ಯಾದಗಿರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ, ಜಿಲ್ಲೆಯ ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗಬೇಕು ಎಂದು ಆಗ್ರಹಿಸಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಲ್ಲಿನ ಗಂಜ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಸಮರ್ಪಕ
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ಹತ್ತಿ, ತೊಗರಿ, ಉದ್ದು, ಹೆಸರು, ಭತ್ತ, ಶೇಂಗಾ, ಸಜ್ಜೆ, ಜೋಳ ಸೇರಿದಂತೆ ಎಲ್ಲಾ ಬೆಳೆಗಳಿಗೆ ಕೇಂದ್ರ ಸರಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ದರದಂತೆ ಖರೀದಿ ಕೇಂದ್ರಗಳನ್ನು ವರ್ಷಪೂರ್ತಿ ಸತತವಾಗಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು. ಖರೀದಿ ಕೇಂದ್ರಗಳು ನಿರಂತರವಾಗಿ ಕಾರ್ಯನಿರ್ವಹಿಸಿದರೆ ರೈತರು ಖಾಸಗಿ ವ್ಯಾಪಾರಿಗಳ ಮೊರೆ ಹೋಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: ಮುಂಬೈ ವಿವಿ ಆಹ್ವಾನ ರದ್ದತಿಗೆ ‘ವಿಶ್ವಗುರು’ ಕಾರಣ – ನಟ ನಾಸಿರುದ್ದೀನ್ ಶಾ ಆರೋಪ
ಈ ಬಾರಿ ಅತೀವೃಷ್ಟಿಯಿಂದಾಗಿ ಈ ವರ್ಷ ಶೇಂಗಾ ಬೆಳೆ ಕಡಿಮೆ ಇಳುವರಿ ಬಂದಿದ್ದು, ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ಬೆಲೆ ಕುಸಿತ ಮತ್ತಷ್ಟು ಹೊರೆ ತಂದಿದೆ. ಹೀಗಾಗಿ ಶೇಂಗಾ ಬೆಲೆಯನ್ನು ಪ್ರತಿ ಕ್ವಿಂಟಲ್ಗೆ ಕನಿಷ್ಠ ರೂ.12,000 ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರ ನಿಗಧಿ ಮಾಡಿದ ಎಂ.ಎಸ್.ಪಿ ದರದಂತೆ 12 ತಿಂಗಳುಗಳ ಕಾಲ ಎಲ್ಲಾ ಬೆಳೆಗಳ ಖರೀದಿ ಕೇಂದ್ರಗಳನ್ನು ನಿರಂತರವಾಗಿ ಆರಂಭಿಸಿದರೆ ಮಾತ್ರ ರೈತರಿಗೆ ನ್ಯಾಯಯುತ ಬೆಲೆ ಸಿಗಲಿದೆ ಎಂದು ಅವರು ಒತ್ತಾಯಿಸಿದು.
ಈ ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮದ್ದರಕಿ, ಜಿಲ್ಲಾ ಅಧ್ಯಕ್ಷ ಮಹಾವೀರ ಲಿಂಗೇರಿ, ತಾಯಪ್ಪ ನಾಗ್ಲಾಪೂರ, ಶ್ರೀಕಾಂತ ಕುಂಬಾರ, ಮಲ್ಲಿಕಾರ್ಜುನ ಹೊನಗೇರಾ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.
ಇದನ್ನೂ ನೋಡಿ: ಗೋಡ್ಸೆಯ 8 ಪುಟದ ಹೇಳಿಕೆ 200 ಪುಟ ಮೀರಿದ್ದು ಹೇಗೆ? ನವ ಹಿಂದುತ್ವದ ಅಂಗಡಿ ಬಂದ್ ಮಾಡುವುದು ಹೇಗೆ?
