ರಾಣೆಬೆನ್ನೂರು: ರಾಜ್ಯ ಬಜೆಟ್ ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು 4.500ರೂ ಏರಿಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನ 30% ಹಣವನ್ನು ಮೀಸಲಿಡಲು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯಾದ್ಯಂತ ಹಾಸ್ಟೆಲ್ ಎದುರು ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಎಸ್ ಆರ್ ಕೆ ನಗರದ ಮೆಟ್ರಿಕ್ ನಂತರದ ಬಾಲಕಿಯರ ನಿಲಯದ ನಿಲಯ ಪಾಲಕ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಂಚಾಲಕ ಅರುಣ್ ನಾಗವತ್ ಮಾತನಾಡಿ, ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಾರ್ಚ್ 06 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ ನಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಶಿಕ್ಷಣತಜ್ಞರು ಕೊಠಾರಿ ಆಯೋಗದ ಶಿಫಾರಸಿನಂತೆ ರಾಜ್ಯಸರ್ಕಾರ ಬಜೆಟ್ ನಲ್ಲಿ ಕನಿಷ್ಠ 30% ಹಣ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮುಂದುವರಿಯುತ್ತಿದ್ದರು.
ಶಿಕ್ಷಣ ಕ್ಷೇತ್ರಕ್ಕೆ ಪ್ರತಿ ಬಜೆಟ್ ನಲ್ಲಿ ಹಣ ಕಡಿತ ಮಾಡಿ ಸರಾಸರಿ ಕೇವಲ 11% ಹಣ ನೀಡುತ್ತಿರುವುದು ಖಂಡನೀಯ. ಇಡೀ ದೇಶದಲ್ಲಿ ಉತ್ತಮ ಗುಣಮಟ್ಟದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಕೇರಳ ರಾಜ್ಯ 27% ಹಣ ನೀಡುತ್ತಿರುವುದು ಶ್ಲಾಘನೀಯ. ಸರ್ಕಾರಿ ಶಾಲಾ ಕಾಲೇಜು ಹಾಸ್ಟೆಲ್, ವಿಶ್ವ ವಿದ್ಯಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ 30% ಹಣವನ್ನು ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಆ ಮೂಲಕ ಗ್ಯಾರಂಟಿ ಪಟ್ಟಿಗೆ ಶಿಕ್ಷಣ ಸೇರಿಸಬೇಕು.
ಇದನ್ನೂ ಓದಿ: ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿಯನ್ನು ಖಂಡಿಸಿ ದೇಶಾದ್ಯಂತ ಎಡಪಕ್ಷಗಳ ಪ್ರತಿಭಟನೆ
ರಾಜ್ಯದಲ್ಲಿ ಹಾಸ್ಟೆಲ್ಗಳಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿದೆ. ಹಾಸ್ಟೆಲ್ಗೆ ಅರ್ಜಿ ಸಲ್ಲಿಸುತ್ತಿರುವವರು ಗ್ರಾಮೀಣ ಪ್ರದೇಶದ ರೈತ, ಕೂಲಿ ಕಾರ್ಮಿಕ, ದಲಿತ, ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳ. ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸಿದರೆ ಪ್ರವೇಶ ಸಿಗುತ್ತಿಲ್ಲ. ಆದ್ದರಿಂದ ಹಾಸ್ಟೆಲ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
ಖಾಲಿ ಇರುವ ವಾರ್ಡನ್, ಪ್ರಾಂಶುಪಾಲರು, ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಸೇರಿದಂತೆ ಆರೋಗ್ಯ ಭದ್ರತೆ, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳು ಹಾಗೂ ಬಹುತೇಕ ಹಾಸ್ಟೆಲ್ ಗಳು ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು ಇಲ್ಲಿ ಕನಿಷ್ಠ ಮೂಲ ಸೌಕರ್ಯ ಒದಗಿಸಲು ಬಜೆಟ್ ನಲ್ಲಿ ಹಣ ಮೀಸಲಿಡಬೇಕು. ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು.

ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆಯನ್ನು ಕನಿಷ್ಠ 4500 ರೂ ಗಳಿಗೆ ಹೆಚ್ಚಿಸಬೇಕು : ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿದಿನದ ಮೂರೊತ್ತಿನ ಊಟಕ್ಕೆ ಕೇವಲ 50-60ರೂ ಗಳಂತೆ ತಿಂಗಳಿಗೆ 1850 ರಿಂದ 1750 ರೂಗಳನ್ನು ಮಾತ್ರ ನೀಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ವಿಪರೀತವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ಹಣದಲ್ಲಿ ಗುಣಮಟ್ಟದ ಪೌಷ್ಠಿಕ ಆಹಾರ ಒದಗಿಸಲಾಗುತ್ತಿಲ್ಲ.
ಎಲ್ಲಾ ಆಹಾರ ಪದಾರ್ಥಗಳು, ಗ್ಯಾಸ್, ತರಕಾರಿ ಬೆಲೆ ಏರಿಕೆ ಆಗಿದೆ. ಆದರೂ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿಲ್ಲ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಪೌಷ್ಠಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಜೈಲಿನಲ್ಲಿರುವ ಕೈದಿಗಳಿಗಳ ಮೂರೊತ್ತಿನ ಆಹಾರಕ್ಕೆ ಪ್ರತಿದಿನ ನೂರಾರು ರೂಪಾಯಿ ಖರ್ಚು ಮಾಡುತ್ತಿದೆ. ರಾಜ್ಯ ಸರ್ಕಾರವು ನಮ್ಮ ಹೋರಾಟದ ನಂತರ ಪ್ರತಿ ವರ್ಷ ಕೇವಲ 100 ರೂ ಮಾತ್ರ ಏರಿಕೆ ಮಾಡುವುದನ್ನು ಬಿಟ್ಟು ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ ಮಾಸಿಕ 4500 ರೂಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಬೇಡಿಕೆಗಳು:
* ರಾಜ್ಯ ಬಜೆಟ್ನಲ್ಲಿ ಶಿಕ್ಷಣಕ್ಕಾಗಿ ಕೋಥಾರಿ ಆಯೋಗದ ಶಿಫಾರಸ್ಸಿನಂತೆ ಶೇ.30% ರಷ್ಟು ಹಣ ಮೀಸಲಿಡಬೇಕು.
* ರಾಜ್ಯದಲ್ಲಿರುವ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ (ಪ್ರಸ್ತುತದಲ್ಲಿ ಮೆಟ್ರಿಕ್ ಪೂರ್ವ 1750 ರೂ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 1850ರೂ ಮಾಸಿಕವಾಗಿ ನಿಗದಿಯಾಗಿದೆ) 4500ಕ್ಕೆ ಹೆಚ್ಚಿಸಬೇಕು ಮತ್ತು ಆರೋಗ್ಯದ ಭದ್ರತೆ ಒದಗಿಸಬೇಕು.
* ರಾಜ್ಯಾದ್ಯಂತ ಸರಕಾರಿ ವಸತಿ ನಿಲಯಗಳನ್ನು ಬಲಪಡಿಸಬೇಕು. ಹಾಗೂ ಹೆಚ್ಚುವರಿಯಾಗಿ ಕನಿಷ್ಟ 500 ಹಾಸ್ಟೆಲ್ ಮಂಜೂರು ಮಾಡಬೇಕು.
* ಪ್ರತಿಯೊಂದು ಹಾಸ್ಟೆಲ್ ಗಳಿಗೆ ಉಚಿತ ವೈಫೈ ನೀಡಬೇಕು.
* ಹಾಸ್ಟೆಲ್ ಗಳಿಗೆ ಪ್ರತ್ಯೇಕವಾಗಿ ಗ್ರಂಥಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ಮಂಜೂರ ಮಾಡಬೇಕು.
* ಗ್ರಂಥಪಾಲಕರು ಹಾಗೂ ಕಂಪ್ಯೂಟರ್ ಶಿಕ್ಷಕರ ನೇಮಕ ಮಾಡಬೇಕು.
* ವಾರ್ಡನ್ ಮತ್ತು ವಸತಿ ಶಾಲೆಗಳಲ್ಲಿ ಪ್ರಾಂಶುಯಪಾಲರ, ಬೋಧಕರು ಮತ್ತು ಬೋಧಕೇತರ ಹುದ್ದೆಗಳ ನೇಮಕ
ಮಾಡಬೇಕು.
* ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು “ಎಲ್ಲ ಹಾಸ್ಟೆಲ್ ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿ” ರಚಿಸಬೇಕು.
* ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹೆಲ್ತ್ ಸೆಂಟರ್ (ಆಸ್ಪತ್ರೆ) ಮಂಜೂರ ಮಾಡಬೇಕು. ಪ್ರಥಮ ಚಿಕಿತ್ಸೆ ಕಿಟ್ ಒದಗಿಸಬೇಕು.
* ರುಚಿಕರ ಹಾಗೂ ಉತ್ತಮ ಗುಣಮಟ್ಟದ ಆಹಾರ ನೀಡಬೇಕು.
* ಕಿಟ್ ವಿತರಣೆಯ ತಾರತಮ್ಯವನ್ನು ನಿಲ್ಲಿಸಿ. ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಕಿಟ್ ವಿತರಣೆ ಮಾಡಬೇಕು.
* ಆಟದ ಸಾಮಗ್ರಿಗಳನ್ನು ವಿತರಣೆ ಮಾಡಬೇಕು.
* ಗ್ರಂಥಾಲಯ ಹಾಗೂ ಸಿಲೆಬಸ್ ಪುಸ್ತಕಗಳನ್ನು ಒದಗಿಸಬೇಕು.
* ಬಟ್ಟೆ ತೊಳೆಯುವ ಯಂತ್ರ ನೀಡಬೇಕು.
* ಶೌಚಾಲಯಗಳ ಕೊಠಡಿಗಳ ಸಂಖ್ಯೆಗಳನ್ನು ಹೆಚ್ಚಿಸಬೇಕು ಹಾಗೂ ಸ್ವಚ್ಪತೆ ಕಾಪಾಡಬೇಕು.
* ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು, ದೂರದರ್ಶನ (ಟಿವಿ), ಸೊಳ್ಳೆ ಬತ್ತಿ (Good Night) ನೀಡಬೇಕು.
* ಹಾಸ್ಟೆಲ್ ಗಳಿಗೆ ನೀಡಲಾದ ಎಲ್ಲಾ ಸೌಲಭ್ಯ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ಈ ಸಂದರ್ಭದಲ್ಲಿ ಸುಪ್ರೀತಾ ಲಂಕೆರ್, ಸಿಂಧು ತಳವಾರ್, ರೂಪ ಲಮಾಣಿ, ಮದುಶ್ರೀ ಪಕೀರಪ್ಪ, ವಂದನ ಎಲ್, ಉಮಾ ನಾಗವತ್, ರೋಜಾ ಎಲ್, ನಂದಿತಾ ಬಜೆಂತ್ರಿ, ರಾಧಿಕಾ ಓಲೇಕಾರ್, ರಕ್ಷಿತಾ ಎಂ, ರಂಜಿತಾ ವಡತೆರ್, ನಿರಮಲ್, ಸ್ವಾತಿ, ಅಶ್ವಿನೀ ಕೆ ಸೇರಿದಂತೆ ಆನೇಕ ಹಾಸ್ಟೆಲ್ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಭೂ ಹಕ್ಕಿನ ಹೋರಾಟದ ಧ್ವನಿ | ಮರಕುಂಬಿ ಹೋರಾಟದ ರೂವಾರಿ ನಿತ್ಯಾನಂದ ಸ್ವಾಮಿ Janashakthi Media
