ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಡಾ ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಡಿ.ಬಿ.ನಟೇಶ್ ಅವರಿಗೆ ಹಣ ಪಡೆದು ಮುಂಬಡ್ತಿ ನೀಡಲಾಗಿದೆ ಎಂಬ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಗಳಿಗೆ ಸುದೀರ್ಘ ಸ್ಪಷ್ಟೀಕರಣದ ಜೊತೆಗೆ ಎಚ್ಚರಿಕೆಯ ಸಂದೇಶವನ್ನೂ ಕೊಟ್ಟಿದ್ದಾರೆ. ಮುಡಾ
2023 ನವೆಂಬರ್ 13 ರಂದು ತಾಂತ್ರಿಕ ಸಮಿತಿ ನೀಡಿದ್ದ ವರದಿ ಹಾಗೂ ನಿವೃತ್ತ ನ್ಯಾ. ಪಿ.ಎನ್.ದೇಸಾಯಿ ಅವರ ವರದಿಯನ್ನು 2025ಸೆ.4 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದ್ದು, ಇದರ ಆಧಾರದ ಮೇಲೆ ಮುಂಬಡ್ತಿ ನೀಡಲಾಗಿದೆ. ಈ ಎರಡೂ ವರದಿಗಳಲ್ಲಿ ನಟೇಶ್ ವಿರುದ್ಧದ ಆರೋಪಗಳು ನಿರಾಧಾರವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ನೀಡಿದ ಸ್ಪಷ್ಟನೆ ಏನು?
2024 ನ.11 ರಂದು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ1988 (ತಿದ್ದುಪಡಿ ಕಾಯ್ದೆ 2018) ರ ಕಲಂ 17(ಎ) ಅಡಿ ಡಿ.ಬಿ. ನಟೇಶ್ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿರಲಿಲ್ಲ. ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಗಳು 1957ರ ನಿಯಮ 10ರ ಅಡಿ ಅಗತ್ಯ ಕಾರಣ ಕಂಡುಬರದ ಕಾರಣ ಅಮಾನತು ಮಾಡಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯ ಹಕ್ಕಿನ ಕಾಯ್ದೆ ಜಾರಿಯಾಗಲಿ – ಆರೋಗ್ಯ ಹಕ್ಕು ಜಾಥಾ ಯಶಸ್ವಿ
ಸ್ನೇಹಮಯಿ ಕೃಷ್ಣ ಅವರು ಮಾಡಿರುವ ಆರೋಪಗಳಿಗೆ ಯಾವುದೇ ಪುರಾವೆ ಇಲ್ಲ, ಆದ್ದರಿಂದಲೇ ನಿಯಮಾನುಸಾರ ನಟೇಶ್ ಅವರಿಗೆ ಮುಂಬಡ್ತಿ ನೀಡಲಾಗಿದೆ. ಮುಡಾ ತನಿಖೆಗೂ, ಮುಂಬಡ್ತಿಗೂ ಸಂಬಂಧವಿಲ್ಲ ಎಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಸರ್ಕಾರದ ಆಸ್ತಿಯನ್ನು ಅಕ್ರಮವಾಗಿ ಭ್ರಷ್ಟಚಾರ ಅಥವಾ ಅಧಿಕಾರ ದುರ್ಬಳಕೆ ಮೂಲಕ ಕಬಳಿಸುವವರ ವಿರುದ್ಧ ಕಾನೂನು ಮತ್ತು ನಿಯಮಾವಳಿಗಳ ಪ್ರಕಾರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ದೂರುದಾರರ ಆರೋಪವು ನಿರಾಧಾರವಾಗಿದ್ದು, ಅಧಿಕಾರಿಯನ್ನು ರಕ್ಷಣೆ ಮಾಡುವ ಪ್ರಮೇಯ ಉದ್ಭವಿಸುವುದಿಲ್ಲ.
ಪ್ರಕರಣದ ತನಿಖೆ, ವಿಚಾರಣೆಗಾಗಿ ಈಗಾಗಲೇ ಲೋಕಾಯುಕ್ತ ಸಂಸ್ಥೆಗೆ ಪೂರ್ವಾನುಮತಿ ನೀಡಿ, ಆದೇಶಿಸಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಕಾನೂನು ಮತ್ತು ನಿಯಮಾನುಸಾರ ಕ್ರಮ ಕೈಗೊಂಡಿರುವುದರಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಸ್ನೇಹಮಯಿ ಕೃಷ್ಣ ಆಕ್ಷೇಪಣೆಗೆ ಪ್ರತಿಕ್ರಿಯಿಸಿದ್ದಾರೆ.
ಡಿ.ಬಿ. ನಟೇಶ್ಗೆ ಮುಂಬಡ್ತಿ ನೀಡಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಲಂಚ ನೀಡಲಾಗಿದೆ ಎಂಬ ಸ್ನೇಹಮಯಿ ಕೃಷ್ಣ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಅವರು, ವೃಥಾರೋಪ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಅನುಕೂಲಕರವಾಗಿ ಕೆಲಸ ಮಾಡಿರುವ ನಟೇಶ್ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದರೂ ಅವರನ್ನು ಅಮಾನತು ಮಾಡದೇ ಕೆಲಸದಲ್ಲಿ ಮುಂದುವರಿಸಲಾಗಿದೆ. ಜತೆಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಮುಂಬಡ್ತಿ ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಈ ಸಂಬಂದ ಪತ್ರ ಬರೆದಿದ್ದ ಸ್ನೇಹಮಯಿ ಕೃಷ್ಣ ಅವರು ಅಗತ್ಯ ಸ್ಪಷ್ಟನೆ ಕೇಳಿದ್ದರು.
ಇದನ್ನೂ ನೋಡಿ: ಕಾರ್ಮಿಕ ನಾಯಕ ಎಚ್. ವಿ. ಅನಂತಸುಬ್ಬಾರಾವ್ಗೆ ನುಡಿ ನಮನ Janashakthi Media
