ಬೆಂಗಳೂರು: ದೂರ ತೀರ ಯಾನ ಈ ಚಿತ್ರವನ್ನು ಮಂಸೋರೆ ನಿರ್ದೇಶಿಸಿದ್ದಾರೆ, ಮತ್ತು ಡಿ ಕ್ರಿಯೇಶನ್ಸ್ ಅಡಿಯಲ್ಲಿ ದೇವರಾಜ್ ನಿರ್ಮಿಸಿದ್ದಾರೆ . ವಿಜಯ್ ಕೃಷ್ಣ ಮತ್ತು ಪ್ರಿಯಾಂಕ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಜುಲೈ 11 ರಂದು ಬಿಡುಗಡೆಯಾಗಿದೆ.
ಈ ಚಿತ್ರವು ಬೆಂಗಳೂರಿನಿಂದ ಗೋವಾಕ್ಕೆ ನಡೆಯುವ ಪ್ರಯಾಣದ ಕಥೆಯನ್ನು ಹೇಳುತ್ತದೆ, ಇದು ಪ್ರೀತಿಯನ್ನು ಕಂಡುಕೊಳ್ಳುವ ಕಥೆಯಾಗಿದೆ . ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶೇಖರಚಂದ್ರ ಛಾಯಾಚಿತ್ರಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನ, ಚೇತನ ತಿರ್ಥಹಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ.
ದೂರ ತಿರದ ಯಾನದ ವಿಶೇಷವೇನು? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಸೂರೆ, ಥಿಯೇಟ್ರಿಕಲ್ ಎಕ್ಸ್ಪೀರಿಯನ್ಸ್’ ಎಂಬ ಪದವಿರಲಿಲ್ಲ. ಮೊಬೈಲ್, ಟಿವಿ, ಹೋಂಥಿಯೇಟರ್ ಬಂದ ಮೇಲೆ ಈ ಪದ ಚಾಲ್ತಿಗೆ ಬಂದಿದೆ. ಇದು ಬಂದ ಬಳಿಕ ಸಿನಿಮಾಗಳೆಂದರೆ ಅದ್ಧೂರಿಯಾಗಿರಬೇಕು, ಸೆಟ್ ಹಾಕಬೇಕು, ಎಲಿವೇಷನ್ಸ್ ಬೇಕು ಎಂಬಿತ್ಯಾದಿ ಮಾತುಗಳಿವೆ.
ಇದನ್ನೂ ಓದಿ: ಯಶಸ್ವಿ ಸಾರ್ವತ್ರಿಕ ಮುಷ್ಕರ: ಕಾರ್ಮಿಕ ವರ್ಗಕ್ಕೆ ಸಿಪಿಐ(ಎಂ) ಅಭಿನಂದನೆಗಳು
ಆದರೆ ನಾನು ಈ ಹಾದಿ ಹಿಡಿಯದೆ ಪ್ರೇಕ್ಷಕರಿಗೆ ಬೇರೆ ಮಾದರಿಯ ‘ಥಿಯೇಟ್ರಿಕಲ್ ಎಕ್ಸ್ಪೀರಿಯನ್ಸ್’ ನೀಡುತ್ತಿದ್ದೇನೆ. ಇದೊಂದು ಪ್ರಯೋಗ. ಈ ಸಿನಿಮಾದಲ್ಲಿರುವ ಪಯಣವೇ ಪ್ರೇಕ್ಷಕರಿಗೆ ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ. ಪ್ರಕೃತಿ ಎನ್ನುವುದು ಪ್ರತಿಯೊಬ್ಬನನ್ನು ಪ್ರತಿ ಬಾರಿಯೂ ಸೆಳೆಯುತ್ತದೆ. ಮುಂಗಾರು ಮಳೆ ಹಿಟ್ ಆಗಿರುವುದಕ್ಕೆ ಇದೂ ಒಂದು ಕಾರಣ. ಜೋಗಕ್ಕೆ ನೂರು ಬಾರಿ ಹೋದರೂ ಅದು ಅದ್ಭುತವಾಗಿಯೇ ಕಾಣುತ್ತದೆ.
ಈ ಪ್ರಕೃತಿಯನ್ನೇ ವೇದಿಕೆಯಾಗಿಟ್ಟುಕೊಂಡು ಹುಡುಗ-ಹುಡುಗಿಯ ಪಯಣವನ್ನು ಕಟ್ಟಿಕೊಡುತ್ತಾ, ಮನಸ್ಸಿನ ಒಳಗೆ ಕುಳಿತುಕೊಳ್ಳುವ ಸಂಗೀತವನ್ನು ಬಳಸಿಕೊಂಡು ಈ ಸಿನಿಮಾ ಹೆಣೆದಿದ್ದೇನೆ. ಪ್ರಕೃತಿಯನ್ನು ಸಂಗೀತದ ಜೊತೆ ಸಮ್ಮಿಲನಗೊಳಿಸಿ ಮ್ಯಾಜಿಕ್ಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.

ಟ್ರಾವೆಲ್ ಸಿನಿಮಾಗಳಲ್ಲಿ ಛಾಯಾಚಿತ್ರಗ್ರಹಣ, ಸಂಗೀತ ಪ್ರಮುಖ. ನಾನು ಮೊದಲು ಹಿರಿಯ ಛಾಯಾಚಿತ್ರಗ್ರಾಹಕರಾದ ಶೇಖರ್ಚಂದ್ರ ಅವರನ್ನು ಆಯ್ಕೆ ಮಾಡಿದೆ. ಇದರಿಂದ ನಾನು ಧೈರ್ಯವಾಗಿ ಕೆಲಸ ಮಾಡಿದೆ, ನನ್ನ ಕೆಲಸವೂ ಹಗುರವಾಯಿತು. ಬೆಂಗಳೂರಿನಿಂದ ಗೋವಾದವರೆಗಿನ ಪಯಣವನ್ನು ನಾವು ಸೆರೆಹಿಡಿದಿದ್ದೇವೆ. ಈ ಸಂದರ್ಭದಲ್ಲಿ ಸಮಸ್ಯೆಗಳು ನೂರಾರು. ಊಹಿಸಲು ಸಾಧ್ಯವಾಗದ ವಾತಾವರಣಗಳನ್ನು ನಾವು ಅನುಭವಿಸಿದೆವು.
ಸುಮಾರು 65 ಜನ ಸುಮಾರು 22 ದಿನ ಸಂಚಾರಿ ಜೀವನದಲ್ಲಿದ್ದೆವು. ಏಕಾಏಕಿ ಮಳೆ ಬರುತ್ತಿತ್ತು, ಮಳೆ ಜೊತೆಗೆ ಬಿಸಿಲು. ಹೀಗಿರುವಾಗ ತಾಂತ್ರಿಕವಾಗಿಯೂ ಬಹಳಷ್ಟು ಸಮಸ್ಯೆಗಳು ಎದುರಾದವು. ಇನ್ನೇನು ರೋಲಿಂಗ್ ಎನ್ನುವಾಗ ಏಕಾಏಕಿ ಮೋಡಬರುತ್ತಿತ್ತು. ಮತ್ತೆ ಲೈಟಿಂಗ್ ಸರಿಪಡಿಸಿಕೊಳ್ಳುವಾಗ ಬಿಸಿಲು. ಇವುಗಳೆಲ್ಲವನ್ನೂ ಶೇಖರ್ಚಂದ್ರ ಅವರು ನಿಭಾಯಿಸಿ ಕಥೆಯನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ.
ಬಕೇಶ್ ಹಾಗೂ ಕಾರ್ತಿಕ್ ಸಂಗೀತ ಈ ದೃಶ್ಯಕಾವ್ಯಕ್ಕೆ ಮ್ಯಾಜಿಕ್ನಂತೆ ಕೆಲಸ ಮಾಡಲಿದೆ. ಸಿನಿಮಾದ ಹಾಡುಗಳನ್ನು ಕೇಳಿದರೇ ಸಿನಿಮಾ ಏನನ್ನುವುದು ತಿಳಿಯುತ್ತದೆ. ಈ ಚಿತ್ರವು ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಇಂದಿನಿಂದ ಪ್ರದರ್ಶನಗೊಳುತ್ತಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಇದನ್ನೂ ನೋಡಿ: ಯುದ್ಧವೂ ಉದ್ಯಮವಾದಾಗ….! -ಡಾ.ಸಿದ್ದನಗೌಡ ಪಾಟೀಲ ವಿಶ್ಲೇಷಣೆಯಲ್ಲಿ Janashakthi Media
