ಬೆಂಗಳೂರು: ಮಾರ್ಚ್ 5ರಂದು ನಗರದ ಪಶ್ಚಿಮ ವಿಭಾಗದ ಪೊಲೀಸರು ಮಾದಕ ದ್ರವ್ಯ ಸೇವನೆ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ 6 ಶಿಕ್ಷಣ ಸಂಸ್ಥೆಗಳು ಹಾಗೂ 2 ಹಾಸ್ಟೆಲ್ಗಳ ಮೇಲೆ ದಿಢೀರ್ ತಪಾಸಣೆ ನಡೆಸಿದ ಪೊಲೀಸರು, ಮಾದಕ ದ್ರವ್ಯ ಸೇವನೆ ಪತ್ತೆ ಹಚ್ಚುವ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಶಾಕಿಂಗ್ ಮಾಹಿತಿ ಎನ್ನುವಂತೆ 31 ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿರೋದು ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಶಿಕ್ಷಣ ಸಂಸ್ಥೆಗಳು ಹಾಗೂ ಹಾಸ್ಟೆಲ್ ವ್ಯವಸ್ಥಾಪಕರ ಪೂರ್ವ ಅನುಮತಿಯೊಂದಿಗೆ ಪೊಲೀಸರು ಸುಮಾರು 1,200 ವಿದ್ಯಾರ್ಥಿಗಳಿಂದ ಮಾದರಿಗಳನ್ನು (Samples) ಸಂಗ್ರಹಿಸಿದ್ದರು. ಇದರಲ್ಲಿ ಮೊದಲ ಹಂತವಾಗಿ 585 ವಿದ್ಯಾರ್ಥಿಗಳ ಮಾದರಿಗಳನ್ನು ರ್ಯಾಂಡಮ್ ಆಗಿ ಪರೀಕ್ಷೆಗೆ ಒಳಪಡಿಸಿದಾಗ, 31 ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ.
ಈ ತಪಾಸಣಾ ಕಾರ್ಯಕ್ಕೆ ಪುಣ್ಯ, ಪದ್ಮದೇವಯ್ಯ, ಕಾಡೆ, ಶರಾವತಿ, ಶ್ರೀಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಮತ್ತು ಕಾಂಗರೂ ಕೇರ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ.
ಇದನ್ನೂ ಓದಿ: ವೇತನ ಕಡಿತಗೊಳಿಸಿ; ನೌಕರರ ಮೇಲೆ ದೌರ್ಜನ್ಯ: ಹೊರಗುತ್ತಿಗೆ ನೌಕರರ ಪ್ರತಿಭಟನೆ
‘ಸನ್ಮಿತ್ರ’ ಯೋಜನೆಯಡಿ ಪುನರ್ವಸತಿ:
ಮಾದಕ ವ್ಯಸನಕ್ಕೆ ಬಲಿಯಾದ ವಿದ್ಯಾರ್ಥಿಗಳನ್ನು ಶಿಕ್ಷಿಸುವ ಬದಲು, ಅವರನ್ನು ಮುಖ್ಯವಾಹಿನಿಗೆ ತರಲು ಪೊಲೀಸ್ ಇಲಾಖೆಯು ‘ಸನ್ಮಿತ್ರ’ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎಸ್. ಸಲೀಂ ಅವರು ಈ ಯೋಜನೆಗೆ ಚಾಲನೆ ನೀಡಿದ್ದು, ಇದರ ಪ್ರಮುಖ ಉದ್ದೇಶಗಳು ಹೀಗಿವೆ:
1. ಕೌನ್ಸೆಲಿಂಗ್: ವ್ಯಸನಿ ವಿದ್ಯಾರ್ಥಿಗಳನ್ನು ತಜ್ಞರಿಂದ ಸಮಾಲೋಚನೆಗೆ ಒಳಪಡಿಸಿ ಅವರ ವ್ಯಸನಕ್ಕೆ ಕಾರಣಗಳನ್ನು ಹುಡುಕುವುದು.
2. ಗೌಪ್ಯತೆ ರಕ್ಷಣೆ: ವ್ಯಸನಿ ವಿದ್ಯಾರ್ಥಿಗಳ ಹೆಸರನ್ನು ಗೌಪ್ಯವಾಗಿ ಇರಿಸುವ ಮೂಲಕ ಅವರ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು.
3. ಮೂಲ ಪತ್ತೆ: ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥಗಳು ಎಲ್ಲಿಂದ ಪೂರೈಕೆಯಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಿ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕುವುದು.
4. ಪೋಷಕರಿಗೆ ನೆರವು: ಮಕ್ಕಳ ವ್ಯಸನದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ, ಅವರನ್ನು ವ್ಯಸನಮುಕ್ತಗೊಳಿಸಲು ಪೊಲೀಸರು ಸತತ ನಿಗಾ ವಹಿಸಿ ಸಹಕರಿಸುವುದು.
ಜಾಗೃತಿ ಮೂಡಿಸಿದ ಪೊಲೀಸರು:
ಮಾದಕ ಪದಾರ್ಥಗಳ ಸೇವನೆಯಿಂದ ಆಗುವ ಭೀಕರ ದುಷ್ಪರಿಣಾಮಗಳ ಬಗ್ಗೆ ಪೊಲೀಸರು ಕಾಲೇಜು ಆಡಳಿತ ಮಂಡಳಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿ ಸಮೂಹವನ್ನು ಮಾದಕ ದ್ರವ್ಯದ ಜಾಲದಿಂದ ರಕ್ಷಿಸಲು ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
“ನಮ್ಮ ಗುರಿ ವಿದ್ಯಾರ್ಥಿಗಳನ್ನು ಬಂಧಿಸುವುದಲ್ಲ, ಬದಲಾಗಿ ಅವರನ್ನು ವ್ಯಸನದಿಂದ ಮುಕ್ತಗೊಳಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು. ‘ಸನ್ಮಿತ್ರ’ ಮೂಲಕ ನಾವು ಅವರ ಹಿತೈಷಿಯಾಗಿ ಕೆಲಸ ಮಾಡುತ್ತೇವೆ,” ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಇದನ್ನೂ ನೋಡಿ: ಮುಟ್ಟಿನ ರಜೆ ದಯೆಯಲ್ಲ, ಅದು ಹಕ್ಕು — ವಿಶೇಷ ಸೌಲಭ್ಯವಲ್ಲ, ನ್ಯಾಯಯುತ ಸೌಕರ್ಯ Janashakthi Media
