಕಾಣದ ಕರ್ನಾಟಕಕ್ಕೆ ಇದು ಆಶಾದಾಯಕವಾಗಿ ಕಾಣಬಹುದು. ಆದರೆ ಬಂಡವಾಳ ಹೂಡಿಕೆಯ ಪ್ರಸ್ತಾವನೆಗೂ, ಹೂಡಿಕೆಗೂ ಇರುವ ಅಪಾರ ಅಂತರದ ನಡುವೆ ಸಾಕಷ್ಟು ಬದಲಾವಣೆಗಳು ಸಂಭವಿಸಿ, ಅಂತಿಮವಾಗಿ ಏನು ಲಭಿಸುತ್ತದೆ ಎನ್ನುವುದನ್ನು ಕಾಲವೇ ನಿರ್ಧರಿಸುತ್ತದೆ.

ಈ ನಡುವೆಯೇ ಪ್ರಧಾನಿ ಮೋದಿ ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರ ಉದ್ಘಾಟನೆಯನ್ನೂ ಮಾಡಿದ್ದಾರೆ. ಸಾಮಾನ್ಯವಾಗಿ ಶಿಲಾನ್ಯಾಸ ಎಂದರೆ ಒಂದು ಸಂಸ್ಥೆಯ ಕಟ್ಟಡಕ್ಕೆ ಹಸಿರು ನಿಶಾನೆ ನೀಡುವ ಮತ್ತು ಭೂಮಿಪೂಜೆ ಮಾಡುವ ಪಾರಂಪರಿಕ, ಸಾಂಪ್ರದಾಯಿಕ ಪ್ರಕ್ರಿಯೆ. ಉದ್ಘಾಟನೆ ಎಂದರೆ ಒಂದು ಸಂಸ್ಥೆಯ ನಿರ್ಮಾಣ ಪೂರ್ಣಗೊಂಡ ನಂತರದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳು ಆರಂಭವಾಗಲು ನೀಡುವ ಹಸಿರು ನಿಶಾನೆ. ಒಂದು ವೇಳೆ ಕಟ್ಟಡ ನಿರ್ಮಾಣ ಪೂರ್ಣವಾಗದಿದ್ದರೂ, ಕಾರ್ಯಚಟುವಟಿಕೆ ಆರಂಭವಾಗುವ ಸಂದರ್ಭಗಳೂ ಇದ್ದೇ ಇರುತ್ತವೆ. ಇಂತಹ ಯಾವುದೇ ಸಂಸ್ಥೆಯ ಉದ್ಘಾಟನೆ ಮಾಡುವ ಮೂಲಕ, ಉನ್ನತ ಮಟ್ಟದ ನಾಯಕರು ಬೌದ್ಧಿಕ ಚಟುವಟಿಕೆಗೆ ಚಾಲನೆ ನೀಡುವುದು ಸಂಪ್ರದಾಯ.

ಭಾರತದ ರಾಜಕಾರಣದಲ್ಲಿ ಈ ಎರಡೂ ಪ್ರಕ್ರಿಯೆಗಳಿಗೆ ಬೌದ್ಧಿಕ ಮೌಲ್ಯಕ್ಕಿಂತಲೂ ಹೆಚ್ಚು ರಾಜಕೀಯ ಮೌಲ್ಯವೇ ಇರುವುದನ್ನು ಸ್ವಾತಂತ್ರ್ಯಾನಂತರದ ಚರಿತ್ರೆಯುದ್ದಕ್ಕೂ ಗಮನಿಸಬಹುದು. ರಾಜಕೀಯ ನಾಯಕರಿಂದ ಉದ್ಘಾಟನೆಯಾಗದೆ ಭಾರತದಲ್ಲಿ ಒಂದು ಶೌಚಾಲಯವೂ ಬಾಗಿಲು ತೆರೆಯದಂತಹ ಪರಿಸ್ಥಿತಿಯನ್ನು ನಮ್ಮ ರಾಜಕೀಯ ಪಕ್ಷಗಳು ಸೃಷ್ಟಿಸಿಬಿಟ್ಟಿವೆ. (ಮೈಸೂರಿನಲ್ಲಿ ಸಿದ್ಧರಾಮಯ್ಯ ಅವರ ಮನೆಯ ಬಳಿಯಲ್ಲೇ ಒಂದು ಹಸಿರು ಶೌಚಾಲಯ ಹೀಗೆಯೇ ಹಲವು ವರ್ಷಗಳಿಂದ ಅನಾಥವಾಗಿ ಬಿದ್ದಿದೆ). ಜನಸಾಮಾನ್ಯರಲ್ಲಿ ಒಂದು ಸಂಸ್ಥೆಯ ಬಗ್ಗೆ ಸದಭಿಲಾಷೆ ಮತ್ತು ಸದಾಶಯಗಳನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತಿಷ್ಠಿತರಿಂದ ಉದ್ಘಾಟನೆ ಮಾಡುವುದು ತಪ್ಪೇನೂ ಆಗುವುದಿಲ್ಲ. ಆದರೂ ಹಲವಾರು ಸಂದರ್ಭಗಳಲ್ಲಿ ಅಧಿಕಾರ ರಾಜಕಾರಣದ ಶಿಷ್ಟಾಚಾರಗಳು ಮತ್ತು ಆಡಳಿತಾರೂಢ ಪಕ್ಷಗಳ ರಾಜಕೀಯ ಅನಿವಾರ್ಯತೆಗಳು ಉದ್ಘಾಟನೆಯ ಪ್ರಕ್ರಿಯೆಯನ್ನು ರಾಜಕೀಯ ಮೇಲಾಟದ ವಸ್ತುವನ್ನಾಗಿ ಮಾಡಿಬಿಡುತ್ತವೆ.

ಇಂತಹುದೇ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ. ಐದು ವರ್ಷಗಳ ಹಿಂದೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಉದ್ಘಾಟನೆಯಾಗಿದ್ದ ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ (ಬೇಸ್)‌ ವಿಶ್ವವಿದ್ಯಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉದ್ಘಾಟನೆ ಮಾಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.

ಬೇಸ್‌ ವಿಶ್ವವಿದ್ಯಾಲಯದ ಸ್ಥಾಪನೆ

ಸಾರ್ವಜನಿಕ ಅನುಕೂಲಕ್ಕಾಗಿಯೇ ಸ್ಥಾಪಿಸಲಾಗಿರುವ ಬೇಸ್‌ ವಿಶ್ವವಿದ್ಯಾಲಯದ  ಧ್ಯೇಯೋದ್ದೇಶಗಳೂ ಸಹ ಉದಾತ್ತತೆಯಿಂದ ಕೂಡಿದ್ದು, ಅರ್ಥಶಾಸ್ತ್ರ ಮತ್ತು ಇತರ ಸಮಾಜ ವಿಜ್ಞಾನಗಳ ಕಲಿಕೆಗೆ ಉತ್ಕೃಷ್ಟ ಮಟ್ಟದ ಬೌದ್ಧಿಕ ಪರಿಕರಗಳನ್ನು ಒದಗಿಸುವ ಒಂದು ಸಂಸ್ಥೆಯನ್ನಾಗಿ ರೂಪಿಸಿದೆ. ಭಾರತದ ಸಂವಿಧಾನ ಕರ್ತೃ ಡಾ ಬಿ ಆರ್‌ ಅಂಬೇಡ್ಕರ್‌ ಅರ್ಥಶಾಸ್ತ್ರದಲ್ಲೂ ಪರಿಣತಿ ಹೊಂದಿರುವವರಾಗಿದ್ದು, ಅವರ ಅನೇಕ ಆರ್ಥಿಕ ಚಿಂತನೆಗಳನ್ನು ಭಾರತ ಸರ್ಕಾರ ತನ್ನ ಆಡಳಿತ ನೀತಿಗಳಲ್ಲಿ ಅಳವಡಿಸುತ್ತಾ ಬಂದಿದೆ. ಬೌದ್ಧಿಕ ವಿಕಾಸ ಮತ್ತು ಶೈಕ್ಷಣಿಕ ಮುನ್ನಡೆಯ ದೃಷ್ಟಿಯಿಂದ ಸ್ಥಾಪನೆಯಾಗುವ ಯಾವುದೇ ಒಂದು ವಿದ್ಯಾಸಂಸ್ಥೆಯ ಮೂಲ ಧ್ಯೇಯ ಶಿಕ್ಷಣಾರ್ಥಿಗಳ ಬೌದ್ಧಿಕ ವಿಕಸನದೊಂದಿಗೇ ಸಾಮಾಜಿಕ ಪ್ರಜ್ಞೆಯನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದಾಗಿರಬೇಕು ಎಂಬ ಅಂಬೇಡ್ಕರ್‌ ಅವರ ತಾತ್ವಿಕ ನಿಲುವು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆಯುತ್ತದೆ. ಈ ದಿಕ್ಕಿನಲ್ಲೇ ಅಂಬೇಡ್ಕರ್‌ ಹೀಗೆ ಹೇಳುತ್ತಾರೆ :

“ಹೀಗೆ ತರಬೇತುಗೊಂಡ ವಿದ್ಯಾರ್ಥಿಗೆ, ವಸ್ತುನಿಷ್ಠ ಸಂಗತಿಗಳು ಯಾವುವು, ಅಭಿಪ್ರಾಯದ ಸಂಗತಿಗಳು ಯಾವುವು ಎಂಬವುಗಳಲ್ಲಿರುವ ಭೇದವು ಮನದಟ್ಟಾಗಿರಬೇಕು. ಅವನಿಗೆ ನೈಜ ವಾಸ್ತವಿಕ ಅಂಶಗಳಲ್ಲಿನ ವ್ಯತ್ಯಾಸಗಳು  ತಿಳಿಯಬೇಕು. ಅವುಗಳನ್ನು ತನ್ನಇಷ್ಟದ ಸಿದ್ಧಾಂತಗಳಿಗೆ ಹೋಲಿಸಿಕೊಳ್ಳದೆ ಅವುಗಳ ಆಂತರಿಕ ಹಿರಿಮೆ ಗರಿಮೆಗಳ ಪ್ರಶೆಗಳಿಗೆ  ಭಿನ್ನತೆಗಳು ತಿಳಿದಿರಬೇಕು. ಇತರರು ಪ್ರತಿಪಾದಿಸಿದ ಅಭಿಪ್ರಾಯಗಳಿಗೆ ತನ್ನದೇ ಆದ ತರ್ಕವನ್ನು ಹೊಂದಿಸಿ ವಿಮರ್ಶೆಗೊಳಪಡಿಸಿ ಅವುಗಳಿಗೆ ಹೊಸ ಮೌಲ್ಯ ನೀಡಲು ಬರಬೇಕು ” ( ಡಾ ಬಿ ಆರ್‌ ಅಂಬೇಡ್ಕರ್‌ ಬರಹಗಳು ಮತ್ತು ಭಾಷಣಗಳು ಸಂಪುಟ 2 ಪುಟ 296-297)

ಅಂಬೇಡ್ಕರ್‌ ಅವರ ಈ ಆಶಯಗಳನ್ನು ಮತ್ತು ಧ್ಯೇಯೋದ್ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ಬೇಸ್‌ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದ್ದು, ಸರ್ಕಾರ ಸಾರ್ವಜನಿಕ ವಲಯ, ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಭಾಗೀದಾರರ ಮೂಲಕ ಎಲ್ಲರನ್ನೂ ಒಳಗೊಳ್ಳುವ ಒಂದು ಸಮಾಜವನ್ನು ನಿರ್ಮಿಸಲು ಅವಶ್ಯವಾಗುವ ಆರ್ಥಿಕ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಬೇಸ್‌ ವಿಶ್ವವಿದ್ಯಾಲಯ ಆಶಿಸುತ್ತದೆ. ಈ ಆಶಯಗಳೊಂದಿಗೇ ಅರ್ಥಶಾಸ್ತ್ರ ಮತ್ತು ಇತರ ಜ್ಞಾನಶಿಸ್ತುಗಳಲ್ಲಿ ಉತ್ಕೃಷ್ಟತೆಯನ್ನು ಪಡೆಯುವ ಗುರಿಯೊಂದಿಗೆ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು 2016ರಲ್ಲಿ ಒಂದು ಉನ್ನತ ಮಟ್ಟದ ತಜ್ಞರನ್ನೊಳಗೊಂಡ ಸಮಿತಿಯನ್ನು ನೇಮಿಸಿತ್ತು. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಕೆಎಸ್‌ಹೆಚ್‌ಇಸಿ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಎಸ್‌ ವಿ ರಂಗನಾಥ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಈ ಸಮಿತಿಯು ನೀಡಿದ ವರದಿಯನ್ನಾಧರಿಸಿ ಕರ್ನಾಟಕ ಸರ್ಕಾರವು ಬೇಸ್‌ ವಿಶ್ವವಿದ್ಯಾಲಯದ ಸ್ಥಾಪನೆಗೆ ಅನುಮೋದನೆ ನೀಡಿತ್ತು  350 ಕೋಟಿ ರೂಗಳ ವೆಚ್ಚದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 43.45 ಎಕರೆ ಭೂಮಿಯನ್ನೂ ಮಂಜೂರು ಮಾಡಿತ್ತು. ಮೂಲ ಹೂಡಿಕೆಗೆ 275 ಕೋಟಿ ರೂಗಳನ್ನು ಕರ್ನಾಟಕ ಸರ್ಕಾರವೂ, 75 ಕೋಟಿ ರೂಗಳನ್ನು ಖಾಸಗಿ, ಕಾರ್ಪೋರೇಟ್‌ ವಲಯವೂ ಹೂಡಿತ್ತು. ವಿಶ್ವವಿದ್ಯಾಲಯದ ಕಾರ್ಯಾರಂಭವಾದ ನಂತರ 2016-17ರ ವಾರ್ಷಿಕ ನಿರ್ವಹಣೆಗೆ ರಾಜ್ಯ ಸರ್ಕಾರ 107 ಕೋಟಿ ರೂಗಳ ನೆರವನ್ನೂ ನೀಡಿತ್ತು.

ಕರ್ನಾಟಕ ಸೊಸೈಟೀಸ್‌ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲಯಕ್ಕೆ ಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ , ಡಾ ಅಂಬೇಡ್ಕರ್‌ ಅವರ 125ನೆಯ ಜನ್ಮದಿನಾಚರಣೆಯ ಅಂಗವಾಗಿ, 2017ರ ಏಪ್ರಿಲ್‌ 14ರಂದು ಶಂಕುಸ್ಥಾಪನೆ ಮಾಡಿದ್ದರು. ಬಿಎಸ್‌ಸಿ (ಆನರ್ಸ್‌) ಪದವಿಯ ಮೊದಲ ಬ್ಯಾಚ್‌ಗೆ 2017ರ ಜೂನ್‌ ಜುಲೈ ತಿಂಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ  ಅಖಿಲಭಾರತ ಪ್ರವೇಶಾತಿ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, 2017ರ ಆಗಸ್ಟ್‌ 28ರಂದು ಪ್ರಪ್ರಥಮ ತರಗತಿಯನ್ನು ಆರಂಭಿಸಲಾಗಿತ್ತು. ಬೇಸ್‌ ವಿಶ್ವವಿದ್ಯಾಲಯದ ಶೈಕ್ಷಣಿಕ ಪಯಣಕ್ಕೆ 2017ರ ಅಕ್ಟೋಬರ್‌ 4ರಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಔಪಚಾರಿಕವಾಗಿ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕಿನ ಮಾಜಿ ಅಧ್ಯಕ್ಷ ಮತ್ತು ಅಂದಿನ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಲಿಯ ಅಧ್ಯಕ್ಷರಾಗಿದ್ದ ಡಾ ಸಿ ರಂಗರಾಜನ್‌ ಮುಖ್ಯ ಉಪನ್ಯಾಸ ನೀಡಿದ್ದರು. ಸರ್ಕಾರದ ಅಧಿಸೂಚನೆ ಸಂಖ್ಯೆ ಇಡಿ/ಯುಬಿವಿ/2018(ಪಿ 2), ದಿನಾಂಕ 30 ಅಕ್ಟೋಬರ್‌ 2019ರ ಅನುಸಾರ ಈ ಸಂಸ್ಥೆಯನ್ನು ಅರ್ಥಶಾಸ್ತ್ರ ಮತ್ತು ಸಮಾಜ ವಿಜ್ಞಾನದ ಏಕೀಭೂತ ವಿಶ್ವವಿದ್ಯಾಲಯ ಎಂದು ಘೋಷಿಸಲಾಯಿತು.

ಬೇಸ್‌ ವಿಶ್ವವಿದ್ಯಾಲಯದ ಧ್ಯೇಯ ಮತ್ತು ಗುರಿ

ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯವು ಅರ್ಥಶಾಸ್ತ್ರ ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ  ಪ್ರವರ್ಧಮಾನಕ್ಕೆ ಬರುತ್ತಿರುವ ಒಂದು ಅತ್ಯುತ್ಕೃಷ್ಟ ಕಲಿಕೆಯ ಶೈಕ್ಷಣಿಕ ಸಂಸ್ಥೆಯಾಗಿ ರೂಪುಗೊಂಡಿದೆ. ಶೀಘ್ರಗತಿಯಲ್ಲಿ ಬದಲಾಗುತ್ತಿರುವ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಯ ಪಥದಲ್ಲಿರುವ ಭಾರತದ ವರ್ತಮಾನದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಅರ್ಥಶಾಸ್ತ್ರೀಯ ಜ್ಞಾನ ಪ್ರಸರಣದ ಒಂದು ಉತ್ಕೃಷ್ಟ ಸಂಸ್ಥೆಯಾಗಿ ಇದನ್ನು ರೂಪಿಸಲಾಗಿದೆ. ಭವಿಷ್ಯದ ಪೀಳಿಗೆಯ ಅರ್ಥಶಾಸ್ತ್ರಜ್ಞರನ್ನು ರೂಪಿಸುವುದಷ್ಟೇ ಅಲ್ಲದೆ, ನೀತಿ ನಿರೂಪಕರನ್ನೂ ಸಿದ್ಧಪಡಿಸುವ ನಿಟ್ಟಿನಲ್ಲಿ ದೇಶವು ಎದುರಿಸುತ್ತಿರುವ ಹಲವಾರು ಮಾರುಕಟ್ಟೆ ಸವಾಲುಗಳಿಗೆ ಸ್ಪಂದಿಸಲು ಸೂಕ್ತ ವಿದ್ಯಾರ್ಜನೆಯ ಮಾರ್ಗಗಳನ್ನು ಈ ವಿಶ್ವವಿದ್ಯಾಲಯದಲ್ಲಿ ಕಲ್ಪಿಸಲಾಗುತ್ತದೆ. ಅರ್ಥಶಾಸ್ತ್ರ ಮತ್ತು ತತ್ಸಂಬಂಧಿ ಜ್ಞಾನಶಿಸ್ತುಗಳಲ್ಲಿ ಒಂದು ವಿಶಿಷ್ಟ ಕಲಿಕಾ ಮಾದರಿಯನ್ನು ಅಳವಡಿಸಲಾಗುತ್ತಿದ್ದು, ಸಂಶೋಧನೆಗೆ ಪೂರಕವಾದಂತಹ ಕಲಿಕಾ ಮಾರ್ಗಗಳನ್ನು ರೂಪಿಸಲಾಗುತ್ತದೆ. ಈ ವಿಶ್ವವಿದ್ಯಾಲಯದ ಪಠ್ಯಕ್ರಮವನ್ನೂ ಅತ್ಯುತ್ಕೃಷ್ಟ ಮಟ್ಟದಲ್ಲಿ ಸಿದ್ಧಪಡಿಸಲಾಗಿದ್ದು, ವಿದ್ಯಾರ್ಥಿಗಳನ್ನು ಆಧುನಿಕ ಕಾಲಘಟ್ಟದ ಕಾರ್ಪೋರೇಟ್‌, ಶೈಕ್ಷಣಿಕ, ವಿಶ್ಲೇಷಣಾತ್ಮಕ ಹಾಗೂ ಸಾರ್ವಜನಿಕ ಆಡಳಿತ ನೀತಿಗಳ ಚೌಕಟ್ಟಿನಲ್ಲಿ ತಯಾರು ಮಾಡಲಾಗುತ್ತದೆ.  ಅತ್ಯಾಧುನಿಕ ತಾತ್ವಿಕ ಮತ್ತು ಪ್ರಾಯೋಗಿಕ ವಿಮರ್ಶೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಈ ವಿಶ್ವವಿದ್ಯಾಲಯದಿಂದ ಹೊರಬೀಳುವ ವಿದ್ಯಾರ್ಥಿಗಳು ತಮ್ಮ ಮುಂದಿನ ಅವಕಾಶಗಳನ್ನು ಸಮರ್ಪಕವಾಗಿ, ಸಮರ್ಥನೀಯವಾಗಿ ಬಳಸಿಕೊಳ್ಳುವಂತೆ ತರಬೇತಿ ನೀಡಲಾಗುತ್ತದೆ.

ಐದು ವರ್ಷಗಳ ಇಂಟಿಗ್ರೇಟೆಡ್‌ ಎಂಎಸ್‌ಸಿ ಎಕನಾಮಿಕ್ಸ್‌ ಈ ವಿಶ್ವವಿದ್ಯಾಲಯದ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಅರ್ಥಶಾಸ್ತ್ರವನ್ನು ಇತರ ಸಂಬಂಧಿತ ವಿಚಾರಗಳೊಡನೆ ಆಳವಾಗಿ ಅಭ್ಯಸಿಸಿ ಅಧ್ಯಯನ ನಡೆಸುವಂತಹ ಪಠ್ಯಕ್ರಮಗಳನ್ನು ಈ ಕೋರ್ಸ್‌ನಲ್ಲಿ ಅಳವಡಿಸಲಾಗಿದೆ. ಈ ಕೋರ್ಸ್‌ ಮಾಡುವ ವಿದ್ಯಾರ್ಥಿಗಳಿಗೆ ಮೂರು ವರ್ಷದ ಅಧ್ಯಯನದ ನಂತರ ಅರ್ಥಶಾಸ್ತ್ರದ ಬಿಎಸ್‌ಸಿ(ಆನರ್ಸ್‌) ಪದವಿಯೊಂದಿಗೆ ನಿರ್ಗಮಿಸುವ ಆಯ್ಕೆಯನ್ನೂ ಕಲ್ಪಿಸಲಾಗಿದೆ. ಎಂಎಸ್‌ಸಿ ಎಕನಾಮಿಕ್ಸ್‌ 2 ವರ್ಷದ ಪದವಿ ಕೋರ್ಸ್‌ ಮೂಲಕವೂ ವಿದ್ಯಾರ್ಥಿಗಳು ಅರ್ಥಶಾಸ್ತ್ರದ ವಿಭಿನ್ನ ವಿಷಯಗಳನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನೂ ಸುಲಭವಾಗಿ ಕಲ್ಪಿಸಲು ನೆರವಾಗುತ್ತದೆ. ಕಾರ್ಪೋರೇಟ್‌ ವಲಯಕ್ಕೆ ಅವಶ್ಯವಾದ ಮತ್ತು ಸಾರ್ವಜನಿಕ ನೀತಿಗಳು ಮತ್ತು ಸಂಶೋಧನೆಗೆ ಪೂರಕವಾದ ಪಠ್ಯವಿಷಯಗಳನ್ನು ಅಧ್ಯಯನ ಮಾಡಲು ಈ ಕೋರ್ಸ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಇವೆರಡರ ಹೊರತಾಗಿ  ಆಸಕ್ತ ವಿದ್ಯಾರ್ಥಿಗಳಿಗಾಗಿ  ಪೂರ್ಣ ಪ್ರಮಾಣದ ಪಿಹೆಚ್‌ಡಿ ಪಡೆಯುವ ಸೌಲಭ್ಯವನ್ನೂ ಒದಗಿಸಲಾಗಿದೆ. ಬೌದ್ಧಿಕವಾಗಿ ಆಸಕ್ತಿ ಇರುವವರು ಮತ್ತು ಉತ್ತಮ ಶೈಕ್ಷಣಿಕ ಹಿನ್ನೆಲೆ ಇರುವ ವಿದ್ಯಾರ್ಥಿಗಳು ಪಿಹೆಚ್‌ಡಿ ಮಾಡಲು ಅವಕಾಶ ನೀಡಲಾಗಿದೆ.  ವಿಶೇಷವಾಗಿ ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಅಧ್ಯಯನಗಳಲ್ಲಿ ಹೆಚ್ಚಿನ ಜ್ಞಾನ ಪಡೆಯುವ ಸಲುವಾಗಿ ಪಿಹೆಚ್‌ಡಿ ಯೋಜನೆಯನ್ನು ಅಳವಡಿಸಲಾಗಿದೆ. ಈ ಸಂದರ್ಭದಲ್ಲೇ ವಿದ್ಯಾರ್ಥಿಗಳಿಗೆ ಅಂತರ್‌ ಶಿಸ್ತೀಯ ಅಧ್ಯಯನದ ಅವಕಾಶಗಳನ್ನೂ ಸಹ ಕಲ್ಪಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಎಲ್ಲ ಕೋರ್ಸ್‌ಗಳಲ್ಲೂ ಎರಡು ಬ್ಯಾಚ್‌ನಲ್ಲಿ ನೂರಾರು  ವಿದ್ಯಾರ್ಥಿಗಳು ತಮ್ಮ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಹೆಚ್‌ಡಿ ಪಡೆದು ನಿರ್ಗಮಿಸಿದ್ದಾರೆ.

ಮರು ಉದ್ಘಾಟನೆಯ ಉದ್ದೇಶವೇನು?

5 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ಎರಡು ಬ್ಯಾಚ್‌ ವಿದ್ಯಾರ್ಥಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಒಂದು ಶೈಕ್ಷಣಿಕ ಸಂಸ್ಥೆಯಾಗಿ ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯ ತನ್ನ ಹಿರಿಮೆ ಸಾಧಿಸಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ವಿಸ್ತರಣಾ ಕಾರ್ಯಗಳೂ ನಡೆದಿಲ್ಲ ಅಥವಾ ಕಾಮಗಾರಿಗಳೂ ನಡೆಯುತ್ತಿಲ್ಲ. ಯಾವುದೇ ಹೊಸ ಜ್ಞಾನಶಿಸ್ತಿನ ವಿಭಾಗವನ್ನು ಇಲ್ಲಿ ರೂಪಿಸಲಾಗಿಲ್ಲ. 2017ರಲ್ಲಿ ಆರಂಭವಾದಂತೆಯೇ ಮೂರು ಕೋರ್ಸ್‌ಗಳ ಅವಕಾಶವನ್ನು ಇಂದಿಗೂ ಮುಂದುವರೆಸಲಾಗಿದೆ. ಹೀಗಿರುವಾಗಲೂ ಪ್ರಧಾನಮಂತ್ರಿಗಳಿಂದ ಮರು ಉದ್ಘಾಟನೆ ಮಾಡಿಸುವ ಅವಶ್ಯಕತೆ ಏನಿತ್ತು ಎನ್ನುವುದು ಜಿಜ್ಞಾಸೆಯಾಗಿಯೇ ಉಳಿಯಲಿದೆ.

ಶಿಕ್ಷಣ ಮತ್ತು ಜ್ಞಾನ ಪರಂಪರೆಯನ್ನು ಸಂಪೂರ್ಣ ಖಾಸಗೀಕರಣಕ್ಕೊಳಪಡಿಸಿ, ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗಳಿಗೆ ಶಿಕ್ಷಣ ಕ್ಷೇತ್ರವನ್ನು ಆಕ್ರಮಿಸಲು ಸಕಲ ಅವಕಾಶವನ್ನೂ ನೀಡಲಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಸರ್ಕಾರದಿಂದಲೇ ಸ್ಥಾಪಿಸಲಾದ ವಿಶ್ವವಿದ್ಯಾಲಯವನ್ನು ಮರು ಉದ್ಘಾಟನೆ ಮಾಡುವುದು ವಿಡಂಬನೆಯಾಗಿ ಕಾಣುತ್ತದೆ. ಶಿಷ್ಟಾಚಾರದ ದೃಷ್ಟಿಯಿಂದ ನೋಡಿದಾಗಲೂ ರಾಜ್ಯ ಸರ್ಕಾರದ ಈ ನಡೆ ಪ್ರಶ್ನಾರ್ಹವೇ ಆಗುತ್ತದೆ. ಒಂದು ಹೊಸ ಶೈಕ್ಷಣಿಕ ಸಂಸ್ಥೆಯನ್ನಾದರೂ ಸ್ಥಾಪಿಸಿ, ಅದರ ಶಂಕುಸ್ಥಾಪನೆಯನ್ನು ಪ್ರಧಾನಿಗಳಿಂದ ಮಾಡಿಸಿದ್ದರೆ ಸಾರ್ಥಕ ಎನಿಸುತ್ತಿತ್ತು.

ಈ ಜಿಜ್ಞಾಸೆಗಳ ನಡುವೆಯೇ ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯ ಅಂಬೇಡ್ಕರ್‌ ಅವರ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗಲಿ ಎಂದು ಆಶಿಸಬಹುದಷ್ಟೇ. ಬಹುಶಃ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಇದೇ ಆಗಿರಬಹುದು.

Donate Janashakthi Media

Leave a Reply

Your email address will not be published. Required fields are marked *