ಕಾಂಗ್ರೆಸ್ಸಿಗರಿಂದಲೇ ಪಕ್ಷ ದುರ್ಬಲಗೊಳ್ಳುತ್ತಿದೆ: ನಾಯಕರ ವಿರುದ್ಧ ಖರ್ಗೆ ಕಿಡಿ

  • ಒಂದು ಕಡೆ ಆರ್‍ಎಸ್‍ಎಸ್‍ , ಬಿಜೆಪಿ ಬೆನ್ನು ಬಿದ್ದಿವೆ
  • ಇನ್ನೊಂದು ಪಕ್ಷದ ನಾಯಕರು ಒಳಗಿನಿಂದಲೇ ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ

 

ನವದೆಹಲಿ: ಬಿಹಾರ ಸೇರಿದಂತೆ ದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ನಾಯಕತ್ವವನ್ನು ಗುರಿಯಾಗಿಸಿಕೊಂಡು ಆರೋಪಿಸುತ್ತಿದ್ದಾರೆ ಎಂದು ತಮ್ಮದೇ ಪಕ್ಷದ ನಾಯಕರ ವಿರುದ್ಧ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ದಿನಾಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಕೆಲವರು ಪಕ್ಷವನ್ನು ಒಳಗಿನಿಂದ ದುರ್ಬಲಗೊಳಿಸುವ ಯತ್ನ ನಡೆಸಿದ್ದಾರೆ. ಹೈಕಮಾಂಡ್ ಬಲ ಪಡಿಸುವ ನಿಟ್ಟಿನಲ್ಲಿ ನಾವು ಒಗ್ಗಟ್ಟಿನಿಂದ ಹೋರಾಡುವ ಅವಶ್ಯಕತೆ ಇದೆ. ಆದರೆ ಕೆಲ ಹಿರಿಯ ನಾಯಕರು, ನಾಯಕತ್ವ ಹಾಗೂ ಪಕ್ಷದ ವಿರುದ್ಧ ಮಾತನಾಡಿರುವುದು ನನಗೆ ನೋವುಂಟು ಮಾಡಿದೆ. ಒಂದು ಕಡೆ ಬಿಜೆಪಿ ಹಾಗೂ ಆರ್‍ಎಸ್‍ಎಸ್‍  ನಮ್ಮ ಬೆನ್ನ ಹಿಂದೆ ಬಿದ್ದರೆ, ಮತ್ತೊಂದೆಡೆ ಇಂತಹ ನಾಯಕರು ಪಕ್ಷವನ್ನು ಒಳಗಿನಿಂದಲೇ ದುರ್ಬಲಗೊಳಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ನಾವೇ ಪಕ್ಷ ಹಾಗೂ ನಾಯಕತ್ವವನ್ನು ಈ ರೀತಿ ದುರ್ಬಲಗೊಳಿಸಿದರೆ ನಾವು ಪಕ್ಷ ಮುನ್ನಡೆಯಲು ಸಾಧ್ಯವಿಲ್ಲ. ನಮ್ಮ ಸಿದ್ಧಾಂತ ದುರ್ಬಲಗೊಂಡರೆ ನಮ್ಮ ನಾಶವಾಗುತ್ತದೆ. ಇದು ನಿಮ್ಮ ಗಮನದಲ್ಲಿರಬೇಕು ಎಂದು ಎಚ್ಚರಿಸಿದರು.

ಬಿಹಾರ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ನಾಯಕರೇ ನಾಯಕತ್ವ ವಿರೋಧಿಸಿದ್ದರು. ಈ ಹಿನ್ನೆಲೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಲಿನ ಸಮಯದಲ್ಲಿ ನಮ್ಮ ನಿಜ ಸ್ವರೂಪವನ್ನು ಕಾಣಬಹುದು. ಸೋತಾಗ ನಿಮ್ಮನ್ನು ಎಷ್ಟು ಬೆಂಬಲಸುತ್ತೀರಾ ಮತ್ತು ನಮ್ಮ ಆದರ್ಶಗಳನ್ನು ಬಲ ಪಡಿಸುತ್ತೀರಾ ಎಂಬುದು ಮುಖ್ಯವಾಗುತ್ತದೆ. ಪಕ್ಷ ಉತ್ತಮ ಸ್ಥಾನದಲ್ಲಿದ್ದಾಗ ಎಲ್ಲರೂ ಹಾಡಿ ಹೋಗಳುತ್ತಾರೆ. ಅದೇ ಪಕ್ಷ ದುರ್ಬಲಗೊಂಡಾಗ ಅಥವಾ ಸೋತಾಗ ನಾಯಕತ್ವದ ವಿರುದ್ಧ ದೂಷಿಸುತ್ತಾರೆ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಸೋಲಿಸಲು ಕೆಲವು ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೆಸರೇಳದೆ ಅವರು ವಿರುದ್ಧ ಅತೃಪ್ತಿ ಹೊರಹಾಕಿದರು. ಪ್ರತಿ ರಾಜ್ಯದಲ್ಲಿಯೂ ನಾಯಕರನ್ನು ಹೊಂದಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವಾಗ ತಮ್ಮಗೆ ಮತ್ತು ತಮ್ಮ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೆಟ್ ಬಯಸುತ್ತಾರೆ. ಶೇ. 90 ರಷ್ಟು ಟಿಕೆಟ್ ಅನ್ನು ಅವರ ಸಲಹೆ ಮೇಲೆ ನೀಡಲಾಗುವುದು. ಒಂದು ವೇಳೆ ಅವರೇ ಹೇಳಿದ ಅಭ್ಯರ್ಥಿಗಳು ಸೋತರೆ ಇದು ಸಾಧ್ಯವಾಗದಿದ್ದರೆ ಹೈಕಮಾಂಡ್‍ ಅನ್ನು ದೂರುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಮಾತು ಕೇಳುವುದಿಲ್ಲ. ಈ ವೇಳೆ ಒಗ್ಗಟ್ಟಿನ ಕೊರತೆ ಕಂಡು ಬರುತ್ತಿರುವುದನ್ನು ಗಮನಿಸಿರುವುದಾಗಿ ತಿಳಿಸಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಚುನಾವಣೆ ನಡೆಯುವವರೆಗೂ ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಸಬೇಕು ಎಂದು ತೀರ್ಮಾನಿಸಲಾಗಿತ್ತು. ಕೋವಿಡ್ ಸೋಂಕಿನಿಂದ 100ಕ್ಕೂ ಹೆಚ್ಚು ಮಂದಿ ಸೇರಿ ಪಕ್ಷದ ಬೆಳವಣಿಗೆ ಕುರಿತು ಚರ್ಚಿಸಲಾಗುತ್ತಿಲ್ಲ. ಈ ನಡುವೆ ಈ ರೀತಿಯ ಮಾತು ಕೇಳಿ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಖರ್ಗೆಯವರ ಈ ಮಾತಿಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕರಾಗಿರುವ ಸಿದ್ಧರಾಮಯ್ಯ, ಖರ್ಗೆ ಪಕ್ಷದೊಳಗಿನ ಬೆಳವಣಿಗೆಯಿಂದ ನೊಂದು ಮಾತನಾಡಿದ್ದಾರೆ ಎಂದಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ವಿರುದ್ಧ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟೀಕಿಸಿದ್ದರು. 70 ಸ್ಥಾನಗಳಲ್ಲಿ ಕೇವಲ 19 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಪಕ್ಷದ ಸಾಮರ್ಥ್ಯದ ವಿರುದ್ಧ ಪರೋಕ್ಷವಾಗಿ ಕುಟುಕಿದ್ದರು. ಕಳೆದ ಆಗಸ್ಟ್ನಲ್ಲಿ ಪಕ್ಷವನ್ನು ಬಲಗೊಳಿಸುವ ಬಗ್ಗೆ 23 ಕಾಂಗ್ರೆಸ್ ನಾಯಕರು ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಆ ಗುಂಪಿನ ನಾಯಕ ಕಪಿಲ್ ಸಿಬಲ್ ಆಗಿದ್ದರು.

Donate Janashakthi Media

Leave a Reply

Your email address will not be published. Required fields are marked *