ಡಿ.8ಕ್ಕೆ ಭಾರತ್ ಬಂದ್‌ಗೆ ರೈತರ ನಿರ್ಧಾರ

  • ಟೋಲ್ಗಳಲ್ಲಿ ಹಣ ಸಂಗ್ರಹಣೆ ತಡೆಗೆ ಕರೆ!

 

ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳ ಜಾರಿ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು, ಇದೇ ಮಂಗಳವಾರ(ಡಿ.08) ಒಂದು ದಿನದ ಭಾರತ್ ಬಂದ್‌ಗೆ ಕರೆ ನೀಡಿವೆ.

ರಾಷ್ಟ್ರ ರಾಜಧಾನಿ ದೆಹಲಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಾಷ್ಟ್ರೀಯ ಹೆದ್ಧಾರಿಗಳನ್ನು ಬಂದ್ ಮಾಡುವುದಾಗಿ ಘೋಷಿಸಿರುವ ರೈತ ಸಂಘಟನೆಗಳು, ದೇಶದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಂದ ಹಣ ವಸೂಲಿ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.

ಎಲ್ಲ ರಾಜ್ಯಗಳಲ್ಲೂ ರೈತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ಕೊಡಬೇಕು ಎಂದು ಆಗ್ರಹಿಸಿರುವ ರೈತ ಸಂಘಟನೆಗಳು, ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚುವ ಮೂಲಕ ಕೇಂದ್ರ ಸರ್ಕಾರಕ್ಕೆ ಪೆಟ್ಟು ನೀಡಲು ಸಿದ್ಧರಾಗುವಂತೆ ಕೋರಿದೆ.

ಈ ಮಧ್ಯೆ ನಾಳೆ(ಡಿ.05-ಶನಿವಾರ) ಕರೆಯಲಾಗಿರುವ ಸಭೆಯಲ್ಲಿ ಭಾಗವಹಿಸುವುದಾಗಿಯೂ ಸ್ಪಷ್ಟಪಡಿಸಿರುವ ರೈತ ನಾಯಕರು, ಡಿ.08ರ ಭಾರತ್ ಬಂದ್‌ಗೆ ಕರೆ ನೀಡುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಈ ಕುರಿತು ಮಾತನಾಡಿರುವ ರೈತ ನಾಯಕ ರಾಕೇಶ್ ತಿಕಟ್, ನಾಳಿನ ಸಭೆಯಲ್ಲಿ ನಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಆಶಾವಾದ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರುವ ಉದ್ದೇಶದಿಂದ ಡಿ.08(ಮಂಗಳವಾರ) ಭಾರತ್ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ನಿರಂತರ ಮಾತುಕತೆ ಹೊರತಾಗಿಯೂ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಯಾವುದೇ ಒಡಂಬಡಿಕೆ ಮೂಡಿದಿರುವ ಹಿನ್ನೆಲೆಯಲ್ಲಿ, ರೈತ ಸಂಘಟನೆಗಳು ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿರುವುದು ಕುತೂಹಲ ಕೆರಳಿಸಿದೆ.

Donate Janashakthi Media

Leave a Reply

Your email address will not be published. Required fields are marked *