ಉದಯನಿಧಿ ಸ್ಟಾಲಿನ್ ಬಂಧನ: ವಿಚಾರಣೆ ಬಳಿಕ ಬಿಡುಗಡೆ

ಚೆನ್ನೈ: ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ನಟಿ ತ್ರಿಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದ ಹಿನ್ನೆಲೆ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಬಿಡುಗಡೆ ಮಾಡಿದ್ದಾರೆ.

ಆಗಸ್ಟ್‌ 4ರ ಬೆಳಿಗ್ಗೆ ಅವರ ನಿವಾಸದಿಂದಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ಇದರಿಂದ ರಾಜ್ಯ ರಾಜಕೀಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಯಿತು. ನಂತರ ಮದ್ರಾಸ್ ಹೈಕೋರ್ಟ್ ಸೂಚನೆಯ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ, ಅಗತ್ಯವಿದ್ದಾಗ ತನಿಖೆಗೆ ಸಹಕರಿಸುವಂತೆ ನ್ಯಾಯಾಲಯ ಸೂಚಿಸಿದೆ.

ಡಿಎಂಕೆ ಪಕ್ಷದ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಎನ್.ಆರ್. ಎಲಾಂಗೋ, ಈ ಕ್ರಮವು ಉದಯನಿಧಿ ಸ್ಟಾಲಿನ್ ಅವರನ್ನು ವಿಧಾನಸಭೆಯ ಮೊದಲ ಬಜೆಟ್ ಅಧಿವೇಶನದಲ್ಲಿ ಭಾಗವಹಿಸುವುದನ್ನು ತಡೆಯಲು ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಕುರಿತು ಹೇಳಿಕೆ ವಿವಾದ: ಉದಯನಿಧಿ ಸ್ಟಾಲಿನ್ ಬಂಧನ

ವಿವಾದದ ಹಿನ್ನೆಲೆ

ಕಾವೇರಿ ವಿವಾದದ ಕುರಿತು ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ವೇಳೆ, ಮುಖ್ಯಮಂತ್ರಿ ವಿಜಯ್ ಅವರ ಮೌನವನ್ನು ಟೀಕಿಸಿದ ಸ್ಟಾಲಿನ್ ವಿರುದ್ಧ ಮೊದಲು ಪ್ರಕರಣ ದಾಖಲಾಗಿತ್ತು. ಬಳಿಕ, ಸಭೆಯ ವೇಳೆ ಬೆಂಬಲಿಗರು ನಟಿ ತ್ರಿಶಾ ಹೆಸರು ಕೂಗಿದಾಗ ಸ್ಟಾಲಿನ್ ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಅವರು ಡಬಲ್ ಅರ್ಥದ ಹೇಳಿಕೆ ನೀಡಿದರೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕಾನೂನು ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಕಾನೂನು ಕ್ರಮ ಮತ್ತು ಆರೋಪಗಳು

ಸ್ಟಾಲಿನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ವಿವಿಧ ಕಲಂಗಳಡಿ, ತಮಿಳುನಾಡು ಮಹಿಳಾ ಹಿಂಸೆ ನಿಷೇಧ ಕಾಯ್ದೆಯಡಿ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತಂಜಾವೂರು ಈಸ್ಟ್ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗಾಗಿ ಕರೆದೊಯ್ದಿದ್ದರು.

ರಾಜಕೀಯ ಪ್ರತಿಕ್ರಿಯೆಗಳು

ಬಿಜೆಪಿ ಮತ್ತು ಟಿವಿಕೆ ಪಕ್ಷದ ನಾಯಕರು ಸ್ಟಾಲಿನ್ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿ ಅವರ ಬಂಧನಕ್ಕೆ ಒತ್ತಾಯಿಸಿದ್ದರು.

ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ, “ಇಂತಹ ಅಸಭ್ಯ ಭಾಷೆ ಬಳಸುವವರನ್ನು ಸಮಾಜ ಒಪ್ಪುವುದಿಲ್ಲ,” ಎಂದು ‘ಎಕ್ಸ್’ ನಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಡಿಎಂಕೆ ನಾಯಕಿ ಕನಿಮೋಜಿ, ಸರ್ಕಾರ ವೈಯಕ್ತಿಕ ಪ್ರತೀಕಾರ ತೀರಿಸಲು ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.

“ಸರ್ಕಾರಕ್ಕೆ ವೈಯಕ್ತಿಕವಾಗಿ ಪ್ರತೀಕಾರ ತೀರಿಸಬೇಕಿದ್ದರೆ ಕಾನೂನುಬದ್ಧವಾಗಿ ಪ್ರಕರಣ ಹೂಡಲಿ. ಆದರೆ ವಿರೋಧ ಪಕ್ಷವನ್ನು ಎದುರಿಸಲು ಧೈರ್ಯವಿಲ್ಲದೆ ಇಂತಹ ದಮನಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ಕಾನೂನು ವಿರೋಧಿ,” ಎಂದು ಅವರು ಹೇಳಿದ್ದಾರೆ.

ವಿಧಾನಸಭೆ ಅಧಿವೇಶನದ ಮುನ್ನ ಈ ಘಟನೆ ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಇನ್ನಷ್ಟು ಉದ್ವಿಗ್ನತೆಯನ್ನುಂಟುಮಾಡಿದೆ.

ಇದನ್ನೂ ನೋಡಿ: ಕಥೆ ಮೊಗಳ್ಳಿ ಗಣೇಶ್‌ ಅವರನ್ನು ಬೆಳೆಸಿತು; ಮೊಗಳ್ಳಿ ಗಣೇಶ್‌ ಕೂಡ ಕಥೆಯನ್ನು ಬೆಳೆಸಿದರು – ಪ್ರೊ.ನಟರಾಜ್ ಹುಳಿಯಾರ್

Donate Janashakthi Media

Leave a Reply

Your email address will not be published. Required fields are marked *