ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸದಸ್ಯತ್ವ ಅನರ್ಹ ವಿಚಾರ ಇದೀಗ ಚರ್ಚೆಗೆ ಎಡೆಮಾಡಿಕೊಟ್ಟಿದೆ. ವಿಧಾನಸಭೆಯ ಯಾವೊಬ್ಬ ಸದಸ್ಯನ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್ ಗೆ ಇಲ್ಲ ಎಂದು ನಗರದಲ್ಲಿ ಏಪ್ರಿಲ್ 29ರಂದು ಮಾತನಾಡಿದ ಯು.ಟಿ ಖಾದರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆ
‘ಇದು ಎಲ್ಲಿಯಾದ್ರೂ ಉಂಟಾ? ವಿಧಾನಸಭೆ ವ್ಯಾಪ್ತಿಯಲ್ಲಿ ಏನಾದ್ರೂ ಆದಾಗ ಮಾತ್ರ ಅದು ಅಧಿಕಾರ ಇದೆ. ನಿಯಮದ ಪ್ರಕಾರ ಯಾರಾದ್ರೂ ಶಿಕ್ಷೆಗೆ ಒಳಪಟ್ಟಾಗ ಅವರು ಶಾಸಕ ಸ್ಥಾನದಿಂದ ಅನರ್ಹರಾಗುತ್ತಾರೆ. ಅವರ ಶಾಸಕ ಸ್ಥಾನ ತಾನಾಗಿಯೇ ರದ್ದಾಗುತ್ತದೆ. ಪ್ರಕರಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಕ್ಕರೆ ಮತ್ತೆ ಶಾಸಕ ಸ್ಥಾನ ಮರುಸ್ಥಾಪನೆ ಆಗುತ್ತದೆ ಎಂದು ತಿಳಿಸಿದರು.
ಈ ಬಗ್ಗೆ ಮಾಹಿತಿಯನ್ನು ಸದನಕ್ಕೆ ತಿಳಿಸುವುದಷ್ಟೇ ನನ್ನ ಜವಾಬ್ದಾರಿ. ಈ ಬಗ್ಗೆ ವಿಧಾಸಭೆಯ ಕಾರ್ಯದರ್ಶಿಗೆ ಪರಿಶೀಲನೆ ಮಾಡಲು ಹೇಳಿದ್ದೇನೆ. ನಮ್ಮಿಂದ ಒಂದು ದಿನ, ಎರಡು ದಿನ ಬಾಕಿ ಅನ್ನೋದೇನಿಲ್ಲ. ವಿನಯ್ ಕುಲಕರ್ಣಿಗೆ ಶಿಕ್ಷೆ ಆಗಿರುವುದರಿಂದ ಈಗಾಗಲೇ ಶಾಸಕ ಸ್ಥಾನ ರದ್ದಾಗಿದೆ ಎಂದರು.
ಇದನ್ನೂ ಓದಿ: ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ: ಗ್ರಾಮಸ್ಥರು ಪ್ರತಿಭಟನೆ
ಶಾಸಕ ಸ್ಥಾನ ಅನರ್ಹತೆ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್ ಎಂದು ನಾನು ತಾರತಮ್ಯ ಮಾಡಿಲ್ಲ. ಇದರಲ್ಲಿ ತಾರತಮ್ಯ ಏನಿದೆ? ಶಾಸಕ ಸ್ಥಾನ ರದ್ದಾದ ಬಳಿಕ ಅವರು ಸದನಕ್ಕೆ ಬರಲು ಸಾಧ್ಯವಿಲ್ಲ, ಮಾಹಿತಿ ಇಲ್ಲದೆ ಇರುವವರಿಗೆ ಈ ಬಗ್ಗೆ ಮಾಹಿತಿ ಕೊಡ್ತಾ ಇದ್ದೀನಿ ಎಂದು ತಿರುಗೇಟು ನೀಡಿದರು.
ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರದಲ್ಲಿ ಸ್ಪೀಕರ್ ಕಚೇರಿ ಮೌನ ಎಂಬ ಆರೋಪಕ್ಕೆ ಗೃಹ ಸಚಿವ ಪರಮೇಶ್ವರ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ‘ಇವೆಲ್ಲವೂ ಒಂದು ಪ್ರಕ್ರಿಯೆ, ಅದನ್ನು ತಡೆಯೋದಕ್ಕೆ ಸಾಧ್ಯವಿಲ್ಲ. ಒಂದೆರಡು ದಿನ ವಿಳಂಬ ಆಗಬಹುದು ಅಷ್ಟೇ. ಆದರೆ ಆ ಪ್ರಕ್ರಿಯೆ ಆಗುತ್ತದೆ ಎಂದು ತಿಳಿಸಿದರು.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಯೋಗೇಶ್ ಗೌಡ ಅವರನ್ನು 2016 ರಲ್ಲಿ ಕೊಲೆ ಮಾಡಲಾಗಿತ್ತು.ಒಟ್ಟು 16 ಮಂದಿ ಆರೋಪಗಳು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಬೇಸಿಗೆ ರಜಾಕಾಲದ ನ್ಯಾಯಪೀಠದಲ್ಲಿ ವಿಚಾರಣೆಗೆ ಅವಕಾಶಕ್ಕಾಗಿ ಕೋರಿದ್ದಾರೆ. ಆದರೆ ಇದಕ್ಕೆ ಸಿಬಿಐ ತೀವ್ರ ವಿರೋಧ ವ್ಯಕ್ತಪಡಿಸಿದೆ. ಶಿಕ್ಷೆ ರದ್ದಿಗೆ ಕೋರಿ ವಿನಯ್ ಕಲಕರ್ಣಿ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ನೇತೃತ್ವದ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತ್ತು.
ಇದನ್ನೂ ನೋಡಿ: ‘ಡ್ರೋನ್-ಸಂತೆ’ ಯಲ್ಲೊಂದು ದಿನ….. Janashakthi Media
