ಮಂಡ್ಯ: ‘ಕನಿಷ್ಠ ಕೂಲಿ ದರ ಪರಿಷ್ಕರಣೆ ಮಾಡಲು ಚರ್ಚಿಸಬೇಕು ಎನ್ನುವ ಸರ್ಕಾರವು ತಮ್ಮ ಸಚಿವರ, ಶಾಸಕರ ಸಂಬಳವನ್ನು ಸಲೀಸಲಾಗಿ ಹೆಚ್ಚು ಮಾಡಿಕೊಳ್ಳುತ್ತಿದೆ’ ಎಂದು ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ಸ್ ವತಿಯಿಂದ ಮೇ 16ರಂದು ಆರಂಭವಾದ ಕಾರ್ಮಿಕ ಕಾನೂನುಗಳ ಉಳಿವು, ನಾಲ್ಕು ಲೇಬರ್ ಕೋಡ್ ರದ್ದು ಪಡಿಸಲು ಹಾಗೂ ವೈಜ್ಞಾನಿಕ ಕನಿಷ್ಠ ವೇತನಕ್ಕೆ ಆಗ್ರಹ ಮತ್ತು ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಐದು ವರ್ಷ ಸಚಿವರಾದರೆ ಸಾಯೋತನಕ ಪಿಂಚಣಿ ಹಣ, ಮರಣ ಹೊಂದಿದ ಮೇಲೂ ಹೆಂಡತಿ ಮಕ್ಕಳಿಗೆ ಸೌಲಭ್ಯವಿದೆ. ಆದರೆ, ಐವತ್ತು ವರ್ಷ ದುಡಿಯುವ ವರ್ಗಕ್ಕೆ ಪಿಂಚಣಿಯಿಲ್ಲ, ಸ್ಕೀಂನಲ್ಲಿ ದುಡಿಯುವ ವ್ಯಕ್ತಿಗಳಿಗೆ ಪಿಂಚಣಿ ಸಿಗುವುದೇ ಇಲ್ಲ. ಅಸಂಘಟಿತ ವಲಯಕ್ಕೂ ಭದ್ರತೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಡೀಸೆಲ್ ದರ ಏರಿಕೆ, ರಸಗೊಬ್ಬರ ಕೊರತೆಯಿಂದ ಕೃಷಿಗೆ ಹೊರೆ -ಪಂಜಾಬ್ನಲ್ಲಿ ರೈತರಲ್ಲಿ ಹೆಚ್ಚಿದ ಆತಂಕ
‘ಕನಿಷ್ಠ ಕೂಲಿ ₹33 ಸಾವಿರ ಕೊಡಬೇಕೆಂದು ಕೇಳುತ್ತಿದ್ದೇವೆ. ಕಳೆದ ಏಳು ವರ್ಷಗಳಿಂದ ಕನಿಷ್ಠ ಕೂಲಿಯನ್ನು ಪರಿಷ್ಕರಣೆಗೆ ಒಳಪಡಿಸದೇ ರಾಜ್ಯ ಸರ್ಕಾರವು ಕೋಟ್ಯಂತರ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ’ ಎಂದು ಕಿಡಿಕಾರಿದರು.
‘ದೇಶದಲ್ಲಿ ಇವತ್ತಿಗೂ ಗರ್ಭಿಣಿ, ಬಾಣಂತಿಯರಿಗೆ ಸಮರ್ಪಕ ಪೌಷ್ಟಿಕ ಆಹಾರ ಇಲ್ಲ. ಅವರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಈಗ ಇವರು ಹೊಟ್ಟೆತುಂಬ ತಿನ್ನಬೇಡಿ ಎನ್ನುತ್ತಿರುವುದೇ ಹಾಸ್ಯಾಸ್ಪದ’ ಎಂದರು.
ಸಭೆಯಲ್ಲಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಶಿವಕುಮಾರ್, ಉಪಾಧ್ಯಕ್ಷೆ ಜಯಶೀಲಾ, ಪ್ರಮೀಳಾಕುಮಾರಿ, ಪುಟ್ಟಮ್ಮ, ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಮಹದೇವಮ್ಮ ಭಾಗವಹಿಸಿದ್ದರು.
ಇದನ್ನೂ ನೋಡಿ: ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಕೊಡೋಕಾ?? ಕಿತ್ಕೊಳೋಕಾ??ಉತ್ತರಿಸಲಿ ಮೋದಿ ಸರಕಾರ – ಕೆ.ಎಸ್ ವಿಮಲಾ
