ಅರಳೀಕಟ್ಟಿ| ಶಿಕ್ಷಕರನ್ನು ಮುಂದುವರೆಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ – ಎಸ್ಎಫ್ಐ ಬೆಂಬಲ

ಹಿರೇಕೆರೂರ: ತಾಲ್ಲೂಕಿನ ಅರಳೀಕಟ್ಟಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ಎದುರು ನೂತನವಾಗಿ ಪ್ರಾರಂಭವಾದ ಸರ್ಕಾರಿ ಪ್ರೌಢಶಾಲೆಗೆ ಖಾಯಂ ಶಿಕ್ಷಕರು ನೇಮಕಾತಿಗಾಗಿ, ಹೆಚ್ಚುವರಿಯಾಗಿ ವರ್ಗಾವಣೆಗೊಂಡ ಶಿಕ್ಷಕರನ್ನು ಮುಂದುವರೆಯುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು, ಊರಿನ ಗ್ರಾಮಸ್ಥರು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಬೆಂಬಲದೊಂದಿಗೆ ಪ್ರತಿಭಟನಾ ಧರಣಿ ನಡೆಸಿದರು.

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಅರಳೀಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಉನ್ನತೀಕರಿಸಿದ ಪ್ರೌಢಶಾಲೆಯಾಗಿ 2024-25ನೇ ಸಾಲಿನಲ್ಲಿ ಮಂಜೂರಾದ ಶಾಲೆಗೆ ಹೊಲಬಿಕೊಂಡ ಸರ್ಕಾರಿ ಶಾಲೆಯಿಂದ ರಘು ಎಮ್ ಎನ್ (ಟಿಜಿಟಿ) ನಿಯೋಜನೆ ಮೇರೆಗೆ ಜೂನ್ ತಿಂಗಳಿಂದ ಇಲ್ಲಿವರೆಗೂ ಕಾರ್ಯ ನಿರ್ವಹಿಸುತ್ತಿದ್ದಾರೆ.

1 ರಿಂದ 9ನೇ ತರಗತಿಯವರೆಗೆ 204 ವಿದ್ಯಾರ್ಥಿಗಳ ಪೈಕಿ 8ನೇ ತರಗತಿಯವೆರೆಗೆ ವಿಷಯವಾರು ಶಿಕ್ಷಕರಿದ್ದಾರೆ. ಆದರೆ  ನೂತನವಾಗಿ ಮಂಜೂರಾದ ಪ್ರೌಢಶಾಲೆಗೆ ಒಬ್ಬರೂ  ಖಾಯಂ ಶಿಕ್ಷಕರಿಲ್ಲ. ನಿಯೋಜಿತ ವರ್ಗಾವಣೆಯಲ್ಲಿದ್ದ ಒಬ್ಬೆಬ್ಬ ಶಿಕ್ಷಕರನ್ನು ರಾಣೆಬೆನ್ನೂರು ತಾಲ್ಲೂಕಿನ ಅರೆಮಲ್ಲಾಪುರ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಶಾಲೆಗೆ ವರ್ಗಾವಣೆ ಆಗಿರುತ್ತದೆ.

ಇದನ್ನೂ ಓದಿ: ದೆಹಲಿ | ಶಿಕ್ಷಕರ ಹಕ್ಕುಗಳು ಮತ್ತು ಕಲ್ಯಾಣ ಬೇಡಿಕೆಗಳು ಪರಿಹರಿಸಲು ಆಗ್ರಹಿಸಿ ಮನವಿ

ಅರಳಿಕಟ್ಟಿ ಗ್ರಾಮವು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು ಎಲ್ಲರ ಸಹಕಾರದೊಂದಿಗೆ ಇಲ್ಲಿ 2025-26 ನೇ ಸಾಲಿನಲ್ಲಿ ಉನ್ನತೀಕರಿಸಿದ ಪ್ರೌಢ ಶಾಲೆ ಮಂಜೂರ ಆಗಿರುತ್ತದೆ ಆದರೆ ಇಲ್ಲಿಯವರೆಗೂ ಈ ಶಾಲೆಗೆ ಯಾವುದೇ ಹುದ್ದೆಗಳನ್ನು ಮಂಜೂರು ಮಾಡಿರುವುದಿಲ್ಲ ಈ ಶಾಲೆಯಲ್ಲಿ ನಿಯೋಜನೆ ಮೇರೆಗೆ ಪ್ರೌಢಶಾಲಾ ವಿಭಾಗಕ್ಕೆ ಈ ಶಿಕ್ಷಕರು ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದು ಇವರನ್ನು ಸಹ ವರ್ಗಾವಣೆಗೊಳಿಸಲಾಗಿದೆ ಕೆಪಿಎಸ್ ಅರೇಮಲ್ಲಾಪುರದಲ್ಲಿ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರು ಇರುವುದರಿಂದ ನಮ್ಮಲ್ಲಿ ಹೊಸದಾಗಿ ಪ್ರೌಢಶಾಲೆ ಮಂಜೂರೆಯಾಗಿದ್ದು ಮುಂದಿನ ದಿನಗಳಲ್ಲಿ ಪ್ರವೇಶಾತಿ ಮತ್ತು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ರಘು ಎಮ್ ಎನ್ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು.  ಮಕ್ಕಳ ಶೈಕ್ಷಣಿಕ ಮತ್ತು ಪರೀಕ್ಷಾ ದೃಷ್ಟಿಯಿಂದ ಅರಳಿಕಟ್ಟೆಯಲ್ಲಿ ಈ ಶೈಕ್ಷಣಿಕ ಅವಧಿ ಮುಗಿಯುವವರೆಗೂ ಮುಂದುವರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಶಿಕ್ಷಣ ಇಲಾಖೆಯ ತಾಂತ್ರಾಂಶದಲ್ಲಿ ನಮ್ಮ ಊರಿನ ಶಾಲೆಗೆ ಖಾಲಿ ಇರುವ ಹುದ್ದೆಗಳನ್ನು ತೋರಿಸುತ್ತಿಲ್ಲ. ಹುದ್ದೆಗಳು ಖಾಲಿರುವುದನ್ನು ಇತರೆ ಶಿಕ್ಷಕರ ನೋಡಿ ವರ್ಗಾವಣೆ ತೆಗೆದುಕೊಂಡು ಬರುತ್ತಿದ್ದರು ಆದರೆ ಇಲಾಖೆಯ ನಿರ್ಲಕ್ಷ್ಯ ದಿಂದಾಗಿ ನಮ್ಮ ಶಾಲೆಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳು ಭರ್ತಿ ಮಾಡುತ್ತಿಲ್ಲ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಊರಿನ ಗ್ರಾಮಸ್ಥರು ಬೃಹತ್ ಹೋರಾಟ ಮಾಡುತ್ತೇವೆ ಎಂದು ಕಾರ್ಮಿಕ ಮುಖಂಡರಾದ ಸಚಿನ್ ಬೂದಿಹಾಳ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿ, ಶೈಕ್ಷಣಿಕ ವರ್ಷದ ಕೊನೆಯ ಹಂತ, ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯದ ಜೊತೆಗೆ ಇಲಾಖೆಯ ಅಧಿಕಾರಗಳು ಚೆಲ್ಲಾಟ ಆಡುವುದು ಸರಿಯಲ್ಲ. ವಿದ್ಯಾರ್ಥಿಗಳ ಬೇಡಿಕೆಯಾದ ಶಿಕ್ಷಕರ ವರ್ಗಾವಣೆಯ ಆದೇಶವನ್ನು ರದ್ದು ಪಡಿಸಿ ಕೂಡಲೇ ಪ್ರಸ್ತುತ ಶಿಕ್ಷಕರನ್ನು ಮುಂದುವರೆಸಬೇಕು. ಹಾಗೂ ಇತರೆ ಪ್ರೌಢಶಾಲಾ ಶಿಕ್ಷಕರನ್ನು ಖಾಯಂ ನೇಮಕ ಮಾಡಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಒಂದು ವೇಳೆ ಅಧಿಕಾರಿಗಳು ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಕಂತೇಶ್ ಮುದ್ದೆರ್, ರೈತ ಮುಖಂಡರಾದ ಫಕ್ಕೀರಪ್ಪ ಸಂಗೋಡ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸುಭಾಷ್ ಉಕ್ಕುಂದ್ರು, ಪೋಷಕರಾದ ಶಿವಾನಂದ ಮಾದರ್, ರಮೇಶ್  ಮಾಡ್ಲೆರ್, ನಾಗರಾಜ್ ಬಿದರಿ, ಹೇಗಪ್ಪಾ ಹದಗಲ್ , ಗುಡ್ಡಪ್ಪ ಕಾಸೆಂಬರ್, ವಿದ್ಯಾರ್ಥಿಗಳಾದ ದಿವ್ಯಾ ಕಡೆಮನಿ, ದೀಪಾ ಅರಳಕಟ್ಟಿ, ರಮ್ಯಾ ಮುಡೇರ್, ಸುಮನ್ ಬಾನು ಅಜೀಜ, ತಾಸಿನ ಬಾನು, ಶಿಲ್ಪಾ ಬೂದಿಹಾಳ, ಪವಿತ್ರಾ ಬಸೂರ್, ಕಾವ್ಯ ಗುಡ್ಡಪ್ಪ, ಅನು ರಟ್ಟಿಹಳ್ಳಿ, ವೇದ ಹುಚ್ಚಪ್ಪ, ನಿರ್ಮಲ, ರಾಘು ಎನ್, ಕಾರ್ತಿಕ್ ಬಿ, ಯಲ್ಲಪ್ಪ ಹೆಚ್ಚ, ಪೃಥ್ವಿ ಕಾಸಂಬಿ, ಪ್ರದೀಪ ಅರ್,ಶ್ರೀಧರ ಬಿ, ಸಿದ್ದು ಹೆಚ್ಛ, ಮನು  ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಲಾಯರ್ ಎಂಟ್ರಿಯಿಂದ ಸಿಕ್ಕ ಸುಳಿವುಗಳೇನು? Janashakthi Media

Donate Janashakthi Media

Leave a Reply

Your email address will not be published. Required fields are marked *