ಲಕ್ನೋ: ಅಯೋಧ್ಯೆಯ ರಾಮಮಂದಿರ ದೇಣಿಗೆ ದುರುಪಯೋಗ ಆರೋಪ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇದುವರೆಗೆ ಟ್ರಸ್ಟ್ನ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 42 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, 2021ರಿಂದ ಇಂದಿನವರೆಗೆ ಇರುವ ದಾಖಲೆಗಳ ಸಮಗ್ರ ಪರಿಶೀಲನೆ ನಡೆಸಲಾಗಿದೆ.
ತನಿಖೆಯ ಭಾಗವಾಗಿ ನೇಮಕಾತಿ ಪ್ರಕ್ರಿಯೆ, ದೇಣಿಗೆ ಸ್ವೀಕರಿಸುವ ಸಿಬ್ಬಂದಿಯ ಹಿನ್ನೆಲೆ ಮತ್ತು ಅವರ ಹೊಣೆಗಾರಿಕೆಗಳ ಕುರಿತು ಪರಿಶೀಲನೆ ನಡೆದಿದೆ. ವಿಶೇಷವಾಗಿ ಹಣ ಎಣಿಕೆ ಮತ್ತು ದೇಣಿಗೆ ನಿರ್ವಹಣೆಯ ಜವಾಬ್ದಾರಿ ಹೊತ್ತ ಸಿಬ್ಬಂದಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಮೂರು ದಿನಗಳಿಂದ ಅಯೋಧ್ಯೆಯಲ್ಲೇ ತಂಗಿರುವ ಎಸ್ಐಟಿ ತಂಡವು ರಾಮಮಂದಿರಕ್ಕೆ ಸಂಬಂಧಿಸಿದ ವಿವಿಧ ಸಿಬ್ಬಂದಿಗಳನ್ನು ಪ್ರಶ್ನಿಸಿ, ನಿರ್ಮಾಣ ಉಸ್ತುವಾರಿ ಗೋಪಾಲ್ ರಾವ್ ಅವರನ್ನೂ ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರು| ಸಾಫ್ಟ್ವೇರ್ ರಫ್ತುಗಳಲ್ಲಿ ಕರ್ನಾಟಕ ಮತ್ತೆ ನಂ.1 – ₹19.7 ಲಕ್ಷ ಕೋಟಿ ರಫ್ತು ಸಾಧನೆ
ಇದೀಗ, ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು, “ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದು ಹೇಳಿದ್ದಾರೆ. ಜೊತೆಗೆ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರೊಂದಿಗೆ ಎಸ್ಐಟಿ ಅಧಿಕಾರಿಗಳು ಚರ್ಚೆ ನಡೆಸಿ ಸಂಬಂಧಿತ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದ ಹಿನ್ನೆಲೆ ಏನು?
ರಾಮಮಂದಿರ ನಿರ್ಮಾಣದ ಅವಧಿಯಲ್ಲಿ ಹಾಗೂ ಬಳಿಕ ದೇಣಿಗೆ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. 2021ರಲ್ಲಿ ಟ್ರಸ್ಟ್ ಖರೀದಿಸಿದ ಭೂಮಿಯ ಬೆಲೆಯಲ್ಲಿ ವ್ಯತ್ಯಾಸವಿದೆ ಮತ್ತು ಅಲ್ಪ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿತ್ತು. ಆದರೆ ಟ್ರಸ್ಟ್ ಈ ಆರೋಪಗಳನ್ನು ತಳ್ಳಿಹಾಕಿ, ಎಲ್ಲಾ ವ್ಯವಹಾರಗಳು ಬ್ಯಾಂಕ್ ಮುಖಾಂತರ ಪಾರದರ್ಶಕವಾಗಿ ನಡೆದಿವೆ ಎಂದು ಸ್ಪಷ್ಟಪಡಿಸಿದೆ.
ಇದರ ಜೊತೆಗೆ, ರಾಮಮಂದಿರದ ಹೆಸರಿನಲ್ಲಿ ಸೈಬರ್ ವಂಚನೆಗಳೂ ಬೆಳಕಿಗೆ ಬಂದಿದ್ದವು. ನಕಲಿ ವೆಬ್ಸೈಟ್ಗಳು, ಕ್ಯೂಆರ್ ಕೋಡ್ಗಳು ಮತ್ತು ಟ್ರಸ್ಟ್ ಖಾತೆಗಳ ಮೂಲಕ ಭಕ್ತರನ್ನು ಮೋಸಗೊಳಿಸಿ ಹಣ ಸಂಗ್ರಹಿಸಿದ ಪ್ರಕರಣಗಳು ದಾಖಲಾಗಿದ್ದು, ಅಯೋಧ್ಯೆ ಪೊಲೀಸರು ಮತ್ತು ಸೈಬರ್ ಕ್ರೈಂ ವಿಭಾಗ ಹಲವು ಆರೋಪಿಗಳನ್ನು ಬಂಧಿಸಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಬಳಿ ಬಂದ ಪ್ರತಿಯೊಂದು ದೇಣಿಗೆಯಿಗೂ ಲೆಕ್ಕಪತ್ರವಿದೆ ಮತ್ತು ಅಧಿಕೃತವಾಗಿ ಯಾವುದೇ ಹಣ ದುರುಪಯೋಗವಾಗಿಲ್ಲ ಎಂದು ಪುನರುಚ್ಚರಿಸಿದೆ.
ಎಸ್ಐಟಿ ತಂಡವು 7 ದಿನಗಳಲ್ಲಿ ಪ್ರಾಥಮಿಕ ವರದಿ ಹಾಗೂ 15 ದಿನಗಳಲ್ಲಿ ಅಂತಿಮ ವರದಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆ ಇದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ -174| ಸಿನಿಮಾ – ವಲವಾರ, ಗ್ರಾಮೀಣ ಬದುಕಿನ ಸೊಗಡು | ವಿಶ್ಲೇಷಣೆ – ಎಂ.ನಾಗರಾಜ ಶೆಟ್ಟಿ
