ಅನ್ನ ಅರಸಿ ಬಂದವರ ಮನೆ ಕಸಿದುಕೊಂಡು ಸರಕಾರ

ಕೋಗಿಲು ಬಡಾವಣೆಯಲ್ಲಿ ಬುಲ್ಡೋಜರ್ ಕಾರ್ಯಾಚರಣೆಯಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರ ಪಟ್ಟಿ ನೋಡಿದೆ. ಒಟ್ಟು 188 ಮನೆಗಳು ಧ್ವಂಸಗೊಂಡಿವೆ, ಅದರಲ್ಲಿ ಒಟ್ಟು 1007 ಜನಗಳು ವಾಸ ಇದ್ದರು. ಅದರಲ್ಲಿ 20 ಶೇಕಡಾ ಹಿಂದುಗಳ ಮನೆಗಳು, ಒಂದು ಕ್ರೈಸ್ತರ ಮನೆಗಳು ಸೇರಿವೆ. ಬಹುತೇಕರು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮೂರು ದಶಕಗಳ ಹಿಂದೆ ಬೆಂಗಳೂರಿಗೆ ಅನ್ನ ಅರಸಿ ಬಂದ ತೀರಾ ಬಡ ಕುಟುಂಬಗಳು (ಸ್ಪಷ್ಟವಾಗಿ ಹೇಳಬೇಕೆಂದರೆ ದುಡಿಯುವ ಧರ್ಮಕ್ಕೆ ಸೇರಿದವರು). ಬಹುಷ ಅದರಲ್ಲಿ ಕೇರಳೀಯರ ಕುಟುಂಬಗಳು ಇಲ್ಲ, ಉತ್ತರ ಭಾರತೀಯ ವಲಸಿಗ ಕುಟುಂಬಗಳು ಇದ್ದಂತಿಲ್ಲ.

-ಮುನೀರ್ ಕಾಟಿಪಳ್ಳ

ಬೆಂಗಳೂರಿನ ದುಬಾರಿ ಮನೆ ಬಾಡಿಗೆ, ಆಕಾಶಕ್ಕೆ ನೆಗೆದಿರುವ ಭೂಮಿಯ, ವಸತಿಯ ಬೆಲೆ, ರಟ್ಟೆಯ ಬಲ, ಶ್ರಮವನ್ನೆ ನಂಬಿ ಬದುಕುವ ದುಡಿಯುವ ಜನಗಳು ಬೆಂಗಳೂರಿನಲ್ಲಿ ವಸತಿ ವೆಚ್ಚ ಭರಿಸಲು ಪಡುವ ಪಾಡು, ಅವರ ಬದುಕಿನ ಸಂಕಟಗಳು, ಕಾರ್ಪೋರೇಟ್ ಬಂಡವಾಳದ ಹಿಡಿತಕ್ಕೆ ಸಿಲುಕಿರುವ ಸರಕಾರಗಳ ನೀತಿಗಳ ಹಿನ್ನಲೆಯಲ್ಲಿ ಕೋಗಿಲು ಫಕೀರ್ ಕಾಲೋನಿ ಬಡವರ ಮನೆಗಳ ತೆರವು ಕಾರ್ಯಾಚರಣೆಯನ್ನು ನಮಗೆ ನೋಡಲು ಸಾಧ್ಯವಾಗಬೇಕು.

ಇದನ್ನೂ ಓದಿ: ಕಾರವಾರ |ಜ.10ರಂದು ಮಂಗಳೂರಿನಲ್ಲಿ ಸಭೆ : ಹೊಸ ಪ್ರವಾಸೋದ್ಯಮ ನೀತಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನ – ಡಿ.ಕೆ.ಶಿವಕುಮಾರ್

ಮುಸ್ಲಿಮರು, ಕೇರಳೀಯರು, ಅಕ್ರಮ ವಲಸಿಗರು ಎಂದು ತಪ್ಪಾದ ಗುರುತುಗಳೊಂದಿಗೆ ಬೀದಿಗೆ ಬಿದ್ದ ಬಡಪಾಯಿಗಳನ್ನು ಹಗೆತನದಿಂದ ಕಾಣುವುದು, ಕೇರಳದ ಕಮ್ಯುನಿಸ್ಟ್ ಸರಕಾರದ ಮುಖ್ಯಮಂತ್ರಿ, ಮುಖಂಡರುಗಳು ಕೇರಳೀಯ ವಲಸಿಗರ ಅತಿಕ್ರಮಣದ ಪರವಾಗಿ ಮಾತನಾಡುತ್ತಿದ್ದಾರೆ ಎಂದು “ಹಿತಾಸಕ್ತಿ” ಗಳು ಸೃಷ್ಟಿಸಿರುವ ಸುಳ್ಳುಗಳನ್ನು ನಂಬಿ ಪ್ರತಿಕ್ರಿಯಿಸುವುದು ಆಳುವ ಸರಕಾರಗಳ ಜನವಿರೋಧಿ ಕ್ರೌರ್ಯಗಳ‌ ಸಮರ್ಥನೆಯಾಗಿ ನಾಳೆ ನಮ್ಮನ್ನೆ ಬಲಿ‌ ಪಡೆಯಲಿದೆ ಎಂಬ ಎಚ್ಚರ ನಮ್ಮಲ್ಲಿ ಇದ್ದರೆ ಒಳಿತು.

ನಾವಂತೂ ಕೋಗಿಲು ಬಡಾವಣೆಯಲ್ಲಿ‌ ಸರಕಾರದ ಕ್ರೌರ್ಯಕ್ಕೆ ಬಲಿಯಾದ ಬಡವರ ಪರ ನಿಂತಿದ್ದೇವೆ, ಹಾಗೆಯೆ ಮುಂದುವರಿಯುತ್ತೇವೆ. ಸುಳ್ಳು, ಅಪಪ್ರಚಾಗಳು ನಮ್ಮನ್ನು ವಿಚಲಿತಗೊಳಿಸುವುದಿಲ್ಲ.

ಇದನ್ನೂ ನೋಡಿ: ಜನಧ್ವನಿಯಲ್ಲಿ ಧ್ವನಿಸಿದ ಜನ್ನಿ ಹಾಡುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *