JC ರಸ್ತೆಗೆ ವೈಟ್‌ ಟಾಪಿಂಗ್‌ 7 ತಿಂಗಳಾದರೂ ಮುಗಿಯದ ಕಾಮಗಾರಿ; ವಾಹನ ಸವಾರರು, ಪರದಾಟ

ಬೆಂಗಳೂರು: ಮಿನರ್ವ ಸರ್ಕಲ್‌ನಿಂದ ಪುರಭವನದವರೆಗೆ 1.3 ಕಿ.ಮೀ. ಉದ್ದದ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಬಿಬಿಎಂಪಿ ಕಳೆದ ಫೆಬ್ರವರಿಯಲ್ಲಿಆರಂಭಿಸಿತ್ತು. ಪ್ರತಿನಿತ್ಯ ಈ ರಸ್ತೆಗಳಲ್ಲಿಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿಜಲಮಂಡಳಿಯಿಂದ ಒಳಚರಂಡಿ ಮತ್ತು ನೀರಿನ ಪೈಪ್‌ಗಳನ್ನು ಅಳವಡಿಸಲು ದೊಡ್ಡ ಗುಂಡಿಗಳನ್ನು ತೋಡಿ ಮುಚ್ಚಿದ್ದಾರೆ. ಇನ್ನೂ ಹಲವೆಡೆ ಗುಂಡಿಗಳು ಬಾಯ್ತೆರೆದು ಅನಾಹುತಕ್ಕೆ ಕಾದು ಕುಳಿತಿವೆ.

 ರಾಜಧಾನಿಯ ಹೃದಯಭಾಗದಲ್ಲಿರುವ  ಜೆ.ಸಿ. ರಸ್ತೆಯಲ್ಲಿ ಕಳೆದ ಏಳು ತಿಂಗಳುಗಳಿಂದ ವೈಟ್‌ ಟಾಪಿಂಗ್‌ ಕಾಮಗಾರಿ ಪ್ರಗತಿಯಲ್ಲಿದ್ದರೂ ಕುಡಿಯುವ ನೀರಿನ ಪೈಪ್‌, ಒಳಚರಂಡಿ ಹಾಗೂ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಕೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಇಲ್ಲಿಸಂಚರಿಸುವ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ: ಸಾಂಸ್ಕೃತಿಕ ಲೋಕದ ಮುಖ್ಯ ಉಸಿರು ಸಮುದಾಯ: ಬರಗೂರು

ಕಾಮಗಾರಿ ವಿಳಂಬಕ್ಕೆ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯೇ ಮುಖ್ಯ ಕಾರಣವಾಗಿದೆ. ಜನದಟ್ಟಣೆ ಮತ್ತು ವಾಹನ ಸಂಚಾರ ಹೆಚ್ಚಿರುವ ರಸ್ತೆಯಲ್ಲಿ ಪ್ರಾರಂಭಿಸುವ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ನಿಗದಿತ ಅವಧಿಯಲ್ಲಿಪೂರ್ಣಗೊಳಿಸಬೇಕು. ಆದರೆ, ಅದ್ಯಾವುದನ್ನೂ ಅಧಿಕಾರಿಗಳು ಪಾಲಿಸುತ್ತಿಲ್ಲ. ಇದರಿಂದ ಆಟೋಮೊಬೈಲ್‌ ಸಂಬಂಧಿತ ಮಳಿಗೆಗಳು, ಆಲ್ಟೆ್ರೕಶನ್‌ ಮಳಿಗೆಗಳು, ಕೃಷಿ, ಗೃಹೋಪಯೋಗಿ ವಸ್ತುಗಳ ಮಳಿಗೆಗಳೂ ಸೇರಿದಂತೆ ಹಲವು ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ನಷ್ಟ ಎದುರಿಸುವಂತಾಗಿದೆ. ಸುಗಮ ಸಂಚಾರಕ್ಕೂ ತೊಡಕಾಗಿದೆ. 1.3 ಕಿ.ಮೀ.ನಷ್ಟು ಉದ್ದದ ಈ ಮಾರ್ಗವನ್ನು ಕ್ರಮಿಸಲು 20-25 ನಿಮಿಷ ತಗಲುತ್ತಿದೆ ಎನ್ನುತ್ತಾರೆ ವಾಹನ ಸವಾರರು.

ವೈಟ್‌ ಟಾಪಿಂಗ್‌ ಕಾಮಗಾರಿ ಮೊದಲು ನೀರಿನ ಪೈಪ್‌, ಆಪ್ಟಿಕಲ್‌ ಕೇಬಲ್‌, ಒಳಚರಂಡಿ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಅದಕ್ಕಾಗಿ ರಸ್ತೆ ಪಕ್ಕದಲ್ಲಿದೊಡ್ಡ ಗುಂಡಿಗಳನ್ನು ತೋಡಿದ್ದರಿಂದ 100 ಅಡಿಯಷ್ಟಿದ್ದ ರಸ್ತೆಯೀಗ 50 ಅಡಿಗೆ ತಲುಪಿದೆ. ಸದ್ಯ, ಜೆಸಿ ರಸ್ತೆ ಸಂಪೂರ್ಣ ಕೆಸರು ಮಯವಾಗಿದೆ. ರಸ್ತೆಯ ಮಧ್ಯದವರೆಗೂ ಗುಡ್ಡೆ ಬಿದ್ದಿರುವ ಮಣ್ಣು ದೊಡ್ಡ ಅನಾಹುತಕ್ಕೆ ಕಾದಿದೆ. ರಸ್ತೆಯಲ್ಲಿಇರಿಸಿರುವ ಬೃಹತ್‌ ಕೊಳವೆಗಳಿಂದಾಗಿ ವಾಹನ ಸಂಚಾರ ಇಕ್ಕಟ್ಟಿಗೆ ಸಿಲುಕಿದೆ. ಏಳು ತಿಂಗಳೂ ಕಳೆದರೂ ಇನ್ನೂ ಪೈಪ್‌ ಅಳವಡಿಕೆ ಕಾಮಗಾರಿ ಆಮೆಗತಿಯಲ್ಲಿದೆ. ಇದು ಪೂರ್ಣಗೊಳ್ಳಲು ಇನ್ನೂ ಎರಡು ತಿಂಗಳು ತಗಲುವ ಸಾಧ್ಯತೆಯಿದೆ. ಇದಾದ ಬಳಿಕವಷ್ಟೇ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭವಾಗಲಿದ್ದು, ಈ ರಸ್ತೆಯಲ್ಲಿನ ಸುಗಮ ಸಂಚಾರಕ್ಕೆ ಇನ್ನೂ 6 ತಿಂಗಳು ಕಾಯಬೇಕಿದೆ.

ರಾಜಧಾನಿ ಅತ್ಯಂತ ಜನನಿಬಿಡ ಮತ್ತು ನಿರ್ಣಾಯಕ ಸಂಪರ್ಕ ರಸ್ತೆಗಳಲ್ಲಿ ಜೆ.ಸಿ. ರಸ್ತೆಯೂ ಒಂದಾಗಿದೆ. ಚಾಮರಾಜಪೇಟೆ, ಕೆ.ಆರ್‌. ಮಾರುಕಟ್ಟೆ, ದಕ್ಷಿಣ ಮತ್ತು ಆಗ್ನೇಯ ಬೆಂಗಳೂರಿನಿಂದ ಮೆಜೆಸ್ಟಿಕ್‌ ಮತ್ತು ಉತ್ತರಕ್ಕೆ ಹೋಗುವ ವಾಹನಗಳಿಗೆ ಇದು ಪ್ರಮುಖ ಮಾರ್ಗವಾಗಿದೆ. ರಾಜರಾಜೇಶ್ವರಿ ನಗರ ಸೇರಿದಂತೆ ವಿವಿಧ ನಗರಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಪರ್ಯಾಯ ಮಾರ್ಗವಾಗಿದೆ. ಇಲ್ಲಿಉಂಟಾಗುವ ಸಂಚಾರ ದಟ್ಟಣೆಯಿಂದ ಕೆಂಗಲ್‌ ಹನುಮಂತಯ್ಯ (ಕೆ.ಎಚ್‌.) ರಸ್ತೆ, ಸಿದ್ದಾಪುರ ರಸ್ತೆ, ಮರಿಗೌಡ ರಸ್ತೆ ಮತ್ತು ಸಿದ್ದಯ್ಯ ರಸ್ತೆಗಳು ದಟ್ಟಣೆಯಿಂದ ಸಂಪೂರ್ಣ ಬ್ಲಾಕ್‌ ಆಗುತ್ತವೆ.

ಕಳೆದ ಡಿಸೆಂಬರ್‌ನಲ್ಲಿ ಜೆಸಿ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಆರಂಬಿಸಿ ಆರು ತಿಂಗಳಲ್ಲಿಪೂರ್ಣಗೊಳಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಆದರೆ, ವಿವಿಧ ಕಾರಣಗಳಿಂದ ಫೆಬ್ರವರಿಯಲ್ಲಿಕಾಮಗಾರಿ ಆರಂಭವಾಗಿದೆ. ಈ ನಡುವೆ, ಇದರ ಮೇಲ್ವಿಚಾರಣೆಯ ಹೊಣೆ ಹೊತ್ತಿದ್ದ ಬಿಬಿಎಂಪಿ ಮತ್ತು ಜಲಮಂಡಳಿಯ ಇಬ್ಬರೂ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಲಾಯಿತು. ಇದು ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣ. ಅಂದಿನಿಂದಲೂ ಈ ಮಾರ್ಗದಲ್ಲಿಪೈಪ್‌ ಅಳವಡಿಕೆ ಕಾರ್ಯ ಆಮೆಗತಿಯಲ್ಲಿಸಾಗಿದೆ. ಇದಲ್ಲದೆ, ಪೈಪ್‌ ಅಳವಡಿಕೆಗಾಗಿ ರಸ್ತೆ ಅಗೆಯುವಾಗ ಬೃಹತ್‌ ಬಂಡೆ ಎದುರಾಗಿದ್ದು, ಕಾಮಗಾರಿ ವಿಳಂಬಕ್ಕೆ ಕಾರಣವಾಯಿತು. ಸದ್ಯ, ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಡಿಸೆಂಬರ್‌ ತಿಂಗಳ ಗಡುವು ನೀಡಲಾಗಿದೆಯಾದರೂ, ನಿಗದಿತ ಅವಧಿಯಲ್ಲಿಪೂರ್ಣಗೊಳ್ಳುವುದು ಸಂಶಯ ಎಂದೇ ಹೇಳಲಾಗುತ್ತಿದೆ.

ಇದನ್ನೂ ನೋಡಿ: ‘ಷಡ್ಯಂತ್ರ’ ಯಾರದ್ದು??ದೂರುದಾರನನ್ನು ಬಂಧಿಸಿದ್ದು‌‌ಯಾಕೆ??? Janashakthi Media

Donate Janashakthi Media

Leave a Reply

Your email address will not be published. Required fields are marked *