ಸರ್ಕಾರದ ಮಿಥ್ಯಾರೋಪಕ್ಕೆ ಬರಗೂರು ರಾಮಚಂದ್ರಪ್ಪ ಅವರ ವಾಸ್ತವದ ಉತ್ತರ

ಬೆಂಗಳೂರು: ಪಠ್ಯ ಪರಿಷ್ಕರಣೆ ವಿಚಾರವಾಗಿ ಇತ್ತೀಚಿಗೆ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯೊಂದಿಗೆ ಸಭೆಯನ್ನು ನಡೆಸಿದ್ದು, ನಂತರದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಸಮಿತಿಯಿಂದಾಗಿರುವ ತಪ್ಪುಗಳ ಪಟ್ಟಿಯನ್ನು ಮಾಡಿತು. ಈ ಬಗ್ಗೆ ಪ್ರತ್ಯುತ್ತರ ನೀಡಿರುವ ಬರಗೂರು ರಾಮಚಂದ್ರಪ್ಪ ಅವರು, ಮಿಥ್ಯಾರೋಪಗಳನ್ನು ಬಿಡುಗಡೆ ಮಾಡಿದ್ದಾರೆ.

ಸರ್ಕಾರದ ಸಚಿವರು ನನ್ನ ಸರ್ವಾಧ್ಯಕ್ಷತೆಯ ಪಠ್ಯ ಪರಿಷ್ಕರಣೆ ಕುರಿತು ಕೆಲವು ಅಸತ್ಯದ ಸಂಗತಿಗಳನ್ನು ಹೇಳಿದ್ದಾರೆ. ಸತ್ಯ ಸಂಗತಿಗಳ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ ಎಂದಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರು ಬಿಡುಗಡೆಗೊಳಿಸಿರುವ ಮಿಥ್ಯಾರೋಪಗಳಿಗೆ ವಾಸ್ತವದ ಉತ್ತರ ಹೀಗಿವೆ;

  • ಯಾರೇ ಪಠ್ಯಪರಿಷ್ಕರಣೆ ಮಾಡಿದರೂ ಕೆಲವು ಪಾಠಗಳನ್ನು ಬಿಡುವ ಮತ್ತು ಸೇರಿಸುವ ಪ್ರಕ್ರಿಯೆ ನಡೆಯುತ್ತದೆ. ಸಕಾರಣ ಮತ್ತು ಸೂಕ್ತ ಮಾನದಂಡಗಳ ಮೂಲಕ ಈ ಪ್ರಕ್ರಿಯೆ ನಡೆಯಬೇಕು. ನಮ್ಮ ಪರಿಷ್ಕರಣೆಯಲ್ಲಿ ಪ್ರತಿಯೊಂದಕ್ಕೂ ಕಾರಣಗಳನ್ನು ದಾಖಲಿಸಿದ್ದೇವೆ. ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನಾತ್ಮಕ ಆಶಯಗಳನ್ನು ಪಾಲಿಸಿದ್ದೇವೆ.
  • ಮೈಸೂರು ಒಡೆಯರ ಕಾಲದ ವಿವರಗಳನ್ನು ನಾವು ಬಿಟ್ಟಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ವಾಸ್ತವವಾಗಿ 6ನೇ ತರತಿಯ ಸಮಾಜ ವಿಜ್ಞಾನದಲ್ಲಿದ್ದ ಪಾಠವನ್ನು ಹೆಚ್ಚು ವಿವರಗಳ ಸಮೇತ, 7ನೇ ತರಗತಿಯ (ಭಾಗ-1 ಪುಟ 45 ರಿಂದ 58) ಪಠ್ಯಕ್ಕೆ ನಾವು ವರ್ಗಾಯಿಸಿದ್ದೆವು. ಇಡೀ ಅಧ್ಯಾಯವನ್ನು ಮರುಪರಿಷ್ಕರಣೆಯಲ್ಲಿ ತೆಗೆದುಹಾಕಿ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಹೀಗೆ 7ನೇ ತರಗತಿಯಿಂದ ತೆಗೆದು ಹತ್ತನೇ ತರಗತಿಯಲ್ಲಿ ಮುಕ್ಕಾಲು ಪುಟದಷ್ಟು ಮಾತ್ರ ಮೈಸೂರು ಒಡೆಯರ ವಿವರ ಕೊಟ್ಟು ಅನ್ಯಾಯ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರು ತಂದ ಮೀಸಲಾತಿ, ಮಹಿಳೆಯರಿಗೆ ಮತದಾನದ ಹಕ್ಕಿನ ಮಹತ್ವದ ವಿವರಗಳೇ ಇಲ್ಲ. ನಮ್ಮ ಪಠ್ಯದಲ್ಲಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯನವರು ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಪೂರ್ಣ ವಿವರಗಳನ್ನು ಮರುಪರಿಷ್ಕರಣೆಯಲ್ಲಿ ಕೈಬಿಟ್ಟಿದ್ದಾರೆ. ಆದರೆ ನಮ್ಮ ಮೇಲೆ ಮಿಥ್ಯಾರೋಪ ಮಾಡಿದ್ದಾರೆ.
  • ನಾಡಪ್ರಭು ಕೆಂಪೇಗೌಡರ ಪಾಠ ನಮ್ಮ ಪರಿಷ್ಕರಣೆ ಪಠ್ಯದಲ್ಲಿ ಇರಲಿಲ್ಲ ಎಂಬುದು ಇನ್ನೊಂದು ಮಿಥ್ಯಾರೋಪ. ನಾವು 7ನೇ ತರಗತಿಯ ಸಮಾಜ ವಿಜ್ಞಾನ (ಭಾಗ-1 ಪುಟ 43-44) ರಲ್ಲಿ ಎರಡು ಪುಟಗಳ ವಿವರಗಳನ್ನು ಕೊಟ್ಟಿದ್ದೆವು. ಮರುಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಿದ್ದಲ್ಲದೆ, ಕೆಂಪೇಗೌಡರ ಆಡಳಿತಕ್ಕೆ ರಾಮನಗರ, ಕೋಲಾರ ಮತ್ತು ತುಮಕೂರು ಭಾಗಗಳು ಒಳಪಟ್ಟಿದ್ದವೆಂದು ನಾವು ಕೊಟ್ಟಿದ್ದ ವಿವರವನ್ನು ತೆಗೆದು ಕೆಂಪೇಗೌಡರ ಮಹತ್ವವನ್ನು ಇವರೇ ಕುಗ್ಗಿಸಿದ್ದಾರೆ.
  • ಪೋರ್ಚುಗೀಸರ ವಿರುದ್ಧ ಹೋರಾಡಿದ ಚೆನ್ನ ಬೈರಾದೇವಿಯವರ ಬಗ್ಗೆ ಹೊಸ ಪಾಠ ಸೇರಿಸಿದ್ದನ್ನು ಸ್ವಾಗತಿಸುತ್ತೇನೆ. ಆದರೆ ನಾವು ಸೇರಿಸಿದ್ದ ಇದೇ ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕನವರ ಪಾಠವನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲ, ನಾವು 7ನೇ ತರಗತಿಯ ಸಮಾಜ ವಿಜ್ಞಾನದಲ್ಲಿ (ಭಾಗ-2 84 ರಿಂದ 90ನೇ ಪುಟ) ಹೊಸದಾಗಿ ಸೇರಿಸಿದ್ದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ಇಡೀ ಅಧ್ಯಾಯವನ್ನು ಕೈಬಿಟ್ಟಿದ್ದಾರೆ. ಈ ಅಧ್ಯಾಯದಲ್ಲಿದ್ದ ರಾಣಿ ಅಬ್ಬಕ್ಕ, ಯಶೋಧರಮ್ಮ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ ಅವರ ಎಲ್ಲಾ ವಿವರಗಳನ್ನು ತೆಗೆದಿದ್ದಾರೆ. ಇದು ಕರ್ನಾಟಕದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ.
  • 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರ ಭಕ್ತಿಪಂಥ ಮತ್ತು ಸೂಫಿ ಪರಂಪರೆಯೆಂಬ ಅಧ್ಯಾಯದಲ್ಲಿದ್ದ ಅಕ್ಕಮಹಾದೇವಿ, ಶಿಶುನಾಳ ಶರೀಫರು, ಪುರಂದರದಾಸರು, ಕನಕದಾಸರು-ಇವರ ಎಲ್ಲಾ ವಿವರ ತೆಗೆದು ಉತ್ತರ ಭಾರತದವರನ್ನು ಮಾತ್ರ ಉಳಿಸಿಕೊಂಡಿದ್ದಾರೆ. 9ನೇ ತರಗತಿಯ ಭಾಗ-2ರಲ್ಲಿದ್ದ ಇವರ ವಿವರಗಳನ್ನೂ ತೆಗೆದಿದ್ದಾರೆ. ಇದು ಕರ್ನಾಟಕದ ಅಸ್ಮಿತೆಗೆ ಮಾಡಿದ ಅನ್ಯಾಯ.
  • ಸಮಾಜ ವಿಜ್ಞಾನದ 7ನೇ ತರಗತಿಯ ಭಾಗ-2 ರಲ್ಲಿ ನಾವು ಹೊಸದಾಗಿ ಸೇರಿಸಿದ್ದ ಸಾವಿತ್ರಿ ಬಾಯಿ ಫುಲೆಯಾದಿಯಾಗಿ ಎಲ್ಲ ಮಹಿಳೆಯರ ವಿವರಗಳನ್ನು ತೆಗೆದು ಹಾಕಿದ್ದಾರೆ.
  • ಕನ್ನಡ ಭಾಷಾ ಪಠ್ಯಗಳಲ್ಲಿದ್ದ ಎಲ್ಲಾ ದಲಿತ ಮೂಲದ ಸಾಹಿತಿಗಳು ಮತ್ತು ಬಹುಪಾಲು ಮಹಿಳಾ ಸಾಹಿತಿಗಳ ಬರಹಗಳನ್ನು ಬಿಟ್ಟು ಆ ಜಾಗದಲ್ಲಿ ಬಹಳಷ್ಟು ಒಂದೇ ಸಮುದಾಯದವರ ಬರಹಗಳನ್ನು ಹಾಕಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯಂತಹ ಸಂವಿಧಾನಾತ್ಮಕ ಆಶಯಗಳಿಗೆ ಧಕ್ಕೆ ತಂದಿದ್ದಾರೆ. ಸ್ವತಃ ಪರುಪರಿಷ್ಕರಣೆ ಸಮಿತಿಯ ಅಧ್ಯಕ್ಷರೇ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ವಿರುದ್ಧವಾಗಿ ಪಠ್ಯಪುಸ್ತಕದ ತಮ್ಮ ಮಾತುಗಳಲ್ಲೇ ಬರೆದಿರುವುದನ್ನು ಇಲ್ಲಿ ನೆನೆಯಬಹುದು.
  • ಹೀಗೆ ಅನೇಕ ಅಪಚಾರಗಳನ್ನು ಮರೆಮಾಚಲು ಕುವೆಂಪು ಅವರ ಹತ್ತು ಪಾಠ ಹಾಕಿರುವುದನ್ನು ಮುಂದೆ ಮಾಡುತ್ತಿದ್ದಾರೆ. ನಾವು ಕುವೆಂಪು ಅವರು ಪ್ರತಿಪಾದಿಸಿದ ಅಖಂಡ ಕರ್ನಾಟಕತ್ವ ಮತ್ತು ಸರ್ವಜನಾಂಗದ ಶಾಂತಿಯ ತೋಟವೆಂಬ ಆದರ್ಶಕ್ಕೆ ಅನುಗುಣವಾಗಿ ಕರ್ನಾಟಕದ ಎಲ್ಲಾ ಭಾಗಗಳ ಬರಹಗಾರರನ್ನು ಪ್ರಾತಿನಿಧಿಕವಾಗಿ ಸೇರಿಸಿದ್ದೇವೆ. ಕುವೆಂಪು ಅವರ ಆಶಯವನ್ನು ಈಡೇರಿಸಿದ್ದೇವೆ.
  • ಕುವೆಂಪು ಅವರ ಹತ್ತು ಪಾಠಗಳ ವಿಷಯವನ್ನು ಮತ್ತೆ ಮತ್ತೆ ಹೇಳುವ ಇವರು ಕರ್ನಾಟಕ ಏಕೀಕರಣದ ವಿಷಯ ತಿಳಿಸುವಾಗ ಹಾಕಿದ್ದ ಕುವೆಂಪು ಭಾವಚಿತ್ರವನ್ನೇ ತೆಗೆದು ಹಾಕಿದ್ದಾರೆ.
  • ಹುಯಿಲಗೋಳ ನಾರಾಯಣರಾಯರ ಭಾವಚಿತ್ರ ತೆಗೆದದ್ದಲ್ಲದೆ, ಕಯ್ಯಾರ ಕಿಞಣ್ಣರೈ ಅವರ ವಿವರ ಬಿಟ್ಟಿದ್ದಾರೆ.
  • ಕರ್ನಾಟಕದಿಂದ ಪ್ರಧಾನಿ ಸ್ಥಾನಕ್ಕೆ ಏರಿದ ದೇವೇಗೌಡರ ಭಾವಚಿತ್ರ ಬಿಟ್ಟಿದ್ದಾರೆ. ದೇವನೂರು ಮಹಾದೇವರ ಭಾವಚಿತ್ರವೂ ಇಲ್ಲ.
  • ನಮ್ಮ ಪಠ್ಯದಲ್ಲಿದ್ದ ಸಿದ್ಧಗಂಗೆ ಮತ್ತು ಆದಿ ಚುಂಚನಗಿರಿ ಮಠಗಳ ವಿವರಗಳನ್ನು ಒಂದೇ ಸಾಲಿಗೆ ಇಳಿಸಿ ಅನ್ಯಾಯ ಮಾಡಿದ್ದಾರೆ.
  • ನಮ್ಮ ಪಠ್ಯದಲ್ಲಿದ್ದ ‘ವೇದಕಾಲದ ಸಂಸ್ಕೃತಿ’ ಎಂಬ ಪಾಠವನ್ನು ತೆಗೆದುಹಾಕಿರುವ ಇವರು ಭಾರತೀಯ ಪರಂಪರೆಯ ಬಗ್ಗೆ ಮಾತಾಡುವುದೇ ಒಂದು ವಿಚಿತ್ರ.
  • ಇಷ್ಟು ಸಾಲದೆಂಬಂತೆ ಡಾ.ಅಂಬೇಡ್ಕರ್ ಅವರ ವಿಚಾರಧಾರೆಗೆ ಸಾಕಷ್ಟು ಕತ್ತರಿ ಪ್ರಯೋಗ ಮಾಡಿದ್ದಾರೆ. ಅಂಬೇಡ್ಕರ್ ಮತ್ತು ಬುದ್ಧ ಗುರು ಕುರಿತ ಪದ್ಯ ತೆಗೆದಿದ್ದಾರೆ. ಇಂಥ ಅನೇಕ ಅಂಶಗಳನ್ನು ಪಟ್ಟಿ ಮಾಡಬಹುದು.
  • ಇನ್ನು ನಮ್ಮ ಪಠ್ಯ ಪರಿಷ್ಕರಣೆಯು ಕಮ್ಯುನಿಸ್ಟ್ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ ಎಂಬ ಮಿಥ್ಯಾರೋಪಕ್ಕೆ ನಮ್ಮ ಪಠ್ಯಗಳೇ ಉತ್ತರ ಹೇಳುತ್ತವೆ. ನಾವು ಹೊಸದಾಗಿ ಬಸವಣ್ಣ, ಸಂಗೊಳ್ಳಿ ರಾಯಣ್ಣ, ಡಾ.ರಾಜಕುಮಾರ್ ಅವರ ಬಗ್ಗೆ ಪಾಠ ಸೇರಿಸಿದರೆ ಅದು ಕಮ್ಯುನಿಸ್ಟ್ ಪಠ್ಯವೆ? ಮಾಸ್ತಿ, ಗೋಪಾಲಕೃಷ್ಣ ಅಡಿಗ, ಗೊರೂರು, ಮೂರ್ತಿರಾಯರು, ಲಂಕೇಶ್, ಶಾಂತರಸ, ಸಾರಾ ಅಬೂಬಕರ್, ಚೆನ್ನಣ್ಣ ವಾಲೀಕಾರ ಮುಂತಾದವರ ಬರಹಗಳನ್ನು ಹೊಸದಾಗಿ ಸೇರಿಸಿ ಸಮತೋಲನ ಸಾಧಿಸಿದರೆ ಅದು ಕಮ್ಯೂನಿಸ್ಟ್ ಸಿದ್ಧಾಂತವೇ? ಕರ್ನಾಟಕದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು, ಭಕ್ತಿಪಂಥದವರು, ದೇಶದ ಮಹಿಳಾ ಸುಧಾರಕರು ಪಠ್ಯದಲ್ಲಿದ್ದರೆ ಅದು ಕಮ್ಯುನಿಸಂ ಎನ್ನುವಿರಾ? ನಮ್ಮ ಪರಿಷ್ಕರಣೆಯ ಪಠ್ಯಗಳು ಜಾರಿಗೊಂಡು ಐದು ವರ್ಷಗಳ ನಂತರ ಕಮ್ಯುನಿಸ್ಟ್ ಎಂದು ಆರೋಪಿಸುವುದು ತಮ್ಮ ಮೂಲಭೂತವಾದಿ ಸಿದ್ಧಾಂತದ ಪಠ್ಯ ಪರಿಷ್ಕರಣೆಯ ಅನ್ಯಾಯಗಳನ್ನು ಮರೆಮಾಚುವುದಕ್ಕೆ ಎನ್ನುವುದು ಸ್ಪಷ್ಟ.

ನಾವು ಕಮ್ಯುನಿಷ್ಠರಾಗಿ ಪಠ್ಯಪರಿಷ್ಕರಣೆ ಮಾಡಲಿಲ್ಲ. ಶಿಕ್ಷಣ ನಿಷ್ಠರಾಗಿ ಮಾಡಿದೆವು. ಇನ್ನಾದರೂ ಮಿಥ್ಯಾರೋಪಗಳು ನಿಲ್ಲಲಿ ಮತ್ತು ಮಾನ್ಯ ಮುಖ್ಯಮಂತ್ರಿಗಳು ಮರುಪರಿಷ್ಕರಣೆಯನ್ನು ವಿರೋಧಿಸುತ್ತಿರುವ ಸಾಹಿತಿಗಳು ಮತ್ತು ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸಿ ಪ್ರಜಾಸತ್ತಾತ್ಮಕ ನಡೆಗೆ ಮುಂದಾಗಲಿ ಎಂದು ಆಶಿಸುತ್ತೇನೆ.

ಬರಗೂರು ರಾಮಚಂದ್ರಪ್ಪ

Donate Janashakthi Media

Leave a Reply

Your email address will not be published. Required fields are marked *