ಹೊರಗುತ್ತಿಗೆ ನೌಕರರ ಮುಷ್ಕರದಿಂದ ಪಂಜಾಬ್‌ನಲ್ಲಿ ವಿದ್ಯುತ್‌ ಬಿಕ್ಕಟ್ಟು ತೀವ್ರ; ಉಷ್ಣ ವಿದ್ಯುತ್‌ ಘಟಕಗಳು ಸ್ಥಗಿತ

ಅಮೃತಸರ: ಸರ್ಕಾರ ನೀಡಿದ್ದ ಭರವಸೆ ಜಾರಿಗೊಳಿಸುವಂತೆ ಆಗ್ರಹಿಸಿ ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ಪಂಜಾಬ್‌ನಲ್ಲಿ ವಿದ್ಯುತ್‌ ಉತ್ಪಾದನೆ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಮುಷ್ಕರದ ಪರಿಣಾಮ ಲೆಹ್ರಾ ಮೊಹಬ್ಬತ್‌ನಲ್ಲಿರುವ ಗುರು ಹರ್‌ಗೋಬಿಂದ್ ಥರ್ಮಲ್ ಪ್ಲಾಂಟ್‌ (ಜಿಎಚ್‌ಟಿಪಿ)ನ ನಾಲ್ಕು ಘಟಕಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ರೋಪರ್‌ ಉಷ್ಣ ವಿದ್ಯುತ್‌ ಸ್ಥಾವರದ ಒಂದು ಘಟಕವೂ ಕಾರ್ಯನಿರ್ವಹಣೆ ನಿಲ್ಲಿಸಿದೆ. ಇದರಿಂದ ರಾಜ್ಯದ ವಿದ್ಯುತ್‌ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಉಂಟಾಗಿದೆ.

ಪಂಜಾಬ್‌ ಸ್ಟೇಟ್‌ ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಪಿಎಸ್‌ಪಿಸಿಎಲ್‌) ಒಡೆತನದ 920 ಮೆಗಾವ್ಯಾಟ್‌ ಸಾಮರ್ಥ್ಯದ ಲೆಹ್ರಾ ಮೊಹಬ್ಬತ್‌ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಪರಿಸ್ಥಿತಿ ಗಂಭೀರಗೊಂಡಿದೆ. ಬುಧವಾರದಿಂದ ಆರಂಭವಾದ ವ್ಯತ್ಯಯ ಭಾನುವಾರಕ್ಕೆ ಸಂಪೂರ್ಣ ಸ್ಥಗಿತಕ್ಕೆ ತಲುಪಿದೆ.

ಮುಷ್ಕರದ ಪರಿಣಾಮ ಪ್ರಮುಖ ತಾಂತ್ರಿಕ ಕಾರ್ಯಗಳನ್ನು ನಿರ್ವಹಿಸುವ 1,850ಕ್ಕೂ ಹೆಚ್ಚು ಹೊರಗುತ್ತಿಗೆ ಕಾರ್ಮಿಕರು ಕೆಲಸದಿಂದ ದೂರ ಉಳಿದಿದ್ದಾರೆ. ಪರಿಣಾಮವಾಗಿ ಸ್ಥಾವರದಲ್ಲಿ ಕೇವಲ 550 ನಿಯಮಿತ ನೌಕರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ತಾಂತ್ರಿಕ ಸಿಬ್ಬಂದಿಯಾಗಿದ್ದು, ಸುಮಾರು 150 ಎಂಜಿನಿಯರ್‌ಗಳು ಸೇರಿದ್ದಾರೆ.

ಸಾಮಾನ್ಯವಾಗಿ ಸುಮಾರು 250 ಹೊರಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುವ ಬೂದಿ ವಿಲೇವಾರಿ ವಿಭಾಗದಲ್ಲಿ ಈಗ ಕೇವಲ 10ರಿಂದ 12 ನಿಯಮಿತ ಸಿಬ್ಬಂದಿ ದಿನಕ್ಕೆ 16ರಿಂದ 18 ಗಂಟೆಗಳವರೆಗೆ ಕೆಲಸ ಮಾಡುತ್ತಿದ್ದಾರೆ. ಬೂದಿ ಸಾಗಣೆ, ಬಾಯ್ಲರ್‌ ಶುಚಿಗೊಳಿಸುವಿಕೆ, ಕ್ಲಿಂಕರ್‌ ತೆರವು, ಹೈ-ವೋಲ್ಟೇಜ್‌ ಸ್ವಿಚಿಂಗ್‌, ಟರ್ಬೈನ್‌ ಹಾಗೂ ಪಂಪ್‌ ನಿರ್ವಹಣೆ, ಕಲ್ಲಿದ್ದಲು ನಿರ್ವಹಣೆ ಮೊದಲಾದ ಅತ್ಯಂತ ಅಪಾಯಕಾರಿ ಕಾರ್ಯಗಳು ಸ್ಥಗಿತಗೊಂಡಿವೆ.

ಇದನ್ನೂ ಓದಿ : ಪಾಸ್‌ಪೋರ್ಟ್ ನಾಗರಿಕತ್ವದ ಪೂರಕ ದಾಖಲೆ ಅಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಸರಿಯಾದ ತರಬೇತಿ ಇಲ್ಲದ ಸಿಬ್ಬಂದಿಯನ್ನು ಇಂತಹ ಕೆಲಸಗಳಿಗೆ ನಿಯೋಜಿಸುವುದು ಅಪಾಯಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ತರಬೇತಿ ಪಡೆದ ಸಿಬ್ಬಂದಿಯ ಕೊರತೆಯಿಂದ ಎಂಜಿನಿಯರ್‌ಗಳ ಮೇಲೆ ಹೆಚ್ಚುವರಿ ಒತ್ತಡ ಹೇರಿದರೆ ದೊಡ್ಡ ಮಟ್ಟದ ಅಪಘಾತಗಳು ಮತ್ತು ಜೀವಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ಪಂಜಾಬ್‌ ರಾಜ್ಯ ವಿದ್ಯುತ್‌ ಮಂಡಳಿ ಎಂಜಿನಿಯರ್‌ಗಳ ಸಂಘ ಎಚ್ಚರಿಸಿದೆ.

ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲೇ ಈ ಮುಷ್ಕರ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಂಜಾಬ್‌ನಲ್ಲಿ ಗರಿಷ್ಠ ವಿದ್ಯುತ್‌ ಬೇಡಿಕೆ 14,459 ಮೆಗಾವ್ಯಾಟ್‌ಗೆ ತಲುಪಿದ್ದು, ಅದರಲ್ಲಿ 10,390 ಮೆಗಾವ್ಯಾಟ್‌ ವಿದ್ಯುತ್‌ ಉತ್ತರ ಗ್ರಿಡ್‌ನಿಂದ ಪಡೆಯಲಾಗುತ್ತಿದೆ. ರಾಜ್ಯದ ಸ್ವಂತ ವಿದ್ಯುತ್‌ ಉತ್ಪಾದನೆ 4,140 ಮೆಗಾವ್ಯಾಟ್‌ಗೆ ಕುಸಿದಿದೆ.

ಮೇ 24ರಂದು ಪಂಜಾಬ್‌ ವಿದ್ಯುತ್‌ ಸಚಿವರ ಸಮ್ಮುಖದಲ್ಲಿ ನಡೆದ ಒಪ್ಪಂದದ ಪ್ರಕಾರ, ಹೊರಗುತ್ತಿಗೆ ಕಾರ್ಮಿಕರನ್ನು ಜೂನ್‌ 15ರೊಳಗೆ ನೇರವಾಗಿ ಪಿಎಸ್‌ಪಿಸಿಎಲ್‌ಗೆ ಸೇರ್ಪಡೆಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದುವರೆಗೆ ಅಗತ್ಯ ಅಧಿಸೂಚನೆ ಹೊರಡಿಸದ ಕಾರಣ, ಕಾರ್ಮಿಕರು ಜೂನ್‌ 9ರಿಂದ ಪ್ರತಿಭಟನೆ ಆರಂಭಿಸಿದ್ದು, ಜೂನ್‌ 16ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.

ಅಧಿಕೃತ ನೇಮಕಾತಿ ಆದೇಶಗಳು ಹೊರಬರುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಕಾರ್ಮಿಕರು ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಮುಷ್ಕರದಿಂದ ಸ್ಥಗಿತಗೊಂಡಿರುವ ಉಷ್ಣ ವಿದ್ಯುತ್‌ ಘಟಕಗಳ ಪುನರಾರಂಭ ಹಾಗೂ ಬೇಡಿಕೆಗಳ ಕುರಿತು ಕಾರ್ಮಿಕರೊಂದಿಗೆ ನಿರಂತರ ಮಾತುಕತೆ ನಡೆಯುತ್ತಿದೆ ಎಂದು ಪಿಎಸ್‌ಪಿಸಿಎಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಸಂತ್‌ ಗರ್ಗ್‌ ತಿಳಿಸಿದ್ದಾರೆ.

ವಿದ್ಯುತ್‌ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಉಷ್ಣ ವಿದ್ಯುತ್‌ ಘಟಕಗಳ ಸ್ಥಗಿತ ಪಂಜಾಬ್‌ನ ವಿದ್ಯುತ್‌ ಪೂರೈಕೆಗೆ ಗಂಭೀರ ಸವಾಲಾಗಿ ಪರಿಣಮಿಸಿದ್ದು, ಸಮಸ್ಯೆ ಶೀಘ್ರ ಬಗೆಹರಿಯದಿದ್ದರೆ ಕೃಷಿ, ಕೈಗಾರಿಕೆ ಮತ್ತು ಗೃಹ ಬಳಕೆದಾರರ ಮೇಲೆ ಅದರ ಪರಿಣಾಮ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ನೋಡಿ : “ಟಾಟಾ ಕಂಪನಿಗೆ ವಿದ್ಯುತ್‌, ಜನತೆಗೆ ಕಾದಿದೆ ಆಪತ್ತು? | ವಿದ್ಯುತ್ ಖಾಸಗೀಕರಣ ವಿರುದ್ಧ ಸಮಾವೇಶ” Janashakthi Media

Donate Janashakthi Media

Leave a Reply

Your email address will not be published. Required fields are marked *