ರಾಜ್ಯದ ಸೌಹಾರ್ಧತೆಗೆ ಧಕ್ಕೆ ತಂದು ನಿಜ ಸಮಸ್ಯೆಗಳ ದಿಕ್ಕು ತಪ್ಪಿಸುವ ಕೆಲಸ ಸರ್ಕಾರ ಮಾಡುತ್ತಿದೆ: ಸಿಪಿಐ(ಎಂ) ಆರೋಪ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಸೌಹಾರ್ಧತೆಗೆ ಭಂಗ ತರುವ ಕೆಲಸವನ್ನು ಮಾಡುತ್ತಿದೆ.  ಒಂದೆಡೆ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ, ರೈತರು ಹಾಗೂ ಕಾರ್ಮಿಕರ ವಿರೋಧಿಯಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಜಾನುವಾರು ಹತ್ಯ ನಿಷೇಧ ತಿದ್ದುಪಡಿ ಕಾಯ್ದೆ-2020 ಇವುಗಳನ್ನು ಜಾರಿ ಮಾಡುವ ಮೂಲಕ ಜನ ವಿರೋಧಿ, ರೈತ ವಿರೋಧಿಯಾದ ಕ್ರಮಗಳನ್ನು ಅನುಸರಿಸುತ್ತದೆ. ಮತ್ತೊಂದೆಡೆ, ಸೌಹಾರ್ದತೆಗೆ ಧಕ್ಕೆ ತರುವ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ಆರೋಪಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ ಮಾರ್ಕ್ಸ್‌ವಾದಿ-ಸಿಪಿಐ(ಎಂ) ಪಕ್ಷವು  ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯು. ಬಸವರಾಜ ಅವರು ದೇಶದಲ್ಲಿ ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಐತಿಹಾಸಿಕ ರೈತ ಚಳುವಳಿ ಜಾಗತಿಕ ಗಮನ ಸೆಳೆದ ಬೃಹತ್ ಪ್ರತಿಭಟನೆಗೆ ಮಣಿದು ಪ್ರಧಾನ ಮಂತ್ರಿಗಳೇ ಜಗತ್ತಿನ ಮುಂದೆ ಮಂಡಿಯೂರಿ, ಕೈ ಮುಗಿದು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆದಿರುವಾಗ, ರಾಜ್ಯದ ಬಸವರಾಜ ಬೊಮ್ಮಾಯಿಯವರ ಸರಕಾರ ಭಾವನಾತ್ಮಕ ವಿಷಯಗಳನ್ನು ಮುಂದೆ ಮಾಡಿ ಜನರ ದಾರಿ ತಪ್ಪಿಸಿ, ಲೂಟಿಕೋರ ಕಾಯ್ದೆಗಳನ್ನು ಉಳಿಸಿಕೊಳ್ಳಬಹುದೆಂದು ಭಾವಿಸಿದ್ದರೆ, ಅದಕ್ಕೆ ರಾಜ್ಯದ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆಂದು ಎಂದು ತಿಳಿಸಿದರು.

ಅಲ್ಲದೆ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ಜಾರಿ ಮತ್ತು ದಲಿತರು, ಮಹಿಳೆಯರು ಹಾಗೂ ಬಡವರ ವಿರೋಧಿಯಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಳನ್ನು ಕೂಡಲೇ ನಿಲ್ಲಿಸಬೇಕೆಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ ಎಂದರು.

ಆಳುವ ಸರ್ಕಾರವು ಈ ಬಗ್ಗೆ ಅಗತ್ಯ ಕ್ರಮವಹಿಸದೇ, ಕೋಮುವಾದಿ ಶಕ್ತಿಗಳ ಜೊತೆ ಕೈ ಜೋಡಿಸಿ ರಾಜ್ಯದ ಹೋರಾಟ ನಿರತ ಜನತೆಯ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರವನ್ನು ಅನುಸರಿಸುತ್ತಿರುವುದು ತೀವ್ರ ಖಂಡನೀಯವಾಗಿದೆ. ಸಂವಿಧಾನ ಹಾಗೂ ದಲಿತರು, ಅಲ್ಪ ಸಂಖ್ಯಾತರ ಮತ್ತು ಹೈನುಗಾರರ ವಿರೋಧಿಯಾದ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಹಾಗೂ ಎಲ್ಲ ಶೂದ್ರ ಹಾಗೂ ದಲಿತರು ಮತ್ತು ಮಹಿಳಾ ಸಮುದಾಯದ ವಿರೋದಿಯಾದ ಮತಾಂತರ ನಿಷೇಧ ಮತ್ತು ಜಾತಿ ವ್ಯವಸ್ಥೆಯನ್ನು ಬಲಪಡಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯ ಸಂರಕ್ಷಣೆಯಂತಹ ಕರಾಳ ಕಾಯ್ದೆಗಳ ರಚನೆಯ ಮೂಲಕ ಹಿಂದುತ್ವ ಕೋಮುವಾದಿ ಶಕ್ತಿಗಳ ಬೆಳವಣಿಗೆಗೆ ಸಹಕರಿಸುವ ಹಾಗೂ ರಾಜ್ಯದ ಸೌಹಾರ್ಧವನ್ನು ಕದಡುವ ಕೆಲಸದಲ್ಲಿ ತೊಡಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮತೀಯ ದ್ವೇಷ ಹೆಚ್ಚಿಸಿ ಜನತೆಯ ಗಮನವನ್ನು ಬೇರೆಡೆ ಸೆಳೆದು, ಮರೆ ಮೋಸದ ಮೂಲಕ ಕರ್ನಾಟಕದ ಎಲ್ಲ ಸಂಪನ್ಮೂಲಗಳ ಕಾರ್ಪೊರೇಟ್ ಲೂಟಿಗೆ ತೆರೆಯುವ ಇಂತಹ ಕುತಂತ್ರಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿರುವ ಸಿಪಿಐ(ಎಂ) ಪಕ್ಷವು ರಾಜ್ಯದ ಜನತೆ ಐಕ್ಯತೆಯಿಂದ ಇಂತಹ ಕುತಂತ್ರವನ್ನು ಮತ್ತು ಕಾರ್ಪೊರೇಟ್ ಕಂಪನಿಗಳ ಲೂಟಿಕೋರ ನೀತಿಗಳನ್ನು ಸೋಲಿಸವ ಮೂಲಕ ರಾಜ್ಯದಲ್ಲಿ ಸೌಹಾರ್ಧತೆಯನ್ನು ಬಲಗೊಳಿಸಬೇಕೆಂದು ಆಗ್ರಹಿಸಿದೆ.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ.ಬಯ್ಯಾರೆಡ್ಡಿ ಅವರು ಮಾತನಾಡಿ,

ದೇಶದಾದ್ಯಂತ ಬೆಳೆದು ಬಂದ ರೈತ – ಕಾರ್ಮಿಕರ ಐತಿಹಾಸಿಕ ಹಾಗೂ ರಾಜ್ಯದಲ್ಲಿ ಲೂಟಿಕೋರ ನೀತಿಗಳನ್ನು ಮುನ್ನಡೆಸುವ ಮತ್ತು ತನ್ನ ಜನ ವಿರೋಧಿ ನೀತಿಗಳನ್ನು ಮುಚ್ಚಿಕೊಳ್ಳುವ ದುಷ್ಠ ಕಾರಣದಿಂದ ಸೌಹಾರ್ಧತೆಯನ್ನು ಕದಡುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವನ್ನು ಬೆಳೆಯಲು ಬಿಡಲಾಯಿತು ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕು. ಇದರಿಂದ ರಾಜ್ಯದ ಜನತೆಯಲ್ಲಿ ಆತಂಕ ಉಂಟಾಗಿ ವಿದ್ಯಾರ್ಥಿನೀಯರು ವಿದ್ಯಾಭ್ಯಾಸದಿಂದ ವಂಚನೆಗೊಳಗಾಗಬೇಕಾದ ದುಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.

ಕಾಂತರಾಜು ಆಯೋಗದ ವರದಿ ಜಾರಿಗೊಳಿಸಿ:

ನಿಖರ ಅಂಕಿ ಅಂಶಗಳೊಂದಿಗೆ ತ್ರಿಸ್ಥರದ ಪರಿಶೀಲನೆ ಬಳಿಕವೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂಬ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುವುದು ಅಥವಾ ನಿಖರ ಅಂಕಿ ಅಂಶಗಳು ಇಲ್ಲವೆಂದು ಆ ಸ್ಥಾನಗಳನ್ನು ಸಾಮಾನ್ಯ ಸ್ಥಾನಗಳೆಂದು ಘೋಷಿಸಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡೆಗಣಿಸಿ ಚುನಾವಣೆಗಳನ್ನು ನಡೆಸುವುದು. ಈ ಎರಡೂ ಕೂಡಾ ತಪ್ಪಾದ ಕ್ರಮಗಳೆಂದು ಸಿಪಿಐ(ಎಂ) ಭಾವಿಸಿದೆ.

ಈಗಾಗಲೇ ಸಿದ್ಧರಾಮಯ್ಯ ನೇತೃತ್ವದ ಹಿಂದಿನ ಸರಕಾರ ಶ್ರೀ ಕಾಂತರಾಜು ನೇತೃತ್ವದ ಆಯೋಗದ ವರದಿಯನ್ನು ಅಂತಿಮಗೊಳಿಸುವ ಮೂಲಕ ಹಿಂದುಳಿದ ಜನ ಸಮುದಾಯಗಳ ಅಂಕಿ ಅಂಶಗಳನ್ನು ಗಣತಿ ಮೂಲಕ ಗುರುತಿಸಿರುವುದರಿಂದ ಅದನ್ನು ಬಳಸಿಕೊಂಡು ಸಮಯಕ್ಕೆ ಸರಿಯಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಅಗತ್ಯ ಕ್ರಮವಹಿಸಬೇಕೆಂದು ರಾಜ್ಯ ಸರಕಾರವನ್ನು ಮತ್ತು ಚುನಾವಣಾ ಅಯೋಗವನ್ನು ಸಿಪಿಐ(ಎಂ) ಒತ್ತಾಯಿಸಿದೆ.

ರಾಜ್ಯದ ಸರಸರಿ ಆಯವ್ಯಯ 2.5 ಲಕ್ಷ ಕೋಟಿ ರೂ.ಗಳು ಆಗಿರುವ ಸಂದರ್ಭದಲ್ಲಿ ಅದರ ಮೂರನೇ ಒಂದು ಭಾಗದ ಪಾಲು ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿನ ವ್ಯಾಪ್ತಿಯಲ್ಲಿಯೇ ವ್ಯಯವಾಗುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಇರುವುದು ಮತ್ತು ಕಾರ್ಯಾಂಗದ ಅಧಿಕಾರಿಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದು ಮತ್ತೊಂದು ರೀತಿಯ ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಆರೋಪಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳ ಅವಧಿ ಈಗಾಗಲೇ ಮುಗಿದು ಹಲವು ತಿಂಗಳುಗಳು ಗತಿಸಿವೆ. ಆದರೆ, ಪಂಚಾಯತಿ ರಾಜ್‌ ಇಲಾಖೆಯ ಸಚಿವ ಕೆ. ಎಸ್‌. ಈಶ್ವರಪ್ಪ ನವರು ಚುನಾವಣೆಗಳನ್ನು ನಡೆಸುವುದು ಬೇಡ ಎಂದಿರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಅದನ್ನು ಸಿಪಿಐ(ಎಂ) ಪಕ್ಷವು ವಿರೋಧಿಸುತ್ತದೆ ಎಂದು ಹೇಳಿದರು.

ಕಳಪೆ ಮೇಲ್ಸೆತುವೆ ನಿರ್ಮಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ

ಸುಮಾರು 750 ಕೋಟಿ ರೂ.ಗಳ ಸಾರ್ವಜನಿಕ ವೆಚ್ಚದಲ್ಲಿ ನಿರ್ಮಿಸಲಾದ ಗುರಗುಂಟೆ ಪಾಳ್ಯದಿಂದ ತುಮುಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲ್ಸೆತುವೆ ಕಳಪೆ ಕಾಮಗಾರಿ ಕೆಲಸದಿಂದಾಗಿ ಕಳೆದೆರಡು – ಮೂರು ತಿಂಗಳಿಂದ ನಿರುಪಯುಕ್ತವಾಗಿದ್ದು ಈಗ ಮರು ನಿರ್ಮಾಣವಾಗದೇ ಅದನ್ನು ಬಳಸದಂತಹ ದುಸ್ಥಿತಿ ಉಂಟಾಗಿದೆ. ಇದರಿಂದಾಗಿ ಈಗ ಮತ್ತು ಮುಂದೆ ಮರು ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರಯಾಣಿಕರು, ವಾಹನ ಚಾಲಕರು ದೊಡ್ಡ ಪ್ರಮಾಣದ ಹಿಂಸೆ ಅನುಭವಿಸುವಂತಾಗಿದೆ.

ಕಳಪೆ ಕಾಮಗಾರಿಯೊಂದಿಗೆ ನಿರ್ವಹಣೆ ಲೋಪಗಳಿಂದ ಸೇತುವೆಯ ಮುಖ್ಯ ಭಾರ ಹೊರುವ ಪಿಲ್ಲರ್‌ಗಳು ಹಾಗು ರಸ್ತೆಯ ನಡುವಿನ ಸ್ಪ್ರಿಂಗ್‌ಗಳು ಹಾಗು ತಂತಿಗಳು ಹಾಳಾಗಿವೆ, ಕಾಂಕ್ರೀಟ್ ಮಿಶ್ರಣ ಗುಣಮಟ್ಟದಲ್ಲಿನ ರಾಜಿಗಳು ಇಂತಹ ದುಸ್ಥಿತಿಗೆ ಕಾರಣವಾಗಿವೆ ಎನ್ನಲಾಗಿದೆ. ಟೋಲ್ ಸಂಗ್ರಹಿಸುವುದು ಮತ್ತು ವಾಹನ ಸವಾರರನ್ನು ದೋಚುವ ಕೆಲಸಕ್ಕೆ ಮಾತ್ರ ಆದ್ಯತೆ ನೀಡಿರುವ ಕೇಂದ್ರದ ಬಿಜೆಪಿ ಸರ್ಕಾರದ ರಸ್ತೆ ಸಾರಿಗೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಕುರಿತು ನಿಗದಿತ ಮೌಲ್ಯಮಾಪನ ನಡೆಸದೆ ನಿರ್ಲಕ್ಷ್ಯ ಮಾಡಿರುವುದು ಇದಕ್ಕೆ ನೇರ ಕಾರಣವಾಗಿದೆ. ಟೋಲ್ ಸಂಗ್ರಹ ಮತ್ತು ನಿರ್ವಹಣೆ ಗುತ್ತಿಗೆದಾರರನ್ನು ಸಹಾ ಕಪ್ಪು ಪಟ್ಟಿಗೆ ಸೇರಿಸಿ ಅವರಿಂದ ಸಹಾ ಇದುವರೆಗೆ ಸಂಗ್ರಹವಾದ ಟೋಲ್ ಹಾಗು ವೆಚ್ಚ ಮಾಡಲಾದ ನಿರ್ವಹಣ ವೆಚ್ಚವನ್ನು ವಸೂಲಿ ಮಾಡಬೇಕು ಎಂದು ಸಿಪಿಐ(ಎಂ) ಪಕ್ಷವು ಒತ್ತಾಯಿಸಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಿಗೆ ರಾಜ್ಯ ರಾಜಧಾನಿಯ ಸಂಪರ್ಕವಾಗಿದ್ದ ಮೇಲ್ಸೆತುವೆಯನ್ನು ಕೆಡವಿ ನಿರ್ಮಿಸಲು ಕನಿಷ್ಠ 2 ವರ್ಷವಾದರು ಬೇಕಿರುವ ಕಾರಣ, ಮೆಟ್ರೊ ಸೇವೆಗಳನ್ನು ಹೆಚ್ಚಿಸಬೇಕು, ನಾಗಸಂದ್ರ ನಿಲ್ದಾಣದ ಬಳಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸ್ಥಾಪಿಸುವ ಕಾರ್ಯವನ್ನು ತುರ್ತಾಗಿ ಮಾಡಬೇಕು, ತುಮಕೂರಿನಿಂದ ಪ್ರತಿ ಅರ್ಧ ಗಂಟೆಗೆ ಒಂದು ರೈಲಿನ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು. ತುಮಕೂರಿನ ಮೂಲಕ ಹಾದು ಬರುವ ಬಸ್‌ಗಳು ಅಲ್ಲಿನ ರೈಲ್ವೆ ನಿಲ್ದಾಣಕ್ಕೆ ತಲುಪಿ ಬರುವಂತೆ ಕ್ರಮವಹಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಸದರಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ಲೈಸನ್ಸನ್ನು ತಕ್ಷಣವೇ ರದ್ದು ಪಡಿಸಿ ಆತನ ಹಾಗೂ ಅದರ ಗುಣಮಟ್ಟ ಸಕ್ರಮವಾಗಿ ಪರಿಶೀಲಿಸದ ಎಲ್ಲಾ ಪ್ರಮುಖ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಬೇಕು ಮತ್ತು ಸಂಬಂದಿತ ಈ ಎಲ್ಲರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

ಗಂಗಾ ಕಲ್ಯಾಣ ಯೋಜನೆ ಭ್ರಷ್ಟಾಚಾರ ನಿಗ್ರಹಿಸಲು ಅಗತ್ಯ ನಿಯಮಗಳನ್ನು ರೂಪಿಸಲು ಆಗ್ರಹ

ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡ ಹಾಗು ಹಿಂದುಳಿದ ವರ್ಗಗಳ ಸಣ್ಣ, ಅತಿ ಸಣ್ಣ ರೈತರಿಗೆ ಕೊಳವೆ ಬಾವಿಗಳ ಮೂಲಕ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆಯೇ ಗಂಗಾ ಕಲ್ಯಾಣ ಯೋಜನೆಯಾಗಿದೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಕೊಳವೆ ಬಾವಿಯನ್ನು ಹಾಕಿ ನೀರಾವರಿ ಮಾಡಿಕೊಂಡು ಕೃಷಿ ನಡೆಸಲು ಬಡ ಪರಿಶಿಷ್ಟ ಜಾತಿ, ಪಂಗಡ ಹಾಗು ಹಿಂದುಳಿದ ಜಾತಿಗಳ ಸಣ್ಣ, ಅತಿ ಸಣ್ಣ ರೈತರಿಗೆ ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಪ್ರತಿ ಫಲಾನುಭವಿಗೆ 4.5 ಲಕ್ಷ ರೂ. ಹಣಕಾಸಿನ ನೆರವಿನೊಂದಿಗೆ ಗಂಗಾ ಕಲ್ಯಾಣ ಯೋಜನೆಯನ್ನು ಹಲವು ವರ್ಷಗಳಿಂದ ರಾಜ್ಯ ಸರ್ಕಾರಗಳು ಜಾರಿ ಮಾಡುತ್ತಿವೆ ಎಂದರು.

ಬಡವರಿಗಾಗಿ ಜಾರಿಯಾಗುತ್ತಿರುವ ಈ ಯೋಜನೆಯಲ್ಲಿ ಹಲವು ವರ್ಷಗಳಿಂದ ಭಷ್ಟಾಚಾರ ನಡೆದು ಬಂದಿದೆ. ಆದರೆ ಇತ್ತೀಚಿಗೆ ಉನ್ನತ ಮಟ್ಟದಲ್ಲಿಯೇ ಫಲಾನುಭವಿಗಳ ಆಯ್ಕೆ ಗುತ್ತಿಗೆದಾರರ ಆಯ್ಕೆ, ಸಾಮಾಗ್ರಿಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುವ ಚರ್ಚೆ ಮಾಹಿತಿಗಳು ಲಭ್ಯವಾಗುತ್ತಿವೆ. ಈ ಆರೋಪಗಳ ಹಿನ್ನೆಲೆಯಲ್ಲಿ ಸದನ ಸಮಿತಿಯನ್ನು ರಚಿಸಲಾಗಿದೆ. ಈ ಸದನ ಸಮಿತಿಯು ಭ್ರಷ್ಟಾಚಾರದ ಆರೋಪಗಳ ತನಿಖೆ ನಡೆಸಿ ಸದನದಲ್ಲಿ ವರದಿಯನ್ನು ಮಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುವ ಬದಲಿಗೆ, ಅನಗತ್ಯ ಕಾಲಾಹರಣ ಮಾಡುತ್ತಿದೆ. ಮಾತ್ರವಲ್ಲ, ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದೆ ಎಂಬ ಗುಮಾನಿಗಳು ಕೇಳಿ ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಶ್ರೀ ವೈ.ಎ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸದನ ಸಮಿತಿಯು ಕೂಡಲೇ ತನಿಖೆಯನ್ನು ಪೂರ್ಣಗೊಳಿಸಿ, ಸದನದಲ್ಲಿ ವರದಿಯನ್ನು ಮಂಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು ಮತ್ತು ಈ ವರದಿಯ ಆಧಾರದಲ್ಲಿ ಗಂಗಾ ಕಲ್ಯಾಣ ಯೋಜನೆಯು ಜಾರಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಭ್ರಷ್ಟಾಚಾರವನ್ನು ನಿಗ್ರಹಿಸುವ ರೀತಿಯಲ್ಲಿ ಪಾರದರ್ಶಕ ನಿಯಮಗಳನ್ನು ರೂಪಿಸಬೇಕೆಂದು ಭಾರತ ಕಮ್ಯೂನಿಷ್ಟ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಸಿದೆ.

Donate Janashakthi Media

Leave a Reply

Your email address will not be published. Required fields are marked *