ಕೇರಳ ಭಾರಿ ಮಳೆ: ಆಲಪ್ಪುಳ ಜಿಲ್ಲೆಯಲ್ಲಿ ಕುಸಿಯಿತು 151 ವರ್ಷ ಹಳೆಯ ಚರ್ಚ್

  • ಇಡುಕ್ಕಿ ಭೂಕುಸಿತ: ಸಾವಿನ ಸಂಖ್ಯೆ 52ಕ್ಕೆ ಏರಿಕೆ

 

ಆಲಪ್ಪುಳ(ಕೇರಳ): ಜಿಲ್ಲೆಯ ಚುಂಗಮ್‌ ಕುರುವೆಲ್ಲೈ ಪದಶೇಖರಂ ಪ್ರದೇಶದಲ್ಲಿದ್ದ 151 ವರ್ಷಗಳಷ್ಟು ಹಳೆಯ ಸೇಂಟ್‌ ಪೌಲ್‌ ಚರ್ಚ್ ಮಂಗಳವಾರ ಕುಸಿದು ಬಿದ್ದಿದೆ.‌

ಭತ್ತದ ಗದ್ದೆಗಳ ನಡುವೆ ಇದ್ದ ಚರ್ಚ್‌ಗೆ ನೀರು ನುಗ್ಗಿದ ಪರಿಣಾಮ ಚರ್ಚ್‌ ಕುಸಿದಿದೆ. ಚರ್ಚ್‌ ಕುಸಿಯುವ ಮುನ್ಸೂಚನೆ ಇದ್ದದ್ದರಿಂದ ಅಧಿಕಾರಿಗಳು ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು. ಹೀಗಾಗಿ ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

 

ಇಡುಕ್ಕಿ ಭೂಕುಸಿತ: ಸಾವಿನ ಸಂಖ್ಯೆ 52ಕ್ಕೆ ಏರಿಕೆ

ಇಡುಕ್ಕಿ:  ಕೇರಳದ ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿ ಪ್ರದೇಶದಲ್ಲಿ ಉಂಟಾಗಿರುವ ಭೂಕುಸಿತದಲ್ಲಿ ಕಣ್ಮರೆಯಾಗಿದ್ದವರ ಪೈಕಿ ಮೂವರ ಮೃತದೇಹಗಳನ್ನು ಮಂಗಳವಾರ ಪತ್ತೆಹಚ್ಚಲಾಗಿದ್ದು, ಇದರಿಂದ ಸಾವಿಗೀಡಾದವರ ಸಂಖ್ಯೆ 52ಕ್ಕೆ ಏರಿದೆ.

‘ಕಣ್ಮರೆಯಾದವರ ಪತ್ತೆಗಾಗಿ ಮಂಗಳವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯ ಮೃತದೇಹವನ್ನು ಪತ್ತೆಹಚ್ಚಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಜತೆಗೆ, ಅಗ್ನಿಶಾಮಕ ದಳ, ಅರಣ್ಯ ಮತ್ತು ಪೊಲೀಸ್ ಇಲಾಖೆಗಳೂ ಕಾರ್ಯಾಚರಣೆ ಕೈಗೊಂಡಿವೆ. ಆ. 7ರಂದು ರಾಜಮಾಲಾ ಬಳಿ ಸಂಭವಿಸಿದ ದುರಂತದಲ್ಲಿ ನಾಪತ್ತೆಯಾದ 19 ಮಂದಿಯ ಪತ್ತೆಗಾಗಿ ನದಿಯ ಕೆಳ ಪ್ರದೇಶದಲ್ಲೂ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಕೇರಳದ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.  ಇಡುಕ್ಕಿ ಜಿಲ್ಲೆಯ ಮುಲ್ಲಾಪೆರಿಯಾರ್ ಜಲಾಶಯದ ಮಟ್ಟ ಮಂಗಳವಾರ 136.85 ಅಡಿ ತಲುಪಿದೆ.

ಮಳೆ ಪ್ರಮಾಣ ಕಡಿಮೆಯಾದ್ದರಿಂದ ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಯ ತಗ್ಗು ಪ್ರದೇಶದಲ್ಲಿ ನೆರೆ ಹಾವಳಿ ಕಮ್ಮಿಯಾಗಿದೆ. ಮಳೆಯ ತೀವ್ರತೆ ಕಡಿಮೆಯಾಗಿದ್ದರಿಂದ ಹಾಗೂ ಮಳೆಪೀಡಿತ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ 14 ಜಿಲ್ಲೆಗಳಲ್ಲಿ ಘೋಷಿಸಲಾಗಿದ್ದ ರೆಡ್ ಅಲರ್ಟ್ ಹಿಂತೆಗೆದುಕೊಳ್ಳಲಾಗಿದೆ.

Donate Janashakthi Media

Leave a Reply

Your email address will not be published. Required fields are marked *