ಗೌರಿ ಹತ್ಯೆ ಪ್ರಕರಣ | ಜಾಮೀನಿನ ಮೇಲೆ ಹೊರಬಂದ ಆರೋಪಿಗಳಿಗೆ ಸಂಘ ಪರಿವಾರದಿಂದ ಸನ್ಮಾನ

ವಿಜಯಪುರ: 2017ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸಾಹಿತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಪ್ರಕರಣದಲ್ಲಿ ವಿಜಯಪುರದ ಇಬ್ಬರು ಆರೋಪಿತರನ್ನೂ ಖಾಕಿ ಪಡೆ ಅರೆಸ್ಟ್ ಮಾಡಿತ್ತು. ಸುಮಾರು ಆರುವರೆ ವರ್ಷಗಳ ಬಳಿಕ ಆ ಇಬ್ಬರು ಆರೋಪಿತರಿಗೆ ಜಾಮೀನು ಸಿಕ್ಕಿದ್ದು, ತವರಿಗೆ ಆಗಮಿಸಿದ್ಧಾರೆ. ಶ್ರೀರಾಮಸೇನೆ ಸಂಘಟನೆಯ ಮುಖಂಡರು ಅವರಿಬ್ಬರಿಗೂ ಅದ್ದೂರಿ ಸ್ವಾಗತ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣದಲ್ಲಿ ಬಂಧಿತರಾಗಿದ್ದ ವಿಜಯಪುರದ ಇಬ್ಬರು ಆರೋಪಿಗಳಾದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ ಎಂಬ ಇಬ್ಬರಿಗೆ ಸುಮಾರು ಆರೂವರೆ ವರ್ಷಗಳ ಬಳಿಕ 2024ರ ಅ.11ರಂದು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು. ಅ.11ರಂದೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದ ಆರೋಪಿಗಳು ನೇರವಾಗಿ ವಿಜಯಪುರಕ್ಕೆ ಆಗಮಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ಇಬ್ಬರು ಆರೋಪಿಗಳು ವಿಜಯಪುರ ಜಿಲ್ಲೆಯ ಸಂಘಪರಿವಾರ ಹಾಗೂ ಶ್ರೀರಾಮ ಸೇನೆಯ ಮುಖಂಡರು, ಕಾರ್ಯಕರ್ತರು ಸ್ವಾಗತ ಮಾಡಿದ್ದಾರೆ. ವಿಜಯಪುರ ನಗರದ ಕಾಳಿಕಾ ದೇವಾಲಯದಲ್ಲಿ ಇಬ್ಬರೂ ಆರೋಪಿಗಳು ಪೂಜೆ ಮಾಡಿಸಿದ್ದಾರೆ. ಬಳಿಕ ಸಂಘಪರಿವಾರದ ಕಾರ್ಯಕರ್ತರು ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದ್ದಾರೆ. ಬಳಿಕ ಶಿವಾಜಿ ವೃತ್ತಕ್ಕೆ ತೆರಳಿ ಶಿವಾಜಿ ಮೂರ್ತಿಗೆ ಆರೋಪಿಗಳು ಹಾರ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ 2018 ಜೂನ್ 13 ರಂದು ಜಿಲ್ಲೆಯ ಸಿಂದಗಿ ಪಟ್ಟಣದ ಬಸವನಗರ ವಾಸಿ ಪರಶುರಾಮ್ ವಾಗ್ಮೋರೆಯನ್ನು ಗೌರಿ ಲಂಕೇಶ ಹತ್ಯೆ ಆರೋಪದ ಮೇಲೆ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್​​ಐಟಿ ತಂಡ ಬಂಧಿಸಿತ್ತು. ಬಳಿಕ ಇದೇ ಆರೋಪದ ಮೇಲೆ ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆಯನ್ನೂ ಬಂಧಿಸಲಾಗಿತ್ತು. ಗೌರಿ ಹತ್ಯೆಯಲ್ಲಿ ಒಟ್ಟು 25 ಜನ ಆರೋಪಿತರನ್ನು ಎಸ್​ಐಟಿ ತಂಡ ಬಂಧಿಸಿತ್ತು.

ಗೌರಿ ಹತ್ಯೆ ಬಳಿಕ ಸುಮಾರು ಆರುವರೆ ವರ್ಷಗಳ ಬಳಿಕ 25 ಜನ ಆರೋಪಿತರಲ್ಲಿ 18 ಜನರಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ನೀಡಿದ್ದು ಇನ್ನೂ 7 ಜನ ಆರೋಪಿತರಿಗೂ ಜಾಮೀನು ಸಿಗಲಿದೆ ಎನ್ನಲಾಗಿದೆ. ಇತ್ತ ವಿಜಯಪುರದ ಇಬ್ಬರು ಆರೋಪಿತರಾದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ ಎಂಬ ಇಬ್ಬರಿಗೆ ನಿನ್ನೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ನಿನ್ನೆಯೇ ಸಾಯಂಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಹೊರ ಬಂದವರು ನೇರವಾಗಿ ವಿಜಯಪುರಕ್ಕೆ ಆಗಮಿಸಿದ್ದಾಗ ಹಿಂದುತ್ವ ಸಂಘಟನೆಗಳು ಅವರಿಗೆ ಸ್ವಾಗತ ಮಾಡಿದ್ದಾರೆ. ಬಿಲ್ಕಿಸ್ ಬಾನು ಪ್ರಕರಣ ಆರೋಪಿಗಳು ಬಿಡುಗಡೆಯಾದಗಲೂ ಇದೇ ರೀತಿ ಹಿಂದುತ್ವ ಸಂಘಟನೆಗಳು ಹಾರಿ ಹಾಕಿ ಸನ್ಮಾನಿಸಿದ್ದವು. ಸಂಘ ಪರಿವಾರದ ಸಂಘಟನೆಗಳು ಹಿಂಸೆ, ಕ್ರೌರ್ಯ, ದೌರ್ಜನ್ಯ, ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಹಾಗೂ ಕಾನೂನನ್ನು ಗೌರವಿಸುವುದಿಲ್ಲ ಎಂಬುದಕ್ಕೆ ಈ ಪ್ರಕರಣಗಳು ಸಾಕ್ಷಿ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಪ್ರಕರಣ ಹಿನ್ನೆಲೆ : ಕಳೆದ 2017 ರ ಸಪ್ಟೆಂಬರ್ 5 ರಂದು ಗೌರಿ ಲಂಕೇಶ ಗುಂಡಿನ ದಾಳಿಗೆ ಬಲಿಯಾಗಿದ್ದರು. ಅಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಹತ್ಯೆ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟನೆಯ ಬೆನ್ನಲ್ಲೇ ಆರೋಪಿಗಳ ಪತ್ತೆಗೆ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶೇಷ ತನಿಖಾ ಪೊಲೀಸ್ ತಂಡವನ್ನು ರಚಿಸಿತ್ತು. ಎಸ್​ಐಟಿ ತಂಡ 25 ಜನರನ್ನು ಗೌರಿ ಹತ್ಯೆಯ ಕೇಸ್​ನಲ್ಲಿ ಬಂಧಿಸಿತ್ತು. ಈ ಪೈಕಿ ವಿಜಯಪುರ ಜಿಲ್ಲೆ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ ಸಹ ಬಂಧನಕ್ಕೊಳಗಾಗಿದ್ದರು.

2018 ರಲ್ಲಿ ಇವರ ಬಂಧನವಾಗಿದ್ದು ನಾವು ಯಾವುದೇ ಕೊಲೆ ಮಾಡಿಲ್ಲ. ಎಸ್​ಐಟಿ ತಂಡದವರು ನಮಗೆ ಗೌರಿ ಹತ್ಯೆಯನ್ನು ಒಪ್ಪಿಕೊಳ್ಳಿ ಎಂದು ಬಲವಂತ ಮಾಡುತ್ತಿದ್ದಾರೆಂದು ಮಹೋಹರ್ ಹಾಗೂ ಪರಶುರಾಮ ಆರೋಪ ಮಾಡಿದ್ದರು. ಇಷ್ಟೆಲ್ಲದರ ನಡುವೆ ಗೌರಿ ಲಂಕೇಶ ಹತ್ಯೆಯ 18 ಜನ ಆರೋಪಿತರಿಗೆ ಜಾಮೀನು ಸಿಕ್ಕಿದೆ.

Donate Janashakthi Media

Leave a Reply

Your email address will not be published. Required fields are marked *