ನೈಜೀರಿಯಾ: ನೈಜರ್ ರಾಜ್ಯದ ಅಗ್ವಾರಾ ಸ್ಥಳೀಯ ಸರ್ಕಾರಿ ಪ್ರದೇಶದ ಪಾಪಿರಿ ಸಮುದಾಯದಲ್ಲಿರುವ ಸೇಂಟ್ ಮೇರಿ ಕ್ಯಾಥೋಲಿಕ್ ಶಾಲೆಗೆ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರನ್ನು ಅಪಹರಿಸಿರುವ ಘಟನೆ ನವೆಂಬರ್ 21ರಂದು ಮುಂಜಾನೆ ನಡೆದಿದೆ.
ಕ್ರಿಶ್ಚಿಯನ್ ಅಸೋಸಿಯೇಷನ್ ಆಫ್ ನೈಜೀರಿಯಾ (CAN) ನೈಜರ್ ರಾಜ್ಯ ಘಟಕದ ವಕ್ತಾರ ಡೇನಿಯಲ್ ಅಟೋರಿ ಅವರು ಈ ಸಂಖ್ಯೆಯನ್ನು ದೃಢಪಡಿಸಿದ್ದಾರೆ. ದಾಳಿಕೋರರು ಶಾಲಾ ಆವರಣಕ್ಕೆ ನುಗ್ಗಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಘಟನೆಯ ನಂತರ ಸಂಪೂರ್ಣ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ (CAN) ವಕ್ತಾರ ಡೇನಿಯಲ್ ಅಟೋರಿ ಅವರು ಘಟನೆಯ ಸ್ಥಳಕ್ಕೆ ಭೇಟಿ ನೀಡಿ, ಪೋಷಕರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ. ‘ನಾನು ಈಗಷ್ಟೇ ಹಳ್ಳಿಯಿಂದ ಹಿಂತಿರುಗಿದ್ದೇನೆ. ಶಾಲೆಗೆ ಭೇಟಿ ನೀಡಿ, ಮಕ್ಕಳ ಪೋಷಕರನ್ನು ಭೇಟಿಯಾಗಿ, ಅವರನ್ನು ಸುರಕ್ಷಿತವಾಗಿ ಮನೆಗಳಿಗೆ ಕರೆತರಲು ರಾಜ್ಯ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳು ಶ್ರಮಿಸುತ್ತಿವೆ ಎಂದು ಭರವಸೆ ನೀಡಿದ್ದೇನೆ,’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊಲೆ ಯತ್ನ ಆರೋಪ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ
ಅಟೋರಿ ಹೇಳುವಂತೆ, ಘಟನೆ ನಡೆದ ನಂತರ ವಿಶೇಷ ಭದ್ರತಾ ಪಡೆಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ಹತ್ತಿರದ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ಜೋರಾಗಿದೆ. ಆದರೆ ದಾಳಿಕೋರರು ಮಕ್ಕಳನ್ನು ಈಗಾಗಲೇ ದೂರದ ಪ್ರದೇಶಗಳಿಗೆ ಕರೆದೊಯ್ದಿರಬಹುದೆಂಬ ಶಂಕೆಯೂ ಇದೆ ಎನ್ನಲಾಗಿದೆ.
ಸೇಂಟ್ ಮೇರಿ ಶಾಲೆಯ ಘಟನೆಯ ಬಗ್ಗೆ ಮಾತನಾಡಿದ ಸ್ಥಳೀಯರು, ‘ಎಲ್ಲವೂ ಕ್ಷಣಾರ್ಧದಲ್ಲಿ ನಡೆಯಿತು. ಬಂದೂಕುಧಾರಿಗಳು ಬೆಳಿಗ್ಗೆ ಶಾಲೆಗೆ ನುಗ್ಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಿ ಕರೆದುಕೊಂಡು ಹೋದರು. ನಾವು ಏನೂ ಮಾಡಲು ಆಗಲಿಲ್ಲ,’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ವಾರದ ಆರಂಭದಲ್ಲೂ ನೈಜೀರಿಯಾದ ವಾಯುವ್ಯ ಭಾಗದಲ್ಲಿರುವ ಕೆಬ್ಬಿ ರಾಜ್ಯದ ಮಾಗಾದಲ್ಲಿರುವ ವಸತಿ ಶಾಲೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಆ ಘಟನೆಯಲ್ಲಿ 25 ವಿದ್ಯಾರ್ಥಿನಿಯರು, ಒಬ್ಬ ಶಾಲಾ ಉದ್ಯೋಗಿ ಸಾವನ್ನಪ್ಪಿದ್ದರು.
ಈ ಬಾರಿ ನಡೆದ ಅಪಹರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುನಿಸೆಫ್ ಸೇರಿ ಅನೇಕ ಮಕ್ಕಳ ಹಕ್ಕು ಸಂಘಟನೆಗಳು ನೈಜೀರಿಯಾ ಸರ್ಕಾರಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.
ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು | ದೊಡ್ಡವರು ಬಚಾವ್! ಅಣತಿಯಂತೆ ನಡೆದವರು?Janashakthi Media
