ಕೇಂದ್ರ ಸಚಿವರಾಗಿ ನೂತನವಾಗಿ ಆಯ್ಕೆಯಾದ ರಾಜ್ಯದ ನಾಲ್ವರು ಸಂಸದರ ಬಗ್ಗೆ

  • ಕೇಂದ್ರ ಸಚಿವರಾದ ಶೋಭಾ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜೀವ್‌ ಚಂದ್ರಶೇಖರ್‌ ಕಿರು ಪರಿಚಯ

ಬೆಂಗಳೂರು: ಕೇಂದ್ರ ಸಂಪುಟಕ್ಕೆ ದೊಡ್ಡ ಮಟ್ಟದಲ್ಲಿ ಸಚಿವರ ಪುನರ‍್ರಚನೆ ನಡೆದಿದ್ದು 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆ ನಂತರದ 2ನೇ ಅವಧಿಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟಕ್ಕೆ ರಾಜ್ಯದಿಂದ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದ ಎ. ನಾರಾಯಣಸ್ವಾಮಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಬೀದರ್‌ ಲೋಕಸಭಾ ಕ್ಷೇತ್ರದ ಸಂಸದ ಭಗವಂತ ಖೂಬಾ ಹಾಗೂ ರಾಜ್ಯಸಭಾ ಸದಸ್ಯರಾದ ರಾಜೀವ್‌ ಚಂದ್ರಶೇಖರ್‌ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚಿತ್ರದುರ್ಗ ಸಂಸದ ಆನೇಕಲ್‌ ನಾರಾಯಣಸ್ವಾಮಿ

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಅವಧಿಯಲ್ಲೇ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಎ.ನಾರಾಯಣಸ್ವಾಮಿ ಕೇಂದ್ರ ಸಂಪುಟದ ರಾಜ್ಯ ಸಚಿವರಾಗಿದ್ದಾರೆ.

ಆನೇಕಲ್ ಮೂಲದ ದಲಿತ ಎಡಗೈ(ಮಾದಿಗ) ಸಮುದಾಯದವರಾದ ಎ.ನಾರಾಯಣಸ್ವಾಮಿ ಮೇ 16, 1957ರಂದು ಅಬ್ಬಯ್ಯ ಮತ್ತು ತಿಮ್ಮಕ್ಕ ದಂಪತಿಯ ಪುತ್ರನಾಗಿ ಜನಿಸಿದರು. 64 ವರ್ಷದವರಾಗಿರುವ ನಾರಾಯಣಸ್ವಾಮಿ, ವಿಜಯಲಕ್ಷ್ಮೀ ಎಂಬವರನ್ನು ವಿವಾಹವಾಗಿದ್ದಾರೆ. ಶೀತಲ್, ಕೌಶಲ್ಯ, ಸಿರಿಷಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಬಿ.ಎ. ಪದವೀಧರರಾಗಿರುವ ಇವರು ಕೃಷಿ, ವ್ಯಾಪಾರ, ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನು ಓದಿ: ಕೇಂದ್ರ ಸಂಪುಟ ಪುನರ್‌ರಚನೆ: ರಾಜ್ಯದ ನಾಲ್ವರು ಒಳಗೊಂಡು 43 ಮಂದಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನಿವಾಸಿಯಾದ ನಾರಾಯಣಸ್ವಾಮಿ 2019ರಲ್ಲಿ ಚಿತ್ರದುರ್ಗ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧಿಸಿದರು. 85 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ವಿದ್ಯಾರ್ಥಿ ದಿಸೆಯಿಂದಲೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಇವರು 1996ರಲ್ಲಿ ಆನೇಕಲ್ ಪುರಸಭೆಗೆ ನಡೆದ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾದರು. 1997ರಲ್ಲಿ ಆನೇಕಲ್ ಕ್ಷೇತ್ರದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 1999, 2004 ಮತ್ತು 2008ರಲ್ಲಿ ಸತತ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿ ಚುನಾಯಿತರಾದರು. 2010ರಲ್ಲಿ ಸಮಾಜ ಕಲ್ಯಾಣ ಹಾಗೂ ಬಂದೀಖಾನೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಬಳಿಕ ನಡೆದ 2013, 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಎ.ನಾರಾಯಣಸ್ವಾಮಿ, 2019ರಲ್ಲಿ ಲೋಕಸಭಾ ಚುನಾವಣೆ ಚಿತ್ರದುರ್ಗದ ಕಾಂಗ್ರೆಸ್‌ ಸಂಸದ ಡಾ. ಸಿ.ಚಂದ್ರಪ್ಪ ಅವರನ್ನು ಸೋಲಿಸಿ ಲೋಕಸಭಾ ಸದಸ್ಯರಾದರು.

ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ರಾಜ್ಯದಲ್ಲಿ ದಲಿತ-ಲಿಂಗಾಯತ ಸಮ್ಮಿಶ್ರಣದಲ್ಲಿ ಕೇಂದ್ರ ಸಂಪುಟ ರಚಿಸಲು ಬಿಜೆಪಿ ಹೈಕಮಾಂಡ್ ಯೋಜನೆ ರೂಪಿಸಿದಂತಿದ್ದು, ರಾಜ್ಯದ ದಲಿತ ಎಡಗೈ(ಮಾದಿಗ) ಸಮುದಾಯದ ಮತಗಳನ್ನು ಗಳಿಸಬೇಕೆಂಬ ಉದ್ದೇಶದಿಂದ ಇವರನ್ನು ಸಚಿವರನ್ನಾಗಿ ಮಾಡಿದ್ದಾರೆ ಎನ್ನಲಾಗಿದೆ.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ

ಅಕ್ಟೋಬರ್, 23, 1966ರಲ್ಲಿ ಕರಾವಳಿಯ ಪುತ್ತೂರಿನಲ್ಲಿ ಮೋನಪ್ಪಗೌಡ ಮತ್ತು ಪೂವಕ್ಕ ದಂಪತಿ ಮಗಳಾಗಿ ಜನಿಸಿದ ಶೋಭಾ ಕರಂದ್ಲಾಜೆ ಚಿಕ್ಕ ವಯಸ್ಸಿನಿಂದಲೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲಿ ಸಕ್ರಿಯರಾಗಿದ್ದಾರೆ.  ಚಿಕ್ಕಂದಿನಿಂದಲೂ ರಾಜಕಾರಣದ ಬಗ್ಗೆ ಒಲವು ಹೊಂದಿದ್ದ ಅವರು, 2004ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾದರು. 2008 ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಗೆಲುವು ಸಾಧಿಸಿದರು. ಆಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿಯೂ‌ ಕೆಲಸ ಮಾಡಿದ್ದಾರೆ.

2014ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ 1.81 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. 2019ರಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಸೋಲಿಸಿ ಎರಡನೇ ಬಾರೀ ಸಂಸದರಾಗಿ ಆಯ್ಕೆಯಾದರು. ಈಗ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವೆಯಾಗಿ ಸೇರ್ಪಡೆಗೊಂಡಿದ್ದಾರೆ.

ಬೀದರ್‌ ಸಂಸದ ಭಗವಂತ ಖೂಬಾ

1968ರ ಜೂನ್ 1ರಂದು ಬೀದರ್ ನ ಔರಾದ್ ತಾಲೂಕಿನಲ್ಲಿ ಗುರುಬಸಪ್ಪಾ ಖೂಬಾ ಹಾಗೂ ಮಹಾದೇವಿ ದಂಪತಿ ಪುತ್ರರಾಗಿ ಜನಿಸಿದ ಭಗವಂತ ಖೂಬಾ, ಸರಕಾರಿ ಪ್ರಾಥಮಿಕ ಶಾಲೆ ಔರಾದ್‍ನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರ್ ನ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಬೀದರ್ ನ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ ಖೂಬಾ ನಂತರ ಪದವಿ ಶಿಕ್ಷಣಕ್ಕೆ ತುಮಕೂರಿಗೆ ಬಂದರು.

ಇದನ್ನು ಓದಿ: ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ. ಸದಾನಂದಗೌಡ ರಾಜೀನಾಮೆ

1991ರಲ್ಲಿ ತುಮಕೂರಿನ ಸಿದ್ದಗಂಗಾ ಮಠದಿಂದ ನಡೆಸಲ್ಪಡುತ್ತಿದ್ದ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಅವರು ಮುಂದೆ ಗುತ್ತೆಗೆದಾರನಾಗಿ ವೃತ್ತಿ ಬದುಕು ಆರಂಭಿಸಿದರು. ದೇಶದ ಪ್ರಮುಖ ನಿರ್ಮಾಣ ಕ್ಷೇತ್ರದ ಎಲ್ ಆಂಡ್ ಟಿ, ಎಚ್‍ಸಿಸಿ ಮೊದಲಾದ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ರಸ್ತೆ ಕಾಮಗಾರಿಗಳು, ರೈಲ್ವೆ ಯೋಜನೆಗಳನ್ನು ನಿರ್ಮಿಸಿದ ಹೆಗ್ಗಳಿಕೆ ಇವರದ್ದು.

ಆ ಬಳಿಕ ರಾಜಕೀಯದತ್ತಲೂ ಚಿತ್ತ ಹರಿಸಿ ಜನಸೇವೆಗೆ ಇಳಿದ ಖೂಬಾ ಅವರಿಗೆ 2014ರಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಹಾಗೆ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಮಾಜಿ ಸಿಎಂ ಧರಂ ಸಿಂಗ್‍ರನ್ನೇ ಸೋಲಿಸಿದರು. 2019ರಲ್ಲಿ ಎರಡನೆ ಬಾರಿಗೆ ಲೋಕಸಭೆ ಪ್ರವೇಶಿಸಿದ ಖೂಬಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೂ ಕಾರಣರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದ ಅತ್ಯಂತ ಪ್ರಭಾವಿ ನಾಯಕ ಧರಂಸಿಂಗ್ ಅವರನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದ ಮತ್ತು 2019ರ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬೀದರ್ ಲೋಕಸಭಾ ಕ್ಷೇತ್ರದ ಭಗವಂತ ಖೂಬಾ ಅವರಿಗೆ ಕೇಂದ್ರ ಸಂಪುಟ ಸ್ಥಾನ ಸಿಕ್ಕಿದೆ.

ಉದ್ಯಮಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್

ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರು ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ಉದ್ಯಮಿ, ಮಾಧ್ಯಮ ಸಂಸ್ಥೆಗಳ ಮಾಲೀಕರೂ ಆಗಿರುವ ಅವರು ಪ್ರಸಕ್ತ ರಾಜ್ಯಸಭಾ ಸದಸ್ಯರು.

ಇದನ್ನು ಓದಿ: ಸದನಾಂದಗೌಡರ ರಾಜೀನಾಮೆ ಹಿಂದೆ ‘ಸಿಡಿ’?!

ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭಾ ಸದಸ್ಯರಾಗಿದ್ದು, ರಾಜೀವ್ ಚಂದ್ರಶೇಖರ್ 31 ಮೇ 1964ರಲ್ಲಿ ಜನಿಸಿದ್ದು, ಇವರು ರಾಜಕಾರಣಿ ಮತ್ತು ಉದ್ಯಮಿಯಾಗಿದ್ದಾರೆ.  2006ರಲ್ಲಿ ರಾಜಕೀಯ ಪ್ರವೇಶಿಸಿದ ಅವರು ಬಿಜೆಪಿಯಿಂದ ಮೂರನೇ ಬಾರಿಗೆ ರಾಜ್ಯಸಭೆ ಸದಸ್ಯರಾದರು. ಹಿಂದಿನ ಎರಡು ಅವಧಿಗೆ ಅವರು ಪಕ್ಷೇತರ ಸದಸ್ಯರಾಗಿದ್ದರು. ರಾಜೀವ್ ಚಂದ್ರಶೇಖರ್ ಮಾಧ್ಯಮ ಸಂಸ್ಥೆಗಳ ಮಾಲೀಕರು ಆಗಿದ್ದಾರೆ. ಇವರು ಹಲವು ರಾಷ್ಟ್ರೀಯ ಮಾಧ್ಯಮಗಳ ಮುಖ್ಯಸ್ಥರೊಂದಿಗೆ ಹತ್ತಿರದ ಒಡನಾಟ ಹೊಂದಿದ್ದಾರೆ.

2006ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾದರು. ಇವರು ಎಫ್‍ಐಸಿಸಿಐ-ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಕಿರಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ರಾಜ್ಯಸಭೆಗೆ ಎರಡನೆ ಬಾರಿಗೆ ಮರು ಆಯ್ಕೆಯಾದರು.

ಯುಪಿಎ ಅಧಿಕಾರ ಅವಧಿಯಲ್ಲಿ ಬೆಳಕಿಗೆ ಬಂದಿದ್ದ 2ಜಿ ಹಗರಣದ ವಿರುದ್ಧ ರಾಜೀವ್ ಚಂದ್ರಶೇಖರ್ ಪ್ರಬಲವಾಗಿ ಹೋರಾಟ ಮಾಡಿದ್ದರು. ಸಂಸತ್ ಅಧಿವೇಶನ ಅವಧಿಯಲ್ಲಿ ರಾಜೀವ್ ಸಕ್ರಿಯರಾಗಿ ಪಕ್ಷಕ್ಕೆ, ಸರಕಾರಕ್ಕೆ ನೆರವಾಗುತ್ತಿದ್ದು, ಕೇರಳ ಮತ್ತು ಕರ್ನಾಟಕದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಹಲವು ವಿಚಾರಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ವಾಯುಪಡೆಯ ಅಧಿಕಾರಿಯ ಪುತ್ರನಾಗಿರುವ, ಅಹಮದಾಬಾದ್‍ನಲ್ಲಿ ಮಲಯಾಳಿ ಪೋಷಕರಿಗೆ ಜನಿಸಿದ ರಾಜೀವ್, ಸುಮಾರು ಮೂರು ದಶಕಗಳನ್ನು ಬೆಂಗಳೂರು ನಗರದಲ್ಲಿ ಕಳೆದಿದ್ದಾರೆ. 1981ರಲ್ಲಿ ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ, 1986ರಲ್ಲಿ ಚಿಕಾಗೋದ ಇಲಿನಾಯ್ಸ್ ಇನ್ಸ್ಟಿಟ್ಯೂಟ್‍ನಿಂದ 1986ರಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉದ್ಯಮಿಯಾಗಿ ರಾಜೀವ್ ಚಂದ್ರಶೇಖರ್ ಗಮನ ಸೆಳೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *