ದಾವಣಗೇರಿ : ಕೇಂದ್ರೀಯ ಟ್ರೇಡ್ ಯೂನಿಯನ್ ಗಳು, ಸ್ವತಂತ್ರ ಕೈಗಾರಿಕಾ ಫೆಡರೇಶನ್ ಗಳು ಮತ್ತು ದೇಶದ ಲಕ್ಷಾಂತರ ಕಾರ್ಮಿಕರ ವ್ಯಾಪಕ ವಿರೋಧ ಇದ್ದರೂ ಕೇಂದ್ರದಲ್ಲಿರುವ ಮೋದಿ ಸರ್ಕಾರವು 21 ನವೆಂಬರ್ 2025 ರಿಂದ ಏಕಪಕ್ಷೀಯವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನ ಜಾರಿಗೆ ತಂದಿದೆ, ಈ ಕಾರ್ಮಿಕ ವಿರೋಧಿ ನಡೆಯನ್ನು ಖಂಡಿಸಿ ದಿನಾಂಕ:26.11.2025 ರಂದು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಸುಟ್ಟುಹಾಕುವ ಮೂಲಕ ದೇಶವ್ಯಾಪಿ ಪ್ರತಿಭಟನೆ ಮಾಡಲಾಯಿತು.
ಚುನಾವಣಾ ಬಾಂಡ್ ಹೆಸರಲ್ಲಿ ಸಾವಿರಾರು ಕೋಟಿ ಹಣ ಪಡೆದ ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಋಣ ತೀರಿಸುವ ಸಲುವಾಗಿ ಇದುವರೆಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯದೇ ಇರುವುದರಿಂದ ಎಫ್.ಎಂ.ಆರ್.ಎ.ಐ. ತನ್ನ ಹೋರಾಟವನ್ನು ದೇಶವ್ಯಾಪಿ ತೀವ್ರಗೊಳಿಸಲು ನಿರ್ಧರಿಸದೆ. ಅದರ ಭಾಗವಾಗಿ ದಿನಾಂಕ:17.12.2025 ರಂದು ರಾಜ್ಯಾದ್ಯಂತ ಜಿಲ್ಲಾಡಳಿತ/ತಾಲ್ಲೂಕು ಆಡಳಿತ ಕಛೇರಿಗಳ ಮುಂಭಾಗ ಪ್ರತಿಭಟನೆ ಮಾಡಲು ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘವು ಕರೆ ನೀಡಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ಸಂಘಟನೆಯ ರಾಜ್ಯ ನಾಯಕ ಅನಂದರಾಜು ತಿಳಿಸಿದ್ದಾರೆ.
ಇದನ್ನೂ ಓದಿ : ಮನರೇಗ ಯೋಜನೆಯನ್ನು ಹಾಳುಗೆಡಹುವ, ಕಳಚಿ ಹಾಕುವ ಮೋದಿ ಸರ್ಕಾರದ ಅಮಾನವೀಯ ಹೇಯ ಯೋಜನೆ- ಸಿಐಟಿಯು
ಔಷಧ ಮತ್ತು ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇದ್ದಂತಹ ಟ್ರೇಡ್ ಯೂನಿಯನ್ ಅಧಿನಿಯಮ,1926; ಕೈಗಾರಿಕಾ ವಿವಾದ ಅಧಿನಿಯಮ,1947; ಮತ್ತು ಮಾರಾಟ ಪ್ರತಿನಿಧಿಗಳ (ಸರ್ವಿಸ್ ಕಂಡಿಶನ್ಸ್) ಅಧಿನಿಯಮ,1976 (ಎಸ್.ಪಿ.ಇ. ಅಧಿನಿಯಮ) ಸೇರಿದಂತೆ 29 ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿದೆ, ದೀರ್ಘಕಾಲದಿಂದ ಕಾರ್ಮಿಕರ ರಕ್ಷಣೆಗೆ ಇದ್ದ ಈ ಕಾನೂನುಗಳಿಂದ ಕಾರ್ಮಿಕರು ತಮ್ಮ ಕೆಲಸಗಳನ್ನು ರಕ್ಷಿಸಿಕೊಳ್ಳಲು ಅಲ್ಪಮಟ್ಟಿಗೆ ಸಹಕಾರಿಯಾಗಿದ್ದವು, ಇಂತಹ ಸಂಧರ್ಭದಲ್ಲಿ ಕಾರ್ಮಿಕ ಕಾನೂನುಗಳನ್ನ ಬಲಪಡಿಸುವ ಬದಲು ದುರ್ಬಲಗೊಳಿಸಲು, ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕುಗ್ಗಿಸಲು ಮತ್ತು ಮಾಲಿಕರ ಪಾಲಿಗೆ ಭಾರೀ ಅನುಕೂಲವಾಗುವಂತೆ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಉದ್ದೇಶಪೂರ್ವಕ ಜಾರಿಗೆ ತರುವ ಪ್ರಯತ್ನವನ್ನು ಕೇಂದ್ರ ಸರಕಾರವು ಮಾಡಿದೆ ಎಂದು ಆರೋಪಿಸಿದರು.
ಇಡೀ ದೇಶದಲ್ಲಿ ಕಾರ್ಮಿಕರ ಆಕ್ರೋಶವನ್ನು ರಾಜ್ಯ ಸರ್ಕಾರ ನೋಡುತ್ತಿದ್ದರೂ ರಾಜ್ಯದಲ್ಲಿ ಇಂತಹ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೆ ತರುವುದಿಲ್ಲ ಎನ್ನುವ ಅಭಯವನ್ನು ಕಾರ್ಮಿಕರಿಗೆ ನೀಡದಿರುವುದನ್ನು ನೋಡಿದರೆ ರಾಜ್ಯ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಪರವಾಗಿದೆ ಎನ್ನುವುದು ಸಾಭೀತಾದಂತಿದೆ ಎಂದು ದೂರಿದರು.
ಆದ್ದರಿಂದ ಕೇಂದ್ರ ಸರ್ಕಾರವು ತಕ್ಷಣ ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಈ ನಾಲ್ಕೂ ಸಂಹಿತೆಗಳನ್ನ ವಾಪಾಸು ಪಡೆಯಬೇಕು ಮತ್ತು ರಾಜ್ಯ ಸರ್ಕಾರವು ತಕ್ಷಣ ಎಚ್ಚೆತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಕಾರ್ಮಿಕರಿಗೆ ಅಭಯ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ದೇಶದಾದ್ಯಂತ ಹಾಗೂ ಕರ್ನಾಟಕದೊಳಗೆ ಸಾಮಾನ್ಯ ಕಾರ್ಮಿಕರ ಮತ್ತು ವಿಶೇಷವಾಗಿ ಸೇಲ್ಸ್ ಪ್ರಮೋಷನ್ ಉದ್ಯೋಗಿಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳ ರಕ್ಷಣೆಯ ಸವಾಲುಗಳನ್ನು ತಿಳಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸಂವೇದನಾಶೀಲಗೊಳಿಸುವಂತೆ ಗೌರವಾನ್ವಿತ ಪತ್ರಿಕಾ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಇದನ್ನೂ ನೋಡಿ : ಉದ್ಯೋಗ ಖಾತ್ರಿ | ಮನರೇಗಾ ಬದಲು ‘ವಿ.ಬಿ-ಜಿ ರಾಮ್ ಜಿ’ ಯಾಕೆ? 125 ದಿನ ಕೆಲಸ ಸಾಧ್ಯವೆ? Janashakthi Media
