ಕೃಷಿ ಕಾಯ್ದೆಗಳು – ಹಿಂಪಡೆತದ ರಾಜಕಾರಣ

ಮೂಲ: ಚಾಣಕ್ಯ ಹಿಂದುಸ್ತಾನ್ ಟೈಮ್ಸ್
ಅನುವಾದ : ನಾ ದಿವಾಕರ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಬಹಳ ದಿನಗಳಿಂದ ಅಪೇಕ್ಷಿತವಾಗಿದ್ದ ಕೃಷಿ ನೀತಿಗಳ ಸುಧಾರಣೆಯ ನಿಟ್ಟಿನಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದು, ಸಹಜವಾಗಿಯೇ ರೈತರಿಂದ ಮತ್ತು ಇತರ ಭಾಗೀದಾರರಿಂದ ತೀವ್ರ ಪ್ರತಿಭಟನೆಯನ್ನು ಎದುರಿಸಿತ್ತು. ಆರ್ಥಿಕ ಸುಧಾರಣೆಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬದ್ಧತೆಗೆ ಈ ಕಾಯ್ದೆಗಳು ಸೂಚನೆಯಾಗಿದ್ದವು. ಬಂಡಾಯದ ದೀರ್ಘ ಚರಿತ್ರೆಯನ್ನೇ ಹೊಂದಿರುವ ಪಂಜಾಬ್ ಮತ್ತಿತರ ಗಡಿ ರಾಜ್ಯಗಳಲ್ಲಿ ಈ ಕಾಯ್ದೆಗಳ ವಿರುದ್ಧ ತೀವ್ರ ಪ್ರತಿರೋಧ ಉಂಟಾಗಿ ಜನಾಂದೋಲನಕ್ಕೆ ಕಾರಣವಾಯಿತು. ಬಿಜೆಪಿಯ ಬಹುಕಾಲದ ಮಿತ್ರ ಪಕ್ಷ ಅಕಾಲಿ ದಳ ಎನ್‌ಡಿಎ ಮೈತ್ರಿಕೂಟವನ್ನು ತೊರೆದಿತ್ತು. ರಾಜಧಾನಿ ದೆಹಲಿಯ ಸುತ್ತಲೂ ರೈತ ಮುಷ್ಕರದ ಮೂಲಕ ದಿಗ್ಬಂಧನದ ಸನ್ನಿವೇಶ ಸೃಷ್ಟಿಯಾಯಿತು. ರೈತರ ಪ್ರತಿಭಟನೆ ನೆರೆ ರಾಜ್ಯಗಳಾದ ಹರಿಯಾಣ, ಉತ್ತರಪ್ರದೇಶಕ್ಕೂ ಹಬ್ಬಿತು. ಗಣರಾಜ್ಯೋತ್ಸವದ ದಿನ ಕೆಂಪುಕೋಟೆಯ ಬಳಿ ಗಲಭೆಗೂ ಕಾರಣವಾಯಿತು. ರೈತ ಮುಷ್ಕರದಲ್ಲಿ ಮುಂಚೂಣಿಯಲ್ಲಿದ್ದ ಸಿಖ್ ಮತ್ತು ಜಾಟ್ ಸಮುದಾಯಕ್ಕೆ ಸೇರಿದ ಸೇನಾ ಪಡೆಯ ಸಿಬ್ಬಂದಿಯ ನಡುವೆ ಅಸಮಾಧಾನದ ಹೊಗೆಯಾಡಲಾರಂಭಿಸಿತು.

ಮತ್ತೊಂದೆಡೆ ಖಲಿಸ್ತಾನ  ಪ್ರತ್ಯೇಕತಾವಾದಿ ಗುಂಪುಗಳಿಗೆ ಇದು ಉತ್ತೇಜನ ನೀಡುವಂತಾಯಿತು. ಈ ಗುಂಪುಗಳು ತಳಮಟ್ಟದಲ್ಲಿ ಸಂಘಟಿತರಾಗುವುದೇ ಅಲ್ಲದೆ ಸಂಪನ್ಮೂಲಗಳ ಸಂಗ್ರಹದಲ್ಲೂ ತೊಡಗಿದ್ದವು. ಅಂತಾರಾಷ್ಟ್ರೀಯ ವಲಯದಲ್ಲೂ ಈ ಕಾಯ್ದೆಗಳು ಟೀಕೆಗೊಳಗಾದವು. ರಿಹಾನಾ ಘಟನೆ ಒಂದು ನಿದರ್ಶನ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ದೀರ್ಘ ಕಾಲದ ಮತ್ತು ಬೃಹತ್ ಸ್ವರೂಪದ ಮುಷ್ಕರ, ಜನಾಂದೋಲನ ರೂಪುಗೊಂಡಿತ್ತು. ಇಷ್ಟೆಲ್ಲಾ ಅವಘಡಗಳ ನಡುವೆಯೂ ಈ ಕಾಯ್ದೆಗಳನ್ನು ಮುಂದುವರೆಸುವುದು ಸರ್ಕಾರದ ದೃಷ್ಟಿಯಲ್ಲಿ ಉಚಿತ ಎನಿಸಿತ್ತು . ರೈತ ಮುಖಂಡರೊಡನೆ ಮಾತುಕತೆಗಳನ್ನು ನಡೆಸುತ್ತಲೇ ಕೆಲವು ರಿಯಾಯಿತಿಗಳನ್ನು ನೀಡಲು ಸರ್ಕಾರ ಸಿದ್ಧತೆ ನಡೆಸಿತ್ತು. ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೂ ಕೆಲ ಕಾಲ ತಡೆಹಿಡಿಯಲು ಸಿದ್ಧವಾಗಿತ್ತು. ಇಡೀ ರಾಜಕೀಯ ನಾಯಕತ್ವ ಸರ್ಕಾರದ ಈ ಆಡಳಿತ ನೀತಿಯನ್ನು ಬೆಂಬಲಿಸಲು ಸಿದ್ಧವಾಗಿತ್ತು.

ಆದರೆ ಇದೇ ಸರ್ಕಾರ ಕಳೆದ ಶುಕ್ರವಾರ, ಕಾಯ್ದೆಯ ವಿರೋಧಿಗಳ ಆಗ್ರಹಕ್ಕೆ ಮಣಿದು, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿರುವುದು ಅಕ್ಷರಶಃ ರಾಜಕೀಯ ಹಿನ್ನಡೆ ಎಂದೇ ಹೇಳಬೇಕಾಗುತ್ತದೆ. ಎಷ್ಟೇ ರಾಜಕೀಯ ವಿರೋಧ ಇದ್ದರೂ, ಜನತೆಯ ಪ್ರತಿರೋಧ ಇದ್ದಾಗ್ಯೂ, ತನ್ನ ಯಾವುದೇ ಆರ್ಥಿಕ, ರಾಜಕೀಯ ಮತ್ತು ಶಾಸನ ರಚನೆಯ ಕ್ರಮಗಳನ್ನು ಹಿಂಪಡೆಯುವ ಧೋರಣೆಯನ್ನು ಯಾವುದೇ ಸಂದರ್ಭದಲ್ಲೂ ಪ್ರದರ್ಶಿಸದ ಸರ್ಕಾರ ಹೀಗೆ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದು ಇನ್ನೂ ಹೆಚ್ಚಿನ ರಾಜಕೀಯ ಮಹತ್ವವನ್ನು ಪಡೆದುಕೊಳ್ಳುತ್ತದೆ. ಈ ದೃಷ್ಟಿಯಿಂದ ನೋಡಿದಾಗ, ಕೃಷಿ ಕಾಯ್ದೆಗಳನ್ನು ದೃಢ ನಿಶ್ಚಯದೊಂದಿಗೆ ಮುಂದುವರೆಸುವ ಮತ್ತು ಈಗ ಈ ಕಾಯ್ದೆಗಳನ್ನು ಹಿಂಪಡೆಯುವ ಎರಡೂ ನಿರ್ಧಾರಗಳು ಮೋದಿ ಸರ್ಕಾರದ ಏಳೂವರೆ ವರ್ಷಗಳ ಆಡಳಿತದ ನಿರ್ಣಾಯಕ ಅಂಶಗಳಾಗಿ ಕಾಣುತ್ತವೆ. ಇದು ಭವಿಷ್ಯದ ದಿನಗಳಲ್ಲಿ ಸರ್ಕಾರದ ರಾಜಕೀಯ ನಡೆ ಮತ್ತು ವಿರೋಧ ಪಕ್ಷಗಳ ರಾಜಕೀಯ ಧೋರಣೆಯ ಮೇಲೆ ಪ್ರಭಾವ ಬೀರುವಂತಾಗಿದೆ.

ಮೋದಿ ಸರ್ಕಾರದ ಈ ಹಿಂತೆಗೆತದ ನಿರ್ಧಾರದ ಮೂಲವನ್ನು ಶೋಧಿಸುವುದು ಮುಖ್ಯ. ಇಲ್ಲಿ ಎರಡು ವ್ಯಾಖ್ಯಾನಗಳು ಮುನ್ನೆಲೆಗೆ ಬರುತ್ತವೆ. ಮೊದಲನೆಯದಾಗಿ, ಸಿಖ್ ಸಮುದಾಯದಲ್ಲಿ ಹೆಚ್ಚಾಗುತ್ತಲೇ ಇದ್ದ ಅಸಮಾಧಾನ ಮತ್ತು ಪ್ರತ್ಯೇಕತಾವಾದಿಗಳು ಮೇಲುಗೈ ಸಾಧಿಸುವ ಸಂಭವಗಳ ಹಿನ್ನೆಲೆಯಲ್ಲಿ ಸರ್ಕಾರದ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ ಈ ಅಸಮಾಧಾನ ಕಳೆದ ಒಂದು ವರ್ಷದಿಂದಲೂ ಇರುವುದರಿಂದ, ನಿರ್ಧಾರವನ್ನು ಈಗ ಕೈಗೊಂಡ ಔಚಿತ್ಯವನ್ನು ಪ್ರಶ್ನಿಸಲೇಬೇಕಾಗುತ್ತದೆ. ಪ್ರತ್ಯೇಕತಾವಾದಿಗಳ ಮೂಲಕ ಸಿಖ್ ಸಮುದಾಯದಲ್ಲಿ ತೀವ್ರಗಾಮಿ ಧೋರಣೆ ಹೆಚ್ಚಾಗುತ್ತಿರುವುದರ ಬಗ್ಗೆ ಗುಪ್ತಚರ ಇಲಾಖೆ ಸೂಚನೆಯನ್ನು ನೀಡುತ್ತಲೇ ಬಂದಿದೆ. ಎರಡನೆಯದಾಗಿ, ಮೇಲ್ನೋಟಕ್ಕೇ ಸ್ಪಷ್ಟವಾಗಿ ಕಾಣುವಂತೆ ಉತ್ತರಪ್ರದೇಶದ ಚುನಾವಣೆಗಳೂ ಈ ನಿರ್ಧಾರಕ್ಕೆ ಕಾರಣವಾಗಿರಬಹುದು. ಕೃಷಿ ಕಾಯ್ದೆಗಳ ವಿರುದ್ಧ ಜನರ ಆಕ್ರೋಶದೊಂದಿಗೇ, ಮುಷ್ಕರನಿರತ ರೈತರ ಬಗ್ಗೆ ಸರ್ಕಾರದ ಧೋರಣೆಯ ಬಗ್ಗೆ ಪಶ್ಚಿಮ ಉತ್ತರಪ್ರದೇಶದಿಂದ ಟೆರಾಯ್ ಪ್ರಾಂತ್ಯದವರೆಗಿನ ಜನರಲ್ಲಿ ಆಕ್ರೋಶ ಹೆಚ್ಚಾಗುತ್ತಲೇ ಇದ್ದುದನ್ನು ಗಮನಿಸಬೇಕಿದೆ. ಲಖಿಂಪುರ ಘಟನೆಯ ನಂತರ ಈ ಆಕ್ರೋಶ ಹೆಚ್ಚಾಗಿರುವುದನ್ನೂ ಗುಪ್ತಚರ ಇಲಾಖೆ ವರದಿ ಮಾಡಿದೆ.

ಬಿಜೆಪಿ ಬಹಳ ಎಚ್ಚರಿಕೆಯಿಂದ ಬೆಳೆಸಿಕೊಂಡೇ ಬಂದ ಮತೀಯ ಅಸ್ಮಿತೆಯ ಮತ್ತು ಜಾತಿ ಅಸ್ಮಿತೆಯ ರಾಜಕಾರಣವು ಕ್ರಮೇಣ, ಹೊಸದಾಗಿ ರೂಪುಗೊಳ್ಳುತ್ತಿದ್ದ ವರ್ಗ ಆಧಾರಿತ ರೈತ ಐಕಮತ್ಯದ ಸನ್ನಿವೇಶಕ್ಕೆ ಮುಖಾಮುಖಿಯಾಗುತ್ತಿತ್ತು. ಪಂಜಾಬ್‌ನಲ್ಲಿ ಬಿಜೆಪಿ ಧೂಳಿಪಟವಾಗುವ ಸನ್ನಿವೇಶವನ್ನು ಎದುರಿಸುತ್ತಿತ್ತು. ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಸತತವಾಗಿ ದುರ್ಬಲವಾಗುತ್ತಿತ್ತು. ಖಟ್ಟರ್ ಮತ್ತು ಅವರ ಸರ್ಕಾರದ ಸಹೋದ್ಯೋಗಿಗಳು ಬಳಸಿದ ಬೆದರಿಕೆಯ ತಂತ್ರಗಳು ಮತ್ತು ಹೇಳಿಕೆಗಳು ರಾಜ್ಯಾಡಳಿತದ ನಿರ್ವಹಣೆಗೆ ಅಡ್ಡಿಯುಂಟುಮಾಡಿತ್ತು. ಹಾಗಾಗಿ ಈ ಕಾಯ್ದೆಯನ್ನು ಮುಂದುವರೆಸುವುದರಿಂದ ಉಂಟಾಗುವ ರಾಜಕೀಯ ನಷ್ಟ ಇನ್ನೂ ತೀವ್ರವಾಗುವ ಸಂಭವವಿತ್ತು. ಮೇಲಾಗಿ, ಈ ರೈತ ಮುಷ್ಕರವು ಶ್ರೀಮಂತ ರೈತರ ಹೋರಾಟವಾಗಿದ್ದು, ಇದು ಮಧ್ಯವರ್ತಿಗಳನ್ನು ರಕ್ಷಿಸಲು ನೆರವಾಗುತ್ತದೆ, ಸಣ್ಣ ರೈತರಿಗೆ ನೆರವಾಗುವ ಈ ಕಾಯ್ದೆಗಳನ್ನು ತಡೆಗಟ್ಟಲು, ಶ್ರೀಮಂತ ರೈತರು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಜನಮನ್ನಣೆ ಗಳಿಸಲಿಲ್ಲ.

ಈ ಸನ್ನಿವೇಶದಲ್ಲಿ ತನ್ನ ರಾಜಕೀಯ ಪ್ರತಿಷ್ಠೆಯನ್ನು ಬದಿಗೊತ್ತಿ, ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದು ಅನಿವಾರ್ಯವಾಗಿತ್ತು.  ಪಶ್ಚಿಮ ಉತ್ತರಪ್ರದೇಶದಲ್ಲಿ ಜಾಟ್ ಸಮುದಾಯದಲ್ಲಿನ ಆಕ್ರೋಶವನ್ನು ತಣ್ಣಗಾಗಿಸಬಹುದು. ಜಾಟ್ ನಾಯಕ ಮತ್ತು ರೈತ ಮುಷ್ಕರದ ನೇತಾರ ರಾಕೇಶ್ ಟಿಕಾಯತ್ ಜಯಂತ್ ಚೌಧರಿ-ಅಖಿಲೇಶ್ ಯಾದವ್ ಮೈತ್ರಿಕೂಟಕ್ಕೆ ಪ್ರತಿಸ್ಪರ್ಧಿಯಾಗಿಯೂ ನೆರವಾಗಬಹುದು. ಪಂಜಾಬ್‌ನಲ್ಲಿ ಬಿಜೆಪಿ-ಅಮರಿಂದರ್‌ಸಿಂಗ್-ಅಕಾಲಿದಳದ ಮೈತ್ರಿ, ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿರುವ ಮೂರೂ ಪಕ್ಷಗಳಿಗೆ ನೆರವಾಗಬಹುದು. ಹರಿಯಾಣದಲ್ಲಿ ತಮ್ಮ ಜಾಟ್ ಸಮುದಾಯದಿಂದ ಸರ್ಕಾರದಿಂದ ಹೊರಬರುವಂತೆ ಒತ್ತಡ ಎದುರಿಸುತ್ತಿದ್ದ ದುಷ್ಯಂತ್ ಚೌತಾಲಾ ಕೊಂಚ ನಿರಾಳವಾಗಬಹುದು. ಖಟ್ಟರ್ ಸರ್ಕಾರ ತನ್ನ ಸ್ಥಿರತೆಯನ್ನು ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬಹುದು.

ಇವೆಲ್ಲವೂ ಸಾಧ್ಯವಾಗಬೇಕೆಂದರೆ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿಯೇ ಹೊತ್ತುಕೊಳ್ಳಬೇಕಾಯಿತು.  ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವುದರ ಹಿಂದೆ ಇದ್ದ ತಮ್ಮ ಸದುದ್ದೇಶದ ಹೊರತಾಗಿಯೂ ರೈತರಲ್ಲಿನ ಒಂದು ವರ್ಗದ ಮನವೊಲಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ನಮ್ರತೆಯಿಂದ ಕ್ಷಮೆ ಕೋರಿ ಮೂರೂ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮಾಡುತ್ತಿದ್ದೇನೆ ಎಂದು ಘೋಷಿಸುವ ಮೂಲಕ ಪ್ರಧಾನಿ ಮೋದಿ ಎಂದಿನಂತೆ ತಮ್ಮ ರಾಜಕೀಯ ಚಾಣಾಕ್ಷ ನಡೆಯನ್ನು ಅನುಸರಿಸಿದ್ದಾರೆ. ಪ್ರಧಾನಿ ಮೋದಿಯ ಈ ಒಂದು ನಡೆಯೇ, ಬಿಜೆಪಿಗೆ ಕಳೆದುಕೊಳ್ಳಬಹುದಾಗಿದ್ದ ರಾಜಕೀಯ ನೆಲೆಗಳನ್ನು ಪುನಃ ಪಡೆಯಲು ನೆರವಾಗುತ್ತದೆ ಎನ್ನುವುದು ಒಂದು ಲೆಕ್ಕಾಚಾರ. ಆದರೆ ಇದರ ಪರಿಣಾಮವನ್ನು ತಕ್ಷಣದ ಚುನಾವಣಾ ರಾಜಕಾರಣದಿಂದಲೂ ಆಚೆಗೆ ನೋಡಬೇಕಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ರಾಜಕಾರಣಕ್ಕೆ ಎರಡು ಮಾರ್ಗಗಳು ಇರುತ್ತವೆ. ಮೊದಲನೆಯದು ಸಾಂಸ್ಥಿಕವಾದದ್ದು ಎರಡನೆಯದು ಸಂಸ್ಥೆಗಳನ್ನು ಹೊರತುಪಡಿಸಿದ್ದು.  ಸಂಸತ್ತು, ನ್ಯಾಯಾಂಗ ಮತ್ತು ಮಾಧ್ಯಮ ಇವು ಸಾಂಸ್ಥಿಕ ಮಾರ್ಗಗಳಿಗೆ ಅವಕಾಶಗಳನ್ನು ಒದಗಿಸುತ್ತವೆ. ಈ ಮಾಧ್ಯಮಗಳ ಮೂಲಕ ತಮ್ಮ ಆಡಳಿತ ನೀತಿಯ ನಿರ್ವಹಣೆಯ ಬಗ್ಗೆ ವ್ಯಕ್ತವಾದಂತಹ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂಬ ನಿರೀಕ್ಷೆ ಸಹಜವಾಗಿಯೇ ಇರುತ್ತದೆ.  ವಿರೋಧ ಪಕ್ಷಗಳು ಉದ್ದೇಶಿತ ಗುರಿ ಸಾಧಿಸದೆ ಇದ್ದರೂ, ತಮ್ಮ ಪ್ರತಿರೋಧದ ದನಿ ಸರ್ಕಾರಕ್ಕೆ ತಲುಪಿದೆ ಮತ್ತು ತಾವು ವ್ಯಕ್ತಪಡಿಸಿದ ಕಾಳಜಿಗಳಿಗೆ ಮಾನ್ಯತೆ ದೊರೆತಿದೆ ಎಂಬ ಭಾವನೆ ಮೂಡುತ್ತದೆ. ಸಾಂಸ್ಥಿಕ ನೆಲೆಗಳಿಂದ ಹೊರತಾದ ಮತ್ತೊಂದು ಮಾರ್ಗವನ್ನು, ವಿರೋಧ ಪಕ್ಷಗಳು ಇತರ ಎಲ್ಲ ಪ್ರಜಾಸತ್ತಾತ್ಮಕ ಮಾರ್ಗಗಳೂ ಮುಚ್ಚಲ್ಪಟ್ಟಿವೆ ಎಂದು ಸ್ಪಷ್ಟವಾದಾಗ ಅನುಸರಿಸಲಾಗುತ್ತದೆ. ಇದು ಮೂಲತಃ ಬೀದಿ ಹೋರಾಟಗಳು, ಪ್ರತಿಭಟನೆಗಳು, ಸಮೂಹ ಚಳುವಳಿಗಳು (ಇವೆಲ್ಲಾ ಸಾಂವಿಧಾನಿಕವಾದವು), ಹಿಂಸಾತ್ಮಕ ಮಾರ್ಗ (ಅಸಾಂವಿಧಾನಿಕವಾದವು)ಗಳ ಮೂಲಕ ವ್ಯಕ್ತವಾಗುತ್ತದೆ. ರೈತ ಮುಷ್ಕರವು ಬಹುತೇಕ ಶಾಂತಿಯುತವೇ ಆಗಿದ್ದರೂ ಬೀದಿ ಹೋರಾಟಗಳ ಸ್ವರೂಪ ಪಡೆದುಕೊಂಡಿತ್ತು.  ಇದು ಯಶಸ್ವಿಯಾಗಿದ್ದೂ ಹೌದು. ಇದು ಮುಂದಿನ ದಿನಗಳಲ್ಲಿ ಒಂದು ಪೂರ್ವ ನಿದರ್ಶನವಾಗಿ ರೂಪುಗೊಳ್ಳುತ್ತದೆ. ಇತರ ವರ್ಗಗಳೂ ಸಹ, ಸ್ಥಾಪಿತ ಸಾಂಸ್ಥಿಕ ಚೌಕಟ್ಟನ್ನು ಮೀರಿ,  ಇದೇ ಮಾರ್ಗವನ್ನು ಅನುಸರಿಸಲು ಪ್ರೇರಣೆಯಾಗುತ್ತದೆ.

ಬಿಜೆಪಿಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ವಿರೋಧ ಪಕ್ಷದ ರಾಜಕಾರಣವೂ ಸಹ ಸೈದ್ಧಾಂತಿಕ ಮಾರ್ಗವನ್ನೇ ಅನುಸರಿಸಿದೆ. ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಅದರ ಮತೀಯ ರಾಜಕಾರಣದ ನೆಲೆಯಲ್ಲಿ ವಿರೋಧಿಸುವ ಪ್ರಯತ್ನಗಳು ಅಷ್ಟಾಗಿ ಫಲಕಾರಿಯಾಗಿಲ್ಲ. ಏಕೆಂದರೆ ಈ ಹಿಂದಿನ ಸೆಕ್ಯುಲರ್ ರಾಜಕಾರಣ ತನ್ನ ಮೌಲ್ಯ ಕಳೆದುಕೊಂಡಿದೆ. ಆದರೂ ನಾಗರಿಕ ಸಮಾಜದ ನಡುವೆ ಮತ್ತು ಸಂಸದೀಯ ರಾಜಕೀಯ ಪಕ್ಷಗಳ ಒಳಗೆ ಒಂದು ಎಡಪಂಥೀಯ ತುಡಿತ ಜೀವಂತವಾಗಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲೂ ಇದನ್ನು ಗುರುತಿಸಲು ಸಾಧ್ಯ. ಈ ನಿಟ್ಟಿನಲ್ಲೇ ಕಾಂಗ್ರೆಸ್ ನಾಯಕತ್ವ ಆರ್ಥಿಕ ಸುಧಾರಣೆಗಳ ವಿರುದ್ಧ ದನಿಎತ್ತುವ ಸಾಧ್ಯತೆಗಳನ್ನು ಕಾಣಬಹುದು.  ಖಾಸಗೀಕರಣ ಪ್ರಕ್ರಿಯೆ, ಸಾರ್ವಜನಿಕ ಆಸ್ತಿಗಳ ನಗದೀಕರಣ ಪ್ರಕ್ರಿಯೆ ಮತ್ತಿತರ ನವ ಉದಾರವಾದಿ ಆರ್ಥಿಕ ನೀತಿಗಳು ಪ್ರಬಲ ವಿರೋಧವನ್ನು ಎದುರಿಸಬೇಕಾಗುತ್ತದೆ. ಇದು ದೇಶದ ಆರ್ಥಿಕತೆಯ ದೃಷ್ಟಿಯಿಂದಾಗಲೀ, ದೀರ್ಘ ಕಾಲದಲ್ಲಿ ದೇಶದ ಹಿತದೃಷ್ಟಿಯಿಂದಾಗಲೀ  ಹಿತಕರ ಎನಿಸುವುದಿಲ್ಲ. ಈ ಚರ್ಚೆ ಪ್ರಸ್ತುತ ಲೇಖನದ ವ್ಯಾಪ್ತಿಯಿಂದ ಹೊರತಾದದ್ದು.

ಮತ್ತೊಂದೆಡೆ, ಆಡಳಿತಾರೂಢ ಸರ್ಕಾರದ ಒಳಗೂ ಆರ್ಥಿಕ ಬಲಪಂಥೀಯರು ಮತ್ತು ಭಾಗಶಃ ಬಲಪಂಥೀಯ ಬಣಗಳ ನಡುವೆ ತೀವ್ರ ಘರ್ಷಣೆ ಆರಂಭವಾಗಿದೆ. ಆರ್ಥಿಕ ಬಲಪಂಥೀಯ ಬಣವು ಕೃಷಿ ಕಾಯ್ದೆಗಳ ರದ್ದತಿಯನ್ನು ತೀಕ್ಷ್ಣವಾಗಿ ವಿರೋಧಿಸುತ್ತಿದೆ. ಭಾಗಶಃ ಬಲಪಂಥೀಯ ಧೋರಣೆಯ ಗುಂಪು ಸರ್ಕಾರದ ಎಲ್ಲ ನೀತಿಗಳನ್ನೂ ಸಮರ್ಥಿಸುತ್ತಿದೆ.  ವ್ಯಾಪಕ ಆಡಳಿತ ನೀತಿಗಳು ಮತ್ತು ಆರ್ಥಿಕ ನೀತಿಗಳ ವಿಚಾರದಲ್ಲಿ ಒಮ್ಮತ ಮೂಡಿಸುವುದು ಸಾಧ್ಯವಾಗದೆ ಹೋದರೆ, ಬಿಜೆಪಿ ತನ್ನ ಸಿದ್ಧಸೂತ್ರವನ್ನೇ ಅನುಸರಿಸುತ್ತದೆ. ತನ್ನ ಭಿನ್ನಮತದ ಗುಂಪುಗಳ ನಡುವೆ ಸಮನ್ವಯ ಸಾಧಿಸಲು ಬಿಜೆಪಿ ಸದಾ ಅನುಸರಿಸುವ ಉಗ್ರ ಹಿಂದುತ್ವದ ನೀತಿಗಳಿಗೇ ಶರಣಾಗಲಿದೆ. ಆದ್ದರಿಂದ ತಕ್ಷಣದ ಚುನಾವಣೆಯ ಪರಿಣಾಮಗಳು ಏನೇ ಇದ್ದರೂ, ಕೃಷಿ ಕಾಯ್ದೆಗಳ ಹಿಂಪಡೆತದ ನಿರ್ಧಾರ 2024ರ ಚುನಾವಣೆಗಳ ಹಾದಿಯಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿ ಪರಿಣಮಿಸುತ್ತದೆ.

Donate Janashakthi Media

Leave a Reply

Your email address will not be published. Required fields are marked *