ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಬಳಿಕ ಜಂತರ್ ಮಂತರ್ ಹೋರಾಟ ಹಿಂಪಡೆದ ಸಿಜೆಪಿ
ನವದೆಹಲಿ: ಕೇಂದ್ರ ಸರ್ಕಾರದೊಂದಿಗೆ ನಡೆದ ಮೂರನೇ ಹಂತದ ಮಾತುಕತೆಗಳ ಬಳಿಕ, ಮೋದಿ ನೇತೃತ್ವದ ಸರ್ಕಾರವು ತಮ್ಮ ಬೇಡಿಕೆಗಳನ್ನು ಅಂಗೀಕರಿಸಿದ್ದರಿಂದ ಕಾಕ್ರೋಚ್ ಜಂತಾ ಪಾರ್ಟಿ (ಸಿಜೆಪಿ) ಜುಲೈ 25ರಂದು ಪ್ರತಿಭಟನೆಯನ್ನು ಹಿಂಪಡೆಯಲು ಒಪ್ಪಿಕೊಂಡಿದೆ.
ಈ ಘೋಷಣೆ ಸಂಜೆ ನಡೆದ ಸಂಯುಕ್ತ ಸರ್ಕಾರ- ಸಿಜೆಪಿ ಪತ್ರಿಕಾಗೋಷ್ಠಿಯಲ್ಲಿ ಬಂದಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ ನಡೆದಿದೆ. NEET ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಲ್ಲಿ ಅವರ ರಾಜೀನಾಮೆಯೇ ಸಿಜೆಪಿಯ ಪ್ರಮುಖ ಬೇಡಿಕೆಯಾಗಿತ್ತು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಉಪಸ್ಥಿತರಿದ್ದರು. ಸರ್ಕಾರ ತನ್ನ ಬೇಡಿಕೆಗಳ ಕುರಿತು ನೀಡಿದ ಮಾತನ್ನು ನಂಬಿ ಸಿಜೆಪಿ “ಸತ್ಪ್ರೇರಣೆಯಿಂದ” ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಉಪವಾಸ ಅಂತ್ಯಕ್ಕೆ ಟೀಕೆ: ‘ಕ್ಯಾರಕ್ಟರ್ ಸರ್ಟಿಫಿಕೆಟ್’ ಏಕೆ ಬೇಕು? ಎಂದ ಸೋನಂ ವಾಂಗ್ಚುಕ್
ಒಂದು ಬೇಡಿಕೆ ಈಗಾಗಲೇ ಈಡೇರಿರುವುದರಿಂದ, ಉಳಿದ ಬೇಡಿಕೆಗಳ ಕುರಿತು ಸರ್ಕಾರ ಭರವಸೆ ನೀಡಿದೆ ಎಂದು ಸಿಜೆಪಿ ವಕ್ತಾರರು ತಿಳಿಸಿದರು. ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಲಾದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲಾಗುವುದು, ಭವಿಷ್ಯದಲ್ಲಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಮತ್ತು NEET ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನಿಯಮಾನುಸಾರ ಗರಿಷ್ಠ ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
“ಸರ್ಕಾರ ನಮ್ಮ ಬೇಡಿಕೆಗಳನ್ನು ಅಂಗೀಕರಿಸಿರುವುದರಿಂದ ಎಲ್ಲಾ ಪ್ರತಿಭಟನಾಕಾರರು ಮನೆಗೆ ಮರಳಬೇಕೆಂದು ನಾವು ಮನವಿ ಮಾಡುತ್ತೇವೆ,” ಎಂದು ಸೌರವ್ ದಾಸ್ ಇಬ್ಬರು ಕೇಂದ್ರ ಸಚಿವರ ಸಮ್ಮುಖದಲ್ಲಿ ಹೇಳಿದರು.
ಅಶುತೋಷ್ ರಾಂಕಾ ಮಾತನಾಡಿ, “36 ದಿನಗಳ ಪ್ರತಿಭಟನೆಯ ಬಳಿಕ ಸರ್ಕಾರ ನಮ್ಮ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದೆ. ಎಲ್ಲರೂ ಶಾಂತಿಯುತವಾಗಿ ಪ್ರತಿಭಟನಾ ಸ್ಥಳಗಳಿಂದ ಹಿಂತಿರುಗುವಂತೆ ನಾವು ಮನವಿ ಮಾಡುತ್ತೇವೆ. ನಮ್ಮ ಬೇಡಿಕೆಗಳು ಅತಿರೇಕವಾಗಿರಲಿಲ್ಲ; ಅವು ಮೂಲಭೂತ ಬೇಡಿಕೆಗಳಾಗಿದ್ದವು. ಸರ್ಕಾರ ಈಗ ಅವನ್ನು ಅಂಗೀಕರಿಸಿದೆ,” ಎಂದು ಹೇಳಿದರು.
ಇದನ್ನೂ ನೋಡಿ: ನೀಟ್ ಹಗರಣ | ವಿದ್ಯಾರ್ಥಿಗಳೇ ಎದ್ದೇಳಿ! ಹೋರಾಟಕ್ಕೆ ಜೊತೆಯಾಗಿ — ನಟ ಕಿಶೋರ್ ಮನವಿ Janashakthi Media
