ಕಾಂಗ್ರೆಸ್‌ ಬಿಡಲು ಬಿಜೆಪಿಯವರು ದುಡ್ಡಿನ ಆಫರ್ ಕೊಟ್ಟಿದ್ದು ನಿಜ: ಶ್ರೀಮಂತ ಪಾಟೀಲ

ಬೆಳಗಾವಿ: ‘ಕಾಂಗ್ರೆಸ್‌ ಪಕ್ಷವನ್ನು ಬಿಟ್ಟು ಬರಲು ಬಿಜೆಪಿಯವರು ದುಡ್ಡಿನ ಆಫರ್‌ ಕೊಟ್ಟಿದ್ದು ನಿಜ. ಎಷ್ಟು ದುಡ್ಡು ಬೇಕೆಂದು ಕೇಳಿದ್ದರು. ಆದರೆ ನಾನು ದುಡ್ಡು ಬೇಕಾಗಿಲ್ಲ, ಸರ್ಕಾರ ರಚನೆಯಾದ ನಂತರ ಒಳ್ಳೆಯ ಸ್ಥಾನಮಾನ ಕೊಡಬೇಕು ಎಂದಿದ್ದೆ’ ಎಂದು ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಸ್ಫೋಟಕ ಹೇಳಿಕೆ ನೀಡಿದರು.

ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪೂರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಬಿಜೆಪಿ ಪಕ್ಷದವರಿಂದ ದುಡ್ಡು ಪಡೆಯದೆ ಸೇರಿಕೊಂಡಿರುವೆ. ಆದರೂ ಯಾವ ಕಾರಣದಿಂದ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ನೀಡಲಿಲ್ಲವೋ ಗೊತ್ತಿಲ್ಲ. ಮುಂದಿನ ತಿಂಗಳು ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ನನಗೆ ಸ್ಥಾನ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

‘ಕೃಷಿ ಖಾತೆ ಕೊಟ್ಟರೆ ಚೆನ್ನಾಗಿ ನಿರ್ವಹಿಸುತ್ತೇನೆ. ಜನರಿಗೆ ಅನುಕೂಲ ಮಾಡಿಕೊಡುತ್ತೇನೆ. ಶೀಘ್ರದಲ್ಲೇ ಮಂತ್ರಿ ಸ್ಥಾನ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.’ ಎಂದರು.

Donate Janashakthi Media

Leave a Reply

Your email address will not be published. Required fields are marked *