ಪಂಜಾಬ್‌ ಮಾಜಿ ಸಚಿವ ಸಾಧು ಸಿಂಗ್ ಹಾಗೂ ಸ್ಥಳೀಯ ಪತ್ರಕರ್ತ ಕಮಲ್ಜಿತ್ ಸಿಂಗ್ ಬಂಧನ

  • ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ಸೇರಿದಂತೆ ಸ್ಥಳೀಯ ಪತ್ರಕರ್ತ ಕಮಲಿಜ್ಜಿತ್‌ ಸಿಂಗ್‌ ಬಂಧನ
  • ಮರ ಕಡಿಯುವುದರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಬಂಧನ

ಚಂಡೀಗಡ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್‌ ವಿಚಕ್ಷಣ ದಳ (ವಿ.ಬಿ) ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಸಾಧು ಸಿಂಗ್‌ ಧರಮ್ಸೋಟ್‌ ಅವರನ್ನು ಮಂಗಳವಾರ ಮುಂಜಾನೆ ಬಂಧಿಸಿದೆ.

ಸಾಧು ಸಿಂಗ್‌ ಅವರು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸಂಪುಟದಲ್ಲಿ ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಇವರ ಸಹಚರರಾದ ಸ್ಥಳೀಯ ಪತ್ರಕರ್ತ ಕಮಲ್ಜಿತ್ ಸಿಂಗ್ ಅವರನ್ನೂ ಬಂಧಿಸಲಾಗಿದೆ ಎಂದು ವರದಿಯಾಗಿದ್ದು, ಮಾಹಿತಿ ಖಚಿತಪಡಿಸಿರುವ ವಿ.ಬಿ ಅಧಿಕಾರಿ, ’ಇಬ್ಬರನ್ನು ಭ್ರಷ್ಟಾಚಾರದ ಆರೋಪದಡಿಯಲ್ಲಿ ಬಂಧಿಸಲಾಗಿದೆ’ ಎಂದು ಹೇಳಿದರು.

ಮರ ಕಡಿಯುವುದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಾಧು ಸಿಂಗ್‌ ವಿರುದ್ಧ ಕ್ರಮ ಕೈಗೊಳ್ಳವುದಾಗಿ ಮುಖ್ಯಮಂತ್ರಿ ಭಗವಂತ್‌ ಮಾನ್‌ ಇತ್ತೀಚೆಗಷ್ಟೇ ಹೇಳಿದ್ದರು.

ಇದೇ ಪ್ರಕರಣದಲ್ಲಿ ಕಳೆದ ವಾರ ವಿ.ಬಿ ಅಧಿಕಾರಿಗಳು ವಿಭಾಗೀಯ ಅರಣ್ಯ ಅಧಿಕಾರಿ ಗುರ್ನಾಮ್‌ಪ್ರೀತ್‌ ಸಿಂಗ್ ಮತ್ತು ಹರ್ಮಿಂದರ್ ಸಿಂಗ್ ಹುಮ್ಮಿ ಎಂಬುವವರನ್ನು ಬಂಧಿಸಿದ್ದರು. ಅವರು ನೀಡಿರುವ ಮಾಹಿತಿಯ ಆಧಾರದ ಮೇಲೆ ಸಾಧು ಸಿಂಗ್‌ ಅವರ ವಿರುದ್ಧ ವಿ.ಬಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿ ಮರ ಕಡಿಯುವಾಗಲೂ ಸಾಧು ಸಿಂಗ್‌ಗೆ ಹಣ ಹೋಗುತ್ತಿತ್ತು. ಸ್ಥಳೀಯ ಪತ್ರಕರ್ತ ಕಮಲ್‌ಜಿತ್ ಮೂಲಕ ಹರ್ಮಿಂದರ್‌ ಸಿಂಗ್‌ ಹಮ್ಮಿ, ಸಾಧು ಸಿಂಗ್‌ಗೆ ಲಂಚ ನೀಡುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಲ್ಲದೆ ಸಾಧು ಸಿಂಗ್‌ ಅವರ ಮೇಲೆ  25 ಸಾವಿರ ಮರಗಳನ್ನು ಅಕ್ರಮವಾಗಿ ಕಡಿದ ಆರೋಪ ಇದೆ ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *