ರಾಜಸ್ಥಾನ :ರಾಜಸ್ಥಾನದ ಹನುಮಾನ್ಗಢ ಜಿಲ್ಲೆಯಲ್ಲಿ ಬುಧವಾರ ಎಥೆನಾಲ್ ಕಾರ್ಖಾನೆ ವಿರುದ್ಧ ರೈತರು ನಡೆಸಿದ ಬೃಹತ್ ಪ್ರತಿಭಟನೆ ಮೇಲೆ ಬಿಜೆಪಿ ಸರಕಾರ ಲಾಠಿ ಬೀಸುವ ಮೂಲಕ ದೌರ್ಜನ್ಯ ನಡೆಸಿದೆ.
ಹನುಮಾನ್ಗಢ ರಾಜಸ್ಥಾನದ ಕೃಷಿ ಪ್ರಧಾನ ಜಿಲ್ಲೆ. ಟಿಬ್ಬಿ ಪ್ರದೇಶದ ರಥಿ ಖೇಡಾ ಗ್ರಾಮದಲ್ಲಿ ಎಥೆನಾಲ್ ಸ್ಥಾವರ ಸ್ಥಾಪನೆಗೆ ದೀರ್ಘಕಾಲದಿಂದ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದರು. ಈ ಕಾರ್ಖಾನೆಯಿಂದ ಅಲ್ಲಿನ ಪ್ರದೇಶದ ಪರಿಸರಕ್ಕೆ ಹಾನಿಯಾಗುತ್ತದೆ, ಫಲವತ್ತಾದ ಭೂಮಿ ಹಾಳಾಗುತ್ತದೆ ಮತ್ತು ಕೃಷಿ ಜೀವನೋಪಾಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಸುಮಾರು 15 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರು.
ಕಾಂಗ್ರೆಸ್, ಸಿಪಿಎಂ, ಸಿಐಟಿಯು ಮತ್ತು ಹಲವಾರು ರೈತ ಸಂಘಗಳು ಸೇರಿದಂತೆ ಹಲವಾರು ಸಂಘಟನೆಗಳ ಬೆಂಬಲದೊಂದಿಗೆ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟಿಬ್ಬಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೊಲೀಸರ ಭದ್ರಕೋಟಿಯನ್ನು ಭೇದಿಸಿದ್ದಾರೆ.
ಈ ಕಾರ್ಖಾನೆ ಮಾಲಿನ್ಯಕ್ಕೆ ಕಾರಣವಾಗುತ್ತದೆ. ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತದೆ ಮತ್ತು ಕೃಷಿ ಭೂಮಿಯನ್ನು ಬಂಜರು ಮಾಡುತ್ತದೆ. ಕಾರ್ಖಾನೆ ಇಲ್ಲಿಗೆ ಬಂದರೆ, ನಮ್ಮ ಭವಿಷ್ಯದ ಪೀಳಿಗೆಗೆ ತೊಂದರೆಯಾಗುತ್ತದೆ. ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕು ಇಲ್ಲವೇ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸ್ಥಳೀಯ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಪ್ರತಿಭಟನೆಗೆ ಬೆಂಬಲ ನೀಡಿದ್ದು, ಟಿಬ್ಬಿ ಮತ್ತು ಹತ್ತಿರದ ಮಾರುಕಟ್ಟೆಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ.
