ನವದೆಹಲಿ | ನ್ಯಾಯಾಲಯದಲ್ಲಿ ವಕೀಲನಿಗೆ ದೈಹಿಕ ಹಲ್ಲೆ : “ಗುಂಡಾ ರಾಜ್” ಒಪ್ಪಲಾಗದು ಎಂದ ಸಿಜೇಐ

ನವದೆಹಲಿ: ಫೆಬ್ರವರಿ 7 ರಂದು ದೆಹಲಿಯ ಜಿಲ್ಲಾ ನ್ಯಾಯಾಲಯದಲ್ಲಿ  ದೈಹಿಕ ಹಲ್ಲೆಯಾಗಿದೆ ಎಂದು ಆರೋಪಿಸಿರುವ ವಕೀಲನಿಗೆ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.  “ಗುಂಡಾ ರಾಜ್” ಅನ್ನು ಒಪ್ಪಲಾಗದು ಎಂದಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೆಳಿದರು.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ಎನ್‌ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠದ ಮುಂದೆ ವಕೀಲರೊಬ್ಬರು ತಮ್ಮ ಅರ್ಜಿಯ ತುರ್ತು ವಿಚಾರಣೆಗಾಗಿ ಮನವಿ ಸಲ್ಲಿಸಿದರು.

ದೂರುದಾರರ ಪರ ವಕೀಲರು ಅನೇಕ ಗೂಂಡಾಗಳೊಂದಿಗೆ ನನ್ನ ಮೇಲೆ ಹಲ್ಲೆ ನಡೆಸಿದರು. ನಾನು ಆರೋಪಿಯ ಪರವಾಗಿ ತೀಸ್ ಹಜಾರಿ ನ್ಯಾಯಾಲಯದ ಎಡಿಜೆ (ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ) ಹರ್ಜಿತ್ ಸಿಂಗ್ ಪಾಲ್ ಅವರ ಪೀಠದ ಮುಂದೆ ಹಾಜರಾಗಿದ್ದೆ ಆಗ ನ್ಯಾಯಾಧೀಶರು ಅಲ್ಲಿಯೇ ಕುಳಿತಿದ್ದರು. ನ್ಯಾಯಾಲಯದ ಎಲ್ಲರೂ ಅಲ್ಲಿದ್ದರು ಎಂದು ವಕೀಲ ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ : ಮ್ಯಾಪಿಂಗ್‌ ಹೆಸರಿನ ಪರಿಷ್ಕರಣೆ – ಕರ್ನಾಟಕದಲ್ಲಿ ಎಸ್‌ಐಆರ್

ಫೆಬ್ರವರಿ 7 ರಂದು ಈ ಘಟನೆ ನಡೆದಿದೆ. ಈ ವಿಷಯವನ್ನು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದಿದ್ದೀರಾ ಎಂದು ವಕೀಲನನ್ನು ಪೀಠ ಪ್ರಶ್ನಿಸಿತು.

ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲು ವಕೀಲನಿಗೆ ತಿಳಿಸಿದ ಸಿಜೆಐ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಗಮನಹರಿಸಲಿ. ಆಡಳಿತಾತ್ಮಕ ಕಡೆಯಿಂದ ಕ್ರಮ ಕೈಗೊಳ್ಳಲಾಗುವುದು. ನಾವು ಈ ರೀತಿಯ ‘ಗುಂಡಾ ರಾಜ್’ ಅನ್ನು ಒಪ್ಪಲಾಗದು. ಘಟನೆ ನಡೆದಿರುವುದರ ಅರ್ಥ ಕಾನೂನು ಸುವ್ಯವಸ್ಥೆಯ ವೈಫಲ್ಯ. ಇದನ್ನು ಮಾಡಿ ಮತ್ತು ನನಗೆ ತಿಳಿಸಿ” ಎಂದು ಸಿಜೆಐ ಹೇಳಿದರು. ನ್ಯಾಯಾಲಯ ವ್ಯಾಪ್ತಿಯಾದ ಹೈಕೋರ್ಟ್‌ ಮೊರೆ ಹೋಗುವಂತೆ ಪೀಠವು ವಕೀಲನಿಗೆ ತಿಳಿಸಿತು.

ಜಾರ್ಖಂಡ್​ ಹೈಕೋರ್ಟ್​ ಪ್ರಕರಣವೊಂದರ ತೀರ್ಪನ್ನು ಮೌಖಿಕವಾಗಿ ಪ್ರಕಟಿಸಿ, ಅದನ್ನು ವೆಬ್​ಸೈಟ್​​ನಲ್ಲಿ ಅಪ್ಲೋಡ್​ ಮಾಡದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠವು ಅಸಮಾಧಾನ ವ್ಯಕ್ತಪಡಿಸಿತ್ತು. ಹೈಕೋರ್ಟ್​ಗಳ ಕಾರ್ಯವೈಖರಿ ಬಗ್ಗೆ ಇತ್ತೀಚಿಗೆ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿ, ಪ್ರಕರಣಗಳ ತೀರ್ಪುಗಳನ್ನು ತಿಂಗಳುಗಟ್ಟಲೇ ಕಾಯ್ದಿರಿಸುವ ಚಾಳಿಯನ್ನು ಟೀಕಿಸಿತ್ತು.

ನ್ಯಾಯಾಧೀಶರಲ್ಲಿ ಎರಡು ಬಗೆಯವರಿದ್ದಾರೆ. ಒಬ್ಬರು ಕಠಿಣ ಪರಿಶ್ರಮಿಗಳು. ಅವರು ಎಲ್ಲ ಪ್ರಕರಣಗಳನ್ನು ಆಲಿಸಿ ಆದೇಶ ಹೊರಡಿಸುತ್ತಾರೆ. ಇನ್ನೊಂದು ವರ್ಗದ ಜಡ್ಜ್​ಗಳು ಕೆಲ ಪ್ರಕರಣಗಳನ್ನು ಆಲಿಸಿ, ಅವುಗಳ ತೀರ್ಪನ್ನು ಪ್ರಕಟಿಸದೇ, ಸುಖಾಸುಮ್ಮನೆ ಕಾಯ್ದಿರಿಸುತ್ತಾರೆ. ಇದರಿಂದ ನ್ಯಾಯ ವಿಳಂಬ ಮತ್ತು ಕಾರ್ಯದೊತ್ತಡ ಹೆಚ್ಚಿಸಲಿದೆ ಎಂದು ಸಿಜೆಐ ಸೂರ್ಯಕಾಂತ್​ ಅವರು ಹೇಳಿದ್ದರು.

“ನಾವು ಯಾರ ಮೇಲೂ ವೈಯಕ್ತಿಕ ಕಾಳಜಿ ವಹಿಸುವುದಿಲ್ಲ. ನ್ಯಾಯ ವಿಳಂಬ ನ್ಯಾಯಾಂಗದ ಮುಂದಿರುವ ಸವಾಲು. ತೀರ್ಪು ಕಾಯ್ದಿರಿಸುವುದು ಕಾಯಿಲೆಯಾಗಿ ಉಲ್ಬಣಿಸಿದೆ. ಇದಕ್ಕೆ ಚಿಕಿತ್ಸೆ ನೀಡಬೇಕು ಮತ್ತು ನಿರ್ಮೂಲನೆ ಮಾಡಬೇಕಿದೆ. ಇದು ಇನ್ನಷ್ಟು ಹರಡಲು ಬಿಡಬಾರದು” ಎಂದಿದ್ದರು.

ಇದನ್ನೂ ನೋಡಿ : “ರೈತ–ಕಾರ್ಮಿಕ–ಕೂಲಿಕಾರರ ಮುಷ್ಕರ | ಕೆಲಸ ಸ್ಥಗಿತ, ಬೀದಿಗಿಳಿಯಲಿದ್ದಾರೆ ದುಡಿಯುವ ಜನ” | Janashakthi Media

Donate Janashakthi Media