ಬೆಂಗಳೂರು | ಆರ್‌ಎಸ್‌ಎಸ್ ಕುರಿತು ಹೇಳಿಕೆ ಸಮರ್ಥಿಸಿದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕುರಿತು ನೀಡಿದ ತಮ್ಮ ಹೇಳಿಕೆಗಳನ್ನು ಹಾಗೂ ಕರಾವಳಿ ಕರ್ನಾಟಕದಲ್ಲಿ ಸಾಮುದಾಯಿಕ ಉದ್ವಿಗ್ನತೆ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬ ತಮ್ಮ ಅಭಿಪ್ರಾಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.

ಆರ್‌ಎಸ್‌ಎಸ್ ಸಂಬಂಧಿತ ಕಾನೂನು ನೋಂದಣಿ ವಿಚಾರವನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ಸಂಸ್ಥೆ ದೇಣಿಗೆಗಳನ್ನು ಸ್ವೀಕರಿಸುತ್ತಿದ್ದರೂ ಸಂಬಂಧಿತ ಕಾನೂನುಗಳಡಿ ನೋಂದಾಯಿತವಾಗಿಲ್ಲ ಎಂದು ಹೇಳಿದರು. ಕಾನೂನಿನ ಪ್ರಕಾರ ದೇಣಿಗೆಗಳನ್ನು ಸ್ವೀಕರಿಸುವ ಸಂಸ್ಥೆಗಳು ನೋಂದಾಯಿತವಾಗಿರಬೇಕು. ಯಾವುದೇ ಸಂಸ್ಥೆ ನೋಂದಣಿ ಮಾಡಿಕೊಳ್ಳಲು ನಿರಾಕರಿಸಿದರೆ ಅದು ಕಾನೂನುಬಾಹಿರ. ಅಂತಹ ಸಂಸ್ಥೆಯನ್ನು ನಡೆಸಲು ಅವಕಾಶ ಇದೆಯೇ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ನೋಂದಣಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರೆ, ಅದನ್ನು ಎದುರಿಸಲು ಸರ್ಕಾರ ಕಾನೂನು ತರಲು ಪರಿಗಣಿಸಬಹುದು ಎಂದರು. ಸಂಸ್ಥೆಯ ಕಾನೂನುಸ್ಥಿತಿ ಕುರಿತು ಪ್ರಶ್ನೆ ಎತ್ತಿದ ಅವರು, “ನಾನು ‘ಸಂಘಪ್ಪ’ (ಆರ್‌ಎಸ್‌ಎಸ್) ಬಗ್ಗೆ ಪ್ರಶ್ನಿಸಿದರೆ, ಬೇರೆವರು ಯಾಕೆ ಪ್ರತಿಕ್ರಿಯಿಸಬೇಕು, ಬಿಜೆಪಿ ಅವರ ವಕ್ತಾರವೇ?” ಎಂದು ಕೇಳಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಮಾನಹಾನಿ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಆರ್ ಎಸ್ ಎಸ್ ರಾಷ್ಟ್ರ ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ಆರ್‌ಎಸ್‌ಎಸ್ ಕಾರ್ಯಕರ್ತರಲ್ಲಿ ಯಾಕೆ ಅನೇಕರು ಅವಿವಾಹಿತರಾಗಿದ್ದಾರೆ ಎಂದು ಪ್ರಶ್ನಿಸಿದರು. ಆರ್‌ಎಸ್‌ಎಸ್ ಪರವಾಗಿ ಮಾತನಾಡುತ್ತಿರುವ ಬಿಜೆಪಿ ನಾಯಕರನ್ನು ವ್ಯಂಗ್ಯ ಮಾಡಿದ ಅವರು, ಈ ನಾಯಕರಲ್ಲಿ ಯಾರೂ ಆರ್‌ಎಸ್‌ಎಸ್ ಯೂನಿಫಾರ್ಮ್ ಧರಿಸಿಲ್ಲ. ವಿಜಯೇಂದ್ರ ಅವರ ಮಕ್ಕಳು ಆರ್‌ಎಸ್‌ಎಸ್ ಗಣವೇಶ್ ಧರಿಸುತ್ತಾರೆಯೇ ನೀವು ಮತ್ತು ನಿಮ್ಮ ಮಕ್ಕಳು ಪೂರ್ಣಕಾಲಿಕ ಪ್ರಚಾರಕರಾದಾಗ ಮಾತ್ರ ನೀವು ಆರ್‌ಎಸ್‌ಎಸ್‌ನವರು ಎಂದು ನಾನು ನಂಬುತ್ತೇನೆ ಎಂದರು.

ಬಿಜೆಪಿ ನಾಯಕರ ಮಕ್ಕಳೂ ಆರ್‌ಎಸ್‌ಎಸ್ ಶಾಖೆಗಳಿಗೆ ಹೋಗುತ್ತಾರೆಯೇ ಎಂಬುದನ್ನು ನೋಡಬೇಕು. ಅದರ ಫೋಟೋಗಳನ್ನು ನನಗೆ ಕಳುಹಿಸಿ. ಅವರು ಗೋಶಾಲೆಗಳಿಗೆ ಹೋಗುವುದಿಲ್ಲ, ಗೋಮೂತ್ರ ಸೇವಿಸುವುದಿಲ್ಲ, ಧರ್ಮರಕ್ಷಣೆ ಮಾಡುವುದಿಲ್ಲ. ಕೇವಲ ತ್ರಿಶೂಲ ದೀಕ್ಷೆ ಮಾತ್ರ ನೀಡುತ್ತಾರೆ. ಆರ್‌ಎಸ್‌ಎಸ್ ಶಾರ್ಟ್ಸ್ ಧರಿಸಿದರೆ ಎಂಎಲ್‌ಸಿ ಆಗುತ್ತೀರಿ ಎಂದು ಟೀಕಿಸಿದರು.

ಕರಾವಳಿ ಕರ್ನಾಟಕದ ಬಗ್ಗೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಖರ್ಗೆ, ಮಂಗಳೂರು ಆಗಲಿ, ಕಲಬುರಗಿ ಆಗಲಿ ಅಥವಾ ಬೆಂಗಳೂರು ಆಗಲಿ, ಹೂಡಿಕೆ ಬರಲು ಅನುಕೂಲಕರ ವಾತಾವರಣ ಅಗತ್ಯ. ಕೆಟ್ಟ ರಸ್ತೆಗಳು ‘ಬ್ರ್ಯಾಂಡ್ ಬೆಂಗಳೂರು’ಗೆ ಹಾನಿ ಮಾಡುವಂತೆ, ಕೆಲವರ ನಡೆ ‘ಬ್ರ್ಯಾಂಡ್ ಮಂಗಳೂರು’ಗೂ ಹಾನಿ ಮಾಡುತ್ತಿದೆ ಎಂದರು.

ಕ್ಯಾನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಾಮುದಾಯಿಕ ಉದ್ವಿಗ್ನತೆ ವ್ಯಾಪಾರ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸೂಚಿಸಿರುವುದನ್ನು ಉಲ್ಲೇಖಿಸಿದ ಅವರು, ಸರ್ಕಾರ ಇದಕ್ಕೆ ಪ್ರತಿಕ್ರಿಯಿಸುವ ಜವಾಬ್ದಾರಿ ಹೊಂದಿದೆ ಎಂದರು. ನಮ್ಮ ಮಾತು ತಪ್ಪು ಎಂದು ಸಾಬೀತುಪಡಿಸುವ ಬದಲು, ಬಿಜೆಪಿ ಈ ಸಮಸ್ಯೆಯನ್ನು ಒಪ್ಪಿಕೊಳ್ಳಬೇಕು ಎಂದರು.

ಕರಾವಳಿ ಕರ್ನಾಟಕದಲ್ಲಿ ಐಟಿ ಪಾರ್ಕ್‌ಗಳ ಸ್ಥಾಪನೆಗೆ ಟೆಂಡರ್ ಕರೆದು, ಬ್ಲೂ ಎಕಾನಮಿ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ರಾಜಕೀಯ ಮತ್ತು ಧಾರ್ಮಿಕ ನಾಯಕರು ಸಹಕರಿಸಿದರೆ ಜಿಲ್ಲೆಯಲ್ಲಿ ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸಬಹುದು ಎಂದು ಹೇಳಿದರು.

ಕಲಬುರಗಿ ಅಭಿವೃದ್ಧಿ ಆಗಿಲ್ಲ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಸಿಮೆಂಟ್ ಕಂಪನಿಗಳು ಹೂಡಿಕೆ ಮಾಡಿವೆ ಎಂದು ಹೇಳಿದರು. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಸಂವಿಧಾನದ ಕಲಂ 371 ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಆದರೆ ಅದಕ್ಕೆ ಬಿಜೆಪಿ ವಿರೋಧಿಸಿತ್ತು ಎಂದರು.

ಆರ್ಥಿಕ ಅಸಮಾನತೆಯನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಬೆಂಗಳೂರು ರಾಜ್ಯದ ಜಿಎಸ್‌ಡಿಪಿಗೆ ಸುಮಾರು 40% ಕೊಡುಗೆ ನೀಡುತ್ತದೆ. ದಕ್ಷಿಣ ಕನ್ನಡ 5.4% ಮತ್ತು ಕಲಬುರಗಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ತಲಾ ಸುಮಾರು 1.9% ಕೊಡುಗೆ ನೀಡುತ್ತಿವೆ, ಇದನ್ನು ಹೆಚ್ಚಿಸಬಾರದೆ? ರಾಜ್ಯದ ಜಿಎಸ್‌ಡಿಪಿ ಕೊಡುಗೆಯನ್ನು ಹೆಚ್ಚಿಸುವುದು ಸರ್ಕಾರ ಮತ್ತು ಸ್ಥಳೀಯ ನಾಯಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಇದನ್ನೂ ನೋಡಿ: ಅಖಿಲ ಭಾರತ ಮುಷ್ಕರ| ಪೊಲೀಸರ ದರ್ಪ – ಮಾನವೀಯತೆ ಕಳೆದುಕೊಂಡ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *