ನೀಟ್-ಯುಜಿ ವಿವಾದ: ‘ಥಾಳಿ-ಚಮ್ಮಚ’ ಪ್ರತಿಭಟನೆಗೆ ಸಿಜೆಪಿ ಕರೆ, ಜೂ 20ರಂದು ಹೋರಾಟ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಉದ್ಭವಿಸಿರುವ ವಿದ್ಯಾರ್ಥಿ ನೇತೃತ್ವದ ‘ಕಾಕ್‌ರೋಚ್ ಜನತಾ ಪಾರ್ಟಿ’ (ಸಿಜೆಪಿ) ಜೂನ್‌ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ತನ್ನ ಎರಡನೇ ದೊಡ್ಡ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ನೀಟ್-ಯುಜಿ ವಿವಾದದ ವಿರುದ್ಧ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ.

ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ‘ಥಾಳಿ-ಚಮ್ಮಚ’ ತರಲು ಸಂಘಟನೆ ಕರೆ ನೀಡಿದ್ದು, 2020ರ ಕೋವಿಡ್ ಮಹಾಮಾರಿಯ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ್ದ ಪಾತ್ರೆ ತಟ್ಟುವ ಕರೆಗೆ ಸಂಬಂಧಿಸಿದ ಸಂಕೇತವಾಗಿ ಇದನ್ನು ವ್ಯಾಖ್ಯಾನಿಸಲಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ ನಡೆದ ಮೊದಲ ಪ್ರತಿಭಟನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದ ಹಿನ್ನೆಲೆ, ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಾಹಿತ್ಯ ಓದು ಮತ್ತು ಪುಸ್ತಕ ಸಂಸ್ಕೃತಿ

ಸಿಜೆಪಿ ಸ್ಥಾಪಕ ಅಭಿಜೀತ್ ದಿಪ್ಕೆ ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ‘ಥಾಳಿ-ಚಮ್ಮಚ’ ತರಲು ಕರೆ ನೀಡಿದರೂ, ಅದರ ಸಂಕೇತಾರ್ಥವನ್ನು ಸ್ಪಷ್ಟಪಡಿಸಿಲ್ಲ.

ಶುಕ್ರವಾರ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ, “ನಾಳೆ ಜಂತರ್ ಮಂತರ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವ ಎಲ್ಲರೂ ಥಾಳಿ ಮತ್ತು ಚಮ್ಮಚವನ್ನು ತರಬೇಕು. ಉಳಿದುದನ್ನು ನೀವು ತಿಳಿದಿದ್ದೀರಿ,” ಎಂದು ಹೇಳಿದ್ದಾರೆ.

ಈ ಹೇಳಿಕೆಯನ್ನು ಕೋವಿಡ್ ಆರಂಭದ ದಿನಗಳಲ್ಲಿ ನಡೆದ ಪಾತ್ರೆ ತಟ್ಟುವ ಘಟನೆಗೆ ಉಲ್ಲೇಖವಾಗಿ ವ್ಯಾಪಕವಾಗಿ ವ್ಯಾಖ್ಯಾನಿಸಲಾಗಿದೆ.

2020ರ ಮಾರ್ಚ್ 22ರಂದು ‘ಜನತಾ ಕರ್ಫ್ಯೂ’ ವೇಳೆ ಸಂಜೆ 5 ಗಂಟೆಗೆ ಐದು ನಿಮಿಷಗಳ ಕಾಲ ಜನರು ತಮ್ಮ ಮನೆಗಳ ಬಾಲ್ಕನಿಗಳಲ್ಲಿ ನಿಂತು ಪಾತ್ರೆ ತಟ್ಟುವಂತೆ ಪ್ರಧಾನಮಂತ್ರಿ ಮೋದಿ ಕರೆ ನೀಡಿದ್ದರು. ಆರೋಗ್ಯ ಕಾರ್ಯಕರ್ತರಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗಿತ್ತು.

ಇದಾದ ನಂತರ, ಪಾತ್ರೆ ತಟ್ಟುವ ಚಿತ್ರಣ ರಾಜಕೀಯ ಚರ್ಚೆ ಮತ್ತು ವ್ಯಂಗ್ಯದಲ್ಲಿ ಪುನಃ ಪುನಃ ಕಾಣಿಸಿಕೊಂಡಿದ್ದು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಬಳಸಲಾಗುತ್ತಿದೆ.

ಈ ನಡುವೆ, ಸಿಜೆಪಿಯ ಪ್ರಮುಖ ಬೇಡಿಕೆ ಯಥಾಸ್ಥಿತಿಯಲ್ಲೇ ಮುಂದುವರಿದಿದ್ದು, ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಂಬಂಧಿತ ವಿಚಾರಗಳ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆ ಕುರಿತು ಉತ್ತರದಾಯಕತೆ ಕೇಳಿರುವ ಸಂಘಟನೆ, ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳ ಬೆಂಬಲವನ್ನು ಸಂಗ್ರಹಿಸಿದೆ.

ಜಂತರ್ ಮಂತರ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಪ್ರತಿಭಟನೆ ಆರಂಭವಾಗಲಿದ್ದು, ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾವಹಿಸಲಾಗುತ್ತಿದೆ.

ಜೂನ್ 21ರಂದು ನಿಗದಿಯಾದ ನೀಟ್-ಯುಜಿ ಮರುಪರೀಕ್ಷೆಗೆ ಮುನ್ನ ಈ ಪ್ರತಿಭಟನೆ ನಡೆಯುತ್ತಿರುವುದರಿಂದ, ಈ ವಿವಾದ ದೇಶದ ಮಟ್ಟದಲ್ಲಿ ಮತ್ತಷ್ಟು ಗಮನ ಸೆಳೆಯುತ್ತಿದೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ -174| ಸಿನಿಮಾ – ವಲವಾರ, ಗ್ರಾಮೀಣ ಬದುಕಿನ ಸೊಗಡು | ವಿಶ್ಲೇಷಣೆ – ಎಂ.‌ನಾಗರಾಜ ಶೆಟ್ಟಿ

Donate Janashakthi Media

Leave a Reply

Your email address will not be published. Required fields are marked *